ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ನಾಗರಿಕರಿಗೆ ಚಿತ್ರಹಿಂಸೆ ನೀಡಿದ ಕಥೆಯನ್ನು 24 ಗಂಟೆಗಳ ಒಳಗೆ ತೆಗೆದುಹಾಕುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸುದ್ದಿ ನಿಯತಕಾಲಿಕ ‘ದಿ ಕ್ಯಾರವಾನ್’ಗೆ ಸೂಚಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಸನ್ 69ಎ ಅಡಿಯಲ್ಲಿ ಸಚಿವಾಲಯವು ಈ ಆದೇಶವನ್ನು ನೀಡಿದೆ. ಜತೀಂದರ್ ಕೌರ್ ತುರ್ ಅವರ ‘ಸ್ಕ್ರೀಮ್ಸ್ ಫ್ರಮ್ ದಿ ಆರ್ಮಿ ಪೋಸ್ಟ್’ ಎಂಬ ವರದಿಯನ್ನು ತೆಗೆದು ಹಾಕುವಂತೆ ಪ್ರಸಾರ ಸಚಿವಾಲಯವು ಸೂಚಿಸಿದೆ. ಇದು ಪಠ್ಯ ಮತ್ತು ವೀಡಿಯೋ ರೂಪದಲ್ಲಿತ್ತು.
ಕಾರವಾನ್ ಪ್ರಕಾರ, ಆದೇಶದಲ್ಲಿ ಈ ಎರಡೂ ವಿಷಯಗಳನ್ನು 24 ಗಂಟೆಗಳ ಒಳಗೆ ತೆಗೆದುಹಾಕಬೇಕು. ಕಾರವಾನ್ ವರದಿಯನ್ನು ತೆಗೆದು ಹಾಕದಿದ್ದರೆ, ಭಾರತ ಸರ್ಕಾರವು ವರದಿಯ URLನ್ನು ನಿರ್ಬಂಧಿಸುತ್ತದೆ ಎಂದು ಸಚಿವಾಲಯ ಎಚ್ಚರಿಕೆಯನ್ನು ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್-ರಜೌರಿ ಪ್ರದೇಶದಲ್ಲಿ ಭಯೋತ್ಪಾದಕರ ಹೊಂಚುದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾದ ನಂತರ ಭಾರತೀಯ ಸೇನೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದ ಮೂವರು ನಾಗರಿಕರ ಚಿತ್ರಹಿಂಸೆ ಮತ್ತು ಸಾವಿನ ಬಗ್ಗೆ ವರದಿಯಲ್ಲಿ ಉಲ್ಲೇಖವಿದೆ, ವಿದ್ಯುತ್ ಆಘಾತ ಸೇರಿದಂತೆ ಸೈನ್ಯದ ಚಿತ್ರಹಿಂಸೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಸೇನೆಯ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದ ಜನರ ಮೇಲೆ ನಡೆದ ಚಿತ್ರಹಿಂಸೆಯನ್ನು ವರದಿಯು ವಿವರವಾಗಿ ವಿವರಿಸಿದೆ. ಡಿ.22ರಂದು ಟೋಪಾ ಪೀರ್ನಲ್ಲಿ ಸೇನೆಯು ಹತ್ಯೆಗೈದ ಮೂವರು ನಾಗರಿಕರಾದ ಸಫೀರ್, ಶಬೀರ್ ಮತ್ತು ಶೌಕತ್ ಅವರ ಕುಟುಂಬಗಳೊಂದಿಗೆ ಪತ್ರಕರ್ತರು ವರದಿಯನ್ನು ಸಿದ್ದಪಡಿಸುವ ವೇಳೆ ಮಾತನಾಡಿದ್ದರು. ಇದಲ್ಲದೆ ಸಂತ್ರಸ್ತರ ಕುಟುಂಬಗಳಿಗೆ ಸೈನ್ಯವು ಹೇಗೆ ನಗದು ರೂಪದಲ್ಲಿ ಲಂಚವನ್ನು ನೀಡಿದೆ ಎಂಬ ಬಗ್ಗೆ ವರದಿಯು ಉಲ್ಲೇಖಿಸಿತ್ತು
ಫೆ.12ರಂದು ದಿ ಕ್ಯಾರವಾನ್ ನಿಯತಕಾಲಿಕದ ಸಂಪಾದಕರಿಗೆ ಸಚಿವಾಲಯವು ನೊಟೀಸ್ ನೀಡಿದ್ದು, ವರದಿಯು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಮತ್ತು 24 ಗಂಟೆಗಳ ಒಳಗೆ ಅದನ್ನು ತೆಗೆದುಹಾಕಬೇಕು ಎಂದು ಹೇಳಿದ್ದರು. ಪತ್ರಿಕೆಯು ಆದೇಶವನ್ನು ಅನುಸರಿಸುತ್ತದೆ ಮತ್ತು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತದೆ ಎಂದು ಹೇಳಿದೆ.
ಸೆನ್ಸಾರ್ಶಿಪ್ ಕುರಿತು ಅಧಿಕೃತ ಪ್ರಕಟಣೆಯನ್ನು ಮಾಡುತ್ತಾ ಕಾರವಾನ್ ಸಾಮಾಜಿಕ ಮಾದ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ನಾವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಐಟಿ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಆದೇಶವನ್ನು ಸ್ವೀಕರಿಸಿದ್ದೇವೆ, ಈ ವೀಡಿಯೊವನ್ನು 24 ಗಂಟೆಗಳಲ್ಲಿ ತೆಗೆದುಹಾಕಲು ನಮಗೆ ನಿರ್ದೇಶಿಸಲಾಗಿದೆ ಎಂದು ಓದುಗರಿಗೆ ತಿಳಿಸುತ್ತಿದ್ದೇವೆ ಎಂದು ಹೇಳಿದೆ.
This is to inform readers we have received an order from the Ministry of Information & Broadcasting under Section 69A of the IT Act, directing us to take down this video in 24 hrs:https://t.co/36vvWOrkvP
The order’s content is confidential. We will be challenging this order.
— The Caravan (@thecaravanindia) February 13, 2024
ಇದನ್ನು ಓದಿ: ದಿಲ್ಲಿ ಚಲೋ: ಶಂಭು ಗಡಿಯಲ್ಲಿ ರೈತರ ಮೇಲೆ ಪೊಲೀಸ್ ದೌರ್ಜನ್ಯ