Homeಮುಖಪುಟಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

- Advertisement -
- Advertisement -

ಮುಂದುವರಿದ ದೇಶಗಳ ಉತ್ಪಾದನೆ ಪ್ರಮಾಣ ಮತ್ತು ಸಬ್ಸಿಡಿ ಪ್ರಮಾಣ

1997ರ ವರದಿಯ ಪ್ರಕಾರ 2004ರೊಳಗಾಗಿ ಯುರೋಪು ಒಕ್ಕೂಟದ ರಾಷ್ಟ್ರಗಳ ಗೋಧಿ ಉತ್ಪಾದನೆ 27 ಮೆಟ್ರಿಕ್ ಟನ್‌ನಿಂದ 450 ಲಕ್ಷ ಮೆಟ್ರಿಕ್ ಟನ್‌ಗಳಿಗೇರಲಿದೆ. ಮತ್ತು ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ 580 ಲಕ್ಷ ಮೆಟ್ರಿಕ್ ಟನ್‌ಗಳಿಗೇರಲಿದೆ. ಹಾಗೆಯೇ, ಅಮೆರಿಕದ ಪ್ರತಿ ಮೂರು ಎಕರೆಗಳಲ್ಲಿ ಒಂದು ಎಕರೆಯಲ್ಲಾಗುವ ಬೆಳೆ ರಫ್ತಿಗಾಗಿಯೇ ಮೀಸಲಾಗಿದೆ. ಹೀಗಾಗಿ, ಹೆಚ್ಚುತ್ತಿರುವ ಈ ಬೆಳೆಗಳಿಗೆ ಅವರು ಹೊಸ ಮಾರುಕಟ್ಟೆಗಳನ್ನು ಹುಡುಕಲೇಬೇಕಾಗಿದೆ.

ಈ ಹೆಚ್ಚುತ್ತಿರುವ ಬೆಳೆಗಳನ್ನು ಕಡಿಮೆ ಬೆಲೆಗಳಲ್ಲಿ ಮಾರಿ ನಮ್ಮಂತಹ ದೇಶಗಳ ಕೃಷಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಈ ಮುಂದುವರಿದ ದೇಶಗಳು ಬಹಳ ದೊಡ್ಡ ಪ್ರಮಾಣದ ಹಣವನ್ನು ಕೃಷಿ ಸಹಾಯಧನವಾಗಿ ಖರ್ಚು ಮಾಡುತ್ತಿವೆ. “ಒಇಸಿಡಿ” (OECD) ಎಂದು ಕರೆಯಲ್ಪಡುವ ರಾಷ್ಟ್ರಗಳಾದ ಈ ದೇಶಗಳ ಒಟ್ಟು ಕೃಷಿ ಸಹಾಯಧನದ ಮೊತ್ತ 1995ರಲ್ಲಿ 1,82,000 ಕೋಟಿ ಡಾಲರ್ (ಅಥವಾ 80,00,000 ಕೋಟಿ ರೂಪಾಯಿ) ಗಳಿದ್ದದ್ದು, 1997ಕ್ಕೆ 2,80,000 ಕೋಟಿ ಡಾಲರ್ (ಅಥವಾ 2,23,20,000 ಕೋಟಿ ರೂಪಾಯಿ) ಗಳಿಗೇರಿತ್ತು. ಇದರಲ್ಲಿ ಯುರೋಪ್ ಒಕ್ಕೂಟ ಮತ್ತು ಆಮೆರಿಕ ದೇಶಗಳದೇ ದೊಡ್ಡ ಪಾಲು.

ಈ ಕಾರಣವೇ, ಈಗಾಗಲೇ ಈ ದೇಶಗಳ ಕೃಷಿ ಹೆಚ್ಚುವರಿಯೆಲ್ಲ ನಮ್ಮಂತಹ ದೇಶಗಳ ಮಾರುಕಟ್ಟೆಯೊಳಕ್ಕೆ ನುಗ್ಗಿ ನಾವು ಬೆಳೆದ ಬೆಳೆಗಳಿಗೆ ನ್ಯಾಯಬೆಲೆ ದೊರಕದ ಸ್ಥಿತಿ ನಿರ್ಮಾಣವಾಗುತ್ತಿರುವುದು.

ಜೊತೆಗೆ, ಆಗಿನ ಬಿಜೆಪಿ ಸರ್ಕಾರ, ಬೇರೆ ದೇಶಗಳ ಆಮದುಗಳಿಗೆ ಹಿಂದೆ ಇದ್ದ ಪ್ರಮಾಣದ ನಿಯಂತ್ರಣವನ್ನು ರದ್ದುಮಾಡಿದೆ. ಇದರಿಂದಾಗಿ ಹೊರದೇಶದಿಂದ ಕೃಷಿ ವಸ್ತುಗಳು ಯಾವುದೇ ಪ್ರಮಾಣದಲ್ಲಿ ಬೇಕಾದರೂ ನಮ್ಮ ಕೃಷಿ ಮಾರುಕಟ್ಟೆ ಪ್ರವೇಶ ಮಾಡಬಹುದು.

ನಮ್ಮ ದೇಶದ ರೈತರಿಗೆ ಹೊರದೇಶದ ಮಾರುಕಟ್ಟೆಗೆ ರಫ್ತು ಮಾಡಲು ಅವಕಾಶವಿದೆಯೇ?

ಮೇಲ್ಕಂಡ ಸಬ್ಸಿಡಿ ಮತ್ತು ಮಾರುಕಟ್ಟೆ ಕುತಂತ್ರದ ಜೊತೆಗೇ, ಈ ಮುಂದುವರಿದ ರಾಷ್ಟ್ರಗಳು ತಮ್ಮ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ಕುತಂತ್ರದ ನಿಯಮಗಳನ್ನು ಈ ವಿಶ್ವವ್ಯಾಪಾರಿ ಸಂಸ್ಥೆಯ ಒಪ್ಪಂದದೊಳಗೆ ಸೇರಿಸಿವೆ. ಇದನ್ನು “ಆರೋಗ್ಯ ನಿಯಮಗಳು” ಎಂದು ಕರೆಯಲಾಗಿದೆ. ತಮಗಿಚ್ಛೆ ಬಂದಂತೆ, ತಮ್ಮ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು, ಯಾವುದೇ ದೇಶದ ಬೆಳೆಯನ್ನು ಮಾನವ ಅಥವಾ ಪ್ರಾಣಿಗಳ ಆರೋಗ್ಯಕ್ಕೆ ಯೋಗ್ಯವಲ್ಲವೆಂದು ತಿರಸ್ಕರಿಸಬಹುದಾದ ನಿಯಮ ಇದಾಗಿದೆ.

ಉದಾಹರಣೆಗೆ, ಈ ನಿಯಮಗಳು ಪೈಪೋಟಿಯಲ್ಲಿರುವ ಅಮೆರಿಕಾ ಮತ್ತು ಯುರೋಪ ದೇಶಗಳ ನಡುವೆಯೇ ಚಾಲ್ತಿಗೆ ಬಂದವು. ಹಾರ್ಮೋನುಗಳ ಮೂಲಕ ತಯಾರಾದ ಅಮೆರಿಕದ ದನದ ಮಾಂಸವನ್ನು ಮತ್ತು ಅಲ್ಲಿನ ವಂಶವಾಹಿ ವಿಕೃತ ಸೋಯಾ ಅವರೆಯನ್ನು ಯೂರೋಪು ಒಕ್ಕೂಟ ದೇಶಗಳು ಸಾರ್ವಜನಿಕ ಆರೋಗ್ಯ ಸುರಕ್ಷತೆಯ ಕಾರಣಕೊಟ್ಟು ನಿಷೇಧಿಸಿದ ಕಾರಣ, ಅಮೆರಿಕ ತನ್ನ ಸಬ್ಸಿಡಿಗಳನ್ನು ಹೆಚ್ಚಿಸುವ ಮೂಲಕ ಯೂರೋಪಿನ ಮಾರುಕಟ್ಟೆಯನ್ನೇ ನಾಶಮಾಡುವ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದೆ. ಹೀಗಿರುವಾಗ, ನಮ್ಮ ದೇಶಗಳ ರಫ್ತಿನ ಗತಿಯೇನಾಗಬಹುದು ಎನ್ನುವುದು ಸ್ಪಷ್ಟ.

ನಮ್ಮ ದೇಶದ ರೈತರಿಗೆ ಒಕ್ಕಲುತನದಲ್ಲಾದರೂ ಸ್ವಾತಂತ್ರ್ಯ ಉಳಿಯುತ್ತದೆಯೇ?

1965ರಿಂದೀಚೆಗೆ, “ಅಧಿಕ ಇಳುವರಿ ಮಿಶ್ರತಳಿ”ಗಳ ಮೂಲಕ ಉತ್ಪಾದನೆ ಹೆಚ್ಚಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಹುಚ್ಚಿನಿಂದಾಗಿ ಈಗಾಗಲೇ ನಾವು ಹಿಂದಿನಿಂದ ಕಾಪಾಡಿಕೊಂಡಿದ್ದ “ಬೀಜ ಸ್ವಾತಂತ್ರ್ಯ” ಮತ್ತು ಆ ಮೂಲಕ “ಒಕ್ಕಲುತನದ ಸ್ವಾತಂತ್ರ್ಯ”ವನ್ನು ಕಳೆದುಕೊಂಡಿದ್ದೇವೆ. ರೋಗಗಳೊಂದಿಗೆ ತಯಾರಿಸಿದ ಕಂಪೆನಿ ಬೀಜಗಳು ಮತ್ತು ಈ ರೋಗಗಳ ನಿವಾರಣೆಗೆ ಬೇಕಾದ ಕೀಟನಾಶಕ ರಸಾಯನಿಕಗಳಿಗೆ ಈಗಾಗಲೇ ಸಾಕಷ್ಟು ಗುಲಾಮರಾಗಿದ್ದೇವೆ. ಈ ನಡುವೆ, ನಮ್ಮ ದೇಶೀಯ ತಳಿಗಳನ್ನು ಬಿತ್ತದೆಯೇ ನೂರಾರು ತಳಿಗಳನ್ನು ಕಳೆದುಕೊಂಡಿದ್ದೇವೆ.

ಹೀಗಿದ್ದರೂ, ಈ ಮಿಶ್ರತಳಿಗಳನ್ನು ರೈತರು ಮತ್ತೆ ಬಿತ್ತುವ ಅವಕಾಶ ಇದ್ದದ್ದರ ಜೊತೆಗೆ ದೇಶೀಯ ತಳಿಗಳನ್ನು ಬಿತ್ತುವ ಸ್ವಾತಂತ್ರ್ಯವಾದರೂ ಇತ್ತು. ಈ ಅವಕಾಶಗಳಿಗೂ ಕೊಡಲಿ ಪೆಟ್ಟು ಹಾಕಿ ರೈತರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡುವ ನಿಯಮಗಳೂ ಈ ವಿಶ್ವವಾಣಿಜ್ಯ ಸಂಸ್ಥೆ ನಿಯಮಗಳಲ್ಲಿ ಸೇರ್ಪಡೆಯಾಗಿವೆ. ಇವುಗಳನ್ನು “ಬೌದ್ಧಿಕ ಹಕ್ಕುಗಳ ನಿಯಮಗಳು” ಎಂದು ಕರೆಯಲಾಗಿದೆ.

ಇವುಗಳ ಪ್ರಕಾರ, ಇನ್ನು ಮುಂದೆ ಬೀಜದ ಕಂಪೆನಿಗಳು ತಾವು ತಯಾರಿಸಿದ ಬಿತ್ತನೆ ಬೀಜಗಳಿಗೆ ಬೌದ್ಧಿಕ ಹಕ್ಕು (ಪೇಟೆಂಟ್) ಪಡೆಯುತ್ತವೆ. ಇದರಿಂದಾಗಿ, ರೈತರು ಮತ್ತೆ ಈ ಬೀಜಗಳನ್ನು ಮುಂದಿನ ಬೆಳೆಗೆ ಬಳಸುವಂತಿಲ್ಲ. ಬಳಸಿದರೆ, ದಂಡ ತೆರಬೇಕಾಗುತ್ತದೆ. ಕಂಪೆನಿ ಬೀಜದ ಸೋಂಕು ರೈತರ ತಳಿಯ ಬೆಳೆಗಳಲ್ಲಿ ಕಂಡಾಗಲೂ ಕಂಪನಿಗಳು ದಂಡಹಾಕಿದ ನಿದರ್ಶನಗಳು ಈಗಾಗಲೇ ಬೇರೆ ದೇಶಗಳಲ್ಲಿ ನಡೆದಿವೆ. ಪ್ರತಿ ಬೆಳೆಗೂ ಕಂಪೆನಿ ಬೀಜಗಳಿಗೆ ಮೊರೆಹೋಗುವ ದುಃಸ್ಥಿತಿ ಬರುತ್ತದೆ.

ಜೊತೆಗೆ, ರೈತರ ತಳಿಗಳಿಂದ ಕಂಪೆನಿ ಬೀಜದ ಬೆಳೆಗಳಿಗೆ ಸೋಂಕು ತಗಲಬಾರದೆಂಬ ಕಾನೂನುಗಳು ಆಗಲಿವೆ. ರೈತರ ತಳಿಗಳನ್ನು ಈಗಾಗಲೇ ಜರ್ಮನಿಯಲ್ಲಿ ನಿಷೇಧಿಸಲಾಗಿದೆ. ರೈತರೇ ತಯಾರು ಮಾಡಿಕೊಂಡ ಬೀಜಗಳಿಗೆ ಫ್ರಾನ್ಸ್ ದೇಶದಲ್ಲಿ ತೆರಿಗೆ ಹಾಕಲಾಗಿದೆ.

ಇದಲ್ಲದೆ, ನಮ್ಮ ದೇಶೀಯ ತಳಿಗಳನ್ನೇ ಅಲ್ಪಸ್ವಲ್ಪ ಬದಲಾಯಿಸಿ ಪರಂಗಿ ಕಂಪೆನಿಗಳು ’ಪೇಟೆಂಟ್ ತೆಗೆದುಕೊಳ್ಳುತ್ತಿವೆ. ಈಗಾಗಲೇ, ಬಾಸುಮತಿ ಅಕ್ಕಿ, ಬೇವು, ಅರಿಸಿನ, ಬದನೆಕಾಯಿ, ಹಾಗಲಕಾಯಿ, ನೇರಳೆಹಣ್ಣು ಇತ್ಯಾದಿಗಳ ಮೇಲೆ ’ಪೇಟೆಂಟ್ ಪ್ರಯತ್ನ’ ನಡೆದಿದೆ. ಹೀಗೆಯೇ ಮುಂದುವರಿಯಲು ಬಿಟ್ಟರೆ ನಮ್ಮ ದೇಶೀಯ ತಳಿಗಳ ಮೇಲೆ ನಮಗೇ ಹಕ್ಕಿಲ್ಲದ ಪರಿಸ್ಥಿತಿ ಬರುತ್ತದೆ.

“ಜೈವಿಕ ತಂತ್ರಜ್ಞಾನ” (BIO-TECHNOLOGY) ಎಂಬ ದೊಡ್ಡ ಗಂಡಾಂತರ

ಮೇಲ್ಕಂಡ ಎಲ್ಲ ಕುತಂತ್ರಗಳಿಗಿಂತ ಘೋರ ಪರಿಣಾಮವುಳ್ಳ ಮತ್ತೊಂದು ಹೊಸ ತಂತ್ರಜ್ಞಾನವನ್ನು ನಮ್ಮಂತಹ ದೇಶದೊಳಕ್ಕೆ ತರುವ ದೊಡ್ಡ ಪ್ರಯತ್ನ ನಡೆದಿದೆ. ಇದನ್ನು “ಜೈವಿಕ ತಂತ್ರಜ್ಞಾನ” ಎನ್ನುತ್ತಾರೆ. ಎಂದರೆ, ಬೇರೆಬೇರೆ ಜಾತಿಯ ತಳಿಗಳ ವಂಶವಾಹಿಯನ್ನು ಬೆರೆಸಿ ಅಧಿಕ ಆಹಾರ ಉತ್ಪಾದನೆ ಮಾಡಬಹುದೆಂದು ಹೇಳಿಕೊಳ್ಳುವ ತಂತ್ರಜ್ಞಾನ. ಕೆಲವು ಬಾರಿ ಬೇರೆಬೇರೆ ಕುಲಗಳಿಗೆ ಸೇರಿದ ಸಸ್ಯಗಳ ವಂಶವಾಹಿಯ ಬೆರಕೆ ಮತ್ತು ಕೆಲವು ಬಾರಿ ಸಸ್ಯಗಳಿಗೆ ಪ್ರಾಣಿಗಳ ವಂಶವಾಹಿ ಬೆರೆಸುವ ತಂತ್ರಜ್ಞಾನ ಇದು. ಇವುಗಳನ್ನು “ಕುಲಾಂತರಿ” ಬೀಜಗಳೆಂದು ಕರೆಯುತ್ತಾರೆ.

ತಕ್ಷಣಕ್ಕೆ, ಬೀಜದ ಕಂಪೆನಿಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಎರಡು ಗುಣಗಳಿರುವ ಕುಲಾಂತರಿ ಬೀಜಗಳನ್ನು. ಅವುಗಳು 1) ಕೀಟ ನಿರೋಧಕ ತಳಿಗಳು ಮತ್ತು 2) ಕಳೆ ನಿರೋಧಕ ತಳಿಗಳು.

ಪ್ರೊ. ಎಂ ಡಿ ನಂಜುಂಡಸ್ವಾಮಿ

(ಇದು ಪ್ರೊ. ಎಂಡಿಎನ್ ಅವರ ಒಂದು ಹಳೆಯ ಲೇಖನದ ಎರಡನೇ ಭಾಗ. ಭಾರತದ ಕೃಷಿ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಹೇಗೆ ಕಾರಣವಾದವು ಮತ್ತು ಆ ಸಮಸ್ಯೆ ಇಂದಿಗೂ ಹೇಗೆ ಮುಂದುವರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಈ ಲೇಖನದ ಉಳಿದ ಭಾಗಗಳನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು. ಮುಂದಿನ ವಾರ: ಜೈವಿಕ ತಂತ್ರಜ್ಞಾನದ ತಳಿಗಳಿಂದ ಆಗುವ ಹಾನಿ)


ಇದನ್ನೂ ಓದಿ: ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-1

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...