Homeಅಂಕಣಗಳುಅದಾನಿ ಸಮೂಹದ ಬಗ್ಗೆ ಎದ್ದಿರುವ ಆರೋಪಗಳಿಗೆ ಉತ್ತರಿಸುವ ಉತ್ತರದಾಯಿತ್ವ ಯಾರದ್ದು?

ಅದಾನಿ ಸಮೂಹದ ಬಗ್ಗೆ ಎದ್ದಿರುವ ಆರೋಪಗಳಿಗೆ ಉತ್ತರಿಸುವ ಉತ್ತರದಾಯಿತ್ವ ಯಾರದ್ದು?

- Advertisement -
- Advertisement -

ಹತ್ತಿರದ ಭವಿಷ್ಯದಲ್ಲಿ ಉಂಟಾಗಬಹುದಾದ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಐಟಿ ಉದ್ಯಮದಲ್ಲಿ ಆಗುತ್ತಿರುವ ಉದ್ಯೋಗ ನಷ್ಟವನ್ನು ವರದಿ ಮಾಡುವುದರಲ್ಲಿ ಕಳೆದ ವಾರ ಮಾಧ್ಯಮಗಳು ನಿರತವಾಗಿದ್ದವು. ಇಕನಾಮಿಕ್ ರಿಸೆಷನ್ ಸಮಯದಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡುವ ಸುದ್ದಿಗಳನ್ನು ಮರೆಮಾಚುವಂತೆ ಜನವರಿ 24 ಮಂಗಳವಾರ ಹಿಂಡೆನ್‌ಬರ್ಗ್ ಹೆಸರು ಎಲ್ಲೆಡೆ ಕೇಳತೊಡಗಿತು. ’ಹಿಂಡೆನ್‌ಬರ್ಗ್’ ಮತ್ತು ’ಶಾರ್ಟ್ ಸೆಲ್ಲಿಂಗ್’ ಎಂಬ ಪದಗುಚ್ಛಗಳನ್ನು ತಾವು ಬಳಸುವ ಸರ್ಚ್ ಎಂಜಿನ್‌ಗಳ ಮೂಲಕ ಹುಡುಕುವುದರಲ್ಲಿ ಜನ ನಿರತರಾದರು. ಎರಡು ದಿನಗಳ ಹಿಂದಷ್ಟೇ 12,000 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ವಿಷಯವನ್ನು ಗೂಗಲ್ ಸಿಇಒ ಸುಂದರ್ ಪಿಚೈ ಘೋಷಿಸಿದ್ದರು. ಆದರೆ ಅವರು ಮಾತ್ರ ತಮ್ಮ ವೇತನವನ್ನು ಎಷ್ಟೋ ಪಟ್ಟು ಹೆಚ್ಚಿಸಿಕೊಂಡಿದ್ದರು! ಅದು ಬೇರೆಯದೇ ಕಥೆ. ಆದರೆ ಭಾರತದ ಮಟ್ಟಿಗಾದರೂ ಬಹುಶಃ ಗೂಗಲ್ ಸರ್ಚ್ ಎಂಜಿನ್ ತನ್ನ ಉದ್ಯೋಗಿಗಳ ವಜಾದ ಬಗ್ಗೆ ಹುಡುಕುವ ರಿಕ್ವೆಸ್ಟ್‌ಗಳಿಗಿಂತಲೂ ಹೆಚ್ಚಿನ ಬೇಡಿಕೆ ’ಹಿಂಡೆನ್‌ಬರ್ಗ್’ ಬಗ್ಗೆ ಹುಡುಕುವುದಕ್ಕೆ ಪಡೆದಿರುತ್ತದೆ ಎಂದು ಸುಲಭವಾಗಿ ಊಹಿಸಬಹುದು!

ನಾಥನ್ ಆಂಡೆರ್ಸನ್ ಅವರು ಹುಟ್ಟುಹಾಕಿದ ಈ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಕಾರ್ಪೊರೆಟ್ ಸಂಸ್ಥೆಗಳಲ್ಲಿನ ’ಮನುಷ್ಯ ನಿರ್ಮಿತ ದುರಂತ’ಗಳನ್ನು ಪತ್ತೆ ಹಚ್ಚುವುದಕ್ಕಾಗಿ ಸಂಶೋಧನೆ ನಡೆಸುತ್ತೇವೆ ಎಂದು ಬಿಂಬಿಸಿಕೊಳ್ಳುತ್ತದೆ. ಕಾರ್ಪೊರೆಟ್ ಸಂಸ್ಥೆಗಳು ಲಾಭ ಗಳಿಸಲು, ಮಾರುಕಟ್ಟೆಯಲ್ಲಿ ತಮ್ಮ ಅಧಿಪತ್ಯ ಸಾಧಿಸಲು ನಡೆಸುವ ಧಗಾಕೋರತನವನ್ನು ತಮ್ಮ ಸಂಶೋಧನೆಯ ಮೂಲಕ ಪತ್ತೆಹಚ್ಚಿ, ’ಶಾರ್ಟ್ ಸೆಲ್ಲಿಂಗ್’ ಎಂಬ ಸ್ಟಾಕ್ ಮಾರ್ಕೆಟ್ ವಿಧಾನದ ಮೂಲಕ ಅದನ್ನು ಪಣಕ್ಕಿಟ್ಟು ಅಪಾರ ಲಾಭ ಗಳಿಸುವ ಸಂಸ್ಥೆಯಿದು. ಸ್ಟಾಕ್ ಮಾರ್ಕೆಟ್‌ನಲ್ಲಿ ನಡೆಯುವ ಫ್ರಾಡ್‌ಗಳನ್ನು ಪತ್ತೆಹಚ್ಚುವ ಆ ಮೂಲಕ ಹೂಡಿಕೆದಾರರಿಗೆ ಎಚ್ಚರಿಕೆಯನ್ನು ನೀಡಿ, ತಾನೂ ಲಾಭ ಗಳಿಸುವ ಸಂಸ್ಥೆ. ಯಾವುದಾದರೂ ದೈತ್ಯ ಸಂಸ್ಥೆ ತಪ್ಪು ಮಾರ್ಗಗಳ ಮೂಲಕ ಬೆಳೆದಿದ್ದರೆ ಹಿಂಡೆನ್‌ಬರ್ಗ್ ಅದರ ಬಗ್ಗೆ ಸಂಶೋಧನೆ ಮಾಡಿ ವರದಿ ಬಿಡುಗಡೆ ಮಾಡುತ್ತದೆ. ಆ ಸಮಯದಲ್ಲಿ ಸ್ಟಾಕ್ ಬ್ರೋಕರ್‌ಗಳ ಮೂಲಕ ಆ ಸಂಸ್ಥೆಯ ಅಪಾರ ಶೇರುಗಳನ್ನು ಕಡ ತೆಗೆದುಕೊಂಡು ಮಾರುತ್ತದೆ. ಆದರೆ ಕಡದ ಒಪ್ಪಂದ ಇಂತಿಷ್ಟು ದಿನಗಳಲ್ಲಿ ಆ ಸ್ಟಾಕು/ಶೇರ್‌ಗಳನ್ನು ಬ್ರೋಕರೇಜ್ ಸಂಸ್ಥೆಗೆ ಹಿಂದಿರುಗಿಸುವುದಾಗಿರುತ್ತದೆ. ಹಿಂತಿರುಗಿಸುವಷ್ಟು ದಿನ ಬಡ್ಡಿಯನ್ನು ಕಟ್ಟುತ್ತಾ ಹೋಗಬೇಕು. ತಾನು ಯಾವ ಸಂಸ್ಥೆಯ ವಿರುದ್ಧ ವರದಿ ಬಿಡುಗಡೆ ಮಾಡುತ್ತದೋ ಅಂತಹ ಸಂಸ್ಥೆಯ ಶೇರುಗಳ ಮೌಲ್ಯ ಮಾರ್ಕೆಟ್‌ನಲ್ಲಿ ಕುಸಿದರೆ ಅವನ್ನು ಕೊಂಡು ಬ್ರೋಕರೇಜ್ ಸಂಸ್ಥೆಗೆ ಹಿಂದಿರುಗಿಸುತ್ತದೆ. ಕುಸಿದ ಮೌಲ್ಯದ ಅಪಾರ ಲಾಭವನ್ನು ’ಶಾರ್ಟ್ ಸೆಲ್ಲಿಂಗ್’ ಮೂಲಕ ತನ್ನದಾಗಿಸಿಕೊಳ್ಳುತ್ತದೆ. ಅಕಸ್ಮಾತ್ ತಮ್ಮ ವರದಿಯ ಹೊರತಾಗಿಯೂ ಸ್ಟಾಕ್ ಮೌಲ್ಯ ಹೆಚ್ಚಾದರೆ ನಷ್ಟ ಅನುಭವಿಸುವ ರಿಸ್ಕ್‌ಅನ್ನು ಇಂತಹ ಸಂಸ್ಥೆಗಳು ಅನುಭವಿಸುತ್ತವೆ.

ಹಲವು ಕಾರ್ಪೊರೆಟ್ ಸಂಸ್ಥೆಗಳ ವಿರುದ್ಧ ಇಂತಹ ರಿಪೋರ್ಟ್‌ಗಳನ್ನು ಸಲ್ಲಿಸಿ ಯಶಸ್ವಿಯಾಗಿರುವ ಹಿಂಡನ್‌ಬರ್ಗ್ ಈ ಬಾರಿ ಆಯ್ದುಕೊಂಡಿದ್ದು ಕಳೆದ ನಾಲ್ಕೈದು ವರ್ಷಗಳಿಂದ ಭಾರತೀಯ ಮಾಧ್ಯಮಗಳಲ್ಲಿ ಮಿಂಚುತ್ತಿರುವ ಭಾರತದ/ಏಶಿಯಾದ ಅತಿ ದೊಡ್ಡ ಶ್ರೀಮಂತ ಎಂದು ಕರೆಸಿಕೊಂಡ ಗೌತಮ್ ಅದಾನಿ ಸಮೂಹ ಸಂಸ್ಥೆಯನ್ನು. ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿ, 106 ಪುಟಗಳ ತನ್ನ ವರದಿಯಲ್ಲಿ ಅದಾನಿ ಸಮೂಹದ ಸಂಸ್ಥೆಗಳಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಅದಕ್ಕೆ ಸಾಕ್ಷ್ಯಗಳನ್ನು ನೀಡಿ 88 ಪ್ರಶ್ನೆಗಳನ್ನು ಕೇಳಿತ್ತು. ಅಷ್ಟೇ ಅಲ್ಲದೆ ಕಾರ್ಪೊರೆಟ್ ಇತಿಹಾಸದಲ್ಲಿ ನಡೆದ ಮಹಾ ಮೋಸವಿದು ಎಂದೂ ಬಣ್ಣಿಸಿತ್ತು! ಮೊದಲಿಗೆ ಈ ಸಂಸ್ಥೆಯ ಕ್ರೆಡಿಬಿಲಿಟಿಯನ್ನೇ ಪ್ರಶ್ನಿಸಿದ್ದ ಅದಾನಿ ಸಮೂಹ, ಅನಂತರ ಇದಕ್ಕೆ 400 ಪುಟಗಳಿಗೂ ಮೀರಿದ ಉತ್ತರವನ್ನೇನೋ ನೀಡಿತು. ಆದರೆ ಈ ಸಮಯದಲ್ಲಿ ಅದಾನಿ ಸಮೂಹದ ಹಲವು ಸಂಸ್ಥೆಗಳ ಶೇರು ಮೌಲ್ಯ ಸುಮಾರು 20%ಗೂ ಹೆಚ್ಚು ಕುಸಿದಾಗಿತ್ತು. ಆ ಮೂಲಕ ಅದಾನಿಯವರ ಸಂಪತ್ತಿನಲ್ಲಿ ಕೂಡ ಕುಸಿತ ಕಂಡು ಅವರು ಶ್ರೀಮಂತಿಕೆಯ ಪಟ್ಟಿಯಲ್ಲಿ ಕೂಡ ಕೆಳಗಿಳಿದಿದ್ದರು. ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಯಂತೂ ಭಾರಿ ಕುಸಿತ ಕಂಡು ಆರು ದಿನಗಳಲ್ಲಿ ಅದರ ಶೇರುಗಳ ಮೌಲ್ಯ 40%ಗೂ ಹೆಚ್ಚು ಕುಸಿದಿತ್ತು. ಅದಾನಿ ಸಮೂಹ ಕೊಟ್ಟ ಉತ್ತರವನ್ನು ಹಲವು ಅಂಶಗಳಲ್ಲಿ ಹಿಂಡೆನ್‌ಬರ್ಗ್ ತಿರಸ್ಕರಿಸಿದೆ. ಉದಾಹರಣೆಗೆ: ಅದಾನಿ ಸಮೂಹಕ್ಕೆ ವಿನೋದ್ ಅದಾನಿಗೆ (ಗೌತಮ್ ಅದಾನಿ ಸಹೋದರ) ಸಂಬಂಧಿಸಿದ ಮಾರಿಶಸ್‌ನಲ್ಲಿರುವ ಶೆಲ್ ಕಂಪನಿಯಿಂದ ಬಿಲಿಯನ್‌ಗಟ್ಟಲೆ ಯುಎಸ್ ಡಾಲರ್ ಹರಿದುಬಂದಿರುವ ಬಗ್ಗೆ ಎತ್ತಿದ್ದ ಪ್ರಶ್ನೆಗೆ, ಅದಾನಿ ಸಮೂಹ “ನಮ್ಮ ಹೂಡಿಕೆಯ ಮೂಲ”ದ ಬಗ್ಗೆ ನಮಗೆ ಅರಿವಿರುವ ಅವಶ್ಯಕತೆಯಿಲ್ಲ ಎಂಬ ಜಾರಿಕೆಯ ಉತ್ತರ ನೀಡಿದೆ. ಶೆಲ್ ಸಂಸ್ಥೆಗಳಿಂದ ಹಿಡಿದು, ಕ್ರೆಡಿಬಲ್ ಅಲ್ಲದ ಕೌಟುಂಬಿಕ ವ್ಯಕ್ತಿಗಳನ್ನು ಸಂಸ್ಥೆಯಲ್ಲಿ ಅತ್ಯುನ್ನತ ಹುದ್ದೆ ನೀಡಿರುವ ಬಗ್ಗೆ, ಶೇರ್ ಒಡೆತನವನ್ನು ನಿಯಂತ್ರಿಸಿ ಅವುಗಳ ಮೌಲ್ಯವನ್ನು ಮ್ಯಾನಿಪುಲೇಟ್ ಮಾಡಿರುವ ಬಗ್ಗೆ, ಆಡಿಟರ್‌ಗಳ ವಯೋಮಾನಕ್ಕೆ ಸಂಬಂಧಿಸಿದಂತೆ ಇಂತಹ ದೊಡ್ಡ ಸಂಸ್ಥೆಯನ್ನು ಆಡಿಟ್ ಮಾಡಲು ಇರುವ ಅವರ ಅನುಭವದ ಬಗ್ಗೆ- ಹೀಗೇ ಹತ್ತಾರು ಪ್ರಶ್ನೆಗಳಿಗೆ ಅದಾನಿ ಸಮೂಹ ಕೊಟ್ಟಿರುವ ಉತ್ತರ ಸಮರ್ಪಕವಾಗಿಲ್ಲ ಎನ್ನುತ್ತದೆ ಹಿಂಡೆನ್‌ಬರ್ಗ್. (ಇದರ ಬಗೆಗಿನ ವಿವರವಾದ ಸುದ್ದಿಗಳನ್ನು ನಾನುಗೌರಿ.ಕಾಮ್‌ನಲ್ಲಿ ಓದಬಹುದು).

ಇದನ್ನೂ ಓದಿ: ಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

ಯಾವುದೋ ಒಂದು ಖಾಸಗಿ ಸಂಸ್ಥೆಯ ಕರ್ಮಕಾಂಡಗಳ ಬಗ್ಗೆ ದೇಶದ ನಾಗರಿಕರು ಯಾಕೆ ತಲೆಕೆಡಿಸಿಕೊಳ್ಳಬೇಕು? ಅದೂ ಶೇರು ಮಾರುಕಟ್ಟೆ ಉಳ್ಳವರ ಸ್ವತ್ತಾಗಿ ಇರುವಾಗ ಸಾಮಾನ್ಯ ಜನರಿಗೆ ಇದರಿಂದಾಗುವುದೇನು? ಅದಾನಿ ತಮ್ಮ ವಿರುದ್ಧದ ಆರೋಪಗಳಿಗೆ “ರಾಷ್ಟ್ರೀಯತೆ”ಯನ್ನು ಗುರಾಣಿ ಮಾಡಿ, ಭಾರತದ ವಿರುದ್ಧ ಹಿಂಡನ್‌ಬರ್ಗ್ ನಡೆಸಿರುವ ಹಿಕಮತ್ತು ಇದು ಎಂಬ ರೀತಿಯಲ್ಲಿ ಉತ್ತರಿಸಿದ್ದಾರೆ! ಹಿಂಡನ್‌ಬರ್ಗ್ ಹಿಕಮತ್ತು ಏನಾದರೂ ಇರಲಿ, ಅವರು ಎತ್ತಿರುವ ಪ್ರಶ್ನೆಗಳಿಗೆ ಅದಾನಿ, ಶೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ SEBI ಮತ್ತು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಲು ಎಸ್‌ಬಿಐ ಹಾಗೂ ಎಲ್‌ಐಸಿಯಂತಹ ಸಾರ್ವಜನಿಕ ಸಂಸ್ಥೆಗಳಿಗೆ ಅವಕಾಶ ಕೊಟ್ಟ್ಟಿರುವ ಒಕ್ಕೂಟ ಸರ್ಕಾರ ಉತ್ತರಿಸಿ ಉತ್ತರದಾಯಿತ್ವ ತೋರಬೇಕಿದೆ.

ಹಿಂಡನ್‌ಬರ್ಗ್ ಸಂಶೋಧನಾ ಸಂಸ್ಥೆಯ ವರದಿ ಬಹಿರಂಗಗೊಳ್ಳುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಸಂಸದೆ ಮೊಹುವಾ ಮೊಯಿತ್ರಾ ಹಲವು ತಿಂಗಳುಗಳ ಹಿಂದೆಯೇ ಅದಾನಿ ಸಮೂಹ ಸಂಸ್ಥೆಗಳು ನಡೆಸುತ್ತಿರಬಹುದಾದ ಅಕ್ರಮಗಳ ಬಗ್ಗೆ ಆರೋಪಿಸಿ ತನಿಖೆ ನಡೆಸಲು ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ಹಂಚಿಕೊಂಡಿದ್ದರು. ಈಗ ಈ ಜಟಾಪಟಿ ಆದ ನಂತರ ಕೂಡ ಪತ್ರ ಬರೆದು, SEBI ತನಿಖೆ ನಡೆಸಿತೇ? ತನಿಖೆ ನಡೆಸಿದ್ದರೆ ಅದರ ಪ್ರಗತಿಯೇನು ಎಂದು ಪ್ರಶ್ನಿಸಿದ್ದಾರೆ. ಇದೇ ಸಮಯದಲ್ಲಿ ಹಿಂಡೆನ್‌ಬರ್ಗ್ ಆರೋಪದ ನಂತರವೂ ತಮ್ಮ ಕಂಪನಿಗಳ ಎಫ್‌ಪಿಒ (ಫಾಲೋ ಆನ್ ಪಬ್ಲಿಕ್ ಆಫರ್) ಸಬ್‌ಸ್ಕ್ರಿಪ್ಷನ್ ನಿರೀಕ್ಷೆಗೂ ಮೀರಿ ಪೂರ್ಣಗೊಂಡಿದೆ ಎಂದು ಅದಾನಿ ಸಮೂಹ ಬೀಗಿದೆ. ಇಲ್ಲಿ ಕೂಡ ದುಬೈ ಮೂಲದ ’ನಿಗೂಢ’ ಕಂಪನಿ ಹೆಚ್ಚಿನ ಹೂಡಿಕೆ ಮಾಡಿರುವುದು, ಅದಾನಿಯವರ ಶೆಲ್ ಕಂಪನಿಗಳ ತಂತ್ರಗಾರಿಕೆಯಂತೆಯೇ ಇದೆಯೆಂದು ಆರೋಪಿಸಿ ಮೊಹುವಾ ಅವರು ಟ್ವೀಟ್ ಮಾಡಿದ್ದಾರೆ. (ಎರಡು ದಿನಗಳ ನಂತರ ಎಫ್‌ಪಿಒ ಹಿಂದಕ್ಕೆ ಪಡೆದು ಹೂಡಿಕೆದಾರರ ಹಣವನ್ನು ಹಿಂದಿರುಗಿಸುವುದಾಗಿ ಅದಾನಿ ಘೋಷಿಸಿದರು). ಇಷ್ಟೆಲ್ಲಾ ಆರೋಪಗಳ ನಡುವೆ, ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಶೇರುಗಳ ಮೌಲ್ಯ ಕುಸಿದು ಅಸ್ಥಿರತೆಯ ಕಡೆಗೆ ವಾಲಿದ ನಂತರವೂ SEBIಯಾಗಲೀ ಸರ್ಕಾರವಾಗಲೀ ಪ್ರಶ್ನಾರ್ಥ ಸಂಸ್ಥೆಯ ಮೇಲೆ ತನಿಖೆ ನಡೆಸುವ ಯಾವ ಇರಾದೆಯನ್ನೂ ವ್ಯಕ್ತಪಡಿಸಿಲ್ಲ. ಪ್ರಧಾನಿ ಮೋದಿ ಮತ್ತು ಅದಾನಿ ಅತ್ಯುತ್ತಮ ಸಂಬಂಧ ಹೊಂದಿರುವುದು ಇದಕ್ಕೆ ಕಾರಣವೇ ಎಂಬ ದಟ್ಟ ಸಂಶಯ ಎದ್ದಿದೆ.

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಕೆ-47 ಕನ್ನಡ ಚಲನಚಿತ್ರದ ತುಣುಕೊಂಡು ವೈರಲ್ ಆಗಿದೆ. ಈ ಸಿನಿಮಾದ ಒಂದು ದೃಶ್ಯದಲ್ಲಿ ಶಿವರಾಜ್‌ಕುಮಾರ್ ನಟಿಸಿರುವ ಪಾತ್ರವನ್ನು ನೂರಾರು ಪೊಲೀಸರು ಸುತ್ತುವರಿದು ಬಂದೂಕನ್ನು ಅವರತ್ತ ತಿರುಗಿಸಿ ನಿಂತಿದ್ದಾರೆ. ಆ ಪಾತ್ರ ತನ್ನ ಪಕ್ಕದಲ್ಲಿರುವ ರಾಷ್ಟ್ರಧ್ವಜವನ್ನು ಕಸಿದು ಮೈಗೆ ಸುತ್ತಿಕೊಂಡು, ಪೊಲೀಸರು ಶೂಟ್ ಮಾಡದಂತೆ ಅದನ್ನು ಗುರಾಣಿಯಾಗಿ ಬಳಸಿ ಓಡಿಹೋಗುತ್ತದೆ. ಅದಾನಿ ಕೂಡ ತಮ್ಮ ವಿರುದ್ಧ ಎದ್ದಿರುವ ಪ್ರಶ್ನೆಗಳಿಗೆ ಇಂತಹದೇ ಮಾರ್ಗವನ್ನು ಬಳಸುತ್ತಿದ್ದಾರೆ. ಅಕ್ರಮ ಆರೋಪವನ್ನು ಭಾರತದ ವಿರುದ್ಧ ನಡೆಸಿದ ದಾಳಿ ಎಂದು ತಿರುಚಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ಎಸ್‌ಬಿಐ ಮತ್ತು ಎಲ್‌ಐಸಿಗಳ ಮೂಲಕ ತನ್ನ ಸಂಸ್ಥೆಗೆ ಸಾಲವಾಗಿ ಮತ್ತು ಹೂಡಿಕೆಯಾಗಿ ತೆಗೆದುಕೊಂಡಿರುವ ವ್ಯಕ್ತಿಗೆ ಹೆಚ್ಚಿನ ಜವಾಬ್ದಾರಿಯಿರಬೇಕಾಗುತ್ತದೆ. ಎಲ್‌ಐಸಿ ವಿಮಾ ಸಂಸ್ಥೆಯಾಗಿದ್ದು ಇಷ್ಟು ರಿಸ್ಕ್ ಉಳ್ಳ ಶೇರುಗಳ ಮೇಲೆ ಹೂಡಿಕೆ ಮಾಡಿದ್ದರ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಶೇರುಗಳ ಮೌಲ್ಯಗಳು ಕುಸಿಯುತ್ತಿದ್ದರೂ ಹೆಚ್ಚಿನ ಶೇರುಗಳನ್ನು ಕೊಂಡು ಅದಾನಿ ಸಂಸ್ಥೆಯನ್ನು ಉಳಿಸಲು ಪ್ರಯತ್ನಿಸಿರುವ ಆರೋಪಗಳಿವೆ. ಯಾರನ್ನು ಪಣಕ್ಕಿಟ್ಟು? ತಾವು ದುಡಿದ ಸಣ್ಣಪುಟ್ಟ ಹಣವನ್ನು ಇಂತಹ ಸಾರ್ವಜನಿಕ ಸಂಸ್ಥೆಗಳಲ್ಲಿ ಇರಿಸಿರುವ ಕೋಟ್ಯಂತರ ಜನರನ್ನು!

ಮೊಹುವಾ ಮೊಯಿತ್ರಾ

ಶೇರು ಮೌಲ್ಯವನ್ನು ಅಕ್ರಮವಾಗಿ ಉಬ್ಬಿಸಿ ಅದನ್ನು ಎಸ್‌ಬಿಐನಂತಹ ಬ್ಯಾಂಕಿನಲ್ಲಿ ಅಡವಿಟ್ಟು ಅದಾನಿ ಸಮೂಹ ಸಾಲ ಪಡೆದಿರುವ ಬಗ್ಗೆ ಆರೋಪಗಳಿವೆ. ಈಗ ಶೇರು ಮೌಲ್ಯ ಕುಸಿದರೆ ಆ ಸಾಲಕ್ಕೆ ಯಾರು ಜವಾಬ್ದಾರಿ? ಹೆಚ್ಚಿನ ಶೇರುಗಳನ್ನು ಕೊಲಾಟರಲ್ ಕೇಳಿ ಅದಾನಿ ಸಮೂಹಕ್ಕೆ ನೋಟಿಸ್ ನೀಡಿರುವ ಯಾವುದೇ ವರದಿಗಳಿಲ್ಲ! ಬಡಬಗ್ಗರಿಗೆ ಹಲವು ರೀತಿಯ ಶುಲ್ಕಗಳನ್ನು ವಿಧಿಸುವ ಈ ಬ್ಯಾಂಕುಗಳು ಶ್ರೀಮಂತರ ಹಗರಣಗಳಿಗೆ ಕಣ್ಣುಮುಚ್ಚಿ ಕೂರುವುದೇಕೆ? ಇವೆಲ್ಲಾ ಪ್ರಶ್ನೆಗಳಿಗೆ ಅಧಿಕಾರಿಗಳು ಮತ್ತು ಸರ್ಕಾರ ಕೂಡಲೇ ಉತ್ತರಿಸಬೇಕಿದೆ. ಅದಾನಿ ಸಮೂಹದ ವಿರುದ್ಧ ಎದ್ದಿರುವ ಆರೋಪಗಳನ್ನು ಕೂಡಲೇ ತನಿಖೆ ಮಾಡಿ 140 ಕೋಟಿ ನಾಗರಿಕರ ಮುಂದೆ ಸತ್ಯ ಹೇಳುವ ಜವಾಬ್ದಾರಿ ಸರ್ಕಾರಕ್ಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...