ವಿವಾದಾತ್ಮಕ ಮರಾಠ ಮೀಸಲಾತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ’ನಾವು ಇನ್ನೂ ಹಿಂದುತ್ವವನ್ನು ಬಿಟ್ಟುಕೊಟ್ಟಿಲ್ಲ’ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಮಿತ್ರಪಕ್ಷವಾಗಿದ್ದ ಬಿಜೆಪಿಯು, ಬಲಪಂಥೀಯ ನಾಯಕರಾಗಿದ್ದ ಉದ್ದವ್ ಠಾಕ್ರೆ ಈಗ ಜಾತ್ಯಾತೀತರಾಗಿದ್ದಾರೆ ಎಂದು ಕುಟುಕಿತ್ತು. ವಿಧಾನಸಭೆಯಲ್ಲಿ ಪ್ರಾಚೀನ ದೇವಾಲಯಗಳ ಸಂರಕ್ಷಣೆಗಾಗಿ ನಿಧಿಯನ್ನು ಘೋಷಿಸುವಾಗ ಉದ್ದವ್ ಠಾಕ್ರೆ, “ಇದು ನಾವು ಹಿಂದುತ್ವವನ್ನು ಬಿಟ್ಟುಕೊಟ್ಟಿಲ್ಲ ಎಂದು ನಿಮಗೆ ಅರ್ಥವಾಗುವಂತೆ ಮಾಡುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾವು ಜಾತ್ಯಾತೀತರು, ಜಾತ್ಯಾತೀತರಾಗೇ ಇರುತ್ತೇವೆ- ತನಿಷ್ಕ್ ಜಾಹೀರಾತು ನಿರ್ದೇಶಕಿ
“ಪ್ರಾಚೀನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾಚೀನ ದೇವಾಲಯಗಳ ಪುನಃಸ್ಥಾಪನೆ ಮತ್ತು ಸಂರಕ್ಷಣೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲಿದೆ. ಯೋಜನೆಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು” ಎಂದಿರುವ ಅವರು, ದೇವಾಲಯಗಳ ಸಂರಕ್ಷಣೆಗಾಗಿ ಪ್ರತಿಪಕ್ಷಗಳ ಸಹಕಾರ ಕೋರಿದ್ದಾರೆ.
ಕೊರೊನಾ ಕಾರಣಕ್ಕಾಗಿ ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಬಗ್ಗೆ ಅಕ್ಟೋಬರ್ನಲ್ಲಿ ಉದ್ದವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ನಡುವೆ ತೀವ್ರ ಆರೋಪ ಪ್ರತ್ಯಾರೋಪಗಳು ನಡೆದಿತ್ತು. ಈ ಸಂದರ್ಭ ರಾಜ್ಯಪಾಲರು ಉದ್ದವ್ ಠಾಕ್ರೆಯೊಂದಿಗೆ “ನೀವು ಜಾತ್ಯತೀತರಾಗಿದ್ದೀರ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ಇದಕ್ಕೆ ಉದ್ಧವ್ ಠಾಕ್ರೆ, “ನನಗೆ ಯಾರಿಂದಲೂ ಹಿಂದುತ್ವ ಪ್ರಮಾಣಪತ್ರದ ಅಗತ್ಯವಿಲ್ಲ” ಎಂದು ಪ್ರತ್ಯುತ್ತರ ನೀಡಿದ್ದರು.
ಇದನ್ನೂ ಓದಿ: ’ನೀವು ಜಾತ್ಯಾತೀತರಾದಿರಾ?’; ಮಹಾ ಮುಖ್ಯಮಂತ್ರಿಗೆ ರಾಜ್ಯಪಾಲರ ಪ್ರಶ್ನೆ- ಶರದ್ ಪವಾರ್ ಆಕ್ರೋಶ