Homeಮುಖಪುಟಚುನಾವಣಾ ಬಾಂಡ್ ವಿವರ: ಸುಪ್ರೀಂ ಕೋರ್ಟ್ ಕೇಳಿದರೆ ತಿಂಗಳುಗಳು ಬೇಕು, ಸರ್ಕಾರ ಕೇಳಿದರೆ ಗಂಟೆಗಳು ಸಾಕು!

ಚುನಾವಣಾ ಬಾಂಡ್ ವಿವರ: ಸುಪ್ರೀಂ ಕೋರ್ಟ್ ಕೇಳಿದರೆ ತಿಂಗಳುಗಳು ಬೇಕು, ಸರ್ಕಾರ ಕೇಳಿದರೆ ಗಂಟೆಗಳು ಸಾಕು!

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಕಳ್ಳಾಟ ಬಯಲು ಮಾಡಿದ ದಾಖಲೆಗಳು

- Advertisement -
- Advertisement -

ಚುನಾವಣಾ ಬಾಂಡ್‌ಗಳ ಕುರಿತ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಲು ಜೂನ್ 30ರವರೆಗೆ ಸಮಯ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಎ ಅರ್ಜಿ ಸಲ್ಲಿಸಿದೆ. ರಾಜಕೀಯ ಪಕ್ಷಗಳಿಗೆ ಗುಟ್ಟಾಗಿ ದೇಣಿಗೆ ನೀಡಿದವರ ಮಾಹಿತಿ ಒದಗಿಸುವುದು ಕಷ್ಟದ ಕೆಲಸ ಎಂದಿದೆ.

ಎಸ್‌ಬಿಐ ಈ ಹಿಂದೆಯೂ ಸರ್ಕಾರಿ ವಿಚಾರಣೆಗಳ ಸಂದರ್ಭಗಳಲ್ಲಿ ಈ ರೀತಿ ನಿಧಾನಗತಿ ಮತ್ತು ಚಾಣಾಕ್ಷತೆಯನ್ನು ಪ್ರದರ್ಶಿಸಿದೆ.

ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ನಂತರ ನ್ಯಾಯಾಲಯ ಬಾಂಡ್‌ ವಿವರಗಳನ್ನು ಬಹಿರಂಗಪಡಿಸಲು ಎಸ್‌ಬಿಐಗೆ ಸೂಚಿಸಿತ್ತು. ಆ ಕೆಲಸ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ ಎಂಬುವುದು ಈಗ ಎಸ್‌ಬಿಐ ನ್ಯಾಯಾಲಯ ನೀಡುತ್ತಿರುವ ಸಬೂಬು.

ಆದರೆ, ಸಾಮಾಜಿಕ ಹೋರಾಟಗಾರ ಕೊಮೋಡೋರ್ ಲೋಕೇಶ್ ಬಾತ್ರಾ ಅವರು ‘ರಿಪೋರ್ಟರ್ಸ್ ಕಲೆಕ್ಟಿವ್‌’ ಜೊತೆ ಹಂಚಿಕೊಂಡ ದಾಖಲೆಗಳ ಪ್ರಕಾರ, ಸರ್ಕಾರಕ್ಕೆ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಅತಿ ಕಡಿಮೆ ಸಮಯದಲ್ಲಿ, ಅಂದರೆ ಕೆಲವೊಮ್ಮೆ ಬರೀ 48 ಗಂಟೆಗಳಲ್ಲಿ ಒದಗಿಸಿರುವುದನ್ನು ಸಾಬೀತುಪಡಿಸುವ ಹಲವು ಪ್ರಮುಖ ಪುರಾವೆಗಳಿವೆ.

ಕೇಂದ್ರ ಹಣಕಾಸು ಸಚಿವಾಲಯದ ಸೂಚನೆಯ ಮೇರೆಗೆ ಎಸ್‌ಬಿಐ ಬಾಂಡ್‌ಗಳನ್ನು ನಗದುಗೊಳಿಸುವ ಗಡುವು ಮುಗಿದ 48 ಗಂಟೆಗಳ ಒಳಗೆ ದೇಶದಾದ್ಯಂತ ಚುನಾವಣಾ ಬಾಂಡ್‌ಗಳ ಡೇಟಾವನ್ನು ಒಟ್ಟುಗೂಡಿಸಿದ್ದಿದೆ ಎಂದು ದಾಖಲೆಗಳು ಬಹಿರಂಗಪಡಿಸುತ್ತವೆ.

ಬಾಂಡ್ ಮಾರಾಟದ ಪ್ರತಿ ವಿಂಡೋ ಅವಧಿಯ ನಂತರ ಅಂತಹ ಮಾಹಿತಿಯನ್ನು ಅದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳಿಸಿದೆ. 2020ರವರೆಗಿನ ಅಂತಹ ದಾಖಲೆಗಳನ್ನು ರಿಪೋರ್ಟರ್ಸ್ ಕಲೆಕ್ಟಿವ್ ಡಾಟ್ ಇನ್ ಪರಿಶೀಲಿಸಿದೆ. ಮಾರಾಟವಾದ ಮತ್ತು ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡ ಬಾಂಡ್‌ಗಳ ಆಡಿಟ್ ಟ್ರಯಲ್ ಅನ್ನು ಎಸ್‌ಬಿಐ ನಿರ್ವಹಿಸುವುದರ ಬಗ್ಗೆ ದಾಖಲೆಗಳು ಹೇಳುತ್ತವೆ.

ಪ್ರತಿ ಬಾಂಡ್‌ನ ಸೀರಿಯಲ್ ನಂಬರ್ ಬಳಸಿ ಅದರ ಜಾಡನ್ನು ಎಸ್‌ಬಿಐ ನಿರ್ವಹಿಸುತ್ತದೆ. ಇದು, 2018ರಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಯೋಜನೆ ಪ್ರಾರಂಭಿಸಿದಾಗಲೇ ಎಸ್‌ಬಿಐ ಸ್ವತಃ ಬೇಡಿಕೆಯಿಟ್ಟು ಮಾಡಿಕೊಂಡಿರುವ ವ್ಯವಸ್ಥೆ.

ಆಗ ಇಂತಹ ಜಾಣತನ ತೋರಿದ್ದ ಎಸ್‌ಬಿಐ, ಈಗ ಮಾತ್ರ ಖರೀದಿ ಸಮಯದಲ್ಲಿ ಬಾಂಡ್ ಖರೀದಿಸಿದ ದಾನಿಗಳ ವಿವರಗಳನ್ನು, ಅವನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಕೋರ್ಟ್‌ಗೆ ಹೇಳುತ್ತಿದೆ.

ಬಾಂಡ್‌ಗಳ ಮಾರಾಟದ ಕುರಿತ ಡೇಟಾವನ್ನು ನಿಗದಿತ ಶಾಖೆಗಳು ಮುಚ್ಚಿದ ಕವರ್‌ಗಳಲ್ಲಿ ಮುಂಬೈ ಪ್ರಧಾನ ಕಚೇರಿಗೆ ಕಳುಹಿಸುತ್ತವೆ ಎಂಬುದು ಎಸ್‌ಬಿಐ ಹೇಳಿಕೆ. ಅದೇ ರೀತಿ, ಬಾಂಡ್‌ಗಳನ್ನು ನಗದು ಮಾಡಿಕೊಂಡ ರಾಜಕೀಯ ಪಕ್ಷಗಳ ಡೇಟಾವನ್ನು ಕೂಡ ಸೀಲ್ ಮಾಡಿದ ಕವರ್‌ನಲ್ಲಿ ಮುಂಬೈ ಕಚೇರಿಗೆ ಕಳಿಸಲಾಗುತ್ತದೆ.

ದೇಣಿಗೆ ನೀಡಿದವರ ಮತ್ತು ಪಡೆದ ರಾಜಕೀಯ ಪಕ್ಷಗಳ ಹೆಸರು ಬಹಿರಂಗವಾಗದಂತೆ ನೋಡಿಕೊಳ್ಳಲು ಹೀಗೆ ಡೇಟಾವನ್ನು ಬೇರ್ಪಡಿಸಲಾಗಿರುತ್ತದೆ ಎಂದು ಬ್ಯಾಂಕ್ ಹೇಳಿದೆ. ಹೀಗಾಗಿ, 2019ರಿಂದ ನೀಡಲಾದ ಒಟ್ಟು 22,217 ಚುನಾವಣಾ ಬಾಂಡ್‌ಗಳ ಖರೀದಿದಾರರ ವಿವರಗಳನ್ನು ಫಲಾನುಭವಿ ಪಕ್ಷಗಳ ವಿವರಗಳೊಂದಿಗೆ ಜೋಡಿಸಲು ತಿಂಗಳುಗಟ್ಟಲೆ ಸಮಯ ಬೇಕು ಎಂದು ಎಸ್‌ಬಿಐ ಹೇಳುತ್ತಿದೆ.

ಆದರೆ ದಾಖಲೆಗಳು ಪ್ರಕಾರ, 2017ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಕೊಂಡಂತೆ, ಚುನಾವಣಾ ಬಾಂಡ್‌ಗಳು ಬ್ಯಾಂಕ್‌ಗೆ ನಗದೀಕರಣಕ್ಕಾಗಿ ಬಂದಾಗ ಆ ರಾಜಕೀಯ ಪಕ್ಷದೊಂದಿಗೆ ದಾನಿಯ ವಿವರವನ್ನು ನೈಜ ಸಮಯದಲ್ಲೇ ಸಂಪರ್ಕಿಸುವ ವ್ಯವಸ್ಥೆಯನ್ನು ಎಸ್‌ಬಿಐ ಹೊಂದಿದೆ. ಬಾಂಡ್‌ಗಳ ಖರೀದಿ ಮತ್ತು ನಗದೀಕರಣ ಎಲೆಕ್ಟ್ರಾನಿಕ್ ಆಗಿ ನಡೆದದ್ದೆ ಅಥವಾ ನೇರವಾಗಿ ನಡೆದದ್ದೆ ಎಂಬುದು ಕೂಡ ಇಲ್ಲಿ ಗಣನೆಗೆ ಬರುವುದಿಲ್ಲ.

ಖರೀದಿದಾರರನ್ನು ಗುರುತಿಸಲು ಕೆವೈಸಿ ಪ್ರಕ್ರಿಯೆ ಮತ್ತು ಬಾಂಡ್‌ಗಳ ಮೇಲೆ ರಹಸ್ಯ ಸೀರಿಯಲ್ ನಂಬರ್ ಹಾಕಿದ ಬಳಿಕವೇ ನಿಗದಿತ ಎಸ್‌ಬಿಐ ಶಾಖೆಗಳು ಬಾಂಡ್ ಮಾರಾಟವನ್ನು ಪೂರ್ಣಗೊಳಿಸುವ ಕ್ರಮವನ್ನು ಅನುಸರಿಸಿವೆ.

ಪಾರದರ್ಶಕವಾಗಿಲ್ಲ ಎಂಬ ಆರೋಪಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಉತ್ತರಿಸುವಾಗಲೂ ಕೇಂದ್ರ ಸರ್ಕಾರ ಕೆವೈಸಿ ಮತ್ತು ಆಡಿಟ್ ಟ್ರಯಲ್ ಮೂಲಕ ಈ ಯೋಜನೆ ಪಾರದರ್ಶಕತೆ ಹೊಂದಿದ್ದಾಗಿ ಹೇಳಿಕೊಂಡಿತ್ತು.

ನ್ಯಾಯಾಲಯದಲ್ಲಿ ಯೋಜನೆಯನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂಬುದರ ಕುರಿತ ತನ್ನ ಆಂತರಿಕ ಚರ್ಚೆಗಳಲ್ಲಿಯೂ ಹಣಕಾಸು ಸಚಿವಾಲಯ, ಬಾಂಡ್ ಖರೀದಿದಾರರ ದಾಖಲೆಗಳು ಬ್ಯಾಂಕ್ ಬಳಿ ಲಭ್ಯವಿದ್ದು, ಜಾರಿ ಏಜನ್ಸಿಗಳು ತಮಗೆ ಬೇಕಿರುವಾಗ ಪರಿಶೀಲಿಸಬಹುದೆಂದು ಖಾತರಿಪಡಿಸಿದ್ದಿದೆ.

ಹೆಚ್ಚಿನ ಸಮಯ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಬಿಐ ಅರ್ಜಿ ಸಲ್ಲಿಸಿರುವ ಬಗ್ಗೆ ಸಿಕ್ಕಾಪಟ್ಟೆ ಮೀಮ್ ಗಳು ಹರಿದಾಡತೊಡಗಿವೆ. ಗ್ರಾಹಕರೊಂದಿಗೆ ವ್ಯವಹರಿಸುವಾಗ ಹೇಗೆ ಎಸ್‌ಬಿಐ ತನ್ನದೇ ವಿಶೇಷತೆಯಾದ ನಿಧಾನಗತಿಯನ್ನು ತೋರಿಸುತ್ತದೆಯೊ ಹಾಗೆಯೇ ಸುಪ್ರೀಂ ಕೋರ್ಟ್ ಎದುರಲ್ಲಿಯೂ ತೋರಿಸುತ್ತಿದೆ ಎಂದು ಅವು ಅಣಕಿಸಿವೆ.

ಸರ್ಕಾರಕ್ಕೆ ಮಾಹಿತಿಯನ್ನು ಕೊಡಬೇಕಾದಾಗ ಮಾತ್ರ ಎಸ್‌ಬಿಐ ಬಹಳ ಬೇಗ ಸ್ಪಂದಿಸಿದ್ದಿದೆ. ಕೆಲವೊಮ್ಮೆ ಒಂದು ಫೋನ್ ಕರೆಯಲ್ಲೇ ಅದು ಕೆಲಸ ಮುಗಿಸಿರುವುದೂ ಇದೆ.

ಉದಾಹರಣೆಗೆ, ಒಮ್ಮೆ 2018ರಲ್ಲಿ ರಾಜಕೀಯ ಪಕ್ಷವೊಂದು ತನ್ನ ಶೆಲ್ಫ್ ಲೈಫ್ ಕಳೆದ ಬಾಂಡ್‌ಗಳನ್ನು ನಗದೀಕರಿಸಲು ಎಸ್‌ಬಿಐನ ಹೊಸದಿಲ್ಲಿ ಶಾಖೆಯನ್ನು ಸಂಪರ್ಕಿಸಿತ್ತು. ಆಗ, ಚುನಾವಣಾ ಬಾಂಡ್‌ನ ಕಾಲಾವಧಿಯ ಬಗ್ಗೆ ನೋಡಿಕೊಳ್ಳುವುದಕ್ಕೆಂದೇ ಇರುವ ಮುಂಬೈನಲ್ಲಿನ ಎಸ್‌ಬಿಐ ಕಾರ್ಪೊರೇಟ್ ಕಚೇರಿಯಲ್ಲಿನ ನಿರ್ದಿಷ್ಟ ತಂಡವಾದ ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ಘಟಕಕ್ಕೆ ದೆಹಲಿ ಶಾಖೆ ಕೆಲವೇ ಗಂಟೆಗಳೊಳಗೆ ಮಾಹಿತಿ ನೀಡಿತ್ತು.

ಆ ತಂಡ ಅಲ್ಪಾವಧಿಯಲ್ಲಿಯೇ ಮಾಹಿತಿಯನ್ನು ಸಂಗ್ರಹಿಸಿತ್ತು ಮತ್ತು ಅದರ ಬಗ್ಗೆ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಎಲೆಕ್ಟೋರಲ್ ಬಾಂಡ್ ಕೇವಲ 15 ದಿನಗಳ ಶೆಲ್ಫ್ ಲೈಫ್ ಹೊಂದಿರುತ್ತದೆ ಎಂದು ಕಾನೂನಿನಲ್ಲಿ ಇದ್ದುದರಿಂದ ಎಸ್‌ಬಿಐ ಕಾರ್ಪೊರೇಟ್ ಕಚೇರಿ ಹಣಕಾಸು ಸಚಿವಾಲಯದ ಸಲಹೆ ಕೇಳಿತ್ತು.

ತಕ್ಷಣ ಪ್ರತಿಕ್ರಿಯಿಸಿದ್ದ ಹಣಕಾಸು ಸಚಿವಾಲಯ, ಬಾಂಡ್‌ಗಳು ಅವಧಿ ಮೀರಿದ್ದರೂ ರಾಜಕೀಯ ಪಕ್ಷ ಅವುಗಳನ್ನು ನಗದೀಕರಿಸಲು ಅವಕಾಶ ನೀಡುವಂತೆ ಸೂಚಿಸಿತ್ತು. ಆ ಸೂಚನೆ ಬಳಿಕ ಮಿಂಚಿನ ವೇಗದಲ್ಲಿ ಕಾರ್ಯೋನ್ಮುಖವಾದ ಕಾರ್ಪೊರೇಟ್ ಕಚೇರಿ, ದೆಹಲಿ ಕಚೇರಿಗೆ ಆ ವಿಚಾರವನ್ನು ಮುಟ್ಟಿಸಿತ್ತು.

ಇವೆಲ್ಲವೂ 24 ಗಂಟೆಗಳ ಅವಧಿಯಲ್ಲಿ ನಡೆದಿದ್ದವು ಮತ್ತು ಅವಧಿ ಮೀರಿದ್ದ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಲು ಆ ರಾಜಕೀಯ ಪಕ್ಷಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಹಣಕಾಸು ಸಚಿವಾಲಯವಾಗಲೀ ಅಥವಾ ಎಸ್‌ಬಿಐ ಆಗಲೀ ಅಧಿಕೃತ ದಾಖಲೆಗಳಲ್ಲಿ ಯಾವ ರಾಜಕೀಯ ಪಕ್ಷದ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ಆ ಪಕ್ಷ ತಲಾ 1 ಕೋಟಿಯ 10 ಅವಧಿ ಮೀರಿದ ಬಾಂಡ್‌ಗಳನ್ನು ಹೊಂದಿತ್ತು ಮತ್ತು ದೆಹಲಿಯಲ್ಲಿ ಅವುಗಳನ್ನು ಖರೀದಿಸಿದ ನಿರ್ದಿಷ್ಟ ದಿನಾಂಕಗಳ ಬಗ್ಗೆ ಎಸ್‌ಬಿಐ ಬಳಿ ಮಾಹಿತಿ ಇತ್ತು ಮತ್ತು ಅದನ್ನೇ ಅದು ಹಣಕಾಸು ಸಚಿವಾಲಯದ ಗಮನಕ್ಕೆ ತಂದಿತ್ತು.

ಸ್ವತಂತ್ರ ಸಂಸ್ಥೆಯಾಗಿದ್ದರೂ ಎಸ್‌ಬಿಐ ಹಲವಾರು ಸಂದರ್ಭಗಳಲ್ಲಿ ಸರ್ಕಾರದ ಭಾಗವಾಗಿ ಕಾರ್ಯನಿರ್ವಹಿಸಿದೆ. 2018 ರಲ್ಲಿ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಾಂಡ್‌ಗಳ ಡೇಟಾವನ್ನು ಹಂಚಿಕೊಳ್ಳಲು ಹಣಕಾಸು ಸಚಿವಾಲಯದಿಂದ ಅದು ಅನುಮತಿಯನ್ನು ಪಡೆದುಕೊಂಡಿತ್ತು.

ಎಸ್‌ಬಿಐನ ಈ ಹಿಂದಿನ ಕಾರ್ಯನಿರ್ವಹಣೆಯ ಈ ಇತಿಹಾಸವನ್ನು ಗಮನಿಸಿದರೆ, ಅದು ಈಗ ಸುಪ್ರೀಂ ಕೋರ್ಟ್ ಕೇಳಿರುವ ವಿವರಗಳನ್ನು ಒದಗಿಸಲು ಸಮಯ ಬೇಕೆನ್ನುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

ನಿವೃತ್ತ ಸರ್ಕಾರಿ ಅಧಿಕಾರಿ ಸುಭಾಷ್ ಚಂದ್ರ ಗಾರ್ಗ್ ಅವರಲ್ಲಿ ಬಹುಶಃ ಇದಕ್ಕೆ ಉತ್ತರ ಇರಬಹುದು. ಹಣಕಾಸು ಮತ್ತು ಅರ್ಥಶಾಸ್ತ್ರ ವ್ಯವಹಾರಗಳ ಕಾರ್ಯದರ್ಶಿಯಾಗಿ ಅವರು 2017 ಮತ್ತು 2018ರಲ್ಲಿ ಚುನಾವಣಾ ಬಾಂಡ್‌ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ಪಾತ್ರ ವಹಿಸಿದ್ದರು ಎಂದು ರಿಪೋಟರ್ಸ್‌ ಕಲೆಕ್ಟಿವ್ ಹೇಳಿದೆ.

ಎಸ್‌ಬಿಐ ಹೆಚ್ಚು ಸಮಯ ಕೇಳಲು ನಿರ್ದಿಷ್ಟ ಕಾರಣಗಳಿವೆಯೆ ಎಂದು ಮಾರ್ಚ್ 6ರಂದು ಮೋಜೋ ಸ್ಟೋರಿ ಗಾರ್ಗ್ ಅವರನ್ನು ಕೇಳಿದ್ದಕ್ಕೆ, ಅವರು ಹೇಳಿರುವುದು ಹೀಗೆ:

“ನನಗೆ ಅನ್ನಿಸುವುದು ಇದೊಂದು ಕುಂಟು ನೆಪವಷ್ಟೆ. ಈ ಮಾಹಿತಿಯನ್ನು ಒದಗಿಸಲು ಎಸ್‌ಬಿಐಗೆ ಸಮಯವೇ ಬೇಕಾಗಿಲ್ಲ. ಬಾಂಡ್‌ಗಳ ಖರೀದಿದಾರರು ಮತ್ತು ಬಾಂಡ್‌ಗಳನ್ನು ಸ್ವೀಕರಿಸುವವರ ವಿವರ ಜೋಡಿಸಬೇಕಿದೆ ಎಂದು ಅದು ಹೇಳುತ್ತಿದೆ. ಅದರ ಅಗತ್ಯವೇ ಇಲ್ಲ ಮತ್ತು ಅದಕ್ಕೆ ಸಮಯವೇ ಬೇಕಿಲ್ಲ. ನಾನು ಮೊದಲೇ ಹೇಳಿದಂತೆ, ಪ್ರತಿ ಬಾಂಡ್‌ಗೆ ಒಂದು ಸಂಖ್ಯೆ ಇರುತ್ತದೆ. ಆ ಸಂಖ್ಯೆಯ ಮಾಹಿತಿಯನ್ನು ಬೇರ್ಪಡಿಸಿದರೆ ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಬಹುಶಃ ಹೀಗೊಂದು ಅರ್ಜಿ ಸಲ್ಲಿಸುವಂತೆ ಎಸ್‌ಬಿಐ ಅನ್ನು ಪ್ರಚೋದಿಸಿದಂತೆ ಕಾಣುತ್ತದೆ”.

ಗಾರ್ಗ್ ಅವರಿಗೆ ಖಂಡಿತ ಗೊತ್ತಿರುತ್ತದೆ. ಎಸ್‌ಬಿಐ ಬೇಡಿಕೆಯಂತೆ ಚುನಾವಣಾ ಬಾಂಡ್‌ಗಳಲ್ಲಿ ರಹಸ್ಯ ಸೀರಿಯಲ್ ನಂಬರ್‌ಗಳ ಜೋಡಣೆಯನ್ನು ನೋಡಿಕೊಂಡಿದ್ದವರೇ ಅವರು ಎಂದು ರಿಪೋಟರ್ಸ್‌ ಕಲೆಕ್ಟಿವ್ ತಿಳಿಸಿದೆ.

ಮಾಹಿತಿ ಕೃಪೆ: https://www.reporters-collective.in/

ಇದನ್ನೂ ಓದಿ : ಚುನಾವಣಾ ಬಾಂಡ್ ಮಾಹಿತಿ ಒದಗಿಸದ ಎಸ್‌ಬಿಐ: ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಸುಪ್ರೀಂ ಮೊರೆ ಹೋದ ಎಡಿಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...