Homeಕರ್ನಾಟಕಅಕ್ಯಾಡೆಮಿ ಅಧ್ವಾನ : ಮನೆಹಾಳರು ಯಾರು?

ಅಕ್ಯಾಡೆಮಿ ಅಧ್ವಾನ : ಮನೆಹಾಳರು ಯಾರು?

ನಾವು ಆ ಹುದ್ದೆಗೆ ಅರ್ಹರೇ ಅಲ್ಲ. ಹುದ್ದೆ ಕೇಳಿ ಅರ್ಜಿಯೂ ಹಾಕಿಲ್ಲ. ನಮ್ಮನ್ನು ಏಕೆ ಆಯ್ಕೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ” ಎಂದು ಅಪಸ್ವರ ಎತ್ತಿದ್ದಾರೆ...

- Advertisement -
- Advertisement -

ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತ್ತೀಚೆಗೆ ತನ್ನ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು 16 ವಿವಿಧ ಅಕಾಡೆಮಿ ಹಾಗೂ ಅಧ್ಯಯನ ಕೇಂದ್ರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಿತ್ತು. ಆದರೆ, ಹೀಗೆ ಸರ್ಕಾರದಿಂದ ಅಕಾಡೆಮಿಗೆ ಆಯ್ಕೆಯಾದ ಸದಸ್ಯರ ಪೈಕಿ ಬಹುತೇಕರು ಬಿಜೆಪಿ ಹಾಗೂ ಆರ್‍ಎಸ್‍ಎಸ್ ಭಟ್ಟಂಗಿಗಳು, ಅಕಾಡೆಮಿ ನೇಮಕಾತಿಯಲ್ಲಿ ಸಾಮಾಜಿಕ ಭೌಗೋಳಿಕ ನ್ಯಾಯ ಪಾಲಿಸಿಲ್ಲ ಎಂಬುದು ಕಾಂಗ್ರೆಸ್ ನಾಯಕರ ಆರೋಪ.

ರಾಜ್ಯದ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು-ಸದಸ್ಯರನ್ನು ನೇಮಕ ಮಾಡುವುದು ಹಾಗೂ ಈ ನೇಮಕಾತಿ ಹಿಂದೆಯೇ ಕೆಲವು ಅಪಸ್ವರಗಳು, ಟೀಕೆಟಿಪ್ಪಣಿಗಳು ಕೇಳಿಬರುವುದು ಸಾಹಿತ್ಯ ವಲಯದಲ್ಲಿ ತೀರಾ ಸಾಂಪ್ರದಾಯಿಕ ಮತ್ತು ವಾಡಿಕೆ. ಅಂತಹದ್ದೇ ವಾಡಿಕೆಯ ಟೀಕೆ ಈ ಬಾರಿಯೂ ಕೇಳಿಬಂದದ್ದು ಅಚ್ಚರಿ ಏನಲ್ಲ.

ಅಸಲಿಗೆ ಅಕಾಡೆಮಿ ಹಂತದ ಅಧ್ಯಕ್ಷರು ಸದಸ್ಯರ ಆಯ್ಕೆ ಕುರಿತ ಕಾಂಗ್ರೆಸ್ ನಾಯಕರ ಇಂತಹ ಟೀಕೆಗಳಿಗೆ ನಿಜಕ್ಕೂ ಅಷ್ಟಾಗಿ ಮಾನ್ಯತೆ ಸಿಕ್ಕಿರಲಿಲ್ಲ. ಅಕ್ಷರಶಃ ಕೆಲವು ದಿನ ಪತ್ರಿಕೆಗಳಲ್ಲಿ ಮಾತ್ರ ಈ ಹೇಳಿಕೆ ಮುದ್ರಣವಾಗಿತ್ತು. ಆ ಮುದ್ರಣವೂ ಕೇವಲ ಮೂರು ಸಾಲುಗಳಿಗಷ್ಟೇ ಮೀಸಲಾಗಿತ್ತು.

ಆದರೆ, ಹೀಗೆ ಮೂರು ಸಾಲಿಗೆ ಮಾತ್ರ ಮೀಸಲಾಗಿದ್ದ ಕಾಂಗ್ರೆಸ್ ನಾಯಕರ ಟೀಕೆಗೆ ಮತ್ತಷ್ಟು ಮೈಲೇಜ್ ಕೊಟ್ಟದ್ದು ಸಚಿವ ಸಿ.ಟಿ. ರವಿ ಅವರ ಆ ಒಂದು ಹೇಳಿಕೆ.

ಅಕಾಡೆಮಿಗಳಿಗೆ ಸದಸ್ಯರ ನೇಮಕ ವಿಚಾರ ಕುರಿತಂತೆ ಮಾಧ್ಯಮಗಳ ಎದುರು ಏಕಾಏಕಿ ಹೇಳಿಕೆ ನೀಡಿದ್ದ ಸಿ.ಟಿ. ರವಿ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಅಕಾಡೆಮಿಗಳಿಗೆ ಸದಸ್ಯರನ್ನು ನೇಮಕ ಮಾಡುವಾಗ ಮನೆಹಾಳು ಜನರನ್ನು ದೂರ ಇಡಲಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಕಟ್ಟಲು ನಾವು ಬದ್ಧರಿದ್ದೇವೆ. ಆದರೆ, ಈ ಕ್ಷೇತ್ರವನ್ನು ಕದಡುವ, ಒಡೆಯುವ ಮನಸ್ಥಿತಿ ಇರುವ ಜನರನ್ನು ನೇಮಕ ಮಾಡಿಲ್ಲ. ಈ ಸಲ ಮನೆಹಾಳು ಮಂದಿಗೆ ಅಧಿಕಾರ ಕೊಟ್ಟಿಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸಚಿವರ ಈ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಕಿಡಿ ಹೊತ್ತಿಸಿದೆ. ಈ ಹೇಳಿಕೆಯ ವಿರುದ್ಧ ಕನ್ನಡ ಸಾಹಿತ್ಯ ಲೋಕ ಇದೀಗ ಮುರಿದುಕೊಂಡು ಬಿದ್ದಿದೆ. ಸಿ.ಟಿ. ರವಿ ಅವರ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಪಡಿಸಲಾಗುತ್ತಿದೆ.

ಬಿಜೆಪಿ ಸರ್ಕಾರ ಪ್ರಸ್ತುತ ಅಕಾಡೆಮಿ ಸದಸ್ಯರ ಆಯ್ಕೆ ವಿಚಾರದಲ್ಲಿ ಮನೆಹಾಳರನ್ನು ಅಧಿಕಾರದ ವ್ಯಾಪ್ತಿಗೆ ಬಿಟ್ಟುಕೊಂಡಿಲ್ಲ ಎಂದಾದರೆ ಈವರೆಗೆ ಅಕಾಡೆಮಿಯಲ್ಲಿ ಕೆಲಸ ನಿರ್ವಹಿಸಿದವರು ಮನೆಹಾಳು ಜನರೇ? ಸರಿ, ಸಚಿವರು ಹೇಳಿದಂತೆ ಹಿಂದೆಲ್ಲ ನೇಮಕಗೊಂಡ ಮನೆಹಾಳರ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ಅಂತ ನೋಡೋಣ. ಬೇರೆ ಅಕ್ಯಾಡೆಮಿಗಳ ಮಾತಿರಲಿ, ಸಾಹಿತ್ಯ ಅಕಾಡೆಮಿಯನ್ನೇ ಪರಿಗಣಿಸುವುದಾದರೆ ಅ.ನ.ಕೃ, ಕೆ.ವಿ.ಶಂಕರೇಗೌಡ್ರು, ಹಾ.ಮಾ.ನಾಯಕ್, ನಿತ್ಯೋತ್ಸವ ಕವಿ ನಿಸಾರ್ ಅಹಮದ್, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಗಿರಡ್ಡಿ ಗೋವಿಂದರಾಜರು, ಗೀತಾ ನಾಗಭೂಷಣ…. ಇಂತವರೆಲ್ಲ ಅಧ್ಯಕ್ಷರಾಗಿದ್ದಂತವರು. ಇಲ್ಲಿಯವರೆಗೆ ಇವರನ್ನೆಲ್ಲ ಕನ್ನಡದ, ಕರ್ನಾಟಕದ ಹೆಮ್ಮೆ ಎಂದೇ ನಾವೇ ಭಾವಿಸಿದ್ದೆವು. ಆದರೆ ಸಚಿವರ ಗೀತೋಪದೇಶದಿಂದ ಇವರೆಲ್ಲ ಅನಾಮತ್ತು `ಮನೆಹಾಳರ’ ಪಟ್ಟಿಗೆ ಸೇರಿದಂತಾಗಿದೆ. ಇಂತಹ ಹೇಳಿಕೆಗಳ ಮೂಲಕ ಸಚಿವ ಸಿ.ಟಿ. ರವಿ ಕನ್ನಡ ಸಾಹಿತಿಗಳನ್ನು ಅವಮಾನಿಸಿದ್ದಾರೆ ಎಂಬುದು ಟೀಕಾಕಾರದ ಪ್ರಬಲ ವಾದ.

ಆದರೆ, ಸಚಿವ ಸಿ.ಟಿ. ರವಿ ಹಾಗೂ ಅವರ ಟೀಕಾಕಾರರ ನಡುವಿನ ವಾಗ್ಯುದ್ಧ ಜೋರಾಗುತ್ತಿದ್ದಂತೆ ಬ್ಯಾರಿ ಅಕಾಡೆಮಿಯಿಂದ ಕೇಳಿಬರುತ್ತಿರುವ ಮಾತುಗಳು ಸರ್ಕಾರಕ್ಕೆ ಮತ್ತು ಸಚಿವರಿಗೆ ಮತ್ತಷ್ಟು ಇರಿಸುಮುರಿಸಿಗೆ ಕಾರಣವಾಗಿದೆ.

ಅಸಲಿಗೆ ಬ್ಯಾರಿ ಅಕಾಡೆಮಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿರುವ ಡಾ. ಮುನೀರ್ ಬಾವ, ಫಝಲ್ ಆಸೈಗೋಳಿ ಮತ್ತು ಸಿರಾಜುದ್ದೀನ್ ಮುಡಿಪು ಎಂಬ ಮೂವರೂ ಸಾಹಿತಿಗಳಲ್ಲ, ಕವಿಗಳೂ ಅಲ್ಲ, ಅಲ್ಲದೆ ಇವರಿಗೆ ಬ್ಯಾರಿ ಭಾಷೆಯೂ ಬರಲ್ಲ. ಈ ಮೂವರು ಇತ್ತೀಚೆಗೆ ಸ್ವತಃ ಮಾಧ್ಯಮಗಳ ಎದುರು ಬಹಿರಂಗ ಹೇಳಿಕೆ ನೀಡಿದ್ದು, “ನಾವು ಆ ಹುದ್ದೆಗೆ ಅರ್ಹರೇ ಅಲ್ಲ. ಹುದ್ದೆ ಕೇಳಿ ಅರ್ಜಿಯೂ ಹಾಕಿಲ್ಲ. ನಮ್ಮನ್ನು ಏಕೆ ಆಯ್ಕೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ” ಎಂದು ಅಪಸ್ವರ ಎತ್ತಿದ್ದಾರೆ. ಅಲ್ಲದೆ, ಈ ಹುದ್ದೆಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವಂತೆಯೂ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದ್ದಾರೆ.

ಬ್ಯಾರಿ ಅಕಾಡೆಮಿಯಿಂದ ಕೇಳಿಬರುತ್ತಿರುವ ಈ ಮಾತುಗಳು ಹಾಗೂ ಗೊಂದಲ ಅಸಲಿಗೆ ಮನೆಹಾಳರು ಯಾರು? ಎಂಬ ಕುರಿತು ಅಕಾಡೆಮಿಗಳಿಗೆ ಸದಸ್ಯರನ್ನು ನೇಮಕ ಮಾಡಿದ ರಾಜ್ಯ ಸರ್ಕಾರ ಕಡೆಗೆ ಬೊಟ್ಟು ಮಾಡುತ್ತಿದೆ. ಅಸಲಿಗೆ ಬ್ಯಾರಿ ಅಕಾಡೆಮಿ ಕೆಲಸವೇನು? ಇತಿಹಾಸವೇನು? ಇಲ್ಲಿದೆ ಡೀಟೈಲ್ಸ್

ಏನದು ಬ್ಯಾರಿ ಅಕಾಡೆಮಿ ರಾದ್ಧಾಂತ?
ಕನ್ನಡ ರಾಜ್ಯದ ನಾಡಭಾಷೆಯಾದರೂ, ಕರ್ನಾಟಕ ಎಂಬುದು ವಿವಿಧ ಭಾಷೆ ಮತ್ತು ಶ್ರೀಮಂತ ಸಂಸ್ಕೃತಿಗಳ ಕಣಜ. ಪ್ರತಿ 40 ಕಿಮಿ ಗೂ ಭಾಷೆ ಮತ್ತು ಸಂಸ್ಕೃತಿಯಲ್ಲಿರುವ ಬದಲಾವಣೆ, ಜನರ ಬದುಕುವ ಕ್ರಮದಲ್ಲಿನ ವಿಭಿನ್ನತೆಯನ್ನು ನಾವಿಲ್ಲಿ ಕಾಣಬಹುದು.ಭಾಗಶಃ ಭಾರತದ ಬೇರೆ ಯಾವ ರಾಜ್ಯಕ್ಕೂ ಇಲ್ಲದಷ್ಟು ವಿವಿಧತೆಯ ಶ್ರೀಮಂತಿಕೆಯನ್ನು ಹೊಂದಿರುವ ರಾಜ್ಯ ಕರ್ನಾಟಕ ಎಂದರೆ ತಪ್ಪಾಗಲಾರದು.

ರಾಜ್ಯದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಅಕಾಡೆಮಿ ರಚಿಸಲಾಗಿದೆ. ಕರ್ನಾಟಕ ಸಾಹಿತ್ಯ ಪರಿಷತ್ ಮೂಲಕ ಭಾಷೆಯ ಅಭಿವೃದ್ಧಿಗೆ, ಸಾಹಿತ್ಯ ಕೃಷಿಗೆ ಸಾಕಷ್ಟು ಪ್ರೇರಣೆ ನೀಡಲಾಗುತ್ತಿದೆ. ಇದೇ ರೀತಿ ಕನ್ನಡದ ಸಹೋದರ ಭಾಷೆಯಾದ ತುಳು, ಕೊಂಕಣಿ, ಕೊಡವ ಭಾಷೆಗಳ ಅಭಿವೃದ್ಧಿಗೂ ಕರ್ನಾಟಕ ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಅಕಾಡೆಮಿ ರಚಿಸಲಾಗಿದೆ.
ಒಂದು ಭಾಷೆಯ ಅಭಿವೃದ್ಧಿಗೆ ಅಕಾಡೆಮಿ ರಚಿಸಲಾಗಿದೆ ಎಂದಾದರೆ ಆ ಭಾಷೆಗೆ ಸರ್ಕಾರದಿಂದ ಮಾನ್ಯತೆ ಸಿಕ್ಕಿದೆ ಎಂದೇ ಅರ್ಥ. ಕೊಂಕಣಿ, ಕೊಡವ ಹಾಗೂ ತುಳು ಭಾಷೆಯಂತೆ ಕರಾವಳಿ ಭಾಗದಲ್ಲಿ ಪ್ರಚಲಿತವಿರುವ ಮತ್ತೊಂದು ಭಾಷೆಯೇ ಬ್ಯಾರಿ. ಉರ್ದು ಬಾಷೆಗೂ ಅಕಾಡೆಮಿ ರಚಿಸಿರುವ ರಾಜ್ಯ ಸರ್ಕಾರ ತೀರಾ ಇತ್ತೀಚೆಗೆ ಬ್ಯಾರಿ ಭಾಷೆಗೂ ಒಂದು ಅಕಾಡೆಮಿ ರಚಿಸಿತ್ತು.
ಕರಾವಳಿ ಹಾಗೂ ಕೊಡಗು ಭಾಗದಲ್ಲಿ ಬಹುಪಾಲು ಇಸ್ಲಾಂ ಜನರಿಂದ ಬಳಕೆಯಾಗುತ್ತಿರುವ ಭಾಷೆಗಳಲ್ಲಿ ಬ್ಯಾರಿ ಎಂಬುದು ಚಿರಪರಿಚಿತ ಭಾಷೆ. ಕನ್ನಡ ಭಾಷೆಯಷ್ಟೇ ಪ್ರಾಚೀನ ಇತಿಹಾಸ ಹೊಂದಿರುವ ಬ್ಯಾರಿ ಭಾಷೆಯಲ್ಲಿ ಜನಪದ ಸಾಹಿತ್ಯದ ಭಂಡಾರವೇ ಇದೆ. ಬ್ಯಾರಿ ಜನರ ಮದುವೆ ಸಮಾರಂಭಗಳಲ್ಲಿ, ಹಬ್ಬದ ದಿನಗಳಲ್ಲಿ, ಧಾರ್ಮಿಕ ದಿನಾಚರಣೆಗಳ ಸಂದರ್ಭದಲ್ಲಿ ಹೆಂಗಸರು, ಮಕ್ಕಳು ಹಾಗೂ ಪುರುಷರು ಬ್ಯಾರಿ ಜನಪದ ಸಾಹಿತ್ಯವನ್ನು ಹಾಡಿ ಕುಣಿದು ಸಂತೋಷ ಪಡುತ್ತಾರೆ. ಆದರೆ, ಇಂತಹ ಬ್ಯಾರಿ ಜನಪದ ಸಾಹಿತ್ಯ ಇಂದು ನವ ನಾಗರಿಕತೆಯ ಸೆಳೆತಕ್ಕೆ ಸಿಲುಕಿ ಅಳಿವಿನ ಅಂಚಿಗೆ ಸರಿದಿದೆ.

 

 

ಹೀಗಾಗಿ ಇಂತಹ ಶ್ರೀಮಂತ ಜನಪದ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಬ್ಯಾರಿ ಸಮಾಜದ ಪ್ರತಿಭಾವಂತ ಲೇಖಕರು, ಲೇಖಕಿಯರ ಪ್ರತಿಭೆಯನ್ನು ಪೋಷಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಈ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಬ್ಯಾರಿ ಅಕಾಡೆಮಿಯನ್ನು ಸ್ಥಾಪಿಸಿತ್ತು. ಇದರ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ.

ಕಳೆದ ಒಂದು ದಶಕದಿಂದ ಬ್ಯಾರಿ ಭಾಷೆ, ಸಾಹಿತ್ಯ ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬ್ಯಾರಿ ಸಂಸ್ಕೃತಿಗೆ ಪೂರಕವಾಗಿ ಬ್ಯಾರಿಗಳ ವಿಶಿಷ್ಟ ಹಬ್ಬಗಳಾದ ಪೆರ್ನಾಲ್, ಸಂದೋಲ ಹಬ್ಬಗಳನ್ನು ಬ್ಯಾರಿ ಜನರ ನಡುವೆ ಸಡಗರದಿಂದ ಆಚರಿಸಲಾಗುತ್ತಿದೆ. ಬ್ಯಾರಿ ಜಾನಪದ ಸಂಗೀತ, ನಾಟಕಗಳಿಗೆ ಸಂಬಂಧಿಸಿದಂತೆ ಉತ್ಸವ, ಸಮಾವೇಶ, ಸಮ್ಮೇಳನ, ದಫ್ ಸ್ಪರ್ಧೆ, ಬ್ಯಾರಿ ನಾಟಕ ಸ್ಪರ್ಧೆ ಮತ್ತು ಬ್ಯಾರಿ ಜಾನಪದ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧೆಡೆಗಳಲ್ಲಿ ಬ್ಯಾರಿ ಅಕಾಡೆಮಿ ವತಿಯಿಂದ ಆಯೋಜಿಸಲಾಗುತ್ತಿದೆ.

ಅಳಿವಿನ ಅಂಚಿನಲ್ಲಿರುವ ಬ್ಯಾರಿ ಸಂಸ್ಕೃತಿಯನ್ನು ಭಾಷೆಯನ್ನು ಉಳಿಸಿಕೊಳ್ಳಲು ಇಂತಹ ಹತ್ತಾರು ಕಾರ್ಯಕ್ರಮಗಳ ಅಗತ್ಯ ಇರುವಂತೆ, ಇಂತಹ ಅಕಾಡೆಮಿಗಳಿಗೆ ಭಾಷೆಯ ಮೇಲೆ ಪ್ರೀತಿ ಇರುವ ಹಾಗೂ ಈ ಕ್ಷೇತ್ರದಲ್ಲಿ ವಿಫುಲ ಕೃಷಿ ಮಾಡಿರುವ ವ್ಯಕ್ತಿಗಳ ಅಗತ್ಯತೆಯೂ ಇದೆ. ಅಧಿಕಾರ ವಲಯದಲ್ಲಿ ಅಂತವರು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಆದರೆ, ಇಂತಹ ಅಕಾಡೆಮಿಗಳ ಜವಾಬ್ದಾರಿಯುತ ಹುದ್ದೆಗೆ ಆಡಳಿತದ ಚುಕ್ಕಾಣಿ ಹಿಡಿದಿರುವವರು ಅಷ್ಟೇ ಬೇಜವಾಬ್ದಾರಿಯಿಂದ ಬ್ಯಾರಿ ಭಾಷೆಯ ಕುರಿತು ಅರಿವಿಲ್ಲದ, ಸಾಹಿತಿಗಳಲ್ಲದ ಹಾಗೂ ಕೊನೆಗೆ ಈ ಹುದ್ದೆಯನ್ನು ಕೋರಿ ಅರ್ಜಿಯನ್ನೂ ಹಾಕದ ಅನಾಮಧೇಯ ಜನರನ್ನು ಆ ಸ್ಥಾನಗಳಿಗೆ ತಂದು ಕೂರಿಸಿರುವುದು ಯಾವ ಪುರುಷಾರ್ಥದ ಮನೆ ಉದ್ಧಾರಕ ಕೆಲಸ? ಎಂಬುದು ಪ್ರಸ್ತುತ ಸಾಹಿತ್ಯ ವಲಯದಲ್ಲಿ ಸಚಿವ ಸಿ.ಟಿ. ರವಿ ವಿರುದ್ಧ ಕೇಳಿಬರುತ್ತಿರುವ ಕಟುಪ್ರಶ್ನೆ. ಆದರೆ, ಈ ಕುರಿತ ಟೀಕೆಗೆ ಅವರು ಉತ್ತರಿಸಬೇಕು ಅಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...