Homeಮುಖಪುಟವಿಶಾಖಪಟ್ನಂ ಅನಿಲ ದುರಂತ: ನಿಲ್ಲದ ಸಾವಿನ ಸರಣಿ - ಕಳಪೆ ಆರೋಗ್ಯ ವ್ಯವಸ್ಥೆ ವಿರುದ್ಧ ದೂರು

ವಿಶಾಖಪಟ್ನಂ ಅನಿಲ ದುರಂತ: ನಿಲ್ಲದ ಸಾವಿನ ಸರಣಿ – ಕಳಪೆ ಆರೋಗ್ಯ ವ್ಯವಸ್ಥೆ ವಿರುದ್ಧ ದೂರು

- Advertisement -
- Advertisement -

ಮೇ 07 ರಂದು ಆಂಧ್ರ ಪ್ರದೇಶದ ವಿಶಾಖಪಟ್ನಂ ಎಲ್‌ಜಿ ಪಾಲಿಮರ್ಸ್ ಸ್ಥಾವರದಿಂದ ಸ್ಟೈರೀನ್ ಅನಿಲ ಸೋರಿಕೆ ಸಂಭವಿಸಿ ಒಂದು ತಿಂಗಳಾಗುತ್ತಿದೆ. ಆದರೂ ಕಳೆದ 10 ದಿನಗಳಲ್ಲಿ ವೆಂಕಟಪುರಂನ ಇನ್ನೂ ಇಬ್ಬರು ನಿವಾಸಿಗಳು ಸಾವನ್ನಪ್ಪಿದ್ದಾರೆ. ಸಾವಿನ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆಯ ವರದಿಗಳಿಗಾಗಿ ಕಾಯುತ್ತಿದ್ದಾರೆ.

ಮೇ 7 ರ ಬೆಳಿಗ್ಗೆ ಅನಿಲ ಸೋರಿಕೆಯಾಗುತ್ತಿರುವಾಗ ವೆಂಕಟಪುರಂ ಗ್ರಾಮದಲ್ಲಿರುವ ತನ್ನ ನೆರೆಹೊರೆಯವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಹಾಯ ಮಾಡಿದ ಜನರಲ್ಲಿ46 ವರ್ಷದ ಯಲಮಂಚಿಲಿ ಕನಕರಾಜು ಸಹ ಮೂರು ವಾರಗಳ ನಂತರ ಸಾವನಪ್ಪಿದ್ದಾರೆ. ಬಡಗಿ ಕೆಲಸ ಮಾಡುತ್ತಿದ್ದ ಅವರು, ಅನಿಲ ಸೋರಿಕೆಯಿಂದಾಗಿ ನಿರಂತರವಾಗಿ ಅನಾರೋಗ್ಯಕ್ಕೆ ತುತ್ತಾಗಿ, ವಾಕರಿಕೆ, ಉಸಿರಾಟದ ತೊಂದರೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೂ ಅವರ ಸಾವಿಗೆ ಅನಿಲ ಸೋರಿಕೆಯೇ ಕಾರಣವೆಂದು ಹೇಳಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಸ್ಥಳೀಯ ಕಾರ್ಯಕರ್ತರು ಮತ್ತು ಅವರ ಕುಟುಂಬ ಸದಸ್ಯರು ಸಮರ್ಪಕ ವೈದ್ಯಕೀಯ ಸೇವೆಯ ಕೊರತೆಯಿಂದಾಗಿ ಕನಕರಜು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅನಿಲ ಸೋರಿಕೆಯ ಸ್ಥಳಕ್ಕೆ ಸಮೀಪವಿರುವ ಗ್ರಾಮ ವೆಂಕಟಪುರಂ ನಿವಾಸಿಗಳು ಸಹ ಇದೇ ವಿಷಯವನ್ನು ಮುನ್ನಲೆಗೆ ತಂದಿದ್ದು “ನಮ್ಮಲ್ಲಿ ಹಲವರು ಸಹ ವಾಕರಿಕೆ, ತಲೆನೋವು ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದಾರೆ. ಇಲ್ಲಿರುವ ನರ್ಸ್‌‌ಗಳು ನಮಗೆ ಕೆಲವು ಔಷಧಿಗಳನ್ನು ನೀಡುತ್ತಿದ್ದಾರೆ. ಆದರೆ ಅದು ಕೇವಲ ತಾತ್ಕಾಲಿಕ ಪರಿಹಾರವಾಗಿದ್ದು, ಆನಾರೋಗ್ಯದ ಸಮಸ್ಯೆಗಳು ಮುಂದುವರೆದಿದೆ” ಎಂದು ಆರೋಪಿಸಿದ್ದಾರೆ.

ಮೇ 11 ರಿಂದ, ಮಾರಿಪಾಲೆಂನ ಸುರಕ್ಷಾ ಎಂಬ ಖಾಸಗಿ ಆಸ್ಪತ್ರೆಯನ್ನು ಅನಿಲ ಸೋರಿಕೆ ಸಂತ್ರಸ್ತರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಸ್ಥಳವೆಂದು ಗೊತ್ತುಪಡಿಸಲಾಗಿದೆ. “ಆದರೆ ಅಲ್ಲಿಗೆ ಹೋಗುವ ತುರ್ತುಸ್ಥಿತಿಯ ರೋಗಿಗಳಿಗೂ ಸಹ ಕೇವಲ ಸಾಮಾನ್ಯ ಔಷಧಿ ನೀಡಲಾಗುತ್ತಿದೆ. ಮೇ 17 ರಂದು ನಾನು ತಲೆತಿರುಗುವಿಕೆ ಮತ್ತು ಹೊಟ್ಟೆ ನೋವಿನಿಂದ ಅಲ್ಲಿಗೆ ಹೋದೆ. ನನ್ನನ್ನು 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ನನ್ನ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದಾಗ ವೈದ್ಯರು ಸ್ಪಷ್ಟ ಉತ್ತರ ನೀಡಲಿಲ್ಲ. ಕನಿಷ್ಠ ಪರೀಕ್ಷಾ ವರದಿಗಳನ್ನು ಸಹ ನೀಡುತ್ತಿಲ್ಲ ಎಂದು ಸಾಗರ್‌ ಎಂಬುವವರು ದೂರಿದ್ದಾರೆ.

ಕನಕರಾಜುರವರ ಪ್ರಕರಣದಲ್ಲಿ ಅನಾರೋಗ್ಯ ಕಾಣಿಸಿಕೊಂಡಾಗ ಅವರಿಗೆ ಕೆಲ ಔಷಧಿಗಳನ್ನು ಶಿಫಾರಸು ಮಾಡಲಾಯಿತು. ಆದರೂ ಉಸಿರಾಟದ ಸಮಸ್ಯೆ, ವಾಕರಿಕೆ ಮತ್ತು ಹೊಟ್ಟೆ ಉಬ್ಬುವುದು ಮುಂತಾದ ಆರೋಗ್ಯ ಸಮಸ್ಯೆಗಳನ್ನು ಮುಂದುವರೆದಾಗ ಅವರನ್ನು ಮೇ 11 ರಂದು ಸುರಕ್ಷಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ನಾಲ್ಕು ದಿನಗಳವರೆಗೆ ದಾಖಲಿಸಿಕೊಂಡು ನಂತರ ಕೆಲವು ಔಷಧಿಗಳನ್ನು ಶಿಫಾರಸು ಮಾಡಿ ಬಿಡುಗಡೆ ಮಾಡಲಾಯಿತು.

ಆದರೆ ದಿನೇ ದಿನೇ ಅವರ ಸ್ಥಿತಿ ಹದಗೆಡುತ್ತಿರುವುದರಿಂದ ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು. ಜೂನ್ 1 ರಂದು ಸುರಕ್ಷಾ ಆಸ್ಪತ್ರೆಯ ಹೃದ್ರೋಗ ತಜ್ಞರು ಕುಟುಂಬಕ್ಕೆ ಎಕೋಕಾರ್ಡಿಯೋಗ್ರಾಮ್ ಪರೀಕ್ಷೆ ಮಾಡಿಸಲು ಸಲಹೆ ನೀಡಿದರು. ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಕನಕರಾಜು ಮೃತಪಟ್ಟರು ಎಂದು ಅವರ ಸೋದರ ಮಾವ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮೇ 26 ರಂದು ವೆಂಕಟಪುರಂನ ಪಾಲಾ ವೆಂಕಯಮ್ಮ ಎಂಬ 80 ವರ್ಷದ ಮಹಿಳೆ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ನಿಧನರಾದರು. ಅನಿಲ ಸೋರಿಕೆಯಿಂದ ಉಂಟಾದ ಕಾಯಿಲೆಗಳಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವೆಂಕಯಮ್ಮ ಅವರ ಕುಟುಂಬ ಆರೋಪಿಸಿದೆ. ಆದರೆ, ಮಹಿಳೆ ವೃದ್ಧಾಪ್ಯಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾಳೆ ಎಂದು ಕಿಂಗ್ ಜಾರ್ಜ್ ಆಸ್ಪತ್ರೆಯ ಅಧೀಕ್ಷಕ ಡಾ.ಅರ್ಜುನ ಹೇಳಿದ್ದಾರೆ. ಮರಣೋತ್ತರ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಗಳು ಬಾರದೇ ಅನಿಲ ಸೋರಿಕೆಯೇ ಸಾವಿಗೆ ಕಾರಣ ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಅರ್ಜುನ, ವೆಂಕಯಮ್ಮ ಮತ್ತು ಕನಕರಾಜು ಅವರ ಎರಡೂ ಪ್ರಕರಣಗಳಲ್ಲಿ, ಫೋರೆನ್ಸಿಕ್ ಲ್ಯಾಬ್‌ನಲ್ಲಿ ಕೆಲಸದ ಹೊರೆ ಹೆಚ್ಚಾಗಿರುವುದರಿಂದ ಮರಣೋತ್ತರ ವರದಿಗಳು ಬರಲು 15 ರಿಂದ 30 ದಿನಗಳು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಅಧಿಕೃತ ಸಂಖ್ಯೆಯ ಪ್ರಕಾರ, ಇದುವರೆಗೆ ಅನಿಲ ಸೋರಿಕೆಯಿಂದಾಗಿ 12 ಜನರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.

ಅನಿಲ ಸೋರಿಕೆ ಸಂತ್ರಸ್ತರೊಂದಿಗೆ ಕೆಲಸ ಮಾಡುತ್ತಿರುವ ಸಿಪಿಐ (ಎಂ) ವಿಶಾಖಪಟ್ನಂ ನಗರ ಕಾರ್ಯದರ್ಶಿ ಗಂಗ ರಾವ್ ಮಾತನಾಡಿ, ವೆಂಕಟಪುರಂ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅನೇಕ ಜನರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಇನ್ನೂ ಆತಂಕದಲ್ಲಿದ್ದಾರೆ. ಸುರಕ್ಷಾ ಆಸ್ಪತ್ರೆಯ ಹೊರತಾಗಿ, ಪೀಡಿತ ಜನರಿಗೆ ಕಿಂಗ್‌ ಜಾರ್ಜ್‌ ಆಸ್ಪತ್ರೆ ಮಾತ್ರ ಪರ್ಯಾಯವಾಗಿದ. ಸಮರ್ಪಕ ಆಸ್ಪತ್ರೆಗಳು ಇಲ್ಲದಿರುವುದರಿಂದ ಸಾವಿನ ಸರಣಿ ಮುಂದುವರಿದಿದೆ. ಈ ಎರಡು ಆಸ್ಪತ್ರೆಗಳಲ್ಲಿ ಕೇವಲ ಔಷಧಿ ನೀಡಲಾಗುತ್ತದೆಯೇ ಹೊರತು ಸಮರ್ಪಕ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ವಿಶಾಖಪಟ್ನಂ ಅನಿಲ ದುರಂತದಿಂದ ದೇಶದ ಗಮನ ಸೆಳೆದ ಪ್ರಕರಣ ಒಂದು ತಿಂಗಳಿನಲ್ಲಿಯೇ ಯಾರೂ ಕೇಳದ ಪರಿಸ್ಥಿತಿಗೆ ತಲುಪಿದೆ. ಅಲ್ಲಿನ ಸಂತ್ರಸ್ತರು ಮಾತ್ರ ನಿತ್ಯ ನೋವು ಅನುಭವಿಸುತ್ತ ಸಾವಿನ ದವಡೆಗೆ ನೂಕಲ್ಪಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಎ‌ಚ್ಚೆತ್ತುಕೊಂಡು ಸಮರ್ಪಕ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕಿದೆ.

ಮೂಲ: ದಿ ನ್ಯೂಸ್‌ ಮಿನಿಟ್‌


ಇದನ್ನೂ ಓದಿ: ಆಂಧ್ರದಲ್ಲಿ ಅನಿಲ ಸೋರಿಕೆ : 8 ಸಾವು, 1,000 ಕ್ಕೂ ಹೆಚ್ಚು ಜನರಿಗೆ ಗಾಯ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ದಾರಿ ತಪ್ಪಿಸುವ ಜಾಹೀರಾತು ಪ್ರಕರಣ; ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ರಾಮ್‌ದೇವ್‌ಗೆ ಸುಪ್ರೀಂ ತಪರಾಕಿ

0
ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಯೋಗ ಗುರು ರಾಮ್‌ದೇವ್, ಅವರ ಸಹಾಯಕ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರ ಕಾಲಾವಕಾಶ ನೀಡಿದೆ. ಆದರೆ, ಈಗ ಅವರನ್ನು...