ಮುಸ್ಲಿಂ ದಂಪತಿಯ ಪುತ್ರ ಹಿಂದೂ ಬಾಲಕಿಯನ್ನು ವಿವಾಹವಾಗಿದ್ದಕ್ಕೆ ದಂಪತಿಯನ್ನು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಗುಂಪೊಂದು ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿರುವ ಬಗ್ಗೆ ಎನ್ ಡಿಟವಿ ವರದಿ ಮಾಡಿದೆ.
ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಓರ್ವನ ಮಗಳ ಜೊತೆ ಹತ್ಯೆಗೊಳಗಾದ ದಂಪತಿಯ ಮಗನಿಗೆ ಸಂಬಂಧ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಘಟನೆ ನಡೆದಿದ್ದು, ದುಷ್ಕರ್ಮಿಗಳ ದಾಳಿಗೆ ಅಬ್ಬಾಸ್ ಮತ್ತು ಅವರ ಪತ್ನಿ ಕಮರುಲ್ ನಿಶಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಈ ಕುರಿತು ಮಾತನಾಡಿ, ಕೆಲವು ವರ್ಷಗಳ ಹಿಂದೆ ಅಬ್ಬಾಸ್ ಅವರ ಮಗ ಪಕ್ಕದ ಮನೆಯ ಬಾಲಕಿಯೊಂದಿಗೆ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಬ್ಬಾಸ್ ಪುತ್ರನನ್ನು ಜೈಲಿಗೆ ಕಳುಹಿಸಲಾಗಿತ್ತು.
ಕೆಲವು ದಿನಗಳ ಹಿಂದೆ ಅಬ್ಬಾಸ್ ಅವರ ಮಗ ಜೈಲಿನಿಂದ ಹೊರಬಂದಾಗ, ಕುಟುಂಬದ ಕೆಲವು ಸದಸ್ಯರ ಗುಂಪು ದಂಪತಿಗಳ ಮೇಲೆ ದಾಳಿ ನಡೆಸಲು ತಯಾರಿ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ ಮೃತ ದಂಪತಿ ಪುತ್ರ ಶೌಕತ್, ಆರೋಪಿ ರಾಂಪಾಲ್ ಅವರ ಪುತ್ರಿ ರೂಬಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಶೌಕತ್ 2020ರಲ್ಲಿ ರೂಬಿ ಜೊತೆ ಪರಾರಿಯಾಗಿದ್ದ, ಆಗ ರೂಬಿ ಅಪ್ರಾಪ್ತ ವಯಸ್ಸಿನವಳಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಶೌಕತ್ ನನ್ನು ಜೈಲಿಗೆ ಕಳುಹಿಸಿದ್ದರು. ಬಿಡುಗಡೆ ಬಳಿಕ ಮತ್ತೆ ಜೂನ್ನಲ್ಲಿ ರೂಬಿಯ ಜೊತೆ ಮದುವೆಯಾಗಿದ್ದ ಎಂದು ಚಕ್ರೇಶ್ ಮಿಶ್ರಾ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಸೂಫಿ ಸಂತರಿಗೆ ಮರುನಾಮಕರಣ ಮಾಡಿದ ಸಂಘಪರಿವಾರ: ಮುಸ್ಲಿಮರಿಂದ ಉಪವಾಸ ಸತ್ಯಾಗ್ರಹ