Homeಅಂಕಣಗಳುಅದಾನಿ ಸಮೂಹದ ಬಗ್ಗೆ ಎದ್ದಿರುವ ಆರೋಪಗಳಿಗೆ ಉತ್ತರಿಸುವ ಉತ್ತರದಾಯಿತ್ವ ಯಾರದ್ದು?

ಅದಾನಿ ಸಮೂಹದ ಬಗ್ಗೆ ಎದ್ದಿರುವ ಆರೋಪಗಳಿಗೆ ಉತ್ತರಿಸುವ ಉತ್ತರದಾಯಿತ್ವ ಯಾರದ್ದು?

- Advertisement -
- Advertisement -

ಹತ್ತಿರದ ಭವಿಷ್ಯದಲ್ಲಿ ಉಂಟಾಗಬಹುದಾದ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಐಟಿ ಉದ್ಯಮದಲ್ಲಿ ಆಗುತ್ತಿರುವ ಉದ್ಯೋಗ ನಷ್ಟವನ್ನು ವರದಿ ಮಾಡುವುದರಲ್ಲಿ ಕಳೆದ ವಾರ ಮಾಧ್ಯಮಗಳು ನಿರತವಾಗಿದ್ದವು. ಇಕನಾಮಿಕ್ ರಿಸೆಷನ್ ಸಮಯದಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡುವ ಸುದ್ದಿಗಳನ್ನು ಮರೆಮಾಚುವಂತೆ ಜನವರಿ 24 ಮಂಗಳವಾರ ಹಿಂಡೆನ್‌ಬರ್ಗ್ ಹೆಸರು ಎಲ್ಲೆಡೆ ಕೇಳತೊಡಗಿತು. ’ಹಿಂಡೆನ್‌ಬರ್ಗ್’ ಮತ್ತು ’ಶಾರ್ಟ್ ಸೆಲ್ಲಿಂಗ್’ ಎಂಬ ಪದಗುಚ್ಛಗಳನ್ನು ತಾವು ಬಳಸುವ ಸರ್ಚ್ ಎಂಜಿನ್‌ಗಳ ಮೂಲಕ ಹುಡುಕುವುದರಲ್ಲಿ ಜನ ನಿರತರಾದರು. ಎರಡು ದಿನಗಳ ಹಿಂದಷ್ಟೇ 12,000 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ವಿಷಯವನ್ನು ಗೂಗಲ್ ಸಿಇಒ ಸುಂದರ್ ಪಿಚೈ ಘೋಷಿಸಿದ್ದರು. ಆದರೆ ಅವರು ಮಾತ್ರ ತಮ್ಮ ವೇತನವನ್ನು ಎಷ್ಟೋ ಪಟ್ಟು ಹೆಚ್ಚಿಸಿಕೊಂಡಿದ್ದರು! ಅದು ಬೇರೆಯದೇ ಕಥೆ. ಆದರೆ ಭಾರತದ ಮಟ್ಟಿಗಾದರೂ ಬಹುಶಃ ಗೂಗಲ್ ಸರ್ಚ್ ಎಂಜಿನ್ ತನ್ನ ಉದ್ಯೋಗಿಗಳ ವಜಾದ ಬಗ್ಗೆ ಹುಡುಕುವ ರಿಕ್ವೆಸ್ಟ್‌ಗಳಿಗಿಂತಲೂ ಹೆಚ್ಚಿನ ಬೇಡಿಕೆ ’ಹಿಂಡೆನ್‌ಬರ್ಗ್’ ಬಗ್ಗೆ ಹುಡುಕುವುದಕ್ಕೆ ಪಡೆದಿರುತ್ತದೆ ಎಂದು ಸುಲಭವಾಗಿ ಊಹಿಸಬಹುದು!

ನಾಥನ್ ಆಂಡೆರ್ಸನ್ ಅವರು ಹುಟ್ಟುಹಾಕಿದ ಈ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಕಾರ್ಪೊರೆಟ್ ಸಂಸ್ಥೆಗಳಲ್ಲಿನ ’ಮನುಷ್ಯ ನಿರ್ಮಿತ ದುರಂತ’ಗಳನ್ನು ಪತ್ತೆ ಹಚ್ಚುವುದಕ್ಕಾಗಿ ಸಂಶೋಧನೆ ನಡೆಸುತ್ತೇವೆ ಎಂದು ಬಿಂಬಿಸಿಕೊಳ್ಳುತ್ತದೆ. ಕಾರ್ಪೊರೆಟ್ ಸಂಸ್ಥೆಗಳು ಲಾಭ ಗಳಿಸಲು, ಮಾರುಕಟ್ಟೆಯಲ್ಲಿ ತಮ್ಮ ಅಧಿಪತ್ಯ ಸಾಧಿಸಲು ನಡೆಸುವ ಧಗಾಕೋರತನವನ್ನು ತಮ್ಮ ಸಂಶೋಧನೆಯ ಮೂಲಕ ಪತ್ತೆಹಚ್ಚಿ, ’ಶಾರ್ಟ್ ಸೆಲ್ಲಿಂಗ್’ ಎಂಬ ಸ್ಟಾಕ್ ಮಾರ್ಕೆಟ್ ವಿಧಾನದ ಮೂಲಕ ಅದನ್ನು ಪಣಕ್ಕಿಟ್ಟು ಅಪಾರ ಲಾಭ ಗಳಿಸುವ ಸಂಸ್ಥೆಯಿದು. ಸ್ಟಾಕ್ ಮಾರ್ಕೆಟ್‌ನಲ್ಲಿ ನಡೆಯುವ ಫ್ರಾಡ್‌ಗಳನ್ನು ಪತ್ತೆಹಚ್ಚುವ ಆ ಮೂಲಕ ಹೂಡಿಕೆದಾರರಿಗೆ ಎಚ್ಚರಿಕೆಯನ್ನು ನೀಡಿ, ತಾನೂ ಲಾಭ ಗಳಿಸುವ ಸಂಸ್ಥೆ. ಯಾವುದಾದರೂ ದೈತ್ಯ ಸಂಸ್ಥೆ ತಪ್ಪು ಮಾರ್ಗಗಳ ಮೂಲಕ ಬೆಳೆದಿದ್ದರೆ ಹಿಂಡೆನ್‌ಬರ್ಗ್ ಅದರ ಬಗ್ಗೆ ಸಂಶೋಧನೆ ಮಾಡಿ ವರದಿ ಬಿಡುಗಡೆ ಮಾಡುತ್ತದೆ. ಆ ಸಮಯದಲ್ಲಿ ಸ್ಟಾಕ್ ಬ್ರೋಕರ್‌ಗಳ ಮೂಲಕ ಆ ಸಂಸ್ಥೆಯ ಅಪಾರ ಶೇರುಗಳನ್ನು ಕಡ ತೆಗೆದುಕೊಂಡು ಮಾರುತ್ತದೆ. ಆದರೆ ಕಡದ ಒಪ್ಪಂದ ಇಂತಿಷ್ಟು ದಿನಗಳಲ್ಲಿ ಆ ಸ್ಟಾಕು/ಶೇರ್‌ಗಳನ್ನು ಬ್ರೋಕರೇಜ್ ಸಂಸ್ಥೆಗೆ ಹಿಂದಿರುಗಿಸುವುದಾಗಿರುತ್ತದೆ. ಹಿಂತಿರುಗಿಸುವಷ್ಟು ದಿನ ಬಡ್ಡಿಯನ್ನು ಕಟ್ಟುತ್ತಾ ಹೋಗಬೇಕು. ತಾನು ಯಾವ ಸಂಸ್ಥೆಯ ವಿರುದ್ಧ ವರದಿ ಬಿಡುಗಡೆ ಮಾಡುತ್ತದೋ ಅಂತಹ ಸಂಸ್ಥೆಯ ಶೇರುಗಳ ಮೌಲ್ಯ ಮಾರ್ಕೆಟ್‌ನಲ್ಲಿ ಕುಸಿದರೆ ಅವನ್ನು ಕೊಂಡು ಬ್ರೋಕರೇಜ್ ಸಂಸ್ಥೆಗೆ ಹಿಂದಿರುಗಿಸುತ್ತದೆ. ಕುಸಿದ ಮೌಲ್ಯದ ಅಪಾರ ಲಾಭವನ್ನು ’ಶಾರ್ಟ್ ಸೆಲ್ಲಿಂಗ್’ ಮೂಲಕ ತನ್ನದಾಗಿಸಿಕೊಳ್ಳುತ್ತದೆ. ಅಕಸ್ಮಾತ್ ತಮ್ಮ ವರದಿಯ ಹೊರತಾಗಿಯೂ ಸ್ಟಾಕ್ ಮೌಲ್ಯ ಹೆಚ್ಚಾದರೆ ನಷ್ಟ ಅನುಭವಿಸುವ ರಿಸ್ಕ್‌ಅನ್ನು ಇಂತಹ ಸಂಸ್ಥೆಗಳು ಅನುಭವಿಸುತ್ತವೆ.

ಹಲವು ಕಾರ್ಪೊರೆಟ್ ಸಂಸ್ಥೆಗಳ ವಿರುದ್ಧ ಇಂತಹ ರಿಪೋರ್ಟ್‌ಗಳನ್ನು ಸಲ್ಲಿಸಿ ಯಶಸ್ವಿಯಾಗಿರುವ ಹಿಂಡನ್‌ಬರ್ಗ್ ಈ ಬಾರಿ ಆಯ್ದುಕೊಂಡಿದ್ದು ಕಳೆದ ನಾಲ್ಕೈದು ವರ್ಷಗಳಿಂದ ಭಾರತೀಯ ಮಾಧ್ಯಮಗಳಲ್ಲಿ ಮಿಂಚುತ್ತಿರುವ ಭಾರತದ/ಏಶಿಯಾದ ಅತಿ ದೊಡ್ಡ ಶ್ರೀಮಂತ ಎಂದು ಕರೆಸಿಕೊಂಡ ಗೌತಮ್ ಅದಾನಿ ಸಮೂಹ ಸಂಸ್ಥೆಯನ್ನು. ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿ, 106 ಪುಟಗಳ ತನ್ನ ವರದಿಯಲ್ಲಿ ಅದಾನಿ ಸಮೂಹದ ಸಂಸ್ಥೆಗಳಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಅದಕ್ಕೆ ಸಾಕ್ಷ್ಯಗಳನ್ನು ನೀಡಿ 88 ಪ್ರಶ್ನೆಗಳನ್ನು ಕೇಳಿತ್ತು. ಅಷ್ಟೇ ಅಲ್ಲದೆ ಕಾರ್ಪೊರೆಟ್ ಇತಿಹಾಸದಲ್ಲಿ ನಡೆದ ಮಹಾ ಮೋಸವಿದು ಎಂದೂ ಬಣ್ಣಿಸಿತ್ತು! ಮೊದಲಿಗೆ ಈ ಸಂಸ್ಥೆಯ ಕ್ರೆಡಿಬಿಲಿಟಿಯನ್ನೇ ಪ್ರಶ್ನಿಸಿದ್ದ ಅದಾನಿ ಸಮೂಹ, ಅನಂತರ ಇದಕ್ಕೆ 400 ಪುಟಗಳಿಗೂ ಮೀರಿದ ಉತ್ತರವನ್ನೇನೋ ನೀಡಿತು. ಆದರೆ ಈ ಸಮಯದಲ್ಲಿ ಅದಾನಿ ಸಮೂಹದ ಹಲವು ಸಂಸ್ಥೆಗಳ ಶೇರು ಮೌಲ್ಯ ಸುಮಾರು 20%ಗೂ ಹೆಚ್ಚು ಕುಸಿದಾಗಿತ್ತು. ಆ ಮೂಲಕ ಅದಾನಿಯವರ ಸಂಪತ್ತಿನಲ್ಲಿ ಕೂಡ ಕುಸಿತ ಕಂಡು ಅವರು ಶ್ರೀಮಂತಿಕೆಯ ಪಟ್ಟಿಯಲ್ಲಿ ಕೂಡ ಕೆಳಗಿಳಿದಿದ್ದರು. ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಯಂತೂ ಭಾರಿ ಕುಸಿತ ಕಂಡು ಆರು ದಿನಗಳಲ್ಲಿ ಅದರ ಶೇರುಗಳ ಮೌಲ್ಯ 40%ಗೂ ಹೆಚ್ಚು ಕುಸಿದಿತ್ತು. ಅದಾನಿ ಸಮೂಹ ಕೊಟ್ಟ ಉತ್ತರವನ್ನು ಹಲವು ಅಂಶಗಳಲ್ಲಿ ಹಿಂಡೆನ್‌ಬರ್ಗ್ ತಿರಸ್ಕರಿಸಿದೆ. ಉದಾಹರಣೆಗೆ: ಅದಾನಿ ಸಮೂಹಕ್ಕೆ ವಿನೋದ್ ಅದಾನಿಗೆ (ಗೌತಮ್ ಅದಾನಿ ಸಹೋದರ) ಸಂಬಂಧಿಸಿದ ಮಾರಿಶಸ್‌ನಲ್ಲಿರುವ ಶೆಲ್ ಕಂಪನಿಯಿಂದ ಬಿಲಿಯನ್‌ಗಟ್ಟಲೆ ಯುಎಸ್ ಡಾಲರ್ ಹರಿದುಬಂದಿರುವ ಬಗ್ಗೆ ಎತ್ತಿದ್ದ ಪ್ರಶ್ನೆಗೆ, ಅದಾನಿ ಸಮೂಹ “ನಮ್ಮ ಹೂಡಿಕೆಯ ಮೂಲ”ದ ಬಗ್ಗೆ ನಮಗೆ ಅರಿವಿರುವ ಅವಶ್ಯಕತೆಯಿಲ್ಲ ಎಂಬ ಜಾರಿಕೆಯ ಉತ್ತರ ನೀಡಿದೆ. ಶೆಲ್ ಸಂಸ್ಥೆಗಳಿಂದ ಹಿಡಿದು, ಕ್ರೆಡಿಬಲ್ ಅಲ್ಲದ ಕೌಟುಂಬಿಕ ವ್ಯಕ್ತಿಗಳನ್ನು ಸಂಸ್ಥೆಯಲ್ಲಿ ಅತ್ಯುನ್ನತ ಹುದ್ದೆ ನೀಡಿರುವ ಬಗ್ಗೆ, ಶೇರ್ ಒಡೆತನವನ್ನು ನಿಯಂತ್ರಿಸಿ ಅವುಗಳ ಮೌಲ್ಯವನ್ನು ಮ್ಯಾನಿಪುಲೇಟ್ ಮಾಡಿರುವ ಬಗ್ಗೆ, ಆಡಿಟರ್‌ಗಳ ವಯೋಮಾನಕ್ಕೆ ಸಂಬಂಧಿಸಿದಂತೆ ಇಂತಹ ದೊಡ್ಡ ಸಂಸ್ಥೆಯನ್ನು ಆಡಿಟ್ ಮಾಡಲು ಇರುವ ಅವರ ಅನುಭವದ ಬಗ್ಗೆ- ಹೀಗೇ ಹತ್ತಾರು ಪ್ರಶ್ನೆಗಳಿಗೆ ಅದಾನಿ ಸಮೂಹ ಕೊಟ್ಟಿರುವ ಉತ್ತರ ಸಮರ್ಪಕವಾಗಿಲ್ಲ ಎನ್ನುತ್ತದೆ ಹಿಂಡೆನ್‌ಬರ್ಗ್. (ಇದರ ಬಗೆಗಿನ ವಿವರವಾದ ಸುದ್ದಿಗಳನ್ನು ನಾನುಗೌರಿ.ಕಾಮ್‌ನಲ್ಲಿ ಓದಬಹುದು).

ಇದನ್ನೂ ಓದಿ: ಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

ಯಾವುದೋ ಒಂದು ಖಾಸಗಿ ಸಂಸ್ಥೆಯ ಕರ್ಮಕಾಂಡಗಳ ಬಗ್ಗೆ ದೇಶದ ನಾಗರಿಕರು ಯಾಕೆ ತಲೆಕೆಡಿಸಿಕೊಳ್ಳಬೇಕು? ಅದೂ ಶೇರು ಮಾರುಕಟ್ಟೆ ಉಳ್ಳವರ ಸ್ವತ್ತಾಗಿ ಇರುವಾಗ ಸಾಮಾನ್ಯ ಜನರಿಗೆ ಇದರಿಂದಾಗುವುದೇನು? ಅದಾನಿ ತಮ್ಮ ವಿರುದ್ಧದ ಆರೋಪಗಳಿಗೆ “ರಾಷ್ಟ್ರೀಯತೆ”ಯನ್ನು ಗುರಾಣಿ ಮಾಡಿ, ಭಾರತದ ವಿರುದ್ಧ ಹಿಂಡನ್‌ಬರ್ಗ್ ನಡೆಸಿರುವ ಹಿಕಮತ್ತು ಇದು ಎಂಬ ರೀತಿಯಲ್ಲಿ ಉತ್ತರಿಸಿದ್ದಾರೆ! ಹಿಂಡನ್‌ಬರ್ಗ್ ಹಿಕಮತ್ತು ಏನಾದರೂ ಇರಲಿ, ಅವರು ಎತ್ತಿರುವ ಪ್ರಶ್ನೆಗಳಿಗೆ ಅದಾನಿ, ಶೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ SEBI ಮತ್ತು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಲು ಎಸ್‌ಬಿಐ ಹಾಗೂ ಎಲ್‌ಐಸಿಯಂತಹ ಸಾರ್ವಜನಿಕ ಸಂಸ್ಥೆಗಳಿಗೆ ಅವಕಾಶ ಕೊಟ್ಟ್ಟಿರುವ ಒಕ್ಕೂಟ ಸರ್ಕಾರ ಉತ್ತರಿಸಿ ಉತ್ತರದಾಯಿತ್ವ ತೋರಬೇಕಿದೆ.

ಹಿಂಡನ್‌ಬರ್ಗ್ ಸಂಶೋಧನಾ ಸಂಸ್ಥೆಯ ವರದಿ ಬಹಿರಂಗಗೊಳ್ಳುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಸಂಸದೆ ಮೊಹುವಾ ಮೊಯಿತ್ರಾ ಹಲವು ತಿಂಗಳುಗಳ ಹಿಂದೆಯೇ ಅದಾನಿ ಸಮೂಹ ಸಂಸ್ಥೆಗಳು ನಡೆಸುತ್ತಿರಬಹುದಾದ ಅಕ್ರಮಗಳ ಬಗ್ಗೆ ಆರೋಪಿಸಿ ತನಿಖೆ ನಡೆಸಲು ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ಹಂಚಿಕೊಂಡಿದ್ದರು. ಈಗ ಈ ಜಟಾಪಟಿ ಆದ ನಂತರ ಕೂಡ ಪತ್ರ ಬರೆದು, SEBI ತನಿಖೆ ನಡೆಸಿತೇ? ತನಿಖೆ ನಡೆಸಿದ್ದರೆ ಅದರ ಪ್ರಗತಿಯೇನು ಎಂದು ಪ್ರಶ್ನಿಸಿದ್ದಾರೆ. ಇದೇ ಸಮಯದಲ್ಲಿ ಹಿಂಡೆನ್‌ಬರ್ಗ್ ಆರೋಪದ ನಂತರವೂ ತಮ್ಮ ಕಂಪನಿಗಳ ಎಫ್‌ಪಿಒ (ಫಾಲೋ ಆನ್ ಪಬ್ಲಿಕ್ ಆಫರ್) ಸಬ್‌ಸ್ಕ್ರಿಪ್ಷನ್ ನಿರೀಕ್ಷೆಗೂ ಮೀರಿ ಪೂರ್ಣಗೊಂಡಿದೆ ಎಂದು ಅದಾನಿ ಸಮೂಹ ಬೀಗಿದೆ. ಇಲ್ಲಿ ಕೂಡ ದುಬೈ ಮೂಲದ ’ನಿಗೂಢ’ ಕಂಪನಿ ಹೆಚ್ಚಿನ ಹೂಡಿಕೆ ಮಾಡಿರುವುದು, ಅದಾನಿಯವರ ಶೆಲ್ ಕಂಪನಿಗಳ ತಂತ್ರಗಾರಿಕೆಯಂತೆಯೇ ಇದೆಯೆಂದು ಆರೋಪಿಸಿ ಮೊಹುವಾ ಅವರು ಟ್ವೀಟ್ ಮಾಡಿದ್ದಾರೆ. (ಎರಡು ದಿನಗಳ ನಂತರ ಎಫ್‌ಪಿಒ ಹಿಂದಕ್ಕೆ ಪಡೆದು ಹೂಡಿಕೆದಾರರ ಹಣವನ್ನು ಹಿಂದಿರುಗಿಸುವುದಾಗಿ ಅದಾನಿ ಘೋಷಿಸಿದರು). ಇಷ್ಟೆಲ್ಲಾ ಆರೋಪಗಳ ನಡುವೆ, ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಶೇರುಗಳ ಮೌಲ್ಯ ಕುಸಿದು ಅಸ್ಥಿರತೆಯ ಕಡೆಗೆ ವಾಲಿದ ನಂತರವೂ SEBIಯಾಗಲೀ ಸರ್ಕಾರವಾಗಲೀ ಪ್ರಶ್ನಾರ್ಥ ಸಂಸ್ಥೆಯ ಮೇಲೆ ತನಿಖೆ ನಡೆಸುವ ಯಾವ ಇರಾದೆಯನ್ನೂ ವ್ಯಕ್ತಪಡಿಸಿಲ್ಲ. ಪ್ರಧಾನಿ ಮೋದಿ ಮತ್ತು ಅದಾನಿ ಅತ್ಯುತ್ತಮ ಸಂಬಂಧ ಹೊಂದಿರುವುದು ಇದಕ್ಕೆ ಕಾರಣವೇ ಎಂಬ ದಟ್ಟ ಸಂಶಯ ಎದ್ದಿದೆ.

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಕೆ-47 ಕನ್ನಡ ಚಲನಚಿತ್ರದ ತುಣುಕೊಂಡು ವೈರಲ್ ಆಗಿದೆ. ಈ ಸಿನಿಮಾದ ಒಂದು ದೃಶ್ಯದಲ್ಲಿ ಶಿವರಾಜ್‌ಕುಮಾರ್ ನಟಿಸಿರುವ ಪಾತ್ರವನ್ನು ನೂರಾರು ಪೊಲೀಸರು ಸುತ್ತುವರಿದು ಬಂದೂಕನ್ನು ಅವರತ್ತ ತಿರುಗಿಸಿ ನಿಂತಿದ್ದಾರೆ. ಆ ಪಾತ್ರ ತನ್ನ ಪಕ್ಕದಲ್ಲಿರುವ ರಾಷ್ಟ್ರಧ್ವಜವನ್ನು ಕಸಿದು ಮೈಗೆ ಸುತ್ತಿಕೊಂಡು, ಪೊಲೀಸರು ಶೂಟ್ ಮಾಡದಂತೆ ಅದನ್ನು ಗುರಾಣಿಯಾಗಿ ಬಳಸಿ ಓಡಿಹೋಗುತ್ತದೆ. ಅದಾನಿ ಕೂಡ ತಮ್ಮ ವಿರುದ್ಧ ಎದ್ದಿರುವ ಪ್ರಶ್ನೆಗಳಿಗೆ ಇಂತಹದೇ ಮಾರ್ಗವನ್ನು ಬಳಸುತ್ತಿದ್ದಾರೆ. ಅಕ್ರಮ ಆರೋಪವನ್ನು ಭಾರತದ ವಿರುದ್ಧ ನಡೆಸಿದ ದಾಳಿ ಎಂದು ತಿರುಚಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ಎಸ್‌ಬಿಐ ಮತ್ತು ಎಲ್‌ಐಸಿಗಳ ಮೂಲಕ ತನ್ನ ಸಂಸ್ಥೆಗೆ ಸಾಲವಾಗಿ ಮತ್ತು ಹೂಡಿಕೆಯಾಗಿ ತೆಗೆದುಕೊಂಡಿರುವ ವ್ಯಕ್ತಿಗೆ ಹೆಚ್ಚಿನ ಜವಾಬ್ದಾರಿಯಿರಬೇಕಾಗುತ್ತದೆ. ಎಲ್‌ಐಸಿ ವಿಮಾ ಸಂಸ್ಥೆಯಾಗಿದ್ದು ಇಷ್ಟು ರಿಸ್ಕ್ ಉಳ್ಳ ಶೇರುಗಳ ಮೇಲೆ ಹೂಡಿಕೆ ಮಾಡಿದ್ದರ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಶೇರುಗಳ ಮೌಲ್ಯಗಳು ಕುಸಿಯುತ್ತಿದ್ದರೂ ಹೆಚ್ಚಿನ ಶೇರುಗಳನ್ನು ಕೊಂಡು ಅದಾನಿ ಸಂಸ್ಥೆಯನ್ನು ಉಳಿಸಲು ಪ್ರಯತ್ನಿಸಿರುವ ಆರೋಪಗಳಿವೆ. ಯಾರನ್ನು ಪಣಕ್ಕಿಟ್ಟು? ತಾವು ದುಡಿದ ಸಣ್ಣಪುಟ್ಟ ಹಣವನ್ನು ಇಂತಹ ಸಾರ್ವಜನಿಕ ಸಂಸ್ಥೆಗಳಲ್ಲಿ ಇರಿಸಿರುವ ಕೋಟ್ಯಂತರ ಜನರನ್ನು!

ಮೊಹುವಾ ಮೊಯಿತ್ರಾ

ಶೇರು ಮೌಲ್ಯವನ್ನು ಅಕ್ರಮವಾಗಿ ಉಬ್ಬಿಸಿ ಅದನ್ನು ಎಸ್‌ಬಿಐನಂತಹ ಬ್ಯಾಂಕಿನಲ್ಲಿ ಅಡವಿಟ್ಟು ಅದಾನಿ ಸಮೂಹ ಸಾಲ ಪಡೆದಿರುವ ಬಗ್ಗೆ ಆರೋಪಗಳಿವೆ. ಈಗ ಶೇರು ಮೌಲ್ಯ ಕುಸಿದರೆ ಆ ಸಾಲಕ್ಕೆ ಯಾರು ಜವಾಬ್ದಾರಿ? ಹೆಚ್ಚಿನ ಶೇರುಗಳನ್ನು ಕೊಲಾಟರಲ್ ಕೇಳಿ ಅದಾನಿ ಸಮೂಹಕ್ಕೆ ನೋಟಿಸ್ ನೀಡಿರುವ ಯಾವುದೇ ವರದಿಗಳಿಲ್ಲ! ಬಡಬಗ್ಗರಿಗೆ ಹಲವು ರೀತಿಯ ಶುಲ್ಕಗಳನ್ನು ವಿಧಿಸುವ ಈ ಬ್ಯಾಂಕುಗಳು ಶ್ರೀಮಂತರ ಹಗರಣಗಳಿಗೆ ಕಣ್ಣುಮುಚ್ಚಿ ಕೂರುವುದೇಕೆ? ಇವೆಲ್ಲಾ ಪ್ರಶ್ನೆಗಳಿಗೆ ಅಧಿಕಾರಿಗಳು ಮತ್ತು ಸರ್ಕಾರ ಕೂಡಲೇ ಉತ್ತರಿಸಬೇಕಿದೆ. ಅದಾನಿ ಸಮೂಹದ ವಿರುದ್ಧ ಎದ್ದಿರುವ ಆರೋಪಗಳನ್ನು ಕೂಡಲೇ ತನಿಖೆ ಮಾಡಿ 140 ಕೋಟಿ ನಾಗರಿಕರ ಮುಂದೆ ಸತ್ಯ ಹೇಳುವ ಜವಾಬ್ದಾರಿ ಸರ್ಕಾರಕ್ಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...