ಕೇಂದ್ರ ಸಚಿವರು ಮತ್ತು ರೈತ ಮುಖಂಡರ ಜತೆಗೆ ಸೋಮವಾರ ನಡೆದ ಸಭೆ ವಿಫಲಾವಾದ ನಂತರವೂ ಕೇಂದ್ರ ಸರ್ಕಾರವು ರೈತರ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನು ಮುಂದುವರಿಸಿದೆ. ಈ ಬೆಳವಣಿಗೆಗಳ ನಡುವೆಯೆ ಪ್ರತಿಭಟನಾ ನಿರತ ರೈತರೊಂದಿಗೆ ಸಂವಾದ ನಡೆಸುವ ಕುರಿತ ತನ್ನ ನಿಲುವನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಮಾತನಾಡಿ, ‘ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ’ ಎಂದು ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹುಸಿ ಭರವಸೆಯನ್ನು ಒಪ್ಪದ ರೈತರು, ದೆಹಲಿಗೆ ಹತ್ತಿರದ ರಾಜ್ಯಗಳ ಅನ್ನದಾತರು ತಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು ‘ದೆಹಲಿ ಚಲೋ’ ಅಭಿಯಾನವನ್ನು ಆರಂಭಿಸಿದ್ದು, ರಾಷ್ಟ್ರ ರಾಜಧಾನಿ ಸಂಪೂರ್ಣ ಸ್ತಬ್ಧವಾಗಿದೆ.
‘ನಾವು ರೈತರ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದು, ನಾವು ಯಾವಾಗಲೂ ಮಾತುಕತೆ ಮತ್ತು ಚರ್ಚೆಗಳಿಗೆ ಸಿದ್ಧರಿದ್ದೇವೆ. ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾವು ಸಿದ್ಧರಿದ್ದೇವೆ. ಈ ವಿಷಯ ರಾಜ್ಯ ಸರ್ಕಾರಗಳಿಗೂ ಸಂಬಂಧಿಸಿದ್ದು. ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಇದನ್ನು ಪರಿಹರಿಸುವ ವಿಧಾನವನ್ನು ಕಂಡುಹಿಡಿಯಲು ನಮಗೆ ಸಮಯ ಬೇಕಾಗುತ್ತದೆ’ ಎಂದು ಮುಂಡಾ ಹೇಳಿದರು.
‘ಮಾತುಕತೆಯ ಮೂಲಕ ಮಾತ್ರ ಸಮಸ್ಯೆಗೆ ಪರಿಹಾರವನ್ನು ಸಾಧಿಸಬಹುದು’ ಎಂದು ಸಚಿವರು ಹೇಳುತ್ತಿದ್ದು, ‘ನಾವು ರೈತರೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ. ಆದರೆ, ಅವರಲ್ಲಿ ಒಂದು ವರ್ಗವು ಪರಿಹಾರವನ್ನು ಬಯಸುವುದಿಲ್ಲ’ ಎಂದು ಕೇಂದ್ರ ಕೃಷಿ ಸಚಿವರು ಆರೋಪ ಮಾಡಿದ್ದಾರೆ.
‘ರೈತರೊಂದಿಗೆ ಎರಡು ಸುತ್ತಿನ ಮಾತುಕತೆಗಳು ಅನಿಶ್ಚಿತವಾಗಿವೆ. ಪರಿಹಾರವನ್ನು ತಲುಪಲು ಹೆಚ್ಚಿನ ಚರ್ಚೆ ಅಗತ್ಯ ಮತ್ತು ನಾವು ಪರಿಹಾರವನ್ನು ಕಂಡುಕೊಳ್ಳಲು ಸಿದ್ಧ’ ಎಂದು ಹೇಳಿದ್ದಾರೆ.
ಮುಂಡಾ ಅವರು ನಿನ್ನೆ ಚಂಡೀಗಢದಲ್ಲಿ ರೈತ ಮುಖಂಡರನ್ನು ಭೇಟಿಯಾದ ಸರ್ಕಾರದ ನಿಯೋಗದಲ್ಲಿದ್ದರು, ದೆಹಲಿಗೆ ತಮ್ಮ ಮೆರವಣಿಗೆಯನ್ನು ಕೈಬಿಡುವಂತೆ ರೈತರ ಮನವೊಲಿಸಿದರು.
2021 ರಿಂದ ಎರಡನೇ ಸುತ್ತಿನ ಪ್ರತಿಭಟನೆಯಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ರೈತ ಸದಸ್ಯರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ನವದೆಹಲಿಗೆ ತೆರಳುತ್ತಿದ್ದಾರೆ.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸಬೇಕೆಂದು ರೈತ ಸಂಘಟನೆಗಳು ಒತ್ತಾಯಿಸಿವೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಮತ್ತು ರೈತರಿಗೆ ಪಿಂಚಣಿಯನ್ನೂ ಕೂಡ ಅವರು ಬಯತ್ತಿದ್ದಾರೆ. ಮುಖ್ಯವಾಗಿ, ಲಖಿಂಪುರ ಖೇರಿ ಸಂತ್ರಸ್ತರಿಗೆ “ನ್ಯಾಯ”ಕ್ಕಾಗಿ ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ‘ಪಂಜಾಬ್-ಹರಿಯಾಣ ಗಡಿ ‘ಅಂತಾರಾಷ್ಟ್ರೀಯ ಗಡಿ’ಯಂತಾಗಿದೆ..’: ಕೇಂದ್ರದ ವಿರುದ್ಧ ರೈತರ ಆಕ್ರೋಶ