ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ವಿಮಲ್ ಪಟ್ನಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವುದು ಚುನವಣಾ ಬಾಂಡ್ ಮಾಹಿತಿಯಿಂದ ಬಯಲಾಗಿದೆ.
ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣ ನವೆಂಬರ್ 26, 2005ರಂದು ನಡೆದಿತ್ತು. ನಂತರ ಅವರ ಪತ್ನಿ ಕೌಸರ್ ಬಿ ವಾಹನದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಮತ್ತು ಅವರ ಸಹಾಯಕ ತುಳಸಿರಾಮ್ ಪ್ರಜಾಪತಿಯನ್ನು ಪೊಲೀಸರು ಕೊಲೆ ಮಾಡಿದ್ದಾರೆ ಎಂದು ಆರೋಪಿಲಾಗಿತ್ತು. ಪ್ರಕರಣದಲ್ಲಿ ಅಂದಿನ ಗುಜರಾತ್ ರಾಜ್ಯದ ಗೃಹ ಸಚಿವ ಮತ್ತು ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗುಜರಾತ್ ಮತ್ತು ರಾಜಸ್ಥಾನದ ಬಿಜೆಪಿಯ ಕೆಲ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳು ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪವನ್ನು ಎದುರಿಸಿದ್ದಾರೆ. ವಿಚಾರಣೆಯ ವಿವಿಧ ಹಂತಗಳಲ್ಲಿ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದರು.
ಎನ್ಕೌಂಟರ್ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ಸೊಹ್ರಾಬುದ್ದೀನ್ ಶೇಖ್ ರಾಜಸ್ಥಾನದ ಮಾರ್ಬಲ್ ವ್ಯಾಪಾರಿ ವಿಮಲ್ ಪಾಟ್ನಿಯಿಂದ ಹಣ ವಸೂಲಿ ಮಾಡಲು ಯತ್ನಿಸಿದ್ದ ಎಂದು ಹೇಳಿದೆ.
ಉದಯಪುರ ಮೂಲದ ವಂಡರ್ ಸಿಮೆಂಟ್ ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದ ಪ್ರಮುಖ ಆರೋಪಿ ವಿಮಲ್ ಪಟ್ನಿಗೆ ಸೇರಿದ್ದಾಗಿದೆ. ಈ ಸಂಸ್ಥೆ 2023ರ ಆರ್ಥಿಕ ವರ್ಷದಲ್ಲಿ 250 ಕೋಟಿ ರೂ. ಲಾಭ ಗಳಿಸಿತ್ತು ಹಾಗೂ ಚುನಾವಣಾ ಬಾಂಡ್ಗಳ ಮೂಲಕ 20 ಕೋಟಿ ರೂ. ದೇಣಿಗೆ ನೀಡಿತ್ತು. ಅಷ್ಟೇ ಅಲ್ಲದೆ ವಿಮಲ್ ಕುಟುಂಬದ ನಾಲ್ಕು ಸದಸ್ಯರಾದ, ಸಂಸ್ಥೆಯ ಅಧ್ಯಕ್ಷ ಅಶೋಕ್, ಆಡಳಿತ ನಿರ್ದೇಶಕ ಸುರೇಶ್, ನಿರ್ದೇಶಕ ವಿವೇಕ್ ಮತ್ತು ಅಧ್ಯಕ್ಷ ವಿನೀತ್ 8 ಕೋಟಿ ರೂ. ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದ್ದರು.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಇತ್ತೀಚೆಗೆ ಮೂರು ಹಂತಗಳಲ್ಲಿ ಎಸ್ಬಿಐ ಚುನಾವಣಾ ಬಾಂಡ್ ಕುರಿತ ಮಾಹಿತಿಯನ್ನು ನೀಡಿತ್ತು. ಇದರಲ್ಲಿ ಯಾವ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ಎಷ್ಟು ದೇಣಿಗೆಯನ್ನು ಪಡೆದುಕೊಂಡಿದೆ ಎನ್ನುವುದು ಬಯಲಾಗಿತ್ತು. ಇತ್ತೀಚೆಗೆ ಎಡಿಆರ್(ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಈ ಕುರಿತು ವರದಿಯನ್ನು ಬಿಡುಗಡೆ ಮಾಡಿತ್ತು ಅದರಲ್ಲಿ ಬಿಜೆಪಿ ಚುನಾವಣಾ ಬಾಂಡ್ ಯೋಜನೆ ಜಾರಿಯಲ್ಲಿದ್ದ ಮಾರ್ಚ್ 2018ರಿಂದ ಜನವರಿ 2024ರವೆರೆಗೆ ಒಟ್ಟು 7,800 ಕೋಟಿ ದೇಣಿಗೆ ಪಡೆದಿದೆ ಎಂದು ಉಲ್ಲೇಖಿಸಿತ್ತು.
Vimal Patni’s company donated Rs 20 crore and his family another Rs 8 crore to political parties through #ElectoralBonds. He was an accused in the controversial 2005 Sohrabuddin encounter case and was later acquitted by the CBI court, along with others.https://t.co/cIXDdhgFy5
— the reporters' collective (@reporters_co) March 17, 2024
ಇದನ್ನು ಓದಿ: ಚುನಾವಣಾ ಬಾಂಡ್ ಮೂಲಕ ಅತಿ ಹೆಚ್ಚು ದೇಣಿಗೆ ಪಡೆದ ಬಿಜೆಪಿ: ಚು.ಆಯೋಗದಿಂದ ಹೊಸ ಮಾಹಿತಿ ಪ್ರಕಟ