ಭಾರತದಲ್ಲಿ ಪ್ರತಿನಿತ್ಯ ಸುಮಾರು 10000 ರೈಲುಗಳು ಓಡಾಡುತ್ತಿವೆ. ಅವು ದಿನವೊಂದಕ್ಕೆ 2.3 ಕೋಟಿಗೂ ಅಧಿಕ ಜನರನ್ನು ಹೊತ್ತು ಸಾಗುತ್ತಿವೆ. ಇದರಲ್ಲಿ 66,687 ಕಿ.ಮೀ ಉದ್ದದ ರೈಲು ಮಾರ್ಗವು ತುಂಬಾ ಹಳೆಯದಾಗಿದ್ದು ವಸಾಹತು ಕಾಲದ್ದಾಗಿದೆ. ಇದರಲ್ಲಿ ಅರ್ಧದಷ್ಟನ್ನು ಮಾತ್ರ ವಿದ್ಯುದ್ದೀಕರಿಸಲಾಗಿದೆ. ನೈರ್ಮಲ್ಯ ಅತಿ ದೊಡ್ಡ ಸಮಸ್ಯೆಯಾಗಿದ್ದು ಸುರಕ್ಷತಾ ಮಾನದಂಡಗಳು ಕೂಡ ಸಾಕಾಗುವುದಿಲ್ಲ ಎನ್ನಲಾಗುತ್ತಿದೆ. ಹಾಗಾಗಿಯೇ ಪದೇ ಪದೇ ಹಳಿ ತಪ್ಪುವ ರೈಲುಗಳ ಬಗ್ಗೆ ವರದಿಯಾಗುತ್ತಿದೆ.
ಇಂತಹ ಬೃಹತ್ ದೇಶದಲ್ಲಿ ಕೆಲವೇ ಕೆಲವು ಸಾವಿರ ಜನರನ್ನು ಹೊತ್ತೊಯ್ಯುವ ಬುಲೆಟ್ ರೈಲನ್ನು ‘ಅಭಿವೃದ್ಧಿಯ’ ಸಂಕೇತವೆಂದು ಕರೆಯಲಾಗುತ್ತದೆಯೇ? ಈ ಚರ್ಚೆ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಿದ್ದು ಶಿವಸೇನೆ ನೇತೃತ್ವದ ಕಾಂಗ್ರೆಸ್-ಎನ್ಸಿಪಿ ಸರ್ಕಾರ ಬಂದಿರುವುದರಿಂದ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಅಹಮದಾಬಾದ್ – ಮುಂಬೈ ಬುಲೆಟ್ ರೈಲು ಯೋಜನೆ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲು ಆದೇಶಿಸಿದ್ದೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಠಾಕ್ರೆ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬುಲೆಟ್ ರೈಲು ಯೋಜನೆಗಾಗಿ ಮೀಸಲಿದ್ದ 40000 ಸಾವಿರ ಕೋಟಿ ಹಣವನ್ನು ಕೇಂದ್ರಕ್ಕೆ ವಾಪಸ್ ಮಾಡಲೆಂದೇ ಫಡ್ನವೀಸ್ ಮೂರು ದಿನ ಮುಖ್ಯಮಂತ್ರಿಯ ನಾಟಕವಾಡಿದ್ದರು ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಅದೆಲ್ಲಾ ಸುಳ್ಳು ಎಂದು ಫಡ್ನವಿಸ್ ಸ್ಪಷ್ಟೀಕರಣ ನೀಡಿದ್ದಾರೆ.
ಈ ನಡುವೆ ಬುಲೆಟ್ ರೈಲು ಯೋಜನೆಯನ್ನು ಪರಿಶೀಲಿಸುವ ಠಾಕ್ರೆಯವರ ನಿರ್ಧಾರವನ್ನು ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್ರವರು ಸ್ವಾಗತಿಸಿದ್ದಾರೆ.
ಇದು ಒಳ್ಳೆಯ ನಿರ್ಧಾರ. ಕೇವಲ ಅಹಮದಾಬಾದ್-ಮುಂಬೈ ಮಾರ್ಗದ ‘ಬುಲೆಟ್ ರೈಲು’ ಯೋಜನೆಯು 1 ಲಕ್ಷ ಕೋಟಿಗಿಂತ ಹೆಚ್ಚು ವೆಚ್ಚದ ಹಾಸ್ಯಾಸ್ಪದ ಯೋಜನೆಯಾಗಿದೆ. ಇದೇ ವೆಚ್ಚದಲ್ಲಿ ದೇಶಾದ್ಯಂತ ಇರುವ ರೈಲ್ವೆಯ ಎಲ್ಲಾ ಟ್ರಂಕ್ ಮಾರ್ಗಗಳನ್ನು ನವೀಕರಿಸಿ ರೈಲುಗಳು ಎರಡು ಪಟ್ಟು ವೇಗದಲ್ಲಿ ಓಡುವಂತೆ ಮಾಡಬಹುದಾಗಿದೆ. ಜೊತೆಗೆ ಸಾಗಾಣಿಕಾ ಸಾಮರ್ಥ್ಯವನ್ನು ಸಹ ಶೆ. 50% ಹೆಚ್ಚಿಸಬಹುದು ಎಂದು ಅವರು ಟ್ವೀಟ್ ಮಾಡಿದ್ದಾರೆ.
Good decision. The 'bullet train' in particular is a ridiculous project costing over 1 Lakh crores (for just Ahmedabad-Mumbai line). At this cost, all the trunk lines of Railways can be upgraded to run trains at twice the speed, & increase carrying capacity by >50% https://t.co/BmyJNPAlmh
— Prashant Bhushan (@pbhushan1) December 2, 2019
ಇನ್ನೊಂದು ಕಡೆ ಭಾರತೀಯ ರೈಲ್ವೆಯು ಅಸ್ಥಿರ ಆರ್ಥಿಕ ಸ್ಥಿತಿಗೆ ತಲುಪಿದೆ ಎಂದು ಸಿಎಜಿ ವರದಿ ತಿಳಿಸಿದೆ. ಭಾರತೀಯ ರೈಲ್ವೆಯ 2017-18ರ ಕಾರ್ಯಾಚರಣಾ ಅನುಪಾತವು 98.44% ರಷ್ಟು ಹೆಚ್ಚಾಗಿದ್ದು 10 ವರ್ಷಗಳಲ್ಲಿ ಕೆಟ್ಟದು ಎಂದು ಸಿಎಜಿ ತಿಳಿಸಿದೆ. ಕಾರ್ಯಾಚರಣಾ ಅನುಪಾತವೆಂದರೆ ಭಾರತೀಯ ರೈಲ್ವೆಯು 100ರೂ ಗಳಿಸಲು 98.44 ರೂ ಖರ್ಚು ಮಾಡಿದೆ ಎಂದರ್ಥ. ಅಲ್ಲಿಗೆ ಲಾಭ ಕೇವಲ 1.66% ಮಾತ್ರ ಆಗಿದೆ.
ಆದಾಯದ ವಿರುದ್ಧದ ಖರ್ಚಿನ ಅಳತೆಯ ಅನುಪಾತವು ರೈಲ್ವೆ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅದರ ಹಣಕಾಸು ಎಷ್ಟು ಆರೋಗ್ಯಕರವಾಗಿದೆ ಎಂಬುದನ್ನು ತೋರಿಸುತ್ತದೆ. 98.44% ನಷ್ಟು ಕಾರ್ಯಾಚರಣಾ ಅನುಪಾತ ಎಂದರೆ ರೈಲ್ವೆ ಇಲಾಖೆ ಕಳಪೆ ಸ್ಥಿತಿಯಲ್ಲಿದೆ ಎಂದು ಅರ್ಥವಾಗುತ್ತದೆ.
ಇಂದು ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ, ರೈಲ್ವೆಯು 1,665.61 ಕೋಟಿ ರೂಗಳ ಉಳಿತಾಯ ಮಾಡಿದೆ ಎಂದು ಹೇಳಲಾಗಿದೆ. ವಾಸ್ತವದಲ್ಲಿ ಅದು 5,676.29 ಕೋಟಿ ರೂ ನಷ್ಟ ಅನುಭವಿಸಿದೆ. ಏಕೆಂದರೆ ಎನ್ಟಿಪಿಸಿ ಮತ್ತು ಐಆರ್ಕಾನ್ನಿಂದ ಅದು ಮುಂಗಡ ಪಡೆದಿರುವುದರಿಂದ ಲಾಭ ಕಾಣುತ್ತಿದೆ “ಈ ಮುಂಗಡವನ್ನು ಹೊರತುಪಡಿಸಿದರೆ ಕಾರ್ಯಾಚರಣಾ ಅನುಪಾತವನ್ನು 102.66% ಕ್ಕೆ ಹೆಚ್ಚಾಗುತ್ತಿತ್ತು” ಎಂದು ವರದಿ ತಿಳಿಸಿದೆ. ಎಂದರೆ ಲಾಭಕ್ಕಿಂತ ವೆಚ್ಚವೇ ಹೆಚ್ಚಾಗುತ್ತಿತ್ತು ಎನ್ನಲಾಗುತ್ತಿದೆ.
ಭಾರತೀಯ ರೈಲ್ವೆಯ ಖಾತೆಗಳ ಹಣಕಾಸು ಲೆಕ್ಕಪರಿಶೋಧನೆಯ ವಿಶ್ಲೇಷಣೆಯು ತನ್ನ ನಿವ್ವಳ ಆದಾಯದಲ್ಲಿ 2016-17ರಲ್ಲಿ ರೂ 4,913 ಕೋಟಿಯಿಂದ 2017-18ರಲ್ಲಿ ರೂ 1,665.61 ಕೋಟಿಗೆ ಅಂದರೆ 66.1% ರಷ್ಟು ಕುಸಿದಿದೆ ಎಂದು ತಿಳಿದುಬಂದಿದೆ.
ಈ ಎಲ್ಲಾ ಅಂಕಿ ಅಂಶಗಳು ಕಡೆಗೆ ಎಲ್ಲಿಗೆ ಕರೆದೊಯ್ಯುತ್ತವೆ ಎಂಬುದಕ್ಕೆ ಅನುಮಾನವೇ ಇಲ್ಲ. ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿರುವ ಕ್ಷೇತ್ರವಾದ ರೈಲ್ವೆಯನ್ನು ಖಾಸಗೀಕರಿಸುವ ಕಡೆ ಇದು ಹೋಗಲಿದೆ. ಅದಕ್ಕೆ ಇದೆಲ್ಲವೂ ತಳಪಾಯವಾಗಲಿದೆ. ಒಎನ್ಜಿಸಿ, ಬಿಪಿಸಿಎಲ್, ಬಿಎಸ್ಎನ್ಎಲ್ ಥರಹದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಿಸಿ ಮಾರಾಟ ಮಾಡುವ ಹಂತಕ್ಕೆ ಕೇಂದ್ರ ಸರ್ಕಾರ ಬಂದಿದೆ. ಒಟ್ಟಿನಲ್ಲಿ ಮುಂಬರಲಿರುವ ಕರಾಳ ದಿನ ಮುನ್ಸೂಚನೆ ಇದಾಗಿದೆ ಎಂದು ರಾಜಶೇಖರ್ ಅಕ್ಕಿಯವರು ಪ್ರತಿಕ್ರಿಯಿಸಿದ್ದಾರೆ.
Reason for loss is obvious.. For populism train fare not done since more than a decade. Even was shown in profits! The minister was invited to address people how this turn around was possible..