ಮಹಾರಾಷ್ಟ್ರ ಎನ್ಸಿಪಿಯಲ್ಲಿ ಒಡಕು ಮೂಡಿದ ಬೆನ್ನಲ್ಲೇ ಶರದ್ ಪವಾರ್ ಮತ್ತು ಅಜಿತ್ ಪವಾರ್ ಎರಡೂ ಬಣಗಳು ನಾವೇ ನಿಜವಾದ NCP ಎಂದು ಹೇಳಿಕೊಳ್ಳುತ್ತಿದ್ದು, ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗದ ಮೆಟ್ಟಿಲೇರಿವೆ.
30ಕ್ಕೂ ಅಧಿಕ ಶಾಸಕರ ಬೆಂಬಲ ಹೊಂದಿರುವ ಅಜಿತ್ ಪವಾರ್ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೆ ಎನ್ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಬಣ ಕೂಡ ಹೆಸರು ಮತ್ತು ಚಿಹ್ನೆಯನ್ನು ನೀಡುವಂತೆ ಚುನಾವಣಾ ಪ್ರಾಧಿಕಾರಕ್ಕೆ ಕೇವಿಯಟ್ ಸಲ್ಲಿಸಿದೆ.
ಅಜಿತ್ ಪವಾರ್ ತಮ್ಮ ಚಿಕ್ಕಪ್ಪ ಶರದ್ ಪವಾರ್ಗಿಂತ ಹೆಚ್ಚಿನ ಶಾಸಕರನ್ನು ತಾವು ಹೊಂದಿದ್ದು, ತಮಗೆ ಪಕ್ಷದ ಹೆಸರು ಮತ್ತು ಚಿಹ್ನೆ ನೀಡುವಂತೆ ಅಜಿತ್ ಪವಾರ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.
ಶರದ್ ಪವಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅಜಿತ್ ಪವಾರ್, ”ನಿಮಗೆ ಈಗಾಗಲೇ 83 ವರ್ಷ ವಯಸ್ಸಾಗಿದೆ. ಬಿಜೆಪಿಯಲ್ಲಿ ನಾಯಕರು 75ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಾರೆ. ಕೆಲವೇ ಸಮಯದಲ್ಲಿ ಶತಾಯುಷಿಯಾಗುತ್ತೀರಿ. ಪ್ರತಿಯೊಬ್ಬರಿಗೂ ಅವರದೆ ಆದ ಇನ್ನಿಂಗ್ಸ್ ಇರುತ್ತದೆ. ಆಡಳಿತದ ವಯಸ್ಸು 25 ರಿಂದ 75. ನೀವು ನಿವೃತ್ತರಾಗಿ ನಮಗೆಲ್ಲ ಆಶೀರ್ವಾದ ನೀಡಿ. ನಾವು ನಿಮ್ಮನ್ನು ದೀರ್ಘಕಾಲ ಬದುಕಬೇಕೆಂದು ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಶರದ್ ಪವಾರ್ ಪುತ್ರಿ ಹಾಗೂ ಎನ್ಸಿಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ, ಅಮಿತಾಭ್ ಬಚ್ಚನ್, ರತನ್ ಟಾಟಾ ಮುಂತಾದ ಹಿರಿಯರು 80 ವರ್ಷ ದಾಟಿದವರು. ಅವರೆಲ್ಲರೂ ತಮ್ಮ ವೃತ್ತಿಯನ್ನು ಮುನ್ನಡೆಸುತ್ತಿಲ್ಲವೆ. ನಾವು ದೇಶದ ಅತ್ಯಂತ ಭ್ರಷ್ಟ ಪಕ್ಷ ಬಿಜೆಪಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಜನರು ಮುಂದಿನ ದಿನಗಳಲ್ಲಿ ಎಲ್ಲವನ್ನು ನಿರ್ಧರಿಸಲಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ; ಮಹಾರಾಷ್ಟ್ರ ಸರ್ಕಾರಕ್ಕೆ ಅಜಿತ್ ಪವಾರ್ ಎನ್ಸಿಪಿ ಬಣ ಸೇರ್ಪಡೆ: ಶಿಂಧೆ ಶಿವಸೇನೆ ಶಾಸಕರಲ್ಲಿ ಭುಗಿಲೆದ್ದ ಅಸಮಾಧಾನ