Homeಮುಖಪುಟಲಾಕ್‌ಡೌನ್‌ ಸಮಯದಲ್ಲಿ ಏನು ಮಾಡಬೇಕು? ಅಭಿಜಿತ್ ಬ್ಯಾನರ್ಜಿ ಹಾಗೂ ಡಫ್ಲೋರವರ 10 ಸಲಹೆಗಳು

ಲಾಕ್‌ಡೌನ್‌ ಸಮಯದಲ್ಲಿ ಏನು ಮಾಡಬೇಕು? ಅಭಿಜಿತ್ ಬ್ಯಾನರ್ಜಿ ಹಾಗೂ ಡಫ್ಲೋರವರ 10 ಸಲಹೆಗಳು

- Advertisement -
- Advertisement -

ಮೂಲ : ಇಂಡಿಯನ್ ಎಕ್ಸ್‌ಪ್ರೆಸ್

ಅನುವಾದ: ಡಾ|ಟಿ.ಎಸ್‌ ವೇಣುಗೋಪಾಲ್‌

ಭಾರತದ ವ್ಯಾಪಾರ ಮುಂದಿನ 21 ದಿನ ಬಂದಾಗಿದೆ. ಇದು ಸಾಕಾಗದಿದ್ದರೆ ಇನ್ನಷ್ಟು ದಿನ ಮುಂದುವರಿಯುತ್ತದೆ. ಪ್ರತಿಯೊಬ್ಬರು ಮನೆಯಲ್ಲಿ ಉಳಿಯಬೇಕು. ಇದರರ್ಥ ನಿಜವಾಗಿ ಏನು ಅಂತ ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದೇವೆ. ಕಟ್ಟಡ ನಿರ್ಮಿಸುವ ವಲಸೆ ಕಾರ್ಮಿಕರು ಈಗ ಮುಚ್ಚಿರುವ ಕೆಲಸದ ಸ್ಥಳಗಳಲ್ಲಿ, ನಿರ್ಮಾಣದ ಸಮಯದಲ್ಲಿ ಕಟ್ಟಿಕೊಂಡಿದ್ದ ತಾತ್ಕಾಲಿಕ ಮನೆಗಳಲ್ಲಿ ಹೇಗೆ ಉಳಿಯುತ್ತಾರೆ? ಅಥವಾ ಈಗ ಅವರೆಲ್ಲಾ ಮನೆಗೆ ಹಿಂತಿರುಗಿ ಹೋಗಬೇಕಾ? ಈಗ ರೈಲುಗಳು ಬೇರೆ ಸಂಚರಿಸುತ್ತಿಲ್ಲ. ನೂರಾರು ಜನ ದೆಹಲಿಯಿಂದ ಬಿಹಾರಿಗೆ ನಡೆದುಕೊಂಡೇ ಹೋಗುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಅವರೆಲ್ಲಾ ದಾರಿಯಲ್ಲಿ ರಾತ್ರಿಯ ಹೊತ್ತು ಎಲ್ಲೋ ಗೊತ್ತಿಲ್ಲದ ಪುಟ್ಟ ಅನಧಿಕೃತ ಜಾಗದಲ್ಲಿ, ಇಕ್ಕಟ್ಟಿನಲ್ಲಿ ಮಲಗುತ್ತಾರೆ. ಆಗ ಅವರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಾರೆ ಅಂತ ಭಾವಿಸಿಕೊಳ್ಳಬೇಕಾ? ದೆಹಲಿಯಿಂದ ಧರ್ಭಂಗಾಕ್ಕೆ 25 ಚದುರ ಅಡಿ ಜಾಗವಿರುವ ಟ್ರಕ್ಕಿನಲ್ಲಿ 25 ಜನ ಕುಳಿತುಕೊಂಡು ಹೋಗುವ ಬದಲು ನಡೆದುಕೊಂಡು ಹೋದರಲ್ಲಾ ಎಂದು ಅವರನ್ನು ದೂಷಿಸಬೇಕಾ?

ಮುಂಬೈನಲ್ಲಿ ಬಿಸಿಲು ಈಗಾಗಲೇ 30 ಡಿಗ್ರಿ ದಾಟಿದೆ, ಇನ್ನೂ ಏರುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಅವರಿರುವ ಹತ್ತು ಅಡಿ ಅಗಲದ ಟಿನ್ ಗೂಡಿನಲ್ಲಿ 6 ಜನ ಒಟ್ಟೊಟ್ಟಿಗೆ ಮಲಗುವುದಕ್ಕೆ ಸಾಧ್ಯವೇ? ಅಷ್ಟರಲ್ಲೇ ಅವರು ಅಡುಗೆ ಮಾಡಿಕೊಳ್ಳಬೇಕು, ಅಲ್ಲೇ ಮಲಗಬೇಕು? ಸಂಜೆ ತಂಪಾದ ಮೇಲೆ ಹತ್ತಿರದ ಪಾರ್ಕಿಗೆ ಹೋಗುವ ಅವಕಾಶವೂ ಇಲ್ಲ, ಅಥವಾ ಫೋನ್ ಬಂದಾಗ ಹತ್ತಿರವಿರುವ ಮರದ ನೆರಳಿನಲ್ಲಿ ನಿಂತು ಮಾತನಾಡುತ್ತಿದ್ದ ಸುಖವೂ ಇಲ್ಲದಿರುವ ಈ ಹೊತ್ತಿನಲ್ಲಿ ಮುಂಬಯಿನಲ್ಲಿ ಧಾರವಿಯ ನಿವಾಸಿಗಳು ಊರಿಗೆ ಹೋಗಬೇಕೆಂದುಕೊಂಡರೆ ತಪ್ಪಾ?

ಇಟ್ಟುಕೊಂಡಿರುವ ಅಲ್ಪಸ್ವಲ್ಪ ಹಣ ಖಾಲಿಯಾದಾಗ ಏನು ಮಾಡುವುದು? ಬಹುಪಾಲು ಭಾರತೀಯರಿಗೆ ಕೆಲಸವಿಲ್ಲದೇ ಹೋದಾಗ ಖಾತರಿಯಾದ ವರಮಾನವಿರುವುದಿಲ್ಲ. ಉಳಿಸಿದ್ದೆಲ್ಲಾ ಖಾಲಿಯಾಗಿಬಿಟ್ಟಾಗಿ ಅವರು ಏನು ಮಾಡಬೇಕು? ಮನೆಯವರಿಗೆ ಊಟದ ಖರ್ಚಿಗಾಗೆ ಒಂದಿಷ್ಟು ಹಣ ಹುಡುಕಿಕೊಂಡು ಮನೆಯಿಂದಾಚೆಗೆ ಹೋದರೆ ಯಾರನ್ನು ಬಯ್ಯೋಣ? ಆಗ ಕೇವಲ ಗೊಂದಲವಷ್ಟೇ ಸಾಧ್ಯ? ಕರ್ನಾಟಕದಲ್ಲಿ ನಡೆಸಿದ ಒಂದು ದಿಢೀರ್ ಸಮೀಕ್ಷೆಯಿಂದ ಖಾಯಿಲೆಯ ಬಗ್ಗೆ ಜನರಿಗೆ ಸಾಕಷ್ಟು ಮಾಹಿತಿ ಇದೆ ಅನ್ನೋದು ತಿಳಿಯಿತು. ಆದರೆ ಏನು ಮಾಡಬಾರದು ಅನ್ನುವುದರ ಬಗ್ಗೆ ಮಾತ್ರ ಒಂದೇ ರೀತಿಯ ತಿಳುವಳಿಕೆ ಇಲ್ಲ. ಇದರರ್ಥ ಈಗ ಅನುಸರಿಸುತ್ತಿರುವ ಕ್ರಮ ತಪ್ಪು ಅಂತಲ್ಲ. ಆದರೆ ಈ ಕ್ರಮಗಳು ಪರಿಪೂರ್ಣವಾಗಿ ಅಥವಾ ಸರಿಯಾಗಿ ಜಾರಿಯಾಗದೇ ಇರಬಹುದು ಅಂತ ಅಷ್ಟೆ.

ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಏನಾಗಬಹುದು, ಅದಕ್ಕೆ ಯಾವ ಕ್ರಮ ತೆಗೆದುಕೊಳ್ಳಬಹುದು ಎನ್ನುವುದಕ್ಕೆ ಸಂಬಂಧಿಸಿದಂತೆ ಆಚರಣೆಯಲ್ಲಿ ಕೆಲವು ಸಮಸ್ಯೆಗಳಿವೆ. ಅದರಿಂದ ಹಲವು ಪ್ರಮುಖ ಪರಿಣಾಮಗಳಾಗುತ್ತವೆ.

ಮೊದಲನೆಯದಾಗಿ ಲಾಕ್‌ಡೌನ್ ಪರಿಣಾಮಕಾರಿಯಾದರೂ ಮತ್ತು ಸೋಂಕಿನ ಏರಿಕೆಯ ರೇಖೆ ಸ್ಥಗಿತಗೊಂಡರೂ, ಖಾಯಿಲೆ ಹರಡುವುದು ನಿಂತರೂ, ಖಾಯಿಲೆ ತನ್ನ ಪರಿಧಿಯನ್ನು ವಿಸ್ತರಿಸುವುದು ನಿಲ್ಲುವುದಿಲ್ಲ. ಯಾಕೆಂದರೆ ನಮಗೆ ಗೊತ್ತಿಲ್ಲದ ಸೋಂಕಿಗೆ ಒಳಗಾದವರು ಇದ್ದಾರೆ. ಅವರು ಅದನ್ನು ಹೊಸಬರಿಗೆ ತಗಲಿಸುವ ಸಾಧ್ಯತೆ ಇದೆ. ಖಾಯಿಲೆ ಸುಮಾರು ಎರಡು ವಾರ ಸುಪ್ತವಾಗಿಯೇ (ಡಾರ್ಮೆಂಟ್) ಉಳಿದಿರಬಹುದೆಂಬ ಅಂದಾಜಿದೆ. ಖಾಯಿಲೆಯ ನೇರ ಸಂಪರ್ಕವಿರುವವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಅಗೋಚರ ವಾಹಕರನ್ನು ಗುರುತಿಸುವುದು ಸುಲಭವಲ್ಲ. ಹೀಗೆ ಅಗೋಚರವಾಗಿ ಉಳಿದಿರುವ ವಾಹಕರು ಹೆಚ್ಚಾಗಿಯೇ ಇರಬಹುದು. ದೆಹಲಿಯಿಂದ ಊರಿಗೆ ಬಂದವನಿಗೆ ಅದು ಇದೆ ಎಂದು ಗೊತ್ತಾಗುವ ಮೊದಲೇ ಮನೆಯವರಿಗೆಲ್ಲಾ ಹರಡಿಬಿಡಬಹುದು.

ಎರಡನೆಯದಾಗಿ ಕೆಲವು ಕಡೆಗಳಲ್ಲಿ ಒಮ್ಮೆ ಸೋಂಕು ಬಂದುಬಿಟ್ಟರೆ ಅದು ಹರಡುವುದನ್ನು ತಪ್ಪಿಸುವುದು ತುಂಬಾ ಕಷ್ಟವಾಗಬಹುದು. ಪರಿಣಾಮಕಾರಿಯಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಾಗಲಿ, ಸಂಪೂರ್ಣ ಲಾಕ್‌ಡೌನ್ ಆಗಲಿ ಸಾಧಿಸುವುದು ಕಠಿಣವಾಗುತ್ತದೆ. ಉದಾಹರಣೆಗೆ ನಗರದಲ್ಲಿನ ಸ್ಲಮ್ಮುಗಳು.
ಮೂರನೆಯದಾಗಿ ಸೋಂಕು ಹಲವರಿಗೆ ತಗಲುವ ಮೊದಲೇ ಲಾಕ್‌ಡೌನ್ ಪ್ರಾರಂಭವಾಗಿರುವುದರಿಂದ ಹೆಚ್ಚು ಕಮ್ಮಿ ಯಾರಿಗೂ ಇಮ್ಯೂನಿಟಿ ಬೆಳೆದಿರುವ ಸಾಧ್ಯತೆ ಕಡಿಮೆ. ಅಂದರೆ ಮುಂದಿನ ಮೂರು ವಾರಗಳಲ್ಲಿ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡದೇ ಹೋದರೆ ಕರ್ಫ್ಯೂ ತೆಗೆದ ತಕ್ಷಣ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚು. ಅಂದರೆ ಕರ್ಫ್ಯೂ ಉಪಯೋಗವಿಲ್ಲ ಅಂತ ಅರ್ಥವಲ್ಲ. ಇದರಿಂದ ಸರಿಯಾಗಿ ಯೋಜನೆ ಮಾಡಿಕೊಳ್ಳುವುದಕ್ಕೆ ಸಮಯಾಕಾಶ ಸಿಕ್ಕಿದೆ. ಮುಂದಿನ ಕೆಲವು ವಾರ ಸೋಂಕಿನ ಸಂಖ್ಯೆಯನ್ನು ಮಿತಗೊಳಿಸುವುದಕ್ಕೆ ಸಹಾಯವಾಗಿದೆ. ಆದರೆ ಸಮಸ್ಯೆ 21ದಿನವೂ ನಮ್ಮೊಂದಿಗೇ ಇರುತ್ತದೆ. ಅದರಿಂದ ನಾವು ಮುಂದಿನ ಕೆಲತಿಂಗಳಲ್ಲಿ ದೂರದ ಗ್ರಾಮೀಣ ಪ್ರದೇಶಗಳು ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲಿ ಸೊಂಕು ಸ್ಪೋಟಗೊಳ್ಳುವ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿರಬೇಕು. ಅದಕ್ಕಿಂತ ಹೆಚ್ಚಾಗಿ ಸೋಂಕು ಹರಡುವ ಸಾಧ್ಯತೆ ಇರುವ ಈ ಅಪಾಯಕಾರಿ ಪ್ರದೇಶಗಳೆಲ್ಲವೂ ಆರೋಗ್ಯ ವ್ಯವಸ್ಥೆ ತುಂಬಾ ದುರ್ಬಲವಾಗಿರುವ ಪ್ರದೇಶಗಳು. ಚೀನಾಗೆ ಹೋಲಿಸಿದರೆ ನಮ್ಮಲ್ಲಿ ಸರಾಸರಿ ತಲಾ 1/8 ಆಸ್ಪತ್ರೆಗಳಿವೆ. ಅದೇ ತುಂಬಾ ಆತಂಕಕಾರಿಯಾಗಿರುವ ವಿಷಯ. ಆದರೆ ಈ ಆರೋಗ್ಯ ಕೇಂದ್ರಗಳು ಕೂಡ ಮುಂದುವರಿದ ಪ್ರದೇಶಗಳಲ್ಲೇ ಕೇಂದೀಕೃತವಾಗಿವೆ.

ಭಾರತದಲ್ಲಿ ಇಂದಿಗೂ ಹೆಚ್ಚಿನಂಶ ಸೂಕ್ತ ವೈದ್ಯಕೀಯ ಶಿಕ್ಷಣವಿಲ್ಲದ ವೈದ್ಯರೇ ದಿನನಿತ್ಯದ ಆರೋಗ್ಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಕನಿಷ್ಠ ಕೆಲವು ಪರಿಚಿತ ಖಾಯಿಲೆಗಳಿಗೆ ಏನು ಮಾಡಬೇಕೆಂಬುದು ಗೊತ್ತಿದೆ. ಕೋವಿಡ್-೧೯ ಇರುವ ರೋಗಿಗಳು ಅವರ ಬಳಿಗೆ ಹೋಗುತ್ತಾರೆ. ಅವರಿಗೆ ಅದನ್ನು ಗುರುತಿಸುವುದಕ್ಕೇ ಆಗಲಿ ಅಥವಾ ಅದಕ್ಕೆ ಚಿಕಿತ್ಸೆಯಾಗಲೀ  ಗೊತ್ತಿರುವುದಿಲ್ಲ. ಕೊನೆಗೆ ಅವರು ಆಸ್ಪತ್ರೆಗಳಿಗೆ ಹೋಗುತ್ತಾರೆ. ಹೋಗುವಾಗ ದಾರಿಯಲ್ಲಿ ಹಲವರಿಗೆ ಖಾಯಿಲೆ ಹರಡಿರುತ್ತಾರೆ.

ದುರಂತವನ್ನು ತಪ್ಪಿಸುವುದಕ್ಕೆ ಏನು ಮಾಡಬಹುದು? ಹತ್ತು ಅಂಶಗಳು

ಮೊದಲನೆಯದಾಗಿ ಕುಟುಂಬದಲ್ಲಿ ಒಬ್ಬನಿಗಾದರೂ ಖಾಯಿಲೆಯ ಲಕ್ಷಣಗಳು ಗೊತ್ತಿರುವಂತೆ ನೋಡಿಕೊಳ್ಳಬೇಕು.

ಎರಡನೆಯದಾಗಿ ಎಲ್ಲಾ ರೀತಿಯ ಕ್ರಮಗಳನ್ನೂ, ಎಚ್ಚರಿಕೆಗಳನ್ನೂ ತೆಗೆದುಕೊಂಡರೂ ಕೆಲವರಿಗೆ ಸೋಂಕು ತಗುಲಬಹುದು ಎಂಬ ತಿಳುವಳಿಕೆ ಎಲ್ಲರಲ್ಲೂ ಮೂಡಬೇಕು. ಅವರನ್ನು ಹೊರಗಿಡುವುದಾಗಲಿ, ಮುಚ್ಚಿಡುವುದಾಗಲಿ ಆಗಬಾರದು. ಈಗ ಮುಖ್ಯವಾಗಿ ಬೇಕಾಗಿರುವುದು ನಿಷ್ಠಾವಂತ ವರದಿ.

ಮೂರನೆಯದಾಗಿ ವರದಿ ಮಾಡುವುದಕ್ಕೆ ವಿಭಿನ್ನ ದಾರಿಗಳು ಇರಬೇಕು. ಉದಾಹರಣೆಗೆ ಹಾಟ್‌ಲೈನ್, ಆಶಾ ಹೀಗೆ ಹಲವು ದಾರಿಗಳನ್ನು ಕಂಡುಕೊಳ್ಳಬೇಕು.

ನಾಲ್ಕನೆಯದಾಗಿ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ರೋಗಲಕ್ಷಣ ಗುರುತಿಸುವುದಕ್ಕೆ ತರಬೇತಿ ನೀಡಬೇಕು. ಮತ್ತು ಸೋಂಕಿನ ಸೂಚನೆಗಳು ಕಂಡೊಡನೆ ಅವರು ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಬೇಕು.

ಐದನೆಯದಾಗಿ, ಹಾಗೆ ವರದಿಯಾದ ಪ್ರಕರಣಗಳನ್ನು ತಕ್ಷಣ ಕ್ರೋಢೀಕರಿಸಬೇಕು. ಆಗ ನಮಗೆ ಹೊಸ ಆಪಾಯಕಾರಿ ಸ್ಥಳಗಳು ಯಾವುವು ಎಂಬುದು ತಿಳಿಯುತ್ತದೆ. ದೇಶಾದ್ಯಂತ ದೊರೆತ ಅಂತಹ ಪುರಾವೆಗಳನ್ನು ಕ್ರೋಢೀಕರಿಸಿದಾಗ ಒಟ್ಟಾರೆ ಸೋಂಕು ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುದು ತಿಳಿಯುತ್ತದೆ.

ಆರನೆಯದಾಗಿ, ಪ್ರತಿ ರಾಜ್ಯದಲ್ಲೂ ಆರೋಗ್ಯ ವೃತ್ತಿನಿರತರ, ವೈದ್ಯರ ಹಾಗೂ ನರ್ಸುಗಳ ಒಂದು ತಂಡವನ್ನು ಕಟ್ಟಬೇಕು. ಪ್ರತಿಯೊಂದು ತಂಡದಲ್ಲೂ ಸಾಕಷ್ಟು ಪರೀಕ್ಷೆಯ ಕಿಟ್ಟುಗಳು, ಸಾಧ್ಯವಾದರೆ ವೆಂಟಿಲೇಟರುಗಳು ಮತ್ತು ಇತರ ಉಪಕರಣಗಳು ಇರಬೇಕು. ಇದರ ಉದ್ದೇಶವೆಂದರೆ ಪಕ್ಕದ ಪ್ರದೇಶಗಳು ಮತ್ತು ರಾಜ್ಯಗಳು ಸೇರಿದಂತೆ ಎಲ್ಲಿ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿದೆ ಎಂಬ ವರದಿ ಬರುತ್ತದೆಯೋ ಅಲ್ಲೆಲ್ಲಾ ತಕ್ಷಣ ಈ ತಂಡದ ಒಂದು ಭಾಗವನ್ನು ಕಳಿಸಿಕೊಡುವುದಕ್ಕೆ ನೇಮಿಸುವುದಕ್ಕೆ ಸಾಧ್ಯವಾಗಬೇಕು. ಈಗಿನ ಲಾಕ್‌ಡೌನ್ ಯಶಸ್ವಿಯಾದರೆ, ಒಂದು ದೊಡ್ಡ ದುರಂತ ಸಂಭವಿಸದೇ ಹೋಗಬಹುದು. ಅದರ ಬದಲು ಬೇರೆ ಬೇರೆ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಈ ಸಾಧ್ಯತೆ ತುಂಬಾ ಹೆಚ್ಚು. ಈ ಸಮಯದಲ್ಲಿ ಒಂದೇ ತಂಡವನ್ನು ವಿಭಿನ್ನ ಸ್ಥಳಗಳಲ್ಲಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಏಳನೆಯದಾಗಿ, ಇಂತಹ ಒಂದು ತಂಡವನ್ನು ಕಟ್ಟುವುದಕ್ಕೆ, ಮತ್ತು ಅದರಲ್ಲಿ ಎಲ್ಲಾ ಅವಶ್ಯಕ ಸಾಧನಗಳನ್ನು ಇರುವಂತೆ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಾಗಬೇಕಾದರೆ ಎಲ್ಲಾ ಆರೋಗ್ಯ ವೃತ್ತಿನಿರತರನ್ನು ಸೇರಿಸಿಕೊಳ್ಳಬೇಕು. ಕೇವಲ ಸರ್ಕಾರದ ಸೇವೆಯಲ್ಲಿ ಇರುವವರು ಮಾತ್ರವಲ್ಲ. ಅವಶ್ಯಕತೆಗೆ ತಕ್ಕಂತೆ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಹಕ್ಕು ಆ ತಂಡಕ್ಕೆ ಇರಬೇಕು.

ಎಂಟನೆಯದಾಗಿ, ಸಾಮಾಜಿಕ ವರ್ಗಾವಣೆ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚೆಚ್ಚು ಧೈರ್ಯ ತೋರಬೇಕು. ಇಲ್ಲದೇ ಹೋದರೆ ಬೇಡಿಕೆಯ ಬಿಕ್ಕಟ್ಟು ಒಂದು ದೊಡ್ಡ ಆರ್ಥಿಕ ಪ್ರಪಾತಕ್ಕೆ ನಮ್ಮನ್ನು ತಳ್ಳುತ್ತದೆ. ಆಗ ಜನರಿಗೆ ಆಜ್ಞೆಗಳನ್ನು ಮೀರುವುದನ್ನು ಬಿಟ್ಟು ಬೇರೆ ದಾರಿಯೇ ಉಳಿಯುವುದಿಲ್ಲ. ಈಗ ಸರ್ಕಾರ ನೀಡುತ್ತಿರುವ ಧನಸಹಾಯ ತೀರಾ ಕಡಿಮೆ. ಹೆಚ್ಚೆಂದರೆ ಕೆಲವು ಸಾವಿರ ರೂಪಾಯಿಗಳು. ಆ ಜನ ಈಗಾಗಲೇ ಅದಕ್ಕಿಂತ ಹೆಚ್ಚನ್ನು ಕೆಲವೇ ದಿನಗಳಲ್ಲಿ ಖರ್ಚು ಮಾಡಿದ್ದಾರೆ. ಅವರು ಕೆಲಸಕ್ಕೆ ಹೊರಗೆ ಹೋಗದಂತೆ ಮಾಡಲು ಮತ್ತು ಆ ಮೂಲಕ ಖಾಯಿಲೆ ಹರಡುವುದನ್ನು ತಪ್ಪಿಸಬೇಕಾದರೆ ಬಹುಶಃ ಅವರಿಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.

ಒಂಭತ್ತೆನೆಯದಾಗಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿವೆ (ರೈತರು ಅಂದರೆ ಯಾರು?), ಬಿಸಿನೆಸ್ ಆಸ್ ಯೂಷುವಲ್ ಯೋಜನೆಗೆ, ಅರ್ಹತೆಗೆ ಸಂಬಂದಿಸಿದಂತೆ ಹಲವು ಸಮಸ್ಯೆಗಳಿವೆ. ಯೋಜನೆಗಳನ್ನು ಕೆಲವರಿಗಷ್ಟೇ ಸೀಮಿತಗೊಳಿಸದೆ ಸಾರ್ವತ್ರಿಕವಾಗಿ ಎಲ್ಲರಿಗೂ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ದುರುಪಯೋಗ ಆಗುವುದನ್ನು ತಪ್ಪಿಸಬೇಕು. (ಹಾಗೆ ಅನುಕೂಲ ಪಡೆದುಕೊಂಡವರ ಪಟ್ಟಿಯನ್ನು ಪ್ರಕಟಿಸಬೇಕು. ಆಗ ಫಲಾನುಭವಿಗಳು ಯಾರು ಎಂದು ಎಲ್ಲರಿಗೂ ತಿಳಿಯುತ್ತದೆ.). ಸರ್ಕಾರ ಹೆಮ್ಮೆ ಪಡುವ ಜಾಮ್ (ಜನ್ ಧನ್, ಆಧಾರ್, ಮೊಬೈಲ್) ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಇದು ಖಂಡಿತವಾಗಿಯೂ ಸಕಾಲ. ನಗದನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಅದರ ಮಾಹಿತಿ ಪಡೆದವರಿಗೆ ತಲುಪಬೇಕು.

ಅಂತಿಮವಾಗಿ ಈ ಸಮರದ ಪ್ರಯತ್ನವನ್ನು ಸೂಕ್ತವಾದ ಒಂದು ವ್ಯಾಕ್ಸಿನ್ ದೊರೆಯುವ ತನಕ ಮುಂದುವರಿಸಲು ತಯಾರಿರಬೇಕು. ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುವುದಕ್ಕೆ ಪ್ರಾರಂಭಿಸೋಣ. ಆಗ ಮುಂದಿನ ಸಲ ಇದನ್ನು ಎದುರಿಸುವುದಕ್ಕೆ ಹೆಚ್ಚು ಸಿದ್ಧರಿರುತ್ತೇವೆ.

*****

(ಬ್ಯಾನರ್ಜಿ ಮತ್ತು ಡಫ್ಲೋ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...