ಲಾಕ್ಡೌನ್ ದಿಗ್ಬಂಧನವನ್ನು ದಾಟಿ ನುಗ್ಗುತ್ತಿರುವ ಯುವಕರ ಮೇಲೆ ಪೊಲೀಸರ ಗುಂಪೊಂದು ಗುಂಡು ಹಾರಿಸುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಕಾರಿನಲ್ಲಿ ನುಗ್ಗಿಬಂದವರ ಮೇಲೆ ಪೊಲೀಸರು ಗುಂಡು ಹಾರಿಸುತ್ತಾರೆ. ನಂತರ ಅವರನ್ನು ಬಂಧಿಸುವ ವೀಡಿಯೊ ಉತ್ತರ ಪ್ರದೇಶದ ಅಯೋಧ್ಯೆ ನಗರದಿಂದ ಬಂದಿದೆ ಎಂದು ಹೇಳಲಾಗಿದೆ.
ಏಪ್ರಿಲ್ 4 ರಂದು ಫೇಸ್ಬುಕ್ ಬಳಕೆದಾರ ಶಿವಂಶು ಶುಕ್ಲಾ ಈ ವಿಡಿಯೋವನ್ನು ಪೋಸ್ಟ್ ಮಾಡಿ, “ಈ ಘಟನೆ ಚೋರ್ ಬಜಾರ್ನಿಂದ ಬಂದಿದೆ. ಜೈ ಯೋಗಿ ರಾಜ್. ಯುಪಿ ಅಯೋಧ್ಯೆ ಶ್ರೀ ರಾಮನ ಭೂಮಿ ಎಂದು ‘ಜಿಹಾದಿಗಳು’ ನಿಮಗೆ ತಿಳಿದಿರಲಿಲ್ಲ. ಯುಪಿ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ” ಎಂಬ ಟೈಟಲ್ ನೀಡಿರುವ ಈ ವೀಡಿಯೊವನ್ನು ಇದುವರೆಗೆ 500 ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ.
चौरे बाजार की घटना जय योगी राज?? जेहादियों क्या तुम्हें नही पता था कि ये UP का अयोध्या मर्यादा पुरुषोत्तम श्री राम की धरातल है God job UP police
Posted by Shivanshu Shukla on Saturday, April 4, 2020
ಈ ಪುರುಷರು ‘ಕರೋನಾ ಜಿಹಾದಿಗಳು’ ಎಂದು ಹೇಳಿ ಇದೇ ರೀತಿಯ ಹೇಳಿಕೆಯೊಂದಿಗೆ ವಿಡಿಯೋ ಫೇಸ್ಬುಕ್ನಲ್ಲಿ ಸಾಕಷ್ಟು ವೈರಲ್ ಆಗಿದೆ.
ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಧಾರ್ಮಿಕ ಸಭೆಯೊಂದನ್ನು ಕೊರೋನವೈರಸ್ ಹಾಟ್ಸ್ಪಾಟ್ ಎಂದು ಗುರುತಿಸಿದ ನಂತರ, ಮುಸ್ಲಿಂ ಸಮುದಾಯದ ಮೇಲೆ ಎಲ್ಲಾ ಆಪಾದನೆಯನ್ನು ಹೊರಿಸುವ ಪ್ರಯತ್ನ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನದ ರೀತಿಯಲ್ಲಿ ನಡೆಯುತ್ತಿದೆ. ಮುಸ್ಲಿಂ ಸಮುದಾಯವು ಉದ್ದೇಶಪೂರ್ವಕವಾಗಿ ಸೋಂಕನ್ನು ಹರಡಲು ಪ್ರಯತ್ನಿಸುತ್ತಿದೆ ಎಂಬ ಸುಳ್ಳು ನಿರೂಪಣೆಯನ್ನು ಪ್ರಚಾರ ಮಾಡಲು ‘ಕರೋನಾ ಜಿಹಾದ್’ ಮತ್ತು ‘ಕರೋನಾ ಜಿಹಾದಿ’ ಎಂಬ ನುಡಿಗಟ್ಟುಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಅವಹೇಳನಕಾರಿ ರೀತಿಯಲ್ಲಿ ಬಳಸಿಕೊಂಡಿವೆ.
ಫ್ಯಾಕ್ಟ್-ಚೆಕ್
ಫೇಸ್ಬುಕ್ ಬಳಕೆದಾರರಲ್ಲಿ ಕೆಲವು ಬಳಕೆದಾರರು ಈ ವೀಡಿಯೊವನ್ನು ಅಣಕು ಪ್ರದರ್ಶನ ಎಂದು ಹಂಚಿಕೊಂಡಿದ್ದಾರೆ. ಸಂಬಂಧಿತ ಕೀವರ್ಡ್ಗಳೊಂದಿಗೆ ಯೂಟ್ಯೂಬ್ ಹುಡುಕಾಟದೊಂದಿಗೆ, ಏಪ್ರಿಲ್ 4, 2020 ರಂದು ವಿಕೆ ನ್ಯೂಸ್ ಚಾನೆಲ್ ಪೋಸ್ಟ್ ಮಾಡಿದ ಅದೇ ಘಟನೆಯ ಮತ್ತೊಂದು ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊ ಯುಪಿ ಸುಲ್ತಾನಪುರ ಗಡಿಯಿಂದ ಬಂದಿದೆ. ಇದು ಯುಪಿ ಪೊಲೀಸರು ನಡೆಸಿದ ಅಣಕು ಪ್ರದರ್ಶನವನ್ನು ತೋರಿಸುತ್ತದೆ.
ವೈರಲ್ ವೀಡಿಯೊದಿಂದ ಸ್ಕ್ರೀನ್ಗ್ರಾಬ್ನ ಹೋಲಿಕೆ ಮತ್ತು ಯೂಟ್ಯೂಬ್ ವೀಡಿಯೊದ ಫ್ರೇಮ್ ಎರಡೂ ಒಂದೇ ಅಣಕು ಡ್ರಿಲ್ ಅನ್ನು ಚಿತ್ರಿಸುತ್ತದೆ ಎಂದು ಖಚಿತಪಡಿಸುತ್ತದೆ.
ಆಲ್ಟ್ ನ್ಯೂಸ್ ಅಯೋಧ್ಯೆ ಸಿಟಿ ಎಸ್ಪಿಯನ್ನು ಸಂಪರ್ಕಿಸಿದಾಗ ಅವರು ಅದು ಕೇವಲ ಪ್ರದರ್ಶನದ ದೃಶ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ, ಯುಪಿ ಪೊಲೀಸರು ನಡೆಸಿದ ಅಣಕು ಪ್ರದರ್ಶನದ ವೀಡಿಯೊವನ್ನು ಕೊರೋನವೈರಸ್ ಹರಡುವ ಗುರಿಯನ್ನು ಹೊಂದಿರುವ ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಗಮನಿಸಿ: ಭಾರತದಲ್ಲಿ ಕೊರೋನವೈರಸ್ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 9,000 ಮೀರಿದೆ ಮತ್ತು 350 ಕ್ಕೂ ಹೆಚ್ಚು ಸಾವುಗಳು ಈವರೆಗೆ ವರದಿಯಾಗಿವೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಅಗತ್ಯ ಸೇವೆಗಳ ಹೊರತಾಗಿ ಚಲನೆಗೆ ಸರ್ಕಾರ ಸಂಪೂರ್ಣ ನಿರ್ಬಂಧ ಹೇರಿದೆ. ಜಾಗತಿಕವಾಗಿ, 18 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಹಾಗಾಗಿ ಈ ವಿಚಾರದಲ್ಲಿ ತಮಾಷೆಗಾಗಿ ಅಥವಾ ಇನ್ನೊಬ್ಬರನ್ನು ಹಳಿಯುವ ಸಲುವಾಗಿ ಯಾರೂ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಪರಿಶೀಲಿಸಿದ ನಂತರವೇ ಫಾರ್ವಡ್ ಮಾಡಿ.
ಇದನ್ನೂ ಓದಿ :ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದು ಹೇಗೆ? ಇಷ್ಟು ಮಾಡಿದರೆ ಸಾಕು