Homeಕರ್ನಾಟಕಸ್ಪೀಕರ್ ಕೇವಲ ಮೂರು ಜನರನ್ನು ಮಾತ್ರ ಅನರ್ಹ ಮಾಡಿದ್ದೇಕೆ? ಯಡ್ಡಿ ಸಿಎಂ ಹಾದಿಗೆ ಅಡ್ಡಿ ಯಾರು...

ಸ್ಪೀಕರ್ ಕೇವಲ ಮೂರು ಜನರನ್ನು ಮಾತ್ರ ಅನರ್ಹ ಮಾಡಿದ್ದೇಕೆ? ಯಡ್ಡಿ ಸಿಎಂ ಹಾದಿಗೆ ಅಡ್ಡಿ ಯಾರು ಗೊತ್ತಾ?

- Advertisement -
- Advertisement -

ಸ್ಪೀಕರ್ ಕೇವಲ ಮೂರು ಜನರನ್ನು ಮಾತ್ರ ಅನರ್ಹ ಮಾಡಿದ್ದೇಕೆ? ಯಡ್ಡಿ ಸಿಎಂ ಹಾದಿಗೆ ಅಡ್ಡಿ ಯಾರು? ಇಂದು ಸಂಜೆ ಸ್ಪೀಕರ್ ರಮೇಶ್ ಕುಮಾರ್ ರವರು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್.ಶಂಕರ್ ರವರನ್ನು ಮಾತ್ರ 15ನೇ ವಿಧಾನಸಭಾ ಅವಧಿ ಮುಗಿಯುವ 2023ರವರೆಗೂ ಅವರ ಶಾಸಕ ಸ್ಥಾನಕ್ಕೆ ಅನರ್ಹ ಮಾಡಿದ ನಂತರ ಈ ಮೇಲಿನ ಪ್ರಶ್ನೆ ನಿಮಗೂ ಬಂದಿರಬಹುದು.

ಹೌದು ಒಮ್ಮೆಗೆ ರಾಜೀನಾಮೆ ಕೊಟ್ಟಿರುವ ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದರೆ ಯಾವುದಾದರೂ ಕ್ರಮಕ್ಕೆ ದಾರಿ ಸುಗಮವಿತ್ತು. ಆದರೆ ಈಗಹಾಗಾಗುತ್ತಿಲ್ಲ. ಸ್ಪೀಕರ್ ಕ್ರಮ ತೆಗೆದುಕೊಳ್ಳುವವರೆಗೆ ಹೊಸ ಸರ್ಕಾರ ಮಾಡುವುದು ಬೇಡ ಎಂದು ಸ್ಪಷ್ಟ ಸಂದೇಶ ನೀಡಿದ್ದ ಬಿಜೆಪಿ ಹೈಕಮಾಂಡ್ ಗೆ ಇನ್ನೂಗೊಂದಲ ಮುಂದುವರೆಯುತ್ತಿದೆ. ಅಷ್ಟರ ಮಟ್ಟಿಗೆ ಸ್ಪೀಕರ್ ರಮೇಶ್ ಕುಮಾರ್ ಚಾಣಾಕ್ಷ ನಡೆ ಇಟ್ಟಿದ್ದಾರೆ.

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಉಸ್ತುವಾರಿ ಸಿಎಂ ಕುಮಾರಸ್ವಾಮಿ ಒಂದು ಮಾತು ಹೇಳಿದ್ದರು. ಅದೇನೆಂದರೆ ಮುಂದೆ ಬರುವ ಸರ್ಕಾರವೂ ಕೂಡ ಅಸ್ಥಿರ ಸರ್ಕಾರವೇ ಆಗಲಿದ್ದು ಎಷ್ಟು ದಿನ ಉಳಿಯುತ್ತೆ ಅಂತ ಖಚಿತವಾಗಿ ಹೇಳಲ್ಲಿಕ್ಕೆ ಬರುವುದಿಲ್ಲ, ಏನು ಬೇಕಾದರೂ ಆಗಬಹುದು ಎಂದಿದ್ದರು. ಆ ಮಾತನ್ನು ನಿಜ ಮಾಡುವಂತೆ ಇಂದು ಸ್ಪೀಕರ್ ರವರ ತೀರ್ಮಾನ ಹೊರಬಿದ್ದಿದೆ.

ಸ್ಪೀಕರ್ ಇಂದು ಕೇವಲ 3 ಶಾಸಕರನ್ನು ಅನರ್ಹತೆ ಮಾಡಿದ್ದರಿಂದ, ಉಳಿದ ಅತೃಪ್ತರ ನಡೆಯ ಬಗ್ಗೆ ಕುತೂಹಲ ಉಳಿಯುವಂತೆ ಆಗಿದೆ. ಈ ಮೂವರು ಸುಪ್ರೀಂಕೋರ್ಟ್ ಗೆ ಹೋಗುವ ಅವಕಾಶವಿದ್ದರೂ ಸಹ ಸ್ಪೀಕರ್ ತಮ್ಮ ಆದೇಶ ಕೋರ್ಟಿನಲ್ಲಿ ಅಷ್ಟು ಸುಲಭಕ್ಕೆ ಬಿದ್ದು ಹೋಗದಂತೆ ಬಹಳ ಎಚ್ಚರಿಕೆ ವಹಿಸಿದ್ದಾರೆ. ಇದರಿಂದಉಳಿದ ಶಾಸಕರು ಭಯಗೊಂಡು ವಾಪಸ್ ಬರಬಹುದು ಅಥವಾ ಬಿಜೆಪಿಗೆ ಬೆಂಬಲ ಕೊಡಲು ಹಿಂದೇಟು ಹಾಕಬಹುದು ಎಂಬುದು ಮೈತ್ರಿ ಪಕ್ಷಗಳ ಮೊದಲನೇ ಲೆಕ್ಕಾಚಾರ.

ಎರಡನೆಯದಾಗಿ ಈ ರೀತಿಯ ವಿಳಂಬದಿಂದ ಕುದ್ದು ಹೋಗುತ್ತಿರುವ, ಇದರಿಂದ ಹೆಚ್ಚು ನೊಂದುಕೊಂಡಿರುವ ವ್ಯಕ್ತಿಯೆಂದರೆ ಅದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ. ಸಿಎಂ ಆಗಿಯೇ ತೀರಬೇಕೆಂಬ ಧಾವಂತದಲ್ಲಿದ್ದ ಯಡಿಯೂರಪ್ಪನವರ ತಾಳ್ಮೆ ಹೆಚ್ಚು ಕಾಲ ಉಳಿಯುತ್ತದಾ ಹೇಳಲು ಬಾರದು. ಅತ್ತ ಹೈಕಮಾಂಡ್ ಕೂಡ ಯಡಿಯೂರಪ್ಪನವರೇ ಮುಖ್ಯಮಂತ್ರಿ ಎಂದು ಘೋಷಿಸಿಲ್ಲ, ಇತ್ತ ಎಲ್ಲಾ ಶಾಸಕರ ಅನರ್ಹತೆ ದೂರು ಬೇಗ ಬಗೆಹರಿಯುತ್ತಿಲ್ಲವಾದ್ದರಿಂದ ಬಿಜೆಪಿಯೊಳಗೆಯೇ ಭಿನ್ನಮತ ಸ್ಫೋಟಗೊಳ್ಳಬಹುದೆಂಬುದು ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ಲೆಕ್ಕಾಚಾರವಾಗಿದೆ.

ಹೌದು. ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ 76 ವರ್ಷದ ಯಡಿಯೂರಪ್ಪನವರಿಗೆ ಅಧಿಕಾರ ಕೊಡುವುದು ಮೋದಿ-ಶಾರು ಜಾರಿಗೆ ತಂದಿರುವ ಬಿಜೆಪಿಯ ಹೊಸ ನೀತಿಗೆ ವಿರುದ್ಧವಾದುದು. ಆದರೆ ಯಡಿಯೂರಪ್ಪನವರಿಗೆ ಅಧಿಕಾರ ಕೊಡದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಇದಕ್ಕೆ ಸ್ಪಷ್ಟ ಪುರಾವೆಯೂ ಈಗಾಗಲೇ ಸಿಕ್ಕಿದೆ. 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನೋಡಿ ಬಿಜೆಪಿ ಅನುಭವಿಸಿದ್ದಾಗಿದೆ.

ಇಂತಹ ದ್ವಂದ್ವ ವೈರುಧ್ಯಗಳ ಪರಿಸ್ಥಿತಿ ಈಗ ಬಿಜೆಪಿಯದ್ದಾಗಿದೆ. ಇದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಎಂಜಾಯ್ ಮಾಡುತ್ತಾ ನೋಡುತ್ತಿದೆ. ನಾವು ಸರ್ಕಾರ ರಚಿಸದಿದ್ದರೂ ಪರವಾಗಿಲ್ಲ, ನಮ್ಮ ಸರ್ಕಾರ ಬೀಳಿಸಿ ತೊಂದರೆ ಕೊಟ್ಟ ಬಿಜೆಪಿಯವರಿಗೆ ತೊಂದರೆ ಕೊಡಬೇಕೆನ್ನುವ ತಂತ್ರವನ್ನು ಆ ಎರಡುಪಕ್ಷಗಳು ಹೂಡಿದ್ದಂತಿದೆ.

ಇನ್ನು ಬಿಜೆಪಿ 105+ಒಬ್ಬರು ಪಕ್ಷೇತರ ಶಾಸಕರನ್ನು ನಂಬಿಕೊಂಡು ಸರಳ ಬಹುಮತವನ್ನಿಟ್ಟುಕೊಂಡು ಸರ್ಕಾರ ರಚನೆ ಮಾಡುವುದು ಅಪಾಯಕಾರಿ. ಅಂತಹ ಸನ್ನಿವೇಶದಲ್ಲಿ ಏನಾಗಬಹುದೆಂಬ ಪಾಠವನ್ನು ಈಗಾಗಲೇ ಜೆಡಿಎಸ್ ಕಾಂಗ್ರೆಸ್ ಗೆ ಸ್ವತಃ ಬಿಜೆಪಿಯೇ ಕಲಿಸಿದೆ. ಅದೇ ಪರಿಸ್ಥಿತಿ ತಮಗೆ ಬರುವುದಿಲ್ಲವೆನ್ನುವುದಕ್ಕೆ ಯಾವ ಗ್ಯಾರಂಟಿ. ಆಗಲಿ ಡಿಸಿಎಂ ಹುದ್ದೆಯ ವಿಚಾರದಲ್ಲಿ ಬಿಜೆಪಿಯೊಳಗೆ ದೊಡ್ಡ ಚರ್ಚೆಗಳು ಶುರುವಾಗಿ ಮುಂದೆ ಅಧಿಕಾರಕ್ಕಾಗಿ ಎಂತಹ ಪೈಪೋಟಿ ಇರುತ್ತದೆಎಂಬುದರ ಟ್ರೇಲರ್ ತೋರಿಸುತ್ತಿದ್ದಾರೆ. ಪಿಕ್ಚರ್ ಇನ್ನು ಹಾರಿಬಲ್ ಆಗಿರುವುದರಲ್ಲಿ ಸಂಶಯವಿಲ್ಲ.

ಇದೆಲ್ಲಾ ಕಷ್ಟ ಇರುವುದರಿಂದ ‘ರಾಷ್ಟ್ರಪತಿ ಆಡಳಿತ ತರೋಣ, ನೇರವಾಗಿ ಚುನಾವಣೆಗೆ ಹೋಗೋಣ’ ಎಂದರೆ ಅದಕ್ಕೆ ಯಡಿಯೂರಪ್ಪ ಸುತರಾಂ ಒಪ್ಪುವುದಿಲ್ಲ. ಇನ್ನು ಆರು ತಿಂಗಳು ಅಲ್ಲ ಇನ್ನು ದಿನ ಕಾಯುವುದು ಸಹ ಅವರಿಂದ ಸಾಧ್ಯವಿಲ್ಲ. ಎಷ್ಟೆಲ್ಲಾ ಕಷ್ಟಪಟ್ಟು ಪಕ್ಷ ಕಟ್ಟಿ, ಒಮ್ಮೆ ಅಧಿಕಾರಕ್ಕೆ ತಂದು ಎರಡೇ ವರ್ಷದಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದರು. ಅಲ್ಲಿಂದ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಾಣುತ್ತಿರುವ ಯಡಿಯೂರಪ್ಪ ಕಳೆದ ವರ್ಷ ಮುಖ್ಯಮಂತ್ರಿಯೂ ಆಗಿ ಕೇವಲ 3 ದಿನಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದ ಅವಮಾನವನ್ನು ಇನ್ನು ಮರೆತಿಲ್ಲ.

ಇನ್ನು ಚುನಾವಣೆಯಲ್ಲಿ ಬಿಜೆಪಿ ಬರುತ್ತದೆ ಎಂಬುದಕ್ಕೆ ಗ್ಯಾರಂಟಿಯೇನು? ರಾಜ್ಯದ ಚುನಾವಣೆಗಳು ನಡೆಯುವುದು ರಾಜ್ಯದ ಇಶ್ಯೂಗಳ ಮೇಲೆ. ಹಾಗೆ ನೋಡಿದರೆ ರಾಜ್ಯಕ್ಕೆ ಬಿಜೆಪಿ ಮಾಡಿದ್ದು ಅಷ್ಟರಲ್ಲೇ ಇದೆ. ಇನ್ನು ಈ ವರ್ಷ ಆಪರೇಷನ್ ಕಮಲ ಮಾಡುವ ಮೂಲಕ ರಾಜ್ಯ ಸರ್ಕಾರ ಕೆಡವಿರುವ ಅಪವಾದವೂ  ಬಿಜೆಪಿಯ ಮೇಲಿದೆ. ಜನ ಅತೃಪ್ತ ಶಾಸಕರ ಬಗ್ಗೆ ವಿಶೇಷ ಒಲವು ತೋರುತ್ತಾರೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಈ ಮುಖವನ್ನಿಟ್ಟುಕೊಂಡು ಚುನಾವಣೆಗೆ ಹೋದರೆ ಗೆಲುವು ಸುಲಭವಿಲ್ಲ. ಮುಖ್ಯವಾಗಿ ಒಕ್ಕಲಿಗ ಸಮುದಾಯದವರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಕೋಪದಿಂದ ಕುದಿಯುತ್ತಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಗೆ ಅನುಕಂಪದ ವಾತವಾರಣವಿದೆ ಎಂಬುದು ಬಿಜೆಪಿಗೂ ಗೊತ್ತು.

ಸರಿ ಅಂತೂ ಚುನಾವಣೆಗೆ ಹೋಗಿ ಗೆದ್ದರೂ ಯಡಿಯೂರಪ್ಪನವರೆ ಮುಖ್ಯಮಂತ್ರಿ ಎಂಬುದಕ್ಕೆ ಗ್ಯಾರಂಟಿಯೇನು? ಬಿಜೆಪಿಯಲ್ಲಿ ಸಂಘಪರಿವಾರದ ಹಿನ್ನೆಲೆಯ, ಆದರೆ ಭ್ರಷ್ಟಾಚಾರದ ಹಿನ್ನೆಲೆಯಿರದ ವ್ಯಕ್ತಿ ಸಿಎಂ ಆದರೆ ಒಳ್ಳೆಯದು ಎಂಬುದು ಹೈಕಮಾಂಡ್ ಆಸೆ. ಹಾಗಾದಾಗ ಮಾತ್ರ ಇಡೀ ದಕ್ಷಿಣ ಭಾರತದಲ್ಲಿ ಪ್ರವೇಶ ಪಡೆಯಲುಸಾಧ್ಯ ಎಂಬ ನಿಲುವು ಅವರದು. ಅದಕ್ಕೆ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಯಡಿಯೂರಪ್ಪನವರನ್ನೇ ಸಿಎಂ ಮಾಡಿ ಏನಾದರೂ ಅವಾಂತರವಾಗಿ ಮತ್ತೆ ಚುನಾವಣೆಗೆ ಹೋದರೆ ಗೆಲ್ಲುವುದು ಸಾಧ್ಯವಿಲ್ಲ. ಇನ್ನು ಯಡಿಯೂರಪ್ಪನವರನ್ನು ಸಿಎಂ ಮಾಡದಿದ್ದರೆ ಪಾರ್ಟಿ ಹೋಳಾಗುವುದರಲ್ಲಿ ಎರಡು ಮಾತಿಲ್ಲ. ತ್ರಿಶಂಕು ಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಒದ್ದಾಡುತ್ತಿದೆ.

ಕೊನೆಯದಾಗಿ ರಾಜೀನಾಮೆ ಕೊಟ್ಟು, ಸರ್ಕಾರ ಬೀಳಲು ಕಾರಣವಾಗಿರುವ ಈ ಅತೃಪ್ತ ಶಾಸಕರೆನಿಸಿಕೊಂಡವರ ಬಗ್ಗೆ ಈಗ ಬಿಜೆಪಿಯ ಅಭಿಪ್ರಾಯವೇನು? 15 ಜನಇದ್ದಾರೆ. ಅವರು ಅನರ್ಹವಾಗದೇ ಬಿಜೆಪಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಹೆಚ್ಚು ಕಮ್ಮಿ ಒಟ್ಟು ಸಚಿವ ಸ್ಥಾನಗಳಲ್ಲಿ ಅರ್ಧದಷ್ಟನ್ನು ಇವರಿಗೆ ಕೊಡಬೇಕು. ಇದರಿಂದ ಪಕ್ಷದಲ್ಲಿ ಬಂಡಾಯವೇಳುವುದು ಸಾಧ್ಯ. ಅದರ ಬದಲು ಇವರಿಗೆ ಬೇರೆ ರೀತಿಯಲ್ಲಿ ಸಮಾಧಾನಪಡಿಸಿ ಕೈತೊಳೆದುಕೊಳ್ಳಬೇಕೆಂಬುದು ಬಿಜೆಪಿಯ ಇನ್ನೊಂದು ಬಣದ ಹುನ್ನಾರವಿದ್ದಂತೆ ತೋರುತ್ತಿದೆ. ಹಾಗಾಗಿ ಅವರೆಲ್ಲರೂ ಅನರ್ಹರಾದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದಾರೆ. ಇನ್ನು ಜೆಡಿಎಸ್ ಕಾಂಗ್ರೆಸ್ ಬೆನ್ನಿಗೆಚೂರಿ ಹಾಕಿ ಪಕ್ಷಕ್ಕೆ ದ್ರೋಹ ಬಗೆದ ಇವರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದು ಆಯಾ ಪಕ್ಷದ ನಾಯಕರುಗಳು ಖಡಕ್ ಆಗಿ ಹೇಳಿದ್ದಾರೆ.

ಹಾಗಾಗಿಯೇ ಸ್ಪೀಕರ್ ರಮೇಶ್ ಕುಮಾರ್ ರವರು ಭಾರೀ ಪ್ಲಾನ್ ಮಾಡಿ ಎಲ್ಲರನ್ನು ಅನರ್ಹ ಮಾಡುವ ಬದಲು ಕೆಲವರನ್ನೇ ಮಾಡುವ ಮೂಲಕ ಅತ್ತ ಶಾಸಕರನ್ನು, ಇತ್ತ ಬಿಜೆಪಿಯನ್ನು ಆಡಿಸುತ್ತಿದ್ದಾರೆ. ಹೇಗೂ ಅಧಿಕಾರ ಹೋಗಿದೆ. ಬಿಜೆಪಿಗೆ ಸಾಕಷ್ಟು ತೊಂದರೆ ಕೊಡೋಣ ಎಂದು ನಿರ್ಧರಿಸಿದಂತಿದೆ.ಆಗ ಬಿಜೆಪಿ ಆಟ ಮೈತ್ರಿಗೆ ಸಂಕಟ: ಈಗ ಸ್ಪೀಕರ್ ಆಟ ಬಿಜೆಪಿಗೆ ಮಹಾಸಂಕಟವಾಗಿದೆ.

ಅಸ್ಥಿರ ಸರ್ಕಾರ ಹೀಗೇ ಮುಂದುವರೆದು, ಜುಲೈ 31ರೊಳಗೆ ಫೈನಾನ್ಸ್ ಬಿಲ್ ಸಹಾ ಅಂಗೀಕಾರ ಪಡೆದುಕೊಳ್ಳದೇ ಇದ್ದರೆ ರಾಜ್ಯದಲ್ಲಿ ತಲೆದೋರುವ ಬಿಕ್ಕಟ್ಟಿಗೆ ಯಾರನ್ನು ಹೊಣೆ ಮಾಡುವುದು? ಬಹುಶಃ ಮಾರಾಟ ಮಾಡಿಕೊಳ್ಳಲು ಸಿದ್ಧವಿರುವ ಜನಪ್ರತಿನಿಧಿಗಳನ್ನು ಆರಿಸಿದ ಜನರನ್ನೇ ಹೊಣೆ ಮಾಡಬೇಕೇನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...