ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಬೇಡವೇ ಬೇಡ. ಎಸ್ಐಆರ್ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಯೂಸುಫ್ ಕನ್ನಿ ಹೇಳಿದರು.
ಎಸ್ಐಆರ್ ವಿರೋಧಿ ಒಕ್ಕೂಟದಿಂದ ವಿಜಯಪುರದ ಖಾಸಗಿ ಹೋಟೆಲ್ನಲ್ಲಿ ಶನಿವಾರ (ಜೂ.13) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಸ್ಐಆರ್ನ ಲೋಪದೋಷಗಳಿಗೆ ಸಂಬಂಧಪಟ್ಟಂತೆ ಚುನಾವಣಾ ಆಯೋಗಕ್ಕೆ ನಾವು ಹಲವು ಪ್ರಶ್ನೆಗಳನ್ನು ಕೇಳಿದ್ದೇವೆ. ಈ ವಿಚಾರವಾಗಿ ಆಯೋಗ ಬಹಿರಂಗ ಚರ್ಚೆಗೆ ಬರಲಿ ಎಂದು ಆಗ್ರಹಿಸಿದರು.
ಚುನಾವಣಾ ಆಯೋಗ ಎಸ್ಐಆರ್ ಘೋಷಣೆ ಮಾಡುವಾಗ ನಕಲಿ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆ ಎಂದು ಹೇಳಿತ್ತು. ಆದರೆ, ಈಗಾಗಲೇ ಎಸ್ಐಆರ್ ನಡೆದಿರುವ ರಾಜ್ಯಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಲಕ್ಷಾಂತರ ಜನರ ಸಾಂವಿಧಾನಿಕ ಹಕ್ಕು ಕಿತ್ತುಕೊಂಡಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ, ಇಂತಹ ಅಸಾಂವಿಧಾನಿಕ ಪ್ರಕ್ರಿಯೆ ನಮ್ಮ ರಾಜ್ಯದಲ್ಲಿ ನಡೆಸುವುದು ಬೇಡ ಎಂದರು.
ಎಸ್ಐಆರ್ಗೆ ಸಂಬಂಧಪಟ್ಟಂತೆ ನಾವು ಈಗಾಗಲೇ ಚುನಾವಣಾ ಆಯೋಗದ ಎದುರು ಹಲವು ಬೇಡಿಕೆಗಳನ್ನು ಇಟ್ಟಿದ್ದೇವೆ. ಅವುಗಳಿಗೆ ಆಯೋಗ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು.
ಎಸ್ಐಆರ್ ವಿರೋಧಿ ಒಕ್ಕೂಟದ ಪ್ರಮುಖರಾದ ಆರಿಫುಲ್ಲಾ ಮಾತನಾಡಿ, ಎಸ್ಐಆರ್ ಮತದಾರರ ಪಟ್ಟಿಯ ಸಾಮಾನ್ಯ ಪ್ರಕ್ರಿಯೆ ಅಲ್ಲ, ವಿಶೇಷ ಪರಿಷ್ಕರಣೆಯಾಗಿದೆ. ದೇಶದ ಜನರ ನಾಗರಿಕತ್ವ ನಿರ್ಧರಿಸಲು ಮುಂದಾಗಿರುವ ಈ ದೊಡ್ಡ ಪ್ರಕ್ರಿಯೆಗೆ ಸಂಸತ್ತಿನ ಅನುಮೋದನೆ ಪಡೆದಿಲ್ಲ, ಸರ್ಕಾರದಿಂದ ಯಾವುದೇ ಅಧಿಕೃತ ರಾಜಪತ್ರ ಪ್ರಕಟಿಸಿಲ್ಲ ಎಂದರು.
ಎಸ್ಐಆರ್ ನಮೂನೆಯಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯತ್ಯಾಸವಿದೆ. ಇದಕ್ಕೆ ನಮ್ಮ ವಿರೋಧವಿದೆ. ಈ ಮೊದಲು ಸರ್ಕಾರ ಬಂದು ಮತದಾರರ ಪಟ್ಟಿ ತಯಾರಿಸುತಿತ್ತು, ಈಗ ನಾವೇ ಮಾಡಬೇಕಂತೆ. ಚುನಾವಣಾ ಆಯೋಗ ಏನೇ ತಪ್ಪು ಮಾಡಿದರೂ ಪ್ರಶ್ನಿಸುವ ಅಧಿಕಾರ ಕಿತ್ತುಕೊಳ್ಳಲಾಗಿದೆ. ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆ ಮಾರ್ಪಡಿಸಿರುವುದು ಇವೆಲ್ಲ ಅವ್ಯವಸ್ಥೆಗಳ ಮೂಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯನ್ನೇ ಬದಲಿಸಿ, ಅವರಿಗೆ ಬೇಕಾದವರನ್ನು ನೇಮಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಐಆರ್ ಮೂಲಕ ವಲಸೆ ಕಾರ್ಮಿಕರನ್ನು ನುಸುಳುಕೋರರು ಎಂದು ಹಣೆಪಟ್ಟಿ ಕಟ್ಟಲಾಗ್ತಿದೆ. ರಾಜ್ಯದಿಂದ ರಾಜ್ಯಕ್ಕೆ ವಲಸೆ ಬಂದವರು ನುಸುಳುಕೋರರಲ್ಲ, ಅವರೂ ನಮ್ಮ ದೇಶದವರು. ಬಡ ಕೂಲಿ ಕಾರ್ಮಿಕರು, ದಲಿತರು, ಆದಿವಾಸಿಗಳು ಎಲ್ಲಿಂದ ದಾಖಲೆಗಳನ್ನು ತರಬೇಕು ಎಂದು ಪ್ರಶ್ನಿಸಿದರು.
ಸ್ಥಳೀಯ ಕಾಂಗ್ರೆಸ್ ಮುಖಂಡ ರಫೀಕ್ ಅಹ್ಮದ್ ಮಾತನಾಡಿ, ಎಸ್ಐಆರ್ ಮೂಲಕ ದೇಶದ ಪ್ರಜೆಗಳನ್ನು ಹೊರಗಿಟ್ಟು ಚುನಾವಣೆ ನಡೆಸಲಾಗುತ್ತಿದೆ. ಇದನ್ನು ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ. ಎಸ್ಐಆರ್ ವೇಳೆ ಮತದಾರರ ಪಟ್ಟಿಯಿಂದ ಹೊರಬಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ ಎಂದು ಹೇಳಲಾಗ್ತಿದೆ. ಆದರೆ, ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ಮೊದಲೇ ಚುನಾವಣೆ ನಡೆದಿರುವ ಉದಾಹರಣೆಗಳನ್ನು ನಾವು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ನೋಡಿದ್ದೇವೆ ಎಂದರು.


