‘ಇದು ಸಿದ್ಧಾರ್ಥ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ…..’
ಯುವ ಉದ್ಯಮಿಯೊಬ್ಬನ ಮನದಾಳದ ಮಾತುಗಳು..
ಇವತ್ತು ದೇಶದ ಆರ್ಥಿಕತೆ ಅಪಾಯದಲ್ಲಿದೆ. ಹೊರ ರಾಜ್ಯದಲ್ಲಿ ಸಣ್ಣ ಉದ್ಯಮ ಆರಂಭಿಸಿರುವ ಗದಗ ಜಿಲ್ಲೆಯ ಗಜೇಂದ್ರಗಡದ ಯುವ ಇಂಜಿನಿಯರ್-ಎಂಟರಪ್ರೈನರ್ ಒಬ್ಬರು ನಮ್ಮ ಪತ್ರಿಕೆ ಮತು ಪೋರ್ಟಲ್ ಮುಂದೆ ಹೇಳಿದ ಮನದಾಳದ ಮಾತುಗಳು ಇಲ್ಲಿವೆ…….
ಒಂದು ದುರಂತ ಸಾವು ಇವತ್ತು ಒಂದಿಷ್ಟು ಪ್ರಶ್ನೆಗಳನ್ನೂ ಎಬ್ಬಿಸಿದೆ. ಎಲ್ಲ ಸಾವುಗಳೂ, ಅವೂ ಆತ್ಮಹತ್ಯೆಯಾಗಿದ್ದರೆ ಇಂತಹ ಪ್ರಶ್ನೆಗಳನ್ನು ಹುಟ್ಟು ಹಾಕಲೇಬೇಕು…
ಇತ್ತೀಚೆಗೆ ಬಿಡಿಬಿಡಿಯಾಗಿ ವ್ಯಾಟ್ಸಾಫ್ನಲ್ಲಿ ಸಿಗುತ್ತಿರುವ ‘ನ್ಯಾಯಪಥ’ದ ಬರಹಗಳು ಮತ್ತು ಕೈಗೇ ಸಿಗುತ್ತಿರುವ ನಾನುಗೌರಿ.ಕಾಂ ಬರಹಗಳು ನನಗೆ ಇಷ್ಟವಾಗಿವೆ. ಸಿದ್ಧಾರ್ಥ ಕುರಿತಾಗಿ, ಈ ಸಲದ ನ್ಯಾಯಪಥದಲ್ಲಿ ಬಂದ ಲೇಖನ ಮತ್ತು ಸಿದ್ಧಾರ್ಥ ಸಾವಿನ ಕುರಿತಾಗಿ ಶಿವಸುಂದರ್ ಎನ್ನುವವರು ವಿಶ್ಲೇಷಣೆ ಮಾಡಿದ ವಿಡಿಯೋ ನೋಡಿದ ಮೇಲೆ ನನಗೆ ಅನಿಸಿದ್ದನ್ನು ಇಲ್ಲಿ ಮುಂದಿಡುತ್ತಿರುವೆ:
ಬರಹ ಮತ್ತು ವಿಡಿಯೋದ ಕೆಲವು ಅಂಶಗಳಲ್ಲಿ ವೈರುಧ್ಯ ಇರಬಹುದಾದರೂ ಒಟ್ಟೂ ಕಾಳಜಿ ಜನಪರವಾಗಿಯೇ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾ, ಒಬ್ಬ ತೀರಾ ಪುಟ್ಟ ಉದ್ಯಮಿಯಾಗಿ ನನ್ನ ಈ ಅನಿಸಿಕೆಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿರುವೆ:
‘ಸಿದ್ಧಾರ್ಥ್ ಹೆಗ್ಡೆ ಒಬ್ಬ ಬ್ರಿಲಿಯಂಟ್ ಉದ್ಯಮಿಯಾಗಿದ್ದ… ಶೂನ್ಯದಿಂದ ಶುರು ಮಾಡಿ, ಈ (ಜಟಿಲ) ಅರ್ಥವ್ಯವಸ್ಥೆ ಮತ್ತು ಮಾರುಕಟ್ಟೆಯ ಸೂಕ್ಷ್ಮಗಳನ್ನು ಮನಗಂಡಿದ್ದ ಒಬ್ಬ ವ್ಯಕ್ತಿಯಾಗಿ ನನ್ನಂತಹ ಯಾವುದೇ ಬಿಸಿನೆಸ್ ಹಿನ್ನೆಲೆಯಿಂದ ಬರದ ಯುವಕರಿಗೆ ಸ್ಪೂರ್ತಿಯೂ ಆಗಿದ್ದರು… ಆದರೆ, ಕಾಲಘಟ್ಟ ಅದೆಷ್ಟು ಅಪಾಯಕಾರಿ ವೇಗದಲ್ಲಿ ಅರ್ಥವ್ಯವಸ್ಥೆಯನ್ನು ಮುಂದಕ್ಕೆ ಒಯ್ಯುವ ಭರವಸೆ ಮೂಡಿಸಿ ಬಿಟ್ಟಿತು ಎಂದರೆ….. ಈ ವೇಗದೋಟದ ಹಾದಿಯಲ್ಲಿ ಜನಸಾಮಾನ್ಯರಿಗೆ ಜಾಗವೇ ಇಲ್ಲ ಎಂಬುದು ಸತ್ಯವಾಗಿದ್ದರೂ, ಜನರನ್ನು ದಾರಿ ತಪ್ಪಿಸುತ್ತಲೇ ಬರಲಾಗಿತು…
ಸಿದ್ಧಾರ್ಥರು ಸೃಷ್ಟಿಸಿದ ಉದ್ಯೋಗಗಳ ಸಂಖ್ಯೆ ಮತ್ತು ಸಂಪತ್ತನ (?) ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದರೆ ಒಬ್ಬ ಅತಿ ಸಣ್ಣ ಉದ್ಯಮಿಯಾಗಿ ನನಗೆ ವೈಯಕ್ತಿಕವಾಗಿ ಸಿದ್ಧಾರ್ಥರ ಬಗ್ಗೆ ಗೌರವವಂತೂ ಇದೆ, ಅದು ಅವರು ತಳಮಟ್ಟದಿಂದ ಕಟ್ಟಿದ ಹೊಸ ಉದ್ಯಮ ಸಾಮ್ರಾಜ್ಯಕ್ಕಾಗಿ… ಆದರೆ ಅದಷ್ಟೇ ಜೀವನವಲ್ಲವಲ್ಲ….
***
2014ರ ಚುನಾವಣೆ ಸಂದರ್ಭ. ಅಲ್ಲಿವರೆಗೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹೇರುತ್ತಿದ್ದ ತೆರಿಗೆ ಭಾರಗಳನ್ನು ತಡೆಯದೇ ನನ್ನಂತಹ ಪುಟ್ಟ ಪುಟ್ಟ ಹೊಸ ಉದ್ಯಮಿಗಳು ( ಇಂಜಿನಿಯರಿಂಗ್ ನೆರವಿನಿಂದ ದೊಡ್ಡ ಸಂಬಳದ ಹುದ್ದೆ ಗಿಟ್ಟಿಸಿ, ಅದರಲ್ಲಿ ಉಳಿಸಿದ ಹಣ ಮತ್ತು ಅದರ ಆಧಾರದಲ್ಲಿ ಸಿಕ್ಕ ಬ್ಯಾಂಕ್ ಸಾಲಗಳಿಂದ ಸಣ್ಣ ಉದ್ಯಮ ಘಟಕ) ಆಘಾತ ಅನುಭವಿಸುತ್ತಿದ್ದ ಸಂದರ್ಭದಲ್ಲಿ, ಪಾರದರ್ಶಕ, ಉದ್ಯಮಿಗಳಿಗೆ ಕಿರುಕುಳಮುಕ್ತ …ಇತ್ಯಾದಿ ಇತ್ಯಾದಿ ಭರವಸೆಗಳನ್ನೇ ನೀಡಿದ ಮೋದಿಯಿಂದ ಬದಲಾವಣೆ ಆಗಬಹುದು ಎಂದು ಎಲ್ಲರಂತೆ ನಾವೂ ನಂಬಿದೆವು.
ಆದರೆ, ಆ ಮನುಷ್ಯನ ಆಡಳಿತದ ಒಂದೇ ವರ್ಷದಲ್ಲಿ ಎಲ್ಲವೂ ಸ್ಪಷ್ಟವಾಯಿತು. ಈತ ಮಹಾನ್ ದರೋಡೆಕೋರ, ಮಹಾನ್ ಠಕ್ಕ ಎಂಬುದು. ಈತ ಕೇವಲ ಗುಜರಾತಿನ ಪಿಎಂ ಅಷ್ಟೇ ಎಂಬುದು ಗೊತ್ತಾಗಿತು.
ಆದರೆ, ದೇಶಭಕ್ತಿ ಮತ್ತು ಇತರ ಧಾರ್ಮಿಕ ಭಾವನಾತ್ಮಕ ವಿಷಯ ಇಟ್ಟುಕೊಂಡು ಚುನಾವಣೆ ಎದುರಿಸುವಾಗ ಈ ದೇಶದ ಉದ್ಯಮ ಸಮೂಹ ಆತನ ಬೆಂಬಲಕ್ಕೇ ನಿಂತಿದ್ದು ವಿಚಿತ್ರವಾಗಿತ್ತು. ಮೀಡಿಯಾ ಕೂಡ ನಿನ್ನೆ ಮೊನ್ನೆವರೆಗೆ ಬೊಂಬಡಾ ಬಜಾಯಿಸಿ ಈಗ ಸಿದ್ಧಾರ್ಥರ ಸಾವಿನ ನಂತರ ಎಚ್ಚರಗೊಂಡು ಕೆಲವು ಸತ್ಯಗಳನ್ನು ಹೇಳುತ್ತಿದೆ.
ಸದ್ಯ ದೇಶದ ಆರ್ಥಿಕತೆ ಕುಸಿಯುತ್ತಲೇ ಸಾಗಿದೆ, ಬಂಡವಾಳ ಹೂಡಿಕೆ ಕುಸಿದಿದೆ ಕೂಡ… ಮೇಲಾಗಿ ಜನರ ಕೊಳ್ಳುವ ಶಕ್ತಿಯೇ ಕುಸಿದು ಹೋಗಿದೆ.. ಇಲ್ಲಿ ಏರುತ್ತಲೇ ಇರೋದು ಒಂದು ಮಾತ್ರ: ಅದು ಮೋದಿಯ ಹುಚ್ಚಾಟ, ಹುಂಬತನಗಳಷ್ಟೇ…
ಸಣ್ಣ ಮತ್ತ ಮಧ್ಯಮ ಉದ್ಯಮಗಳಿಗೆ ಈ ವರ್ಷ ಭಾರಿ ಗಂಡಾಂತರ ಕಾದಿದೆ. ಒಟ್ಟೂ ಅರ್ಥವ್ಯವಸ್ಥೆ ನಿಧಾನಕ್ಕೆ ಕುಸಿಯತೊಡಗಿದೆ….
(ಲೇಖಕರ ಕೋರಿಕೆಯ ಮೇರೆಗೆ ಅವರ ಹೆಸರನ್ನು ಪ್ರಕಟಿಸಿಲ್ಲ.)
ನಿರೂಪಣೆ: ಪಿ.ಕೆ ಮಲ್ಲನಗೌಡರ್