Homeಬಹುಜನ ಭಾರತಜನಕೋಟಿಯ ಮಿದುಳು ಹೊಕ್ಕಿರುವ ವೈರಸ್ ಕತೆಯೇನು? - ಡಿ.ಉಮಾಪತಿ

ಜನಕೋಟಿಯ ಮಿದುಳು ಹೊಕ್ಕಿರುವ ವೈರಸ್ ಕತೆಯೇನು? – ಡಿ.ಉಮಾಪತಿ

ಮನುಷ್ಯನ ಭಾವ ಮತ್ತು ಬುದ್ಧಿಯ ಮೇಲೆ ದಾಳಿ ನಡೆಸುವ ದ್ವೇಷ- ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳು ಕೂಡ ಥೇಟ್ ಕೊರೋನಾ ರೀತಿಯೇ ಕೆಲಸ ಮಾಡುತ್ತವೆ.

- Advertisement -
- Advertisement -

ಪುನರುತ್ಪಾದನೆಯಾಗಿ ಹರಡಲು ವೈರಸ್‌ಗಳಿಗೆ ಜೀವಿ ದೇಹವೊಂದು ಬೇಕೇ ಬೇಕಂತೆ. COVID-19 ಕೂಡ ಈ ಮಾತಿಗೆ ಹೊರತಲ್ಲ. ಮೂಲಭೂತವಾಗಿ ವೈರಸ್ ಒಂದು ಆನುವಂಶಿಕ ವಸ್ತು. ತಂತಾನೇ ಏನನ್ನೂ ಮಾಡಲು ಸಾಧ್ಯವಿಲ್ಲ. ಪುನರುತ್ಪಾದನೆ ಮಾಡಲು ಅದು ಜೀವಿಯೊಂದರ ದೇಹಕ್ಕೆ ಲಗ್ಗೆ ಹಾಕಲೇಬೇಕು. ಜೀವಿಯ ದೇಹ ಸಿಗದಿದ್ದರೆ ಇಂತಿಷ್ಟು ದಿನಗಳೊಳಗಾಗಿ ಸತ್ತು ಹೋಗುತ್ತದೆ. ವೈರಸ್ ಬ್ಯಾಕ್ಟೀರಿಯಾದಂತಲ್ಲ. ಅದಕ್ಕೆ ತಿನ್ನಲು, ಕುಡಿಯಲು ಏನೂ ಬೇಕಿಲ್ಲ. ಏನನ್ನೂ ವಿಸರ್ಜಿಸಬೇಕಿಲ್ಲ, ಬಿಡುವು ಇಲ್ಲವೇ ವಿಶ್ರಾಂತಿಯ ಅಗತ್ಯ ಮೊದಲೇ ಇಲ್ಲ. ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ತನ್ನ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತ ಹೋಗುವುದೊಂದೇ ಅದರ ಏಕೈಕ ಕೆಲಸ. ಹೀಗಾಗಿ ಅದಕ್ಕೆ ಬೇಕಾದದ್ದೆಲ್ಲ ಜೀವಿಯೊಂದರ ದೇಹ.

ಕೊರೋನ ವೈರಸ್ ಲಗ್ಗೆ ಹಾಕಿದ್ದು ಮನುಷ್ಯ ದೇಹಕ್ಕೆ. ಮನುಷ್ಯ ದೇಹ ಪ್ರವೇಶಿಸಿ ಜೀವಕೋಶವೊಂದಕ್ಕೆ ಅಂಟಿಕೊಂಡು ಪುನರುತ್ಪಾದನೆಯಾಗುತ್ತವೆ ಈ ವೈರಸ್. ವೈರಸ್‌ಗಳ ಸಂಖ್ಯೆಯು ನಿರ್ದಿಷ್ಟ ಜೀವಕೋಶವು ಸಲಹಲಾರದಷ್ಟು ಹೆಚ್ಚಿದ ನಂತರ ಪಕ್ಕದ ಮತ್ತೊಂದು ಜೀವಕೋಶದ ಮೇಲೆ ದಾಳಿ ಮಾಡುತ್ತವೆ ಎನ್ನುತ್ತಾರೆ ಜೀವಿ ವಿಜ್ಞಾನಿಗಳು.

ಮನುಷ್ಯನ ಭಾವ ಮತ್ತು ಬುದ್ಧಿಯ ಮೇಲೆ ದಾಳಿ ನಡೆಸುವ ದ್ವೇಷ- ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳು ಕೂಡ ಥೇಟ್ ಹೀಗೆಯೇ ಕೆಲಸ ಮಾಡುತ್ತವೆ. ಬುದ್ಧಿ ಮತ್ತು ಭಾವವನ್ನು ಭ್ರಷ್ಟಗೊಳಿಸುವ ಈ ವೈರಾಣುಗಳು ಮನುಷ್ಯನಲ್ಲಿನ ಮನುಷ್ಯತ್ವವನ್ನು ತಿಂದು ಹಾಕುತ್ತವೆ. ಮನುಷ್ಯತ್ವವನ್ನು ಕಳೆದುಕೊಂಡ ಮೆದುಳುಗಳ ದೂರನಿಯಂತ್ರಣ ಮಾಡುವುದು ಸಲೀಸು.

ಕಳೆದ ಐದಾರು ವರ್ಷಗಳಿಂದ ನಮ್ಮ ಪ್ರಚಂಡ ಜನನಾಯಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಸಂಗತಿಯನ್ನು ಒಂದಲ್ಲ ಹಲವು ಸಲ ಆಗು ಮಾಡಿ ತೋರಿದ್ದಾರೆ. ಮೊನ್ನೆ ಭಾನುವಾರ ಸಂಜೆ ನಡೆದ ವಿದ್ಯಮಾನ ಈ ಮಾತಿಗೆ ಮತ್ತೊಂದು ಉದಾಹರಣೆ. ಭಯಾನಕ ಸಾಂಕ್ರಾಮಿಕ ಕೊರೋನಾ ಮಹಾಮಾರಿಯನ್ನು ಮೆದುಳುರಹಿತ ಜನಕೋಟಿ ಹಬ್ಬದಂತೆ ಆಚರಿಸಿತು. ಶಾರೀರಿಕ ದೂರದ ನಿಯಮವನ್ನು ಬಿಗಿಯಾಗಿ ಪಾಲಿಸಬೇಕಿರುವ ಈ ಹೊತ್ತಿನಲ್ಲಿ ಜನ ಗುಂಪು ಗುಂಪಾಗಿ ಬೀದಿಗಿಳಿದು ಸಂಭ್ರಮಿಸಿದರು. ತಟ್ಟೆ, ಜಾಗಟೆ ಬಾರಿಸಿ, ಶಂಖ ಊದಿ, ಚಪ್ಪಾಳೆ ತಟ್ಟಿ ಕೊರೋನ ಪರಾರಿಯಾಯಿತೆಂದು ಗೆಲುವಿನಿಂದ ಬೀಗಿದರು.

ನೋಟುರದ್ದಿನಂತ ಮೂರ್ಖ ಮತ್ತು ಅಮಾನವೀಯ ಕ್ರಮವನ್ನು ಕೂಡ ಜನ ಹೀಗೆಯೇ ಸಾಮೂಹಿಕ ಸನ್ನಿಗೊಳಗಾಗಿ ಸ್ವಾಗತಿಸಿದ್ದರು. ತಮ್ಮ ಬದುಕುಗಳ ಮೇಲೆ ಬಿದ್ದ ಈ ಮಾರಣಾಂತಿಕ ಹೊಡೆತದಿಂದ ಕೋಟ್ಯಂತರ ಜನ ಈಗಲೂ ಚೇತರಿಸಿಕೊಂಡಿಲ್ಲ.

ಸಾಂಕ್ರಾಮಿಕ ರೋಗಗಳ ತಜ್ಞರು ಹೇಳುವಂತೆ ಕೊರೋನಾ ಮಹಾಮಾರಿಯನ್ನು ಭಾರತ ಎಷ್ಟು ಗಂಭೀರವಾಗಿ ಪರಿಗಣಿಸಬೇಕೋ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಕೋಟಿಗಟ್ಟಲೆ ಸಾವು ನೋವು ಸಂಭವಿಸಿದರೆ ಆಶ್ಚರ್ಯವಿಲ್ಲ. ಭಾರೀ ಬಾಂಬೊಂದು ಸ್ಫೋಟಿಸಲಿದೆ ಎಂಬ ಅವರ ಎಚ್ಚರಿಕೆಯ ನಂತರವೂ ಜನಸಮೂಹ ಮೊನ್ನೆ ಭಾನುವಾರ ಬೀದಿಗಿಳಿದು ಮೂಢನಂಬಿಕೆಯನ್ನು ಮೆರೆಯಿತು.

ಭಾನುವಾರ ಸಂಜೆ ತಟ್ಟೆ ಜಾಗಟೆ ಚಪ್ಪಾಳೆ ಬಾರಿಸುವಂತೆ ಕರೆ ನೀಡಿದ ಮಹಾನ್ ನಾಯಕರಿಗೆ ಜನಸಮೂಹಗಳ ವರ್ತನೆಯ ವೈಖರಿ ತಿಳಿಯದ್ದೇನಲ್ಲ. ಆದರೆ ಅವರಿಗೆ ಬೊಮ್ಮನಹಳ್ಳಿಯ ಕಿಂದರಿ ಜೋಗಿಯಾಗುವ ವಿಕೃತ ಸಂಭ್ರಮ. ಅವರ ಮಡಿಲ ಮುದ್ದಿನ ನಾಯಿಯಾಗಿ ಬದಲಾಗಿದೆ ಸಮೂಹಮಾಧ್ಯಮ ಎಂಬ ಜನತಂತ್ರದ ಕಾವಲು ನಾಯಿ. ಅದು ಮಹಾನ್ ನಾಯಕರ ಸಂದೇಶದ ಡಂಗುರವನ್ನು ಹಗಲಿರುಳು ಬಾರಿಸಿ ನಿಷ್ಠೆ ಮೆರೆಯಿತು. ಮೆದುಳನ್ನು ಒತ್ತೆ ಇರಿಸಿರುವ ಜನಸಮೂಹ ಕೀಲುಬೊಂಬೆಯಂತೆ ಕುಣಿಯಿತು.

ವುಹಾನ್‌ನಲ್ಲಿ ಈ ಮಹಾಮಾರಿ ಅಬ್ಬರಿಸಿದಾಗ ಚೀನಾ ಸರ್ಕಾರ ತಟ್ಟೆ ಜಾಗಟೆ ಬಾರಿಸುವ ಸರ್ಕಸ್ ಮಾಡಲಿಲ್ಲ. ಬದಲಾಗಿ ದಾಖಲೆಯ ಸಮಯದಲ್ಲಿ ದೈತ್ಯ ಆಸ್ಪತ್ರೆಯ ನಿರ್ಮಿಸಿತು. ಸಾಂಕ್ರಾಮಿಕದ ಬೇರುಗಳ ಸುಟ್ಟು ಹಾಕಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿತು. ಸಾರ್ವಜನಿಕ ಆರೋಗ್ಯದ ಮೇಲೆ ಭಾರತ ಸರ್ಕಾರದ ವೆಚ್ಚದ ಪ್ರಮಾಣ ಶೋಚನೀಯ ಪ್ರಮಾಣದ್ದು. ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕಿಂತಲೂ ಕಡಿಮೆ. ಜಿ.ಡಿ.ಪಿ.ಯ ಶೇ.1.28ರಷ್ಟು ಮಾತ್ರ. ಈ ಮೊತ್ತವನ್ನು ಕನಿಷ್ಠ ಶೇ.ಮೂರಕ್ಕೆ ಹೆಚ್ಚಿಸಬೇಕೆಂದು ದಶಕಗಳಿಂದ ಮುಂದಿಡುತ್ತ ಬಂದಿರುವ ಬೇಡಿಕೆಯನ್ನು ಯಾವ ಸರ್ಕಾರಗಳೂ ಕಿವಿಗೆ ಹಾಕಿಕೊಳ್ಳಲಿಲ್ಲ. ನರೇಂದ್ರ ಮೋದಿಯವರ ಸರ್ಕಾರವೂ ಈ ಮಾತಿಗೆ ಹೊರತಾಗಲಿಲ್ಲ. ಹಣವುಳ್ಳ ವರ್ಗಗಳ ಅಗತ್ಯಗಳನ್ನು ಪೂರೈಸುವ ಮಲ್ಟಿ ಸ್ಪೆಶಾಲಿಟಿ, ಸೂಪರ್ ಸ್ಪೆಶಾಲಿಟಿ ಖಾಸಗಿ ಆಸ್ಪತ್ರೆ ವ್ಯವಸ್ಥೆ ತಲೆಯೆತ್ತಿ ಬೆಳೆಯಿತೇ ವಿನಾ ಸಾರ್ವಜನಿಕ ಆರೋಗ್ಯ ಹಾಸಿಗೆ ಹಿಡಿಯುತ್ತಲೇ ಹೋಯಿತು. ಈಗ ಅದು ಕೃತಕ ಉಸಿರಾಟದಲ್ಲಿದೆ. ಸಾವು ಬದುಕಿನ ನಡುವೆ ತೂಗುಯ್ಯಾಲೆ ಆಡಿದೆ. ಅರ್ಥಾತ್ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಆಧರಿಸಿರುವ ಶೇ.80ರಷ್ಟು ಜನಸಂಖ್ಯೆ ಹಾಸಿಗೆ ಹಿಡಿದಿರುವ ಆರೋಗ್ಯ ವ್ಯವಸ್ಥೆಯನ್ನು ಅವಲಂಬಿಸಿದೆ. ಪ್ರತಿ ಹನ್ನೊಂದು ಸಾವಿರ ಮಂದಿಗೆ ಒಬ್ಬ ಸರ್ಕಾರಿ ವೈದ್ಯರಿದ್ದಾರೆ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ದೇಶದಲ್ಲಿರುವ ವೆಂಟಿಲೇಟರುಗಳ (ಕೃತಕ ಉಸಿರಾಟ ವ್ಯವಸ್ಥೆ) ಸಂಖ್ಯೆ ಒಂದು ಲಕ್ಷ ಮೀರುವುದಿಲ್ಲ. ಇನ್ನು ಮಹಾಮಾರಿಯು ಅಬ್ಬರಿಸಿರುವ ಈ ದಿನಗಳಲ್ಲಂತೂ ಈ ಜನವರ್ಗಗಳನ್ನು ಕೇಳುವವರು ಯಾರು? ಅವರ ಪ್ರಾಣಗಳು ಬಲು ಅಗ್ಗ.

ಅಷ್ಟಿಷ್ಟು ಪ್ರಮಾಣಕ್ಕೆ ಬೆಳೆದಿದ್ದ ವೈಜ್ಞಾನಿಕ ಮನೋಧರ್ಮವನ್ನು ನಾಶ ಮಾಡುವ ಎಲ್ಲ ಪ್ರಯತ್ನಗಳು ಕಳೆದ ಆರೇಳು ವರ್ಷಗಳಿಂದ ನಡೆಯುತ್ತ ಬಂದಿವೆ. ತರ್ಕ, ಸಂಶೋಧನೆ, ವಿಜ್ಞಾನ, ವಿದ್ವತ್ತಿನ ಮಾನಹರಣ ಮಾಡಲಾಗಿದೆ. ಅಂಧ ವಿಶ್ವಾಸ ಮತ್ತು ನಕಲಿ ಸುದ್ದಿಗಳು ಮತ್ತು ಹಸೀ ಸುಳ್ಳುಗಳನ್ನು ಉತ್ಪಾದಿಸಿ ಹಬ್ಬಿಸುವ ‘ಕಾರ್ಖಾನೆ’ಗಳನ್ನು ಲಕ್ಷಗಳ ಸಂಖ್ಯೆಯಲ್ಲಿ ದೇಶದುದ್ದಗಲಕ್ಕೂ ಕಟ್ಟಿ ನಿಲ್ಲಿಸಲಾಗಿದೆ. ಭಾವ ಬುದ್ಧಿಗಳನ್ನು ಭ್ರಷ್ಟಗೊಳಿಸಿ ಮಿದುಳುಗಳನ್ನು ತಿಂದು ಹಾಕುವ ದ್ವೇಷ-ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳನ್ನು ತಿನ್ನುವ ವೈರಾಣುಗಳನ್ನು ಬಿಟ್ಟು ಬಹಳ ಕಾಲವೇ ಆಗಿದೆ. ಭಾನುವಾರ ಸಂಜೆ ಕಂಡು ಬಂದ ಭೀಭತ್ಸದ ತಳಪಾಯವಿದು.

ರೋಗಗ್ರಸ್ತ ಸಮಾಜವನ್ನು ಕಟ್ಟಿ ನಿಲ್ಲಿಸಿದರೆ ಮಹಾಮಾರಿಯನ್ನು ಎದುರಿಸುವ ಚೈತನ್ಯವಾದರೂ ಅದಕ್ಕೆ ಎಲ್ಲಿಂದ ಬರಬೇಕು? ಸಮಾಜದಲ್ಲಿ ಹಂಚಿಕೆಯಾಗಬೇಕಿರುವ ಸಂಪತ್ತನ್ನು ಬಾಚಿಕೊಂಡಿರುವ ರೆಡ್ಡಿಗಳು, ಅಂಬಾನಿಗಳು, ಅದಾನಿಗಳು ಮುಂತಾದ ಉದ್ಯಮಿಗಳು, ಮಹಾನ್ ನಟರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆಯವ ಕನಿಷ್ಠ ಮಾನವೀಯತೆಯನ್ನೂ ಮರೆತಿದ್ದಾರೆ.

ದೇಶಾದ್ಯಂತ ಜನಜೀವನ ಅನಿರ್ದಿಷ್ಟ ಕಾಲ ಸ್ತಬ್ದಗೊಳ್ಳಲಿದೆ. ನಿತ್ಯದ ದುಡಿಮೆಯನ್ನು ಆಧರಿಸಿ ಹೊಟ್ಟೆ ಹೊರೆಯುವ ಕೋಟ್ಯಂತರ ಜನರ ಬದುಕು ನೋಟು ರದ್ದಿನ ನಂತರ ಮತ್ತೊಮ್ಮೆ ಅತಂತ್ರ ಆಗಲಿದೆ. ಈ ಜನರಿಗೆ ಪ್ರಧಾನಿಯವರು ಯಾವ ಪರಿಹಾರವನ್ನೂ ನೀಡಿಲ್ಲ. ಕೇವಲ ಚಪ್ಪಾಳೆ ತಟ್ಟಲು ಹೇಳಿರುವುದು ಕ್ರೌರ್ಯದ ಪರಮಾವಧಿ.

ಜನತಾಂತ್ರಿಕವಾಗಿ ಆರಿಸಿ ಬಂದಿರುವವರು ಸರ್ವಾಧಿಕಾರಿಗಳಾಗುವ ದಿನ ದೂರವಿಲ್ಲ. ಚಿಂತಕ ಶಿವಸುಂದರ್ ಅವರು ಹೇಳುವಂತೆ ದೇಹಕ್ಕೆ ಬಿದ್ದ ಪೆಟ್ಟು ಮೆದುಳಿಗೆ ತಿಳಿಯುತ್ತಿಲ್ಲ. ಯಾಕೆಂದರೆ ಮಿದುಳನ್ನು ನಾಶ ಮಾಡಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...