ಬಿಜೆಪಿ ನಾಯಕ ಮತ್ತು ಎನ್ಐಎ ಅಧಿಕಾರಿಯ ನಡುವೆ ಪಾರ್ಸೆಲ್ ವಿನಿಮಯವಾಗಿರುವ ಬಗ್ಗೆ ಪುರಾವೆಯೊಂದಿಗೆ ಪಕ್ಷವು ಸುಪ್ರೀಂ ಕೋರ್ಟ್ಗೆ ಹೋಗಲಿದ್ದೇವೆ ಎಂದು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಮಂಗಳವಾರ ಹೇಳಿದ್ದಾರೆ.
ಬಿಜೆಪಿ ನಾಯಕ ಜಿತೇಂದ್ರ ತಿವಾರಿ ಅವರು ಎನ್ಐಎ ಎಸ್ಪಿ ಧನ್ ರಾಮ್ ಸಿಂಗ್ ಅವರನ್ನು ಅವರ ಕೋಲ್ಕತ್ತಾ ನಿವಾಸದಲ್ಲಿ ಪಾರ್ಸೆಲ್ನೊಂದಿಗೆ ಭೇಟಿ ಮಾಡಿದ್ದಾರೆ ಎಂದು ಆರೋಪಿಸಿದ ಕೆಲವು ದಿನಗಳ ನಂತರ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.
“ನಾವು (ಸುಪ್ರೀಂ) ನ್ಯಾಯಾಲಯಕ್ಕೆ ಹೋಗುತ್ತೇವೆ, ಖಂಡಿತವಾಗಿಯೂ ನಾವು ಹೋಗುತ್ತೇವೆ. ಬಿಜೆಪಿ ನಾಯಕ ಎನ್ಐಎ ಎಸ್ಪಿಯ ನಿವಾಸಕ್ಕೆ ಬಿಳಿ ಪ್ಯಾಕೆಟ್ ತೆಗೆದುಕೊಂಡು ಹೋಗಿರುವ ಉತ್ತಮ ಗುಣಮಟ್ಟದ ದೃಶ್ಯಗಳನ್ನು ನಾವು ನೀಡುತ್ತೇವೆ. ನಾವು ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಹಾಜರುಪಡಿಸುತ್ತೇವೆ” ಎಂದು ಬ್ಯಾನರ್ಜಿ ಹೇಳಿದರು.
ಬಿಜೆಪಿ ನಾಯಕ ಮತ್ತು ಮಾಜಿ ಅಸನ್ಸೋಲ್ ಮೇಯರ್ ಜಿತೇಂದ್ರ ತಿವಾರಿ ಅವರು ಮಾರ್ಚ್ 26 ರಂದು ಕೋಲ್ಕತ್ತಾದ ಎನ್ಐಎ ಎಸ್ಪಿ ಧನ್ ರಾಮ್ ಸಿಂಗ್ ಅವರ ನಿವಾಸಕ್ಕೆ ಪಾರ್ಸೆಲ್ನೊಂದಿಗೆ ಪ್ರವೇಶಿಸಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಈ ಹಿಂದೆ ಆರೋಪಿಸಿದ್ದರು. ಕೇವಲ ಒಂದು ದಿನದ ನಂತರ ಎನ್ಐಎ ಹಲವಾರು ಟಿಎಂಸಿ ನಾಯಕರಿಗೆ ನೋಟಿಸ್ ಕಳುಹಿಸಿದೆ ಎಂದು ಅವರು ಹೇಳಿದರು.
ಎಸ್ಪಿ ವಾಸಿಸುವ ವಸತಿ ಸಂಕೀರ್ಣದ ಪ್ರವೇಶ ಮತ್ತು ನಿರ್ಗಮನದ ದಾಖಲೆಯನ್ನು ನಿರ್ವಹಿಸುವ ರಿಜಿಸ್ಟರ್ನ ಪುಟಗಳನ್ನು ಟಿಎಂಸಿ ಸಾರ್ವಜನಿಕಗೊಳಿಸಿದೆ. ಬಿಜೆಪಿ ನಾಯಕ ಮತ್ತು ಎನ್ಐಎ ಅಧಿಕಾರಿಯ ನಡುವಿನ ಸಭೆಯಲ್ಲಿ ತನ್ನ ಪಕ್ಷದ ನಾಯಕರ ವಿರುದ್ಧ “ದೊಡ್ಡ ಸಂಚು ರೂಪಿಸಲಾಗಿದೆ” ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
“ಹೆಚ್ಚುವರಿಯಾಗಿ ಜಿತೇಂದ್ರ ತಿವಾರಿ ಅವರು ಪಾರ್ಸೆಲ್ನೊಂದಿಗೆ ಬಂದರು, 52 ನಿಮಿಷಗಳ ನಂತರ ಬರಿಗೈಯಲ್ಲಿ ಹೊರಟರು ಎಂದು ಸೂಚಿಸುವ ಮಾಹಿತಿಯನ್ನು ನಾವು ಹೊಂದಿದ್ದೇವೆ” ಎಂದು ಬ್ಯಾನರ್ಜಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ; ಸಂವಿಧಾನ ಬದಲಾಯಿಸುವ ಯಾವುದೇ ಪ್ರಯತ್ನವಿದ್ದಲ್ಲಿ ರಾಜೀನಾಮೆ ನೀಡುತ್ತೇನೆ: ಅಠವಳೆ