Homeಅಂತರಾಷ್ಟ್ರೀಯಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ: ಭಾರತೀಯರನ್ನು ಕರೆತರಲು ಹೋಗಿದ್ದ ವಿಮಾನ ಖಾಲಿ ಕೈಲಿ ವಾಪಸ್

ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ: ಭಾರತೀಯರನ್ನು ಕರೆತರಲು ಹೋಗಿದ್ದ ವಿಮಾನ ಖಾಲಿ ಕೈಲಿ ವಾಪಸ್

ರಷ್ಯಾ ದೇಶವು ಉಕ್ರೇನ್‌ನ ಗಡಿಯಲ್ಲಿ 1,50,000 ದಿಂದ 2,00,000 ಸೈನಿಕರನ್ನು ಜಮಾವಣೆ ಮಾಡಲಾಗಿದೆ ಎನ್ನಲಾಗಿದೆ.

- Advertisement -
- Advertisement -

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಉಕ್ರೇನ್‌ ದೇಶದ ಪೂರ್ವದಲ್ಲಿನ ಡಾನ್‌ಬಾಸ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿನ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳನ್ನು ರಕ್ಷಿಸಲು ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ಹಾಗಾಗಿ NATOದ ಪೂರ್ವದ ವಿಸ್ತರಣೆಯನ್ನು ಕೊನೆಗೊಳಿಸಲು ರಷ್ಯಾದ ಬೇಡಿಕೆಗಳ ಮೇಲೆ ಯುರೋಪ್‌ನಲ್ಲಿ ಯುದ್ಧ ಪ್ರಾರಂಭವಾಗಬಹುದು. ರಷ್ಯಾದ ಘೋಷಣೆಯ ನಂತರ ಕೈವ್ ಮತ್ತು ಇತರ ನಗರಗಳಿಂದ ಸ್ಫೋಟಗಳು ಕೇಳಿಬಂದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು “ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೇಶದಾದ್ಯಂತದ ನಗರಗಳಲ್ಲಿ ಸ್ಫೋಟಗಳು ಕೇಳಿಬಂದವು. ಶಾಂತಿಯುತ ಉಕ್ರೇನಿಯನ್ ನಗರಗಳ ಮೇಲೆ ದಾಳಿಯಾಗುತ್ತಿದೆ” ಎಂದು ಕುಲೆಬಾ ಟ್ವೀಟ್ ಮಾಡಿದ್ದಾರೆ.

ಇಂದು ಬೆಳಿಗ್ಗೆ 6 ಗಂಟೆಗೆ ದೂರದರ್ಶನದಲ್ಲಿ ಮಾತನಾಡಿದ ಪುಟಿನ್ “ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ” ಎಂದು ತಿಳಿಸಿದ್ದಾರೆ. ಉಕ್ರೇನ್‌ನ ಗಡಿಯಲ್ಲಿ 1,50,000 ದಿಂದ 2,00,000 ಸೈನಿಕರನ್ನು ಜಮಾವಣೆ ಮಾಡಲಾಗಿದೆ ಎನ್ನಲಾಗಿದೆ.

ಕಳೆದ ಒಂದು ವಾರದಿಂದ ಯುದ್ಧವನ್ನು ತಪ್ಪಿಸಲು ಮತ್ತು ರಷ್ಯಾದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳನ್ನು ಹೇರಲು ನಡೆಸಿದ ತೀವ್ರ ರಾಜತಾಂತ್ರಿಕತೆ ವಿಫಲವಾಗಿದೆ. ರಷ್ಯಾವು ಉಕ್ರೇನಿಯನ್ ಸೈನಿಕರನ್ನು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಕರೆ ನೀಡಿದೆ ಮತ್ತು ಉಕ್ರೇನ್‌ನ ಪೂರ್ವದಲ್ಲಿ ರಷ್ಯಾ ಬೆಂಬಲಿಗರ “ಜನಾಂಗೀಯ ಹತ್ಯೆ” ನಡೆಯುತ್ತಿದೆ ಎನ್ನುವ ಮೂಲಕ ತನ್ನ ಉಕ್ರೇನ್‌ ಮೇಲಿನ ಆಕ್ರಮಣವನ್ನು ಸಮರ್ಥಿಸಿಕೊಂಡಿದೆ.

ಈ ನಡೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ತೀವ್ರವಾಗಿ ಖಂಡಿಸಿದ್ದಾರೆ. “ರಷ್ಯಾದ ಈ ಕ್ರಮವು ಅನಾಹುತಕಾರಿ ಜೀವಹಾನಿ ಮತ್ತು ಮಾನವ ಸಂಕಟವನ್ನು ಉಂಟುಮಾಡುತ್ತದೆ ಈ ಯುದ್ದದಿಂದಾಗುವ ಪರಿಣಾಮಗಳಿಗೆ ಇಡೀ ಪ್ರಪಂಚವು ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಬುಧವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ‘ಮಾನವೀಯತೆಯ ಹೆಸರಿನಲ್ಲಿ’ ಯುದ್ಧವನ್ನು ನಿಲ್ಲಿಸುವಂತೆ ಕೊನೆಯ ಕ್ಷಣದಲ್ಲಿ ಮನವಿ ಮಾಡಿದರು. “ಅಧ್ಯಕ್ಷ ಪುಟಿನ್, ಮಾನವೀಯತೆಯ ಹೆಸರಿನಲ್ಲಿ ನಿಮ್ಮ ಸೈನ್ಯವನ್ನು ರಷ್ಯಾಕ್ಕೆ ಮರಳಿ ಕರೆತನ್ನಿ” ಎಂದು ಉಕ್ರೇನ್‌ನ ಭದ್ರತಾ ಮಂಡಳಿಯ ತುರ್ತು ಸಭೆಯ ನಂತರ ಗುಟೆರಸ್ ಹೇಳಿದ್ದಾರೆ.

ಯಥಾಸ್ಥಿತಿ ಕಾಪಾಡಿ, ಉಲ್ಬಣ ತಡೆಗಟ್ಟಿ- ಭಾರತದ ಕರೆ

“ಪರಿಸ್ಥಿತಿಯು ದೊಡ್ಡ ಬಿಕ್ಕಟ್ಟಿನತ್ತ ತಿರುಗುವ ಅಪಾಯದಲ್ಲಿದೆ. ಬೆಳವಣಿಗೆಗಳ ಬಗ್ಗೆ ನಾವು ನಮ್ಮ ಆಳವಾದ ಕಳವಳವನ್ನು ವ್ಯಕ್ತಪಡಿಸುತ್ತೇವೆ. ಇದನ್ನು ಎಚ್ಚರಿಕೆಯಿಂದ ನಿರ್ವಹಿಸದಿದ್ದರೆ, ಪ್ರದೇಶದ ಶಾಂತಿ ಮತ್ತು ಭದ್ರತೆಯನ್ನು ಹಾಳುಮಾಡಬಹುದು. ಉಲ್ಬಣವನ್ನು ತಡೆಗಟ್ಟಿ ಮತ್ತು ಪರಿಸ್ಥಿತಿಯನ್ನು ಹದಗೆಡಿಸಲು ಕಾರಣವಾಗುವ ಯಾವುದೇ ಮುಂದಿನ ಕ್ರಮದಿಂದ ದೂರವಿದ್ದೇವೆ” ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹೇಳಿದ್ದಾರೆ.

ಉಕ್ರೇನ್ ತನ್ನ ಪೂರ್ವ ವಿಘಟಿತ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಮಧ್ಯೆ ತನ್ನ ವಿಮಾನ ನಿಲ್ದಾಣಗಳನ್ನು ಮುಚ್ಚಿದೆ ಎಂದು ಹೇಳಿದ ನಂತರ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಉಕ್ರೇನ್‌ಗೆ ಹಾರುತ್ತಿರುವ ಏರ್ ಇಂಡಿಯಾ ವಿಮಾನವು ದೆಹಲಿಗೆ ಹಿಂತಿರುಗುತ್ತಿದೆ. ರಷ್ಯಾದೊಂದಿಗಿನ ಸಂಘರ್ಷದ ನಡುವೆ ಸಾವಿರಾರು ಭಾರತೀಯರು ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ.

ಏನಿದು ರಷ್ಯಾ-ಉಕ್ರೇನ್ ಬಿಕ್ಕಟ್ಟು?

2021ರ ಮಾರ್ಚ್‌ನಿಂದ ರಷ್ಯಾದ ಸಾವಿರಾರು ಪಡೆಗಳು ರಷ್ಯಾ-ಉಕ್ರೇನ್ ಗಡಿಯಲ್ಲಿ ಬೀಡುಬಿಟ್ಟಿವೆ. ಆಗಿನಿಂದ ಉಕ್ರೇನ್ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ಉಕ್ರೇನ್ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳಲು ರಷ್ಯಾ ತಯಾರಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಅಮೆರಿಕ ನೇತೃತ್ವದ NATOವನ್ನು (ಉತ್ತರ ಅಟ್ಲಾಂಟಿಕ್ ಸಂಘಟನೆ) ಉಕ್ರೇನ್ ಸೇರುತ್ತಿರುವುದರ ಕುರಿತು ರಷ್ಯಾ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್‌ಗೆ ಮಿಲಿಟರಿ ರಕ್ಷಣೆ ನೀಡುವುದಾಗಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಭರವಸೆ ನೀಡಿದ್ದಾರೆ. ಇದು ಜಾಗತಿಕ ಕಳವಳದ ವಿಷಯವಾಗಿದೆ. ಏಕೆಂದರೆ ಇದು ಪ್ರಪಂಚದ ಎರಡು ಅತಿ ದೊಡ್ಡ ಮಿಲಿಟರಿ ಶಕ್ತಿಗಳ ನಡುವಿನ ಬಿಕ್ಕಟ್ಟಾಗಿದೆ. ಅಲ್ಲದೆ ಈ ಎರಡು ಬಣಗಳು ಜಗತ್ತಿನ ಅತಿದೊಡ್ಡ ಪರಮಾಣು ಶಕ್ತಿಯನ್ನ ಹೊಂದಿವೆ.

ಉಕ್ರೇನ್ ನ್ಯಾಟೊಗೆ ಸೇರ್ಪಡೆಗೊಳ್ಳುವುದು ತಮಗೆ ಅತಿ ದೊಡ್ಡ ರಕ್ಷಣಾ ಅಪಾಯವನ್ನು ತಂದೊಡ್ಡುತ್ತದೆ ಎಂದು ರಷ್ಯಾ ಮತ್ತೆಮತ್ತೆ ಹೇಳುತ್ತಿದೆ. ಏಕೆಂದರೆ ರಷ್ಯಾವು ಯುರೋಪಿನೊಂದಿಗಿನ ಅತಿ ದೊಡ್ಡ ಗಡಿಯನ್ನು ಉಕ್ರೇನ್‌ನೊಂದಿಗೆ (2000 ಕಿ.ಮೀ ಗೂ ಹೆಚ್ಚು) ಹಂಚಿಕೊಂಡಿದೆ. ಸೋವಿಯತ್ ಯೂನಿಯನ್ ಎದುರಾಗಿ ಹಲವು ದೇಶಗಳ ಒಕ್ಕೂಟ ಮಾಡಿಕೊಂಡು ಸಮತೋಲನ ಸಾಧಿಸಲು NATO ಹುಟ್ಟಿಕೊಂಡಿತು. ಸೋವಿಯತ್ ಯೂನಿಯನ್ ಪತನಗೊಂಡ ನಂತರ NATOವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಅಮೆರಿಕ ಭರವಸೆ ನೀಡಿದ್ದರೂ ಸಹ, ಈಗ ನ್ಯಾಟೊ ರಷ್ಯಾದ ಹತ್ತಿರದವರೆಗೆ ವಿಸ್ತರಣೆಗೊಂಡಿದೆ. ಅಮೆರಿಕ ರಷ್ಯಾದೊಂದಿಗೆ ಮೊದಲಿನಿಂದಲೂ ಕೆಟ್ಟ ಸಂಬಂಧ ಹೊಂದಿದೆ. ನಿರ್ದಿಷ್ಟವಾಗಿ ಸಿರಿಯಾದ ಅಂತರ್ಯುದ್ಧದ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ, ಬಿಕ್ಕಟ್ಟಿನ ವಿರುದ್ಧ ಬಣಗಳ ಪರ ನಿಂತಿದ್ದವು.

ರಷ್ಯಾದೊಂದಿಗೆ ಉಕ್ರೇನ್‌ನ ಐತಿಹಾಸಿಕ ಸಂಬಂಧ

ಉಕ್ರೇನ್ ದೇಶವು ಮೊದಲ ಸಹಸ್ರಮಾನದ ಅಂತ್ಯದ ವೇಳೆಗೆ ಕೀವಾನ್ ರುಸ್ ಪ್ರಾಂತದ ಜನರ ಅಭಿವೃದ್ಧಿಯ ಜೊತೆಗೆ ಬೆಸೆದುಕೊಂಡು ಅಸ್ತಿತ್ವದಲ್ಲಿದೆ. ವಿವಿಧ ಸಮಯದಲ್ಲಿ ವಿವಿಧ ರಷ್ಯನ್ ಸಾಮ್ರಾಜ್ಯಗಳು ಇದನ್ನು ಆಳಿವೆ. ರಷ್ಯಾ ಕ್ರಾಂತಿಯ ನಂತರ ಆರಂಭವಾದ ಉಕ್ರೇನಿಯನ್ ಸ್ವಯಂ-ಅಸ್ತಿತ್ವಕ್ಕಾಗಿನ ಚಳವಳಿಯು ಉಕ್ರೇನ್ ಸ್ವಾತಂತ್ರ್ಯಕ್ಕೆ ಕಾರಣವಾಯಿತು. ಮೊದಲ ಮಹಾಯುದ್ಧದ ನಂತರ ಉಕ್ರೇನ್ ಪ್ರಭುತ್ವವು ಯುಎಸ್‌ಎಸ್‌ಆರ್‌ನೊಂದಿಗೆ ಸೇರುವ ಮೂಲಕ ಉಕ್ರೇನಿಯನ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಯಿತು ಮತ್ತು ಯುಎಸ್‌ಎಸ್‌ಆರ್ ಪತನದವರೆಗೂ ಅದರ ಭಾಗವಾಗಿಯೇ ಇತ್ತು. ಆ ನಂತರ ಮತ್ತೆ ಅದು ಸ್ವತಂತ್ರ ದೇಶವಾಯಿತು.

ಯುಎಸ್‌ಎಸ್‌ಆರ್‌ನ ಹೆಚ್ಚಿನ ಮಾಜಿ ಸದಸ್ಯರು ಯುಎಸ್‌ಎಸ್‌ಆರ್ ಪತನದ ನಂತರವೂ ರಷ್ಯಾದೊಂದಿಗೆ ಬಲವಾದ ಮಿಲಿಟರಿ ಮತ್ತು ಆರ್ಥಿಕ ಸಂಬಂಧಗಳನ್ನು ಇಟ್ಟುಕೊಂಡಿದ್ದರು. ಆ ನಂತರ ಉಕ್ರೇನ್ ಮತ್ತಷ್ಟು ಸ್ವತಂತ್ರಗೊಂಡಿತು ಮತ್ತು ಯುರೋಪಿಯನ್ ಶಕ್ತಿಗಳೊಂದಿಗೆ ನಿಕಟ ಸಂಬಂಧಗಳನ್ನು ರೂಪಿಸಿಕೊಂಡಿತು.

ಉಕ್ರೇನ್‌ನಲ್ಲಿ ರಷ್ಯಾಕ್ಕೆ ಬೆಂಬಲ

ಉಕ್ರೇನ್‌ನ ದಕ್ಷಿಣ ಮತ್ತು ಪೂರ್ವ ಭಾಗಗಳು, ಸಾಂಸ್ಕೃತಿಕ ಮತ್ತು ಆರ್ಥಿಕ ಕಾರಣಗಳಿಗಾಗಿ, ರಷ್ಯಾದೊಂದಿಗೆ ನಿಕಟ ಸಂಬಂಧಗಳನ್ನು ಮರುಸ್ಥಾಪಿಸಲು ಒಲವು ತೋರಿದವು. ಜನಾಂಗೀಯವಾಗಿ ಉಕ್ರೇನ್ ಇನ್ನೂ ದೊಡ್ಡ ರಷ್ಯನ್ ಜನಸಂಖ್ಯೆಯನ್ನು ಹೊಂದಿತ್ತು ಮತ್ತು 2003ರಲ್ಲಿ ಅವರು ರಷ್ಯಾ ಪರವಾದ ನಾಯಕತ್ವವನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು. ಆದರೂ ಹೊಸ ಸರ್ಕಾರ ರಷ್ಯಾದೊಂದಿಗಿನ ಹೊಸ ಸಂಬಂಧವನ್ನು ಸಿದ್ಧಿಸಿಕೊಳ್ಳುವ ಮುನ್ನವೇ ಕಿತ್ತಳೆ ಕ್ರಾಂತಿ ಹೆಸರಿನ ಅತಿದೊಡ್ಡ ರಷ್ಯನ್ ವಿರೋಧಿ ಪ್ರತಿಭಟನೆಗಳು ಸಿಡಿದೆದ್ದವು.

2008ರಲ್ಲಿ ಅಮೆರಿಕವು ನ್ಯಾಟೊಗೆ ಸೇರಲು ಉಕ್ರೇನ್‌ಗೆ ಆಹ್ವಾನ ನೀಡಿತು. ಇದರಿಂದ ರಷ್ಯನ್ ಸರ್ಕಾರ ಕಳವಳಕ್ಕೀಡಾಯಿತು. ಶೀತಲ ಸಮರದ ಸಂದರ್ಭದಲ್ಲಿ ಹುಟ್ಟಿಕೊಂಡ ನ್ಯಾಟೊ ಮೈತ್ರಿಕೂಟವು ತನ್ನ ಉದ್ದೇಶಗಳನ್ನು ಮೀರಿ ಬೆಳೆದದ್ದೇ ಅಲ್ಲದೆ, ರಷ್ಯಾದ ಹತ್ತಿರದ ದೇಶಗಳನ್ನು ಸೆಳೆದುಕೊಳ್ಳುವುದರ ಕಡೆಗೂ ಮುಂದುವರೆಯಿತು. ಉಕ್ರೇನ್ NATO ಸದಸ್ಯತ್ವ ಪಡೆಯುವುದರಿಂದ ರಷ್ಯಾವು ಅನಿರ್ದಿಷ್ಟಾವಧಿಗೆ ಮಿಲಿಟರಿ ಅನಾನುಕೂಲತೆಗಳಿಗೆ ಒಳಗಾಗುತ್ತದೆ.

ಈ ಅಸಮಾಧಾನವು ಉಕ್ರೇನ್‌ನ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಅಶಾಂತಿಗೆ ಕಾರಣವಾಯಿತು ಮತ್ತು ಸಾಮೂಹಿಕ ಅಶಾಂತಿ ಉತ್ತುಂಗಕ್ಕೇರಿತು. ರಷ್ಯಾವು ಉಕ್ರೇನ್‌ನ ಕೆಲವು ಪ್ರದೇಶಗಳ ಮೇಲೆ ಹಕ್ಕು ಸಾಧಿಸುತ್ತಿರುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಶಾಂತಿ ಉಂಟಾಯಿತು. ಇದು ಡಾನ್‌ಬಾಸ್ ಯುದ್ಧಕ್ಕೆ ಮತ್ತು ರಷ್ಯಾವು ಕ್ರೈಮಿಯಾ ಪ್ರದೇಶವನ್ನು ಸ್ವಾಧೀನ ಪಡೆಯಲು ಕಾರಣವಾಯಿತು. ಈ ಪ್ರದೇಶದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿ ಗುಂಪುಗಳಿಗೆ ಬಲವಾದ ಬೆಂಬಲವಿದ್ದು, ಅವರು ಪೂರ್ವ ಉಕ್ರೇನ್‌ನಲ್ಲಿ ಕೊನೆಯವರೆಗೂ ಯುದ್ಧವನ್ನು ಮುಂದುವರೆಸಿದರು. ಡಾನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳು ಅತಿ ಹೆಚ್ಚಿನ ಜನಾಂಗೀಯ ರಷ್ಯನ್ ಜನಸಂಖ್ಯೆಯನ್ನು ಹೊಂದಿದ್ದು ಸಂಘರ್ಷದ ಸ್ಥಳಗಳಾಗಿವೆ.

ಡಾನ್‌ಬಾಸ್ ಯುದ್ಧದ ನಂತರ

ಡಾನ್‌ಬಾಸ್ ಯುದ್ಧದ ನಂತರ ಮಿನ್ಸ್ಕ್ ಪ್ರೋಟೋಕಾಲ್ ಎಂದು ಕರೆಯಲ್ಪಡುವ ಉಕ್ರೇನ್, ರಷ್ಯಾ ಮತ್ತು ಯುರೋಪ್‌ನ ಭದ್ರತೆ ಮತ್ತು ಸಹಕಾರಕ್ಕಾಗಿನ ಸಂಸ್ಥೆ (OSCE)ಗಳ ನಡುವಿನ ತ್ರಿಪಕ್ಷೀಯ ಒಪ್ಪಂದವು ಏರ್ಪಟ್ಟು ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸಲಾಯಿತು. ವ್ಯಾಪಕ ಮಾತುಕತೆಗಳ ನಂತರ, ಮಿನ್ಸ್ಕ್ II ಎಂದು ಕರೆಯಲ್ಪಡುವ ಹೊಸ ಪ್ಯಾಕೇಜ್‌ಗೆ 2015ರಲ್ಲಿ ಸಹಿ ಮಾಡಲಾಯಿತು.

ಮಿನ್ಸ್ಕ್ II ಉಕ್ರೇನ್‌ನ ಡಾನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಲ್ಲಿ ಪೂರ್ಣ ಕದನ ವಿರಾಮಕ್ಕೆ ಕರೆ ನೀಡಿತು. ಈ ಎರಡೂ ಪ್ರದೇಶಗಳು ಪ್ರಬಲ ಪ್ರತ್ಯೇಕತಾವಾದಿ ಚಳವಳಿಗಳ ತಾಣಗಳಾಗಿವೆ. ಭಾರೀ ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವುದನ್ನು OSCE ಮೇಲ್ವಿಚಾರಣೆ ಮಾಡಬೇಕಾಗಿತ್ತು. ಉಕ್ರೇನ್ ಸಾಂವಿಧಾನಿಕ ಸುಧಾರಣೆಗಳನ್ನು ಜಾರಿಗೊಳಿಸುವುದು ಮತ್ತು ವಿಕೇಂದ್ರೀಕರಣವನ್ನು ಉತ್ತೇಜಿಸಬೇಕಾಗಿತ್ತು. ಉಕ್ರೇನ್ ಮತ್ತು ರಷ್ಯಾ ಎರಡೂ ಮಿನ್ಸ್ಕ್ II ತಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲಿಲ್ಲ ಎಂದೇ ಭಾವಿಸುತ್ತವೆ.

ಪಶ್ಚಿಮ ಯೂರೋಪಿಯನ್ ದೇಶಗಳು ಅದರಲ್ಲಿಯೂ ಫ್ರಾನ್ಸ್ ಮಿನ್ಸ್ಕ್ II ಅನ್ನು ಪ್ರಬಲವಾಗಿ ಬೆಂಬಲಿಸಿದವು. ಒಪ್ಪಂದವು ಈ ಬಿಕ್ಕಟ್ಟಿನಲ್ಲಿ OSCEಗೆ ಮಧ್ಯಸ್ಥಿಕೆ ವಹಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರ ನೀಡಿತು ಹಾಗೂ ಫ್ರಾನ್ಸ್‌ಅನ್ನು ಮಧ್ಯಸ್ಥಗಾರನನ್ನಾಗಿ ಮಾಡಿತು. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಮಿನ್ಸ್ಕ್ II ಅನ್ನು ಜಾರಿಗೊಳಿಸುವುದು ಉಕ್ರೇನ್ ಮತ್ತು ರಷ್ಯಾಕ್ಕೆ ಉತ್ತಮ ಆಯ್ಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅಮೆರಿಕ ಮತ್ತು ರಷ್ಯಾ

ಶೀತಲ ಯುದ್ಧದ ಅಂತ್ಯವು ಅಮೆರಿಕದ ಅಪರಿಮಿತ ಜಾಗತಿಕ ಮಿಲಿಟರಿ ಪ್ರಾಬಲ್ಯದ ಅವಧಿಗೆ ಸಾಕ್ಷಿಯಾಯಿತು. ಕಳೆದ 15 ವರ್ಷಗಳಲ್ಲಿ ಪ್ರಪಂಚದ ಇತರ ಶಕ್ತಿಗಳು ಸಹ ಜಗತ್ತಿನ ಹಲವು ಭಾಗಗಳಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಂಡಿವೆ. ಸೋವಿಯತ್ ಒಕ್ಕೂಟದಿಂದ ಮುರಿದುಬಿದ್ದ ಹಲವು ದೇಶಗಳ ನಿರ್ಮಾಣವು ಪಾಶ್ಚಿಮಾತ್ಯ ಪ್ರಾಬಲ್ಯಕ್ಕೆ ಸವಾಲು ಹಾಕುವ ಪವರ್ ಬ್ಲಾಕ್‌ಅನ್ನು ರಷ್ಯಾ ಪ್ರತಿನಿಧಿಸುತ್ತದೆ. ಉಕ್ರೇನ್ ಪಶ್ಚಿಮ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳುವ ಆಶಯದೊಂದಿಗೆ ತಟಸ್ಥವಾಗಿದೆ. ಉಕ್ರೇನ್ NATOಗೆ ಸೇರುವ ಸಾಧ್ಯತೆಯು ರಷ್ಯಾದ ಹಿತಾಸಕ್ತಿಗಳಿಗೆ ನೇರ ಬೆದರಿಕೆಯನ್ನುಂಟುಮಾಡುತ್ತದೆ. ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ, ಅಮೆರಿಕ ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಇದು ರಷ್ಯಾದಲ್ಲಿ ವಿದೇಶಿ ಹೂಡಿಕೆಗಳಲ್ಲಿ ಭಾರಿ ಕುಸಿತಕ್ಕೆ ಕಾರಣವಾಯಿತು. ಇದು ರಷ್ಯಾ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಹದಗೆಡಿಸಿದೆ.

ಈ ಎರಡೂ ಬಣಗಳು ಸಹ ನೇರ ಯುದ್ಧವನ್ನು ತಪ್ಪಿಸಲು ಬಯಸುತ್ತವೆ. ಏಕೆಂದರೆ ರಷ್ಯಾ ಮತ್ತು ಅಮೆರಿಕ ನಡುವಿನ ಯುದ್ಧವು ಮಾನವಕುಲದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ರಷ್ಯಾವನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಳ್ಳುವ ಅಮೆರಿಕದ ಯೋಜನೆಗಳ ಕುರಿತು ಅಂತಾರಾಷ್ಟ್ರೀಯ ಸಮುದಾಯವು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೆ ಈಗಾಗಲೇ ಉಕ್ರೇನ್ ತೊರೆಯುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಮೆರಿಕದ ಪ್ರಜೆಗಳಿಗೆ ಸಲಹೆ ನೀಡಿದ್ದಾರೆ.

ಕ್ಯೂಬ ಕ್ರಾಂತಿಯ ನಂತರ, ಅಮೆರಿಕದ ಗಡಿಗಳ ಬಳಿ ಸೋವಿಯತ್ ಮಿತ್ರ ದೇಶಗಳು ತಲೆಎತ್ತುವುದು ತನಗೆ ಭಾರೀ ಅಪಾಯ ಎನ್ನುವಂತೆ ಅಮೆರಿಕ ಎತ್ತುತ್ತಿದ್ದ ಕಳವಳಗಳನ್ನು ಇತ್ತೀಚಿನ ಪರಿಸ್ಥಿತಿ ವಿಚಿತ್ರವಾಗಿ ಪ್ರತಿಬಿಂಬಿಸುತ್ತದೆ. ಅಮೆರಿಕದ ಕಣ್ಣುಗಳಿಗೆ ಇಂದಿಗೂ ಕ್ಯೂಬ ಬೆದರಿಕೆಯಾಗಿಯೇ ಉಳಿದಿದೆ, ಅದಕ್ಕೆ ಅನುಗುಣವಾಗಿಯೇ ನಿರ್ಬಂಧಗಳನ್ನು ಹೇರುತ್ತಿರುತ್ತದೆ.

ಉಕ್ರೇನ್‌ಅನ್ನು ತಟಸ್ಥವಾಗಿಡುವುದು

ಸೋವಿಯತ್ ಒಕ್ಕೂಟದ ಪತನದ ನಂತರ NATOದ ಪೂರ್ವದ ವಿಸ್ತರಣೆಗೆ ಮತ್ತು ಉಕ್ರೇನ್ NATOದ ಸದಸ್ಯತ್ವ ಪಡೆಯಲು ಮುಂದಾಗಿರುವುದಕ್ಕೆ ನೇರ ಪ್ರತಿಕ್ರಿಯೆಯಾಗಿ ರಷ್ಯಾ ಉಕ್ರೇನ್ ಗಡಿಯಲ್ಲಿ ತನ್ನ ಪಡೆಯನ್ನು ನಿಯೋಜಿಸಿದೆ. ಅಮೆರಿಕ ಹೊರತುಪಡಿಸಿ ಪಶ್ಚಿಮ ಶಕ್ತಿಗಳು ರಾಜತಾಂತ್ರಿಕ ವಿಧಾನಕ್ಕೆ ಒಲವು ತೋರಿವೆ. ಇದು ಉಕ್ರೇನ್‌ಅನ್ನು ತಟಸ್ಥ ಶಕ್ತಿಯಾಗಿ ಉಳಿಸಬಹುದಾಗಿದೆ.

ಪೂರ್ವ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿ ಚಳುವಳಿಗಳನ್ನು ರಹಸ್ಯವಾಗಿ ಬೆಂಬಲಿಸಲು ರಷ್ಯಾ ಸಮರ್ಥವಾಗಿದ್ದರೂ, ಉಕ್ರೇನ್‌ನಅನ್ನು ಸಂಪೂರ್ಣವಾಗಿ ಆಕ್ರಮಿಸಲು ಅದು ಆಸಕ್ತಿ ತೋರುತ್ತಿಲ್ಲ. ರಾಜತಾಂತ್ರಿಕ ವಿಧಾನವು ರಷ್ಯಾದ ಭದ್ರತಾ ಕಾಳಜಿಗಳನ್ನು ರಕ್ಷಿಸಲು ಸಾಧ್ಯವಾದರೆ, ಸಂಘರ್ಷವನ್ನು ಪರಿಹರಿಸಬಹುದು.

ಉಕ್ರೇನ್ ತಟಸ್ಥವಾಗಿರುವುದು ವಿಶ್ವದ ಅತ್ಯುತ್ತಮ ಹಿತಾಸಕ್ತಿಯಾಗಲಿದೆ. ಉಕ್ರೇನ್ ವಿಶ್ವದ ಎರಡು ದೊಡ್ಡ ಮತ್ತು ಅತ್ಯಂತ ಮಾರಣಾಂತಿಕ ಮಿಲಿಟರಿ ಮೈತ್ರಿಕೂಟಗಳ ನಡುವೆ ಭೌಗೋಳಿಕ ಬಫರ್ ವಲಯವಾಗಿ ಕಾರ್ಯನಿರ್ವಹಿಸುತ್ತದೆ. ಅಮೆರಿಕ ಗೌರವಿಸಲು ನಿರಾಕರಿಸುತ್ತಿರುವ ರಾಜತಾಂತ್ರಿಕ ಮಾರ್ಗದ ಮೂಲಕ ಇದನ್ನು ಉತ್ತಮವಾಗಿ ಸಾಧಿಸಬಹುದು. NATOನಲ್ಲಿರುವ ಮಿತ್ರರಾಷ್ಟ್ರಗಳು ಸಹ ರಾಜತಾಂತ್ರಿಕ ಪರಿಹಾರವನ್ನು ಬಯಸುತ್ತಿದ್ದಾರೆ.


ಇದನ್ನೂ ಓದಿ: Explainer: ಏನಿದು ಉಕ್ರೇನ್ ಬಿಕ್ಕಟ್ಟು? ಮತ್ತೆ ಆರಂಭವಾದ ರಷ್ಯಾ v/s ಅಮೆರಿಕ ಶೀತಲ ಸಮರಕ್ಕೆ ಪರಿಹಾರವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....