Homeಕರ್ನಾಟಕರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-1

ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-1

- Advertisement -
- Advertisement -

1980ರಿಂದ 2000ನೇ ವರ್ಷದ 20 ವರ್ಷಗಳ ರೈತ ಹೋರಾಟ, ನಮ್ಮ ಸರ್ಕಾರಗಳು ನೀತಿಗಳ ವಿರುದ್ಧ ಸಂಘಟಿತವಾಗಿತ್ತಷ್ಟೆ, ಬ್ರಿಟಿಷರು ದೇಶಬಿಟ್ಟು ಹೋದನಂತರವೂ ಅವರೇ ರೂಪಿಸಿದ್ದ ಕೈಗಾರಿಕೆಗಳಿಗೆ, ವ್ಯಾಪಾರಿಗಳಿಗೆ, ನಗರದ ಐಷಾರಾಮಿಗಳಿಗೆ ಅನುಕೂಲವಾಗುವಂತಹ, ರೈತರನ್ನು ಮೋಸಮಾಡಿ, ಶೋಷಣೆ ಮಾಡುವಂತಹ ನೀತಿಗಳು ಮುಂದುವರಿದಿರುವುದರ ವಿರುದ್ಧ ರೈತ ಚಳವಳಿ ಹೋರಾಟ ಮಾಡುತ್ತಾ ಬಂದಿದೆ.

ಆದರೆ, ಈಗ 2000ನೇ ವರ್ಷದಿಂದ ನಮ್ಮಂತಹ ದೇಶದ ಕೃಷಿ ಕ್ಷೇತ್ರ ಮತ್ತು ರೈತರು ಹೋರಾಟ ಮಾಡಬೇಕಾದ ಸಮಸ್ಯೆಗಳೇ ಬೇರೆ ಸ್ವರೂಪದ್ದಾಗಿದೆ. ಇದಕ್ಕೆ ಕಾರಣ, ನಮ್ಮ ಕೇಂದ್ರ ಸರ್ಕಾರ, ಕೃಷಿ ಕ್ಷೇತ್ರವನ್ನಷ್ಟೇ ಅಲ್ಲ, ನಮ್ಮ ದೇಶದ ಇಡೀ ಆರ್ಥಿಕ ಕ್ಷೇತ್ರವನ್ನೇ ಪ್ರಪಂಚದ ಆರ್ಥಿಕ ವ್ಯವಸ್ಥೆಯ ಜೊತೆಗೆ ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು. ಇದನ್ನೇ ನಾವು ಗ್ಯಾಟ್ ಒಪ್ಪಂದ ಎನ್ನುವುದು. ಇದನ್ನೇ ಈಗ ವಿಶ್ವ ವಾಣಿಜ್ಯ ಸಂಸ್ಥೆ ಅಥವಾ ವಿಶ್ವ ವ್ಯಾಪಾರಿ ಸಂಸ್ಥೆ ಎನ್ನುತ್ತಾರೆ.

ವಿಶ್ವ ವ್ಯಾಪಾರಿ ಸಂಸ್ಥೆಯ (W.T.O) ಹಿಂದಿರುವ ಹುನ್ನಾರಗಳು

‘ಗ್ಯಾಟ್’ (GATT) ಎಂದರೆ “ಜನರಲ್ ಅಗ್ರಿಮೆಂಟ್ ಆನ್ ಟ್ಯಾರಿಫ್ ಅಂಡ್ ಟ್ರೇಡ್” ಎಂದು. ಅಂದರೆ, “ವಾಣಿಜ್ಯ ಮತ್ತು ತೆರಿಗೆಗಳ ಸಾರ್ವತ್ರಿಕ ಒಪ್ಪಂದ” ಎಂದು. ಎರಡನೇ ಮಹಾಯುದ್ಧದ ನಂತರ, ಯುದ್ಧದಲ್ಲಿ ಭಾಗವಹಿಸಿದ್ದ ಬಿಳಿಯ ದೇಶಗಳ ಆರ್ಥಿಕ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದ್ದರಿಂದ, ಅದನ್ನೆಲ್ಲ ಸರಿಪಡಿಸಿಕೊಳ್ಳಲು ರೂಪಿಸಿದ ಒಪ್ಪಂದ ಇದು. ಇದು ರೂಪಿತವಾದದ್ದು 1948ರಲ್ಲಿ. 1946ರಿಂದ ಎಲ್ಲ ದೇಶಗಳಿಗೂ ಸ್ವಾತಂತ್ರ್ಯ ಕೊಡಬೇಕೆಂಬ ಅಂತಾರಾಷ್ಟ್ರೀಯ ಒತ್ತಡದ ನಡುವೆಯೇ ಈ ದೇಶಗಳ ಲೂಟಿಯನ್ನು ಮುಂದುವರಿಸಲು ಬೇಕಾದ ಸಂಸ್ಥೆಗಳನ್ನು ಬಿಳಿಯ ದೇಶಗಳು ರೂಪಿಸುತ್ತಿದ್ದ ಕಾಲ ಇದು. ಕೃಷಿಯನ್ನು ಈ ಸಂಸ್ಥೆಯಲ್ಲಿ ಸೇರಿಸಬೇಕೆಂಬ ಅಂಶವೂ ಆಗ ಸೇರಿತ್ತು.

ವಿಶ್ವ ವ್ಯಾಪಾರ ಸಂಸ್ಥೆ

ಆದರೆ, ಇದಕ್ಕೆ ಅಮೆರಿಕ ತಕರಾರು ತೆಗೆಯಿತು. ಕಾರಣ, ಮೂಲ ಗ್ಯಾಟ್ ಒಪ್ಪಂದದಲ್ಲಿ ಕೃಷಿ ಆಮದುಗಳಲ್ಲಿ ಪ್ರಮಾಣದ ಮಿತಿಗೆ ನಿಷೇಧವಿತ್ತು. ಸಕ್ಕರೆ, ಹೈನು ಸಾಮಗ್ರಿಗಳು, ಮತ್ತಿತರ ಕೃಷಿ ಉತ್ಪಾದನೆಗಳಿಗೆ ಸಂಬಂಧಿಸಿದಂತೆ ತನ್ನದೇ ಆದ ರಕ್ಷಣಾ ನೀತಿಯನ್ನು ಹೊಂದಲು ಅವಕಾಶವಿಲ್ಲದಿದ್ದರೆ ಗ್ಯಾಟ್ ಒಪ್ಪಂದದಿಂದ ಹೊರಹೋಗುತ್ತೇನೆಂದು ಬೆದರಿಸಿತು. ಆಗ ಅಮೆರಿಕಕ್ಕೆ ಕಾಲಮಿತಿಯಿಲ್ಲದೆ ಅವಕಾಶ ಕೊಡಲಾಯಿತು. ಈ ಕಾರಣ, ಇತರ ಎಲ್ಲ ದೇಶಗಳಿಗೂ ಈ ವಿನಾಯಿತಿಯನ್ನು ತಾರತಮ್ಯದ ಆಪಾದನೆಯಿಂದ ಮುಕ್ತವಾಗಲು ಕೊಡಬೇಕಾಯಿತು.

ಇದರಿಂದಾಗಿ ಅಮೆರಿಕ ಮತ್ತು ಅಧಿಕ ಉತ್ಪಾದನೆ ಮಾಡುತ್ತಿದ್ದ ದೇಶಗಳು, ತಮ್ಮ ಕೃಷಿಯನ್ನು ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ “ಗ್ಯಾಟ್‌”ನಲ್ಲಿದ್ದ ಕೃಷಿ ಸಬ್ಸಿಡಿ, ನಿಷೇಧದೊಳಗಿದ್ದ ವಿನಾಯಿತಿ ನಿಯಮಗಳನ್ನು ದುರುಪಯೋಗ ಮಾಡಿಕೊಂಡವು. ಬೆಲೆ ಮತ್ತು ಮಾರಾಟ ರಕ್ಷಣೆ ನೀತಿಗಳಿಂದ ಹಾಗೂ ಸಹಾಯಧನಗಳಿಂದ ಮತ್ತು ಇತರ ಬೆಂಬಲ ನೀತಿಗಳಿಂದ ತಮ್ಮ ರೈತರ ಆದಾಯವನ್ನು ಮಾರುಕಟ್ಟೆ ವ್ಯತ್ಯಾಸಗಳಿಂದ ಪ್ರತ್ಯೇಕಿಸಿದವು. ಈ ಕಾರಣಗಳಿಂದಾಗಿ, ವಿಶ್ವ ಮಾರುಕಟ್ಟೆ ಬೆಲೆಗಳಿಗಿಂತ ಸ್ಥಳೀಯ ಬೆಲೆಗಳನ್ನು ಹೆಚ್ಚಿಗೆ ಇಡುವ ಮಾಲಿಕ ಮತ್ತು ಉತ್ಪಾದನೆಯ ಮೇಲೆ ಯಾವುದೇ ನಿಯಂತ್ರಣ ಹೇರದೆ, ಆಹಾರ ಆಮದು ಮಾಡಿಕೊಳ್ಳುತ್ತಿದ್ದ ಯುರೋಪು 1970ರ ಹೊತ್ತಿಗೆ ಆಹಾರ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಿತು. ಅಧಿಕವಾಗಿದ್ದ ಹೆಚ್ಚುವರಿ ಬೆಳೆಯನ್ನು ಯುರೋಪು ಒಕ್ಕೂಟ ರಫ್ತು ಮಾಡಲೇಬೇಕಾಯಿತು. ಜೊತೆಗೆ, ಅಧಿಕ ಸಹಾಯಧನ ಪಡೆದು ಮೂರನೇ ಪ್ರಪಂಚದ ಮಾರುಕಟ್ಟೆ ಆಕ್ರಮಿಸಿಕೊಂಡಿದ್ದ ಅಮೆರಿಕದೊಂದಿಗೆ ಪೈಪೋಟಿ ಮಾಡಬೇಕಾಯಿತು.

ಈ ಪೈಪೋಟಿ ತೀವ್ರವಾಯಿತು. ಇದರಿಂದ ಅಮೆರಿಕ ಮತ್ತು ಯುರೋಪು ದೇಶಗಳ ರೈತರಿಗೇನೂ ಹಾನಿಯಾಗಲಿಲ್ಲ, ಹಾನಿಯಾದದ್ದು ಮೂರನೇ ಪ್ರಪಂಚದ ರೈತರಿಗೆ. ಉದಾ: ಪಶ್ಚಿಮ ಮತ್ತು ದಕ್ಷಿಣ ಆಫ್ರಿಕ ದೇಶಗಳಿಗೆ, ಸಹಾಯಧನ ಪಡೆದ, ಕಡಿಮೆ ಬೆಲೆ ದನದ ಮಾಂಸದ ರಫ್ತಿನಿಂದ, ಸಣ್ಣಸಣ್ಣ ದನ ಸಾಕಣೆ ಮಾಡುತ್ತಿದ್ದ ರೈತರಿಗೆ.

ಈ ಪರಸ್ಪರ ಪೈಪೋಟಿಯಿಂದ ಇಬ್ಬರಿಗೂ ಲಾಭವಿಲ್ಲವೆಂದು ಕ್ರಮೇಣ ಅಮೆರಿಕ ಮತ್ತು ಯುರೋಪು ಒಕ್ಕೂಟ ಮನಗಂಡವು. ಈ ಮನವರಿಕೆಯಿಂದಾಗಿಯೇ, ಕೃಷಿಯನ್ನು ಗ್ಯಾಟ್ ಒಪ್ಪಂದದೊಳಗೆ ಸೇರಿಸಬೇಕೆಂದು ಒತ್ತಾಯ ತಂದವರೂ ಇವರೇ, ತಮಗಿಬ್ಬರಿಗೂ ಲಾಭವಾಗುವಂತಹ ನಿಯಮಗಳನ್ನು ಈ ಒಪ್ಪಂದದೊಳಗೆ ಸೇರಿಸುವ ಹುನ್ನಾರ ನಡೆಸಿದವರು ಇವರೇ.

ಅಮೆರಿಕ ಮತ್ತು ಯುರೋಪಿನ ಒಕ್ಕೂಟ 1992-93ರಲ್ಲಿ, ತಮ್ಮತಮ್ಮೊಳಗೇ ಮಾಡಿಕೊಂಡಿದ್ದ “ಬ್ಲೇರ್ ಹೌಸ್ ಒಪ್ಪಂದ” ಎಂಬ ಒಡಂಬಡಿಕೆಯನ್ನು “ಗ್ಯಾಟ್‌ನ ಕೃಷಿ ಒಪ್ಪಂದ” ಎಂಬ ಹೊಸ ಹೆಸರಿನಲ್ಲಿ 1994ರಲ್ಲಿ ಎಲ್ಲ ದೇಶಗಳ ಮೇಲೆ ಹೇರಲಾಯಿತು.

ಈ ಕೃಷಿ ಒಪ್ಪಂದದಲ್ಲಿರುವ ಹುನ್ನಾರ-ಕುತಂತ್ರಗಳು

1995ರಿಂದ ಪ್ರಾರಂಭಗೊಂಡು, 1986-88ನ್ನು ಆಧಾರವಾಗಿಟ್ಟುಕೊಂಡು, ಆಗಿದ್ದ ಸಹಾಯಧನದ ಒಟ್ಟು ಮೊತ್ತದಲ್ಲಿ, ಮುಂಬರುವ ಆರು ವರ್ಷಗಳಲ್ಲಿ, ಅಂದರೆ 2001ನೇ ಇಸವಿಯೊಳಗಾಗಿ ಶೇಕಡ 20ರಷ್ಟು ರದ್ದು ಮಾಡಬೇಕು. (ಆದರೆ, ಇದರಲ್ಲಿ ಅಮೆರಿಕ ಮತ್ತು ಯೂರೋಪು ದೇಶಗಳು ತಮ್ಮ ರೈತರಿಗೆ ಕೊಡುತ್ತಿರುವ “ನೇರ ಆದಾಯ ಸಂದಾಯ”ಗಳು ವಿನಾಯಿತಿಗೊಂಡಿವೆ).

ರಫ್ತು ಸಹಾಯಧನವನ್ನು 1995ರಿಂದ 2001ರವರೆಗೆ ರಫ್ತಿನ ಒಟ್ಟು ಪ್ರಮಾಣದ ಶೇಕಡಾ 21ರಷ್ಟು ಹಾಗೂ ಒಟ್ಟು ಮೌಲ್ಯದ ಶೇಕಡಾ 35ರಷ್ಟು 6 ವರ್ಷಗಳೊಳಗಾಗಿ ಇಳಿಸಬೇಕು ಹಾಗೂ 2001ರ ನಂತರ ಯಾವುದೇ ಕಾರಣಕ್ಕೂ ರಫ್ತು ಸಹಾಯಧನವನ್ನು ಹೆಚ್ಚಿಸಬಾರದು.

1986-88ನ್ನು ಆಧಾರವಾಗಿಟ್ಟುಕೊಂಡು, ಆಮದು ಪ್ರಮಾಣವನ್ನು ರದ್ದುಮಾಡಿ, ಆಮದುಗಳನ್ನು ಆಮದು ತೆರಿಗೆ ಪದ್ಧತಿಗೆ ಒಳಪಡಿಸಬೇಕು, ಮತ್ತು ಈ ಅಮದು ತೆರಿಗೆಗಳನ್ನು 1995ರಿಂದ 2001ರ ಒಳಗಾಗಿ ಕನಿಷ್ಠ ಶೇ. 15ರಷ್ಟು ಮತ್ತು ಸರಾಸರಿ 36%ಗೆ ಇಳಿಸಬೇಕು.

1986-88ರ ಆಯಾ ದೇಶದ ಒಟ್ಟು ಕೃಷಿ ಉತ್ಪಾದನೆ ಬಳಕೆಯಲ್ಲಿ ಕನಿಷ್ಠ ಶೇಕಡಾ 3ರ ಪ್ರಮಾಣಕ್ಕೆ ದೇಶೀಯ ಮಾರುಕಟ್ಟೆಯನ್ನು “ಕನಿಷ್ಠ ತೆರವು” ಮಾಡಿಕೊಡಬೇಕು; 1999ರ ಹೊತ್ತಿಗೆ ಪ್ರಮಾಣವು ಶೇಕಡಾ 5ಕ್ಕೆ ತಲುಪಬೇಕು.

ಇದರೊಳಗೆ, ಏನೋ ವಿನಾಯಿತಿ ಕೊಟ್ಟ ಸೋಗಿನಲ್ಲಿ, ನಮ್ಮಂತಹ ಅಭಿವೃದ್ಧಿಶೀಲ ದೇಶಗಳಿಗೆ, “ವಿಶೇಷ ತಾರತಮ್ಯ ಸ್ಥಾನಮಾನ” ಗ್ಯಾಟ್ ಒಪ್ಪಂದದಲ್ಲಿ ಕೊಡಲಾಯಿತು. ಇದೇನೆಂದರೆ, ನಮ್ಮಂತಹ ದೇಶಗಳು ಆಮದು ತೆರಿಗೆ ಕಡಿತ, ಸಹಾಯಧನ ಮತ್ತು ರಫ್ತು ಸಹಾಯಧನಗಳಲ್ಲಿ, ಮುಂದುವರಿದ ದೇಶಗಳಿಗೆ ಹೋಲಿಸಿದಂತೆ ಮೂರನೆ ಎರಡು ಭಾಗ ಮಾತ್ರ ಕಡಿತಗೊಳಿಸಬಹುದೆಂದೂ 6 ವರ್ಷಗಳ ಬದಲಾಗಿ ಇದನ್ನು 10 ವರ್ಷಗಳವರೆಗೆ ಮಾಡಬಹುದೆಂದೂ ನಿಗದಿ ಮಾಡಲಾಯಿತು.

ಅದರೂ, ಇಂತಹ ವಿನಾಯಿತಿಯಿಂದಲೂ, ಈ ಐದು ವರ್ಷಗಳಲ್ಲಿ ಮುಂದುವರಿದ ದೇಶಗಳು ರೈತರಿಗೆ ಕೊಡುತ್ತಿರುವ ರಕ್ಷಣೆ ಮತ್ತು ಸಹಾಯಧನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇದಕ್ಕೆ ಕಾರಣ ಮೊದಲನೆಯದಾಗಿ, ಯುರೋಪ್ ಮತ್ತು ಅಮೆರಿಕಗಳಲ್ಲಿ 1986-88ರಲ್ಲಿದ್ದ ಸಹಾಯಧನ, ರಫ್ತು ಸಹಾಯಧನ ಮತ್ತು ಆಮದು ತೆರಿಗೆ ಮಟ್ಟಗಳು 1995ಕ್ಕಿಂತ ಬಹಳ ಹೆಚ್ಚಿದ್ದವಾದ್ದರಿಂದ, ಮೇಲ್ಕಂಡಂತೆ ಇವುಗಳನ್ನು ಕಡಿತಗೊಳಿಸಿದ ಮೇಲೂ 1995ರಲ್ಲಿ ಎಷ್ಟಿದ್ದವೋ ಅಷ್ಟಕ್ಕೆ ಹೆಚ್ಚುಕಡಿಮೆ ಉಳಿದವು.

ಉದಾಹರಣೆಗೆ, 1992ರಿಂದ 1996ರ ವರೆಗೆ, ಅಮೆರಿಕದ ಕೃಷಿ ಮತ್ತು ಜಾನುವಾರು ಉತ್ಪಾದನೆಯಲ್ಲಿ ಸರಾಸರಿ ತೆರಿಗೆ ಶೇಕಡಾ 5.7ರಿಂದ 8.5ಕ್ಕೆ ಏರಿಸಲಾಯಿತು; ಆಹಾರ ಬೆಳೆ ಮತ್ತು ಪದಾರ್ಥಗಳಿಗೆ ಶೇಕಡಾ 6.6ರಿಂದ ಶೇಕಡ 10ಕ್ಕೆ ಏರಿಸಲಾಯಿತು; ತಂಬಾಕು ಸರಕುಗಳಿಗೆ ಶೇಕಡಾ 14.6ರಿಂದ 104.4ಕ್ಕೆ ಏರಿಸಲಾಯಿತು.

ಆಮದು ಪ್ರಮಾಣವನ್ನು ಆಮದು ತೆರಿಗೆ ಪದ್ಧತಿಗೆ ಒಳಪಡಿಸುವುದರಲ್ಲಿಯೂ ಅಮೆರಿಕ ಮತ್ತು ಯುರೋಪ್ ದೇಶಗಳ ಒಕ್ಕೂಟ ಗ್ಯಾಟ್ ನಿಯಮಾವಳಿಯನ್ನು ಉಲ್ಲಂಘಿಸಿವೆ. ಉದಾಹರಣೆಗೆ “ಕನಿಷ್ಠ ಮಾರುಕಟ್ಟೆ ತೆರವಿ”ನ ಪ್ರಮಾಣಕ್ಕಿಂತ ಹೆಚ್ಚಿನ ತಂಬಾಕು ಆಮದಿನ ಮೇಲೆ ಶೇಕಡಾ 350% ಸುಂಕ ಹಾಕಿದೆ.

ಎರಡನೆಯದಾಗಿ, ಆಮದು ಸರಾಸರಿ ತೆರಿಗೆಯನ್ನು ಶೇ. 36ಕ್ಕೆ ಇಳಿಸಬೇಕೆಂಬ ಗ್ಯಾಟ್ ನಿಯಮ ಅಸ್ಪಷ್ಟವಾಗಿದ್ದ ಕಾರಣ, ಅಮೆರಿಕ ಮತ್ತು ಯುರೋಪ್, ತಮ್ಮ ಅನುಕೂಲಕ್ಕೆ ತಕ್ಕಂತೆ ಅತ್ಯವಶ್ಯಕ ವಸ್ತುಗಳ ಮೇಲೆ ಕನಿಷ್ಠ ಕಡಿತ ಮಾಡುವ ಹಾಗೂ ಹೋಲಿಕೆಯಲ್ಲಿ ಅತ್ಯವಶ್ಯಕವಲ್ಲದ ವಸ್ತುಗಳ ಮೇಲೆ ಅಧಿಕ ಕಡಿತಗೊಳಿಸಿ ಈ ‘ಸರಾಸರಿ’ಯನ್ನು ಪೂರೈಸಿವೆ.

ಮೂರನೆಯದಾಗಿ, ಮಾರುಕಟ್ಟೆ ವೈರುಧ್ಯಗಳನ್ನು ತೂಗಿಸಲು, ಅಮೆರಿಕ ಮತ್ತು ಯುರೋಪ್ ದೇಶಗಳು ತಮ್ಮ ರೈತರಿಗೆ ಕೊಡುತ್ತಿರುವ ನೇರ ಆದಾಯ ಪಾವತಿಗಳಂತಹ ಸಹಾಯಧನಗಳು ಮೇಲ್ಕಂಡ ಕಡಿತದ ನಿಯಮಗಳಿಂದ ವಿನಾಯಿತಿಗೊಂಡಿವೆ. ಮಾರುಕಟ್ಟೆ ಬೆಲೆಗಳ ವ್ಯತ್ಯಾಸದಿಂದಾಗುವ ರೈತರಿಗಾಗುವ ನಷ್ಟವನ್ನು ತುಂಬಲು ಮಾಡಿರುವ ಈ ವ್ಯವಸ್ಥೆಯನ್ನು “ಉತ್ಪಾದನೆಗೆ ಸಂಬಂಧಿಸಿಲ್ಲ” ಹಾಗೂ “ವ್ಯಾಪಾರವನ್ನು ವಿರೂಪಗೊಳಿಸುವ ಅಂಶ” ಅಲ್ಲ ಎನ್ನುವ ಸಮರ್ಥನೆಯೊಂದಿಗೆ ಮೇಲ್ಕಂಡ ಕಡಿತದಿಂದ ವಿನಾಯಿತಿಗೊಳಿಸಲಾಗಿದೆ.

ನಂಜುಂಡಸ್ವಾಮಿ

ಈ “ನೇರ ಆದಾಯ ಪಾವತಿ”ಯು ಯುರೋಪಿನಲ್ಲಿ ರೈತನ ಉತ್ಪಾದನೆಗೆ ಸಂಬಂಧಿಸಿದೆ, ವಿಶೇಷವಾಗಿ ಅಲ್ಲಿನ ರೈತ ತನ್ನ ಭೂಮಿಯಲ್ಲಿ ಶೇ. 15ರಷ್ಟು ಭಾಗ ಭೂಮಿಯನ್ನು ಬೀಳುಬಿಟ್ಟು ಉತ್ಪಾದನೆಯನ್ನು ಕಡಿಮೆ ಮಾಡಿದರೆ ಈ ರೀತಿಯ ಪಾವತಿ ಮಾಡಲಾಗುತ್ತಿದೆ. ಬೆಳೆಗಳ ಬೆಲೆಗಳನ್ನು ಏರಿಸಲು ಮಾಡಿರುವ ವ್ಯವಸ್ಥೆ ಇದು.

ಅಮೆರಿಕದಲ್ಲಿ, ಈ ಪಾವತಿಯು “ಕೊರತೆ ಭರಿಸುವ ಪಾವತಿ”ಗಳಾಗಿ ರೂಪುಗೊಂಡಿವೆ. ಇರಬೇಕಾದ ವೈಜ್ಞಾನಿಕ ಕೃಷಿ ಆದಾಯಕ್ಕೂ ಮಾರುಕಟ್ಟೆ ಬೆಲೆಗಳಿಗೂ ನಡುವೆ ರೈತರಿಗೆ ಬರುವ ಕೊರತೆಯನ್ನು ತುಂಬುವ ವ್ಯವಸ್ಥೆ ಇದು. ಅಮೆರಿಕದ “ಕೃಷಿ ಮಸೂದೆ 1996″ರ ಪ್ರಕಾರ ಒಳ್ಳೆ ಮತ್ತು ಕೆಟ್ಟ ಸುಗ್ಗಿ ವರ್ಷಗಳಲ್ಲೇ ಅಲ್ಲಿನ ರೈತರು ಒಂದು ರೀತಿಯ ಸಹಾಯಧನ ಪಡೆಯುತ್ತಿದ್ದಾರೆ. 1996ರಿಂದ 2000ದ ವರೆಗೂ ಅಮೆರಿಕ ಸರ್ಕಾರ ಅಲ್ಲಿನ ರೈತರಿಗೆ ಪ್ರತಿವರ್ಷ 5100 ಕೋಟಿ ಡಾಲರುಗಳ (2,24,400 ಕೋಟಿ ರೂಪಾಯಿಗಳ) “ಕೊರತೆ ಪಾವತಿ” ಮಾಡಿದೆ.

ಮೇಲ್ಕಂಡಂತೆ, ಅಮೆರಿಕ ಮತ್ತು ಯುರೋಪ್ ದೇಶಗಳು ಮಾಡಿರುವ ಈ ಹುನ್ನಾರದ ಪ್ರಕಾರ, ತಾವು ಪೂರ್ವಭಾವಿಯಾಗಿ ಏರಿಸಿದ್ದ ಆಮದು ತೆರಿಗೆ, ರಫ್ತು ಸಹಾಯಧನ ಕನಿಷ್ಠವಾಗಿ ಕಡಿತ ಮಾಡುವುದರ ಜೊತೆಗೇ ತಮ್ಮ ರೈತರಿಗೆ ಕೊಡುವ ಸಹಾಯಧನದ ವ್ಯವಸ್ಥೆಯನ್ನು ಹಾಗೆಯೇ ಇಟ್ಟುಕೊಂಡದ್ದು ಒಂದುಕಡೆಯಾದರೆ, ನಮ್ಮಂತಹ ಹಿಂದುಳಿದ ದೇಶಗಳಲ್ಲಿ ರೈತರು ಎಲ್ಲ ಸಹಾಯಧನವನ್ನೂ ಕಳೆದುಕೊಂಡು, ನಷ್ಟಕ್ಕೊಳಗಾಗುತ್ತಿರುವ ಜೊತೆಗೆ, ಯುರೋಪ್ ಮತ್ತು ಅಮೆರಿಕದ ಕೃಷಿ ವಸ್ತುಗಳಿಗೆ ನಮ್ಮ ಮಾರುಕಟ್ಟೆಯನ್ನು ತೆರವು ಮಾಡಿಕೊಡಬೇಕಾಗಿ ಬಂದಿದೆ.

– ಪ್ರೊ. ಎಂ ಡಿ ನಂಜುಂಡಸ್ವಾಮಿ

(ಇದು ಪ್ರೊ. ಎಂಡಿಎನ್ ಅವರ ಒಂದು ಹಳೆಯ ಲೇಖನದ ಮೊದಲ ಭಾಗ. ಇಂದಿಗೂ ಕೃಷಿ ಸಮಸ್ಯೆಗಳಿಗೆ ಹೇಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಕಾರಣವಾದವು ಮತ್ತು ಸಮಸ್ಯೆ ಈ ದಿನದಲ್ಲಿ ಹೇಗೆ ಮುಂದುವರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಈ ಲೇಖನದ ಉಳಿದ ಭಾಗಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು)


ಇದನ್ನೂ ಓದಿ: ದೇಶವ್ಯಾಪಿ ಹಬ್ಬಿದ ರೈತ ಚಳವಳಿ: ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...