ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ವಿಧಾನಸೌಧ ಹಾಗೂ ಹೈಕೋರ್ಟ್ ಚಲೋದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವಜಾಗೊಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ರಾಯಚೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನಗೌಡ ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋವನ್ನು ಗಣರಾಜ್ಯೋತ್ಸವ ದಿನದಂದು ತೆರವುಗೊಳಿಸಿ ಧ್ವಜಾರೋಹಣ ಮಾಡಿದ್ದನ್ನು ಖಂಡಿಸಿ ಬೆಂಗಳೂರಿನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಅಂಬೇಡ್ಕರ್ ಅನುಯಾಯಿಗಳು ಆಗಮಿಸಿದ್ದರು. ದಲಿತ ವಿದ್ಯಾರ್ಥಿ ಪರಿಷತ್, ಎಸ್ಡಿಪಿಐ, ಬಿಎಸ್ಪಿ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಭಾರತೀಯ ದಲಿತ ಫ್ಯಾಂಥರ್- ಹೀಗೆ ಹಲವು ಸಂಘಟನೆಗಳು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ಭಾಗವಾಗಿದ್ದವು. ನೂರಾರು ವಾಹನಗಳನ್ನು ಮಾಡಿಕೊಂಡು ದೂರದ ಜಿಲ್ಲೆಗಳಿಂದ ಸಾವಿರಾರು ಜನರು ಬೆಂಗಳೂರಿಗೆ ಆಗಮಿಸಿದ್ದರು.
ಕೇಂದ್ರ ರೈಲ್ವೆ ನಿಲ್ದಾಣದಿಂದ ಪ್ರೀಡಂ ಪಾರ್ಕ್ವರೆಗೆ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಜೈಭೀಮ್ ಘೋಷಣೆಗಳು ಮೊಳಗಿತು. ನೀಲಿ ಭಾವುಟ, ನೀಲಿ ಶಾಲುಗಳು, ನೀಲಿ ಟೋಪಿಗಳು ರಾರಾಜಿಸಿದವು. ಕಲಾವಿದರು ವಾದ್ಯ ನುಡಿಸುತ್ತ ಮೆರವಣಿಗೆಯನ್ನು ಮುನ್ನಡೆಸಿದರು. ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
“ಕೋರ್ಟ್ ಸಭಾಂಗಣದಲ್ಲಿಯೇ ಅಂಬೇಡ್ಕರ್ ಭಾವಚಿತ್ರ ಇರುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು. ನ್ಯಾಯಾಲಯದಲ್ಲಿ ಮೀಸಲಾತಿ ಕಡ್ಡಾಯ ಮಾಡಬೇಕು. ಹುಮನಾಬಾದ್ ತಹಸೀಲ್ದಾರ್ ವಿರುದ್ಧವೂ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಲಾಯಿತು.
ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, “ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಅವಮಾನಿಸುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವೇ ಇದೆ. ಮಲ್ಲಿಕಾರ್ಜುನಗೌಡರ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ” ಎಂದು ಎಚ್ಚರಿಸಿದರು.
ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, “ಅಂಬೇಡ್ಕರ್ ಹೆಸರಲ್ಲಿ ಗೆದ್ದ ಅನೇಕರು ಮನುವಾದಿಗಳಾಗಿದ್ದಾರೆ. ಈ ಹಿಂದೆಯೂ ಅಂಬೇಡ್ಕರ್ರವರಿಗೆ ಅವಮಾನ ಮಾಡಿರುವ ಘಟನೆಗಳು ನಡೆದಿವೆ” ಎಂದು ಬೇಸರ ವ್ಯಕ್ತಪಡಿಸಿದರು.
ಮೆರವಣಿಗೆ ವೇಳೆ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಹಿರಿಯ ದಲಿತ ಹೋರಾಟಗಾರ ಮಾವಳ್ಳಿ ಶಂಕರ್, “ಮಲ್ಲಿಕಾರ್ಜುನ ಗೌಡ ಅವರನ್ನು ನ್ಯಾಯಮೂರ್ತಿ ಎನ್ನುತ್ತಾರೆ. ಆದರೆ ಅವರ ಒಳಗಡೆ ಇರುವುದು ಜಾತಿವಾದಿ ಮನಸ್ಸು. ಬಸವಣ್ಣ ಹಾಗೂ ಕುವೆಂಪು ಅವರ ನಾಡಿನಲ್ಲಿ ಇಂತಹ ಜಾತಿವಾದಿ ಮನಸ್ಸುಗಳು ನ್ಯಾಯಸ್ಥಾನದಲ್ಲಿ ಕುಳಿತಿರುವುದು ಅತ್ಯಂತ ಅಪಮಾನಕರ ಸಂಗತಿ. ಬಾಬಾ ಅಂಬೇಡ್ಕರ್ರವರಿಗೆ ಕಿಂಚಿತ್ತು ಅಪಮಾನವಾದರೂ ಈ ಶೋಷಿತ ಸಮುದಾಯಗಳು ಸುಮ್ಮನಿರುವುದಿಲ್ಲ ಎಂಬುದನ್ನು ಈ ನಾಡಿಗೆ ತೋರಿಸಿಕೊಡಲಾಗಿದೆ” ಎಂದರು.
ಇದನ್ನೂ ಓದಿರಿ: ವಿಜಯಪುರ: ತಿಲಕ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ
ಬಾಬಾ ಸಾಹೇಬರು ಯಾವುದೋ ಒಂದು ಜಾತಿ ವರ್ಗದ ನಾಯಕರಲ್ಲ. ಇಡೀ ದೇಶದ ಜನ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ರವರ ಬಗ್ಗೆ ಮಾತನಾಡುತ್ತಿದ್ದಾರೆ. ಅನೇಕ ಸಮುದಾಯಗಳು ಬಾಬಾ ಸಾಹೇಬರು ಬರೆದ ಸಂವಿಧಾನ ಆಶಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇದು ಒಂದು ಒಳ್ಳೆಯ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.
ಬಾಬಾ ಸಾಹೇಬರು ಸಮಾನತೆ, ಭ್ರಾತೃತ್ವದ ಸಂಕೇತ. ಎಲ್ಲ ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕು. ಪ್ರತಿಭಟನೆಗೆ ಹೆದರಿದ ಹೈಕೋರ್ಟ್ ರಾಷ್ಟ್ರೀಯ ಹಬ್ಬಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಫೋಟೋ ಇಡಲು ಸೂಚಿಸಿದೆ. ಇಷ್ಟೇ ಅಲ್ಲದೆ ಬೇರೆ ದಿನಗಳಲ್ಲಿಯೂ ನ್ಯಾಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು. ಹೈಕೋರ್ಟ್ ಆದೇಶ ತಿದ್ದುಪಡಿಯಾಗಬೇಕಿದೆ ಎಂದು ಒತ್ತಾಯಿಸಿದರು.
ಇದನ್ನೂ ಓದಿರಿ: ಮೈಸೂರು: ಸರ್ಕಾರಿ ಶಾಲೆಯ ಅಭಿವೃದ್ಧಿಗೆ 2.5 ಎಕರೆ ಜಮೀನು ದಾನ ಮಾಡಿದ ಮುಸ್ಲಿಂ ಕುಟುಂಬ
‘ಅರಾಜಕತೆಯೇ ಸಂಘಪರಿವಾರದ ಉದ್ದೇಶ’
ಅನೇಕ ಸಮಸ್ಯೆಗಳು ಜೀವಂತವಾಗಿವೆ. ಈ ಸರ್ಕಾರ, ಸಂಘಪರಿವಾರಕ್ಕೆ ಇದ್ಯಾವುದೂ ಬೇಕಾಗಿಲ್ಲ. ಬೇಕಾಗಿರುವುದು ಹಿಜಾಬ್ ವಿವಾದ ಮಾತ್ರ. ತಮ್ಮ ಧಾರ್ಮಿಕ ಹಕ್ಕುಗಳಿಗೆ ಅನುಸಾರವಾಗಿ ಹಿಜಾಬ್ ಧರಿಸಿ ಹೆಣ್ಣುಮಕ್ಕಳು ಶಾಲಾ, ಕಾಲೇಜುಗಳಿಗೆ ಹೋಗುತ್ತಿದ್ದರು. ಇದನ್ನು ದೊಡ್ಡದಾಗಿ ವಿವಾದ ಮಾಡಲಾಗಿದೆ. ಈ ವೈದಿಕರು, ಮನುವಾದಿ ಸಂತತಿಯವರು ದೇಶವನ್ನು ನೆಮ್ಮದಿಯಾಗಿ ಇಡಲು ಬಿಡುವುದಿಲ್ಲ. ದೇಶವನ್ನು ಅರಾಜಕ ಸ್ಥಿತಿಯಲ್ಲಿ ಇಡಬೇಕು ಎಂಬುದು ಸಂಘ ಪರಿವಾರದ ಪಿತೂರಿ. ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠವನ್ನು ಕಲಿಸಬೇಕಿದೆ ಎಂದು ಮಾವಳ್ಳಿ ಶಂಕರ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ನಟ, ಹೋರಾಟಗಾರ ಚೇತನ್ ಅಹಿಂಸಾ, “ಎಲ್ಲ ಅಂಬೇಡ್ಕರ್, ಪೆರಿಯಾರ್ ವಾದಿಗಳು ನೀಲಿ ಶಾಲು ಧರಿಸಿ ಇಲ್ಲಿ ಸೇರಿದ್ದೇವೆ. ಮಲ್ಲಿಕಾರ್ಜುನ ಗೌಡ ಅವರಿಗೆ ನ್ಯಾಯ ಎಂದರೆ ಏನೆಂದು ಗೊತ್ತಿಲ್ಲ. ರಾಜ್ಯದಲ್ಲಿ ನಿರ್ಲಕ್ಷ್ಯದ ಸರ್ಕಾರವಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಈ ಹೋರಾಟದ ಪರ ನಿಲ್ಲಲಿಲ್ಲ” ಎಂದು ದೂರಿದರು.
ಮಲ್ಲಿಕಾರ್ಜುನಗೌಡರಂಥವರು ಕಣ್ಣಿಗೆ ಕಾಣುವ ಶತ್ರುಗಳು. ಆದರೆ ಎಲ್ಲ ಪಕ್ಷಗಳು ಬಾಬಾ ಸಾಹೇಬರ ಫೋಟೋ ಮಾತ್ರ ಹಾಕಿಕೊಂಡು ನಮ್ಮನ್ನು ದಿಕ್ಕು ತಪ್ಪಿಸುತ್ತಿವೆ. ಇವರು ಬಹಳ ಅಪಾಯಕಾರಿ ಶತ್ರುಗಳು. ಅವರ ವಿರುದ್ಧವೂ ನಾವು ನಿಂತುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ನಾವು ನೀಲಿ ಶಾಲುಗಳು: ಚೇತನ್
“ನಾವು ಹಿಂದೂ ಅಲ್ಲ, ಮುಸಲ್ಮಾನರೂ ಅಲ್ಲ. ನಾವು ಸಮಾನತಾ ವಾದಿಗಳು. ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ. ನಾವು ಪರ್ಯಾಯ ಶಕ್ತಿಗಳು. ಈಗ ದೊಡ್ಡ ವಿವಾದ ನಡೆಯುತ್ತಿದೆ. ನಾವು ಕೇಸರಿ ಶಾಲೂ ಅಲ್ಲ, ಹಿಜಾಬೂ ಅಲ್ಲ. ನಾವು ನೀಲಿ ಶಾಲುಗಳು. ಬದಲಾವಣೆಯೇ ಪರ್ಯಾಯವಾಗಿದೆ. ಈ ಘೋಷಣೆ ರಾಜ್ಯದ ಮೂಲೆಮೂಲೆಗೂ ಹರಡುತ್ತಿದೆ” ಎಂದು ಚೇತನ್ ತಿಳಿಸಿದರು.
ಸಿಎಂ ಸ್ಥಳಕ್ಕೆ ಭೇಟಿ: ಭರವಸೆ
ಪ್ರತಿಭಟನಾ ಸ್ಥಳಕ್ಕೆ (ಫ್ರೀಡಂ ಪಾರ್ಕ್) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ, ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಹೋರಾಟಗಾರರ ಮನವಿ ಪತ್ರವನ್ನು ಸಿಎಂ ಸ್ವೀಕರಿಸಿದರು. ಜೊತೆಗೆ ಮಲ್ಲಿಕಾರ್ಜುನ ಗೌಡ ಅವರ ನಡೆಯನ್ನು ಖಂಡಿಸಿದರು.
“ಅಂಬೇಡ್ಕರ್ ಫೋಟೋ ತೆರವು ಮಾಡಿಸಿ ಅವಮಾನ ಮಾಡಿದ ಘಟನೆಯು ನಮಗೂ ಕಣ್ಣು ತೆರೆಸಿದೆ. ಘಟನೆ ಸಂಬಂಧ ದಲಿತ ಸಮುದಾಯಗಳ ಮುಖಂಡರು ನನಗೆ ವಿವರಿಸಿದ್ದಾರೆ. ಶೀಘ್ರದಲ್ಲಿಯೇ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗುವುದು” ಎಂದು ತಿಳಿಸಿದರು.
ಚಿಂತಕ ಯೋಗೇಶ್ ಮಾಸ್ಟರ್, ಹ.ರಾ.ಮಹೇಶ್, ಹರಿರಾಮ್, ಬಿ.ಆರ್.ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವು ಮುಖಂಡರು ಹೋರಾಟದಲ್ಲಿ ಹಾಜರಿದ್ದರು.
ಇದನ್ನೂ ಓದಿರಿ: ಹಿಜಾಬ್ ವಿಚಾರದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ: ಕ್ಷಮೆ ಕೇಳಿದ ಟಿವಿ ಚಾನೆಲ್ ಪತ್ರಕರ್ತರು
ಅನ್ಯಾಯದ ವಿರುದ್ಧ ನಿಲ್ಲುವ ಏಕೈಕ ಪತ್ರಿಕೆ 🙏🙏👍👍