ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಉಪ್ಪು ಮತ್ತು ರೊಟ್ಟಿ ನೀಡಲಾಗುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡುವ ಮೂಲಕ ಉತ್ತರ ಪ್ರದೇಶ ಸರ್ಕಾರದ ಚಿತ್ರಣವನ್ನು ದೇಶಕ್ಕೆ ತೋರಿಸಿದ ಪತ್ರಕರ್ತ ಪವನ್ ಕುಮಾರ್ ಜೈಸ್ವಾಲ್ ಮೇಲೆ ದೂರು ದಾಖಲಾಗಿದ್ದು ಎಫ್ಐಆರ್ ಹಾಕಿರುವ ಘಟನೆ ವರದಿಯಾಗಿದೆ.
ಈ ವಿಡಿಯೋ ಮಾಡುವು ಮೂಲಕ “ತಿರಸ್ಕಾರದ ಕೆಲಸ” ಮಾಡಿದ್ದಾರೆ ಎಂದು ಆರೋಪಿಸಿ ಅಹಿರೌರಾ ಪೊಲೀಸ್ ಠಾಣೆಯಲ್ಲಿ ಮಿರ್ಜಾಪುರ ಬ್ಲಾಕ್ ಶಿಕ್ಷಣ ಅಧಿಕಾರಿ ಪ್ರೇಮ್ ಶಂಕರ್ ರಾಮ್ ಅವರ ದೂರಿನ ಮೇರೆಗೆ ಶನಿವಾರ ಎಫ್ಐಆರ್ ದಾಖಲಿಸಲಾಗಿದೆ.
ಪತ್ರಕರ್ತ ಪವನ್ ಕುಮಾರ್ ಜೈಸ್ವಾಲ್, ಗ್ರಾಮದ ಮುಖ್ಯ ಪ್ರತಿನಿಧಿ ರಾಜ್ಕುಮಾರ್ ಪಾಲ್ ಮತ್ತು ಇನ್ನೂ ಹಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 186 (ಸರ್ಕಾರಿ ನೌಕರನನ್ನು ಕರ್ತವ್ಯ ನಿರ್ವಹಿಸುವಲ್ಲಿ ಅಡ್ಡಿಪಡಿಸುವುದು), 193 (ಸುಳ್ಳು ಪುರಾವೆಗಳು) ಮತ್ತು 420 (ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Pawan Jaiswal deserves all the support in the world. Please spread the word. #PressFreedom https://t.co/4GnxIsfsiA
— Neha Dixit (@nehadixit123) September 2, 2019
ದೂರಿನ ಪ್ರಕಾರ, ಜೈಸ್ವಾಲ್ ಮತ್ತು ಪಾಲ್ ಸಂಚು ರೂಪಿಸಿ ಉದ್ದೇಶಪೂರ್ವಕವಾಗಿ ವಿಡಿಯೋವನ್ನು ಯೋಜಿತ ರೀತಿಯಲ್ಲಿ ತಯಾರಿಸಿದ್ದಾರೆ ಮತ್ತು ರಾಜ್ಯ ಸರ್ಕಾರದ ಚಿತ್ರಣವನ್ನು ಕೆಡಿಸುವ “ತಿರಸ್ಕಾರದ ಕೆಲಸ” ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ರೊಟ್ಟಿ ಮಾತ್ರ ಬೇಯಿಸಲಾಗುತ್ತದೆ ಮತ್ತು ಶಾಲೆಯಲ್ಲಿ ತರಕಾರಿ ಬೇಯಿಸುವುದಿಲ್ಲ ಎಂದು ಪಾಲ್ ಗೆ ಮೊದಲೇ ತಿಳಿದಿತ್ತು. ಆದರೆ “ಅದನ್ನು ಸರಿಪಡಿಸುವ ಬದಲು” ಅವರು ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡುವ ಪತ್ರಕರ್ತನನ್ನು ಕರೆದು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಅದನ್ನು ತೋರಿಸುವಂತೆ ಒತ್ತಾಯಿಸಿದರು. ಇದರಿಂದಾಗಿ “ಪತ್ರಕರ್ತ ತನ್ನ ಮೊಬೈಲ್ನಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ ಮತ್ತು ಅದನ್ನು ಎಲೆಕ್ಟ್ರಾನಿಕ್ ಮಾಧ್ಯಮ ಸಂಸ್ಥೆಗಳಿಗೆ ಹಂಚಿಕೊಂಡಿದ್ದಾನೆ” ಎಂದು ಆರೋಪಿಸಲಾಗಿದೆ.
“ಈ ವಿಷಯವು ನಮ್ಮ ಗಮನಕ್ಕೆ ಬಂದಿದೆ ಮತ್ತು ಸಮಸ್ಯೆಯ ಕುರಿತು ತನಿಖೆಗೆ ಆದೇಶಿಸಲಾಗಿತ್ತು. ರೊಟ್ಟಿ ಮತ್ತು ಉಪ್ಪನ್ನು ಬಡಿಸಿದ ಆರೋಪ ನಿಜವೆಂದು ತಿಳಿದುಬಂದ ನಂತರ, ಮುರಾರಿ ಮತ್ತು ಅರವಿಂದ ತ್ರಿಪಾಠಿ ಎಂಬ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು ”ಎಂದು ಮಿರ್ಜಾಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುರಾಗ್ ಪಟೇಲ್ ಹೇಳಿದ್ದಾರೆ.
ಮಿರ್ಜಾಪುರ ಜಿಲ್ಲೆಯ ಜಮಾಲ್ಪುರ ಬ್ಲಾಕ್ನಲ್ಲಿರುವ ಸಿಯೂರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಮಧ್ಯಾಹ್ನ ಊಟದಲ್ಲಿ ಉಪ್ಪು ಮತ್ತು ರೊಟ್ಟಿ ಮಾತ್ರ ತಿನ್ನುತ್ತಿರುವ ವಿಡಿಯೋ ಆಗಸ್ಟ್ 22 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಮುಖ ಪೌಷ್ಠಿಕಾಂಶ ಯೋಜನೆಯಡಿಯ ಮಾನದಂಡಗಳ ಪ್ರಕಾರ, ದ್ವಿದಳ ಧಾನ್ಯಗಳು, ಅಕ್ಕಿ, ರೊಟ್ಟಿ ಮತ್ತು ತರಕಾರಿಗಳು, ಕೆಲವು ದಿನಗಳಲ್ಲಿ ಹಣ್ಣುಗಳು ಮತ್ತು ಹಾಲಿನೊಂದಿಗೆ ಶಾಲೆಗೆ ಹೋಗುವ ಮಕ್ಕಳಿಗೆ ಅಗತ್ಯವಾದ ಪೌಷ್ಠಿಕಾಂಶವುಳ್ಳ ಆಹಾರವನ್ನು ನೀಡಬೇಕಾಗಿತ್ತು.
ಜೈಸ್ವಾಲ್ ವಿರುದ್ಧ ಎಫ್ಐಆರ್ ಹಾಕಿದ ಸುದ್ದಿ ಹೊರಬಿದ್ದ ನಂತರ, ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಅವರನ್ನು ಬೆಂಬಲಿಸಿದ್ದಾರೆ. ನೇಹಾ ದೀಕ್ಷಿತ್ ಮತ್ತು ರೋಹಿಣಿ ಸಿಂಗ್ ಸೇರಿದಂತೆ ಹಲವಾರು ಪತ್ರಕರ್ತರು ಎಫ್ಐಆರ್ ಅನ್ನು ಟೀಕಿಸುತ್ತಿದ್ದಲ್ಲದೇ ಜೈಸ್ವಾಲ್ ರವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಕಂಡದ್ದನ್ನು ವರದಿ ಮಾಡಿದ್ದಾರೆ ಇದರಲ್ಲಿ ತಪ್ಪೇನು ಎಂದು ಪುನರುಚ್ಚರಿಸಿದ್ದಾರೆ. ಕ್ರಮ ತೆಗೆದುಕೊಳ್ಳಬೇಕಿರುವುದು ಸರ್ಕಾರದ ಮೇಲೆ, ಶಿಕ್ಷಣ ಇಲಾಖೆಯ ಅಧಿಕಾರಗಳ ವಿರುದ್ಧವೇ ಹೊರತು ಪ್ರಾಮಾಣಿಕ ಪತ್ರಕರ್ತರ ಮೇಲಲ್ಲ ಎಂದು ಕಿಡಿಕಾರಿದ್ದಾರೆ.