ಪಶ್ಚಿಮ ಬಂಗಾಳದ ಹೌರಾದಲ್ಲಿ ಝೊಮಾಟೊ ಡೆಲಿವರಿ ನೌಕರರ ಮುಷ್ಕರಕ್ಕೂ ಆಹಾರ, ಧರ್ಮ ಅಥವಾ ನಂಬಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ಕಂಪನಿಯ ಸ್ಥಾಪಕರು ತನ್ನ ಸಿಬ್ಬಂದಿ ವರ್ಗಕ್ಕೆ ಕಳುಹಿಸಿರುವ ಇ-ಮೈಲ್ನಲ್ಲಿ ಹೇಳಿದ್ದು, ಅರ್ಥಪೂರ್ಣ ಉದ್ಯೋಗ ಮತ್ತು ಜೀವನ ನಿರ್ವಹಣೆಯ ಅವಕಾಶವನ್ನು ಧರ್ಮ ಮತ್ತು ವೈಯಕ್ತಿಕ ಆಹಾರದ ಆಯ್ಕೆಯ ಜೊತೆಗೆ ತಳಕುಹಾಕಲಾಗುತ್ತಿರುವ ಬಗ್ಗೆ ಎಚ್ಚರದಿಂದಿರಬೇಕು ಎಂದು ತಿಳಿಸಿದ್ದಾರೆ.
“ಗದ್ದಲವನ್ನು ಕಡೆಗಣಿಸಿ; ಅದರಿಂದ ವಿಚಲಿತರಾಗದಿರಿ ಎಂದು ಎಂದು ಸಂಸ್ಥೆಯ ಸ್ಥಾಪಕ ದೀಪಿಂದರ್ ಗೋಯಲ್ ಸಿಬ್ಬಂದಿ ವರ್ಗಕ್ಕೆ ಕಳುಹಿಸಿರುವ ಇ-ಮೈಲ್ನಲ್ಲಿ ಒತ್ತಾಯಿಸಿದ್ದಾರೆ. ಈ “ಪ್ರತಿಭಟನೆ”ಯು ಕೋಲ್ಕತ್ತಾದ ಹೌರಾ ಪ್ರದೇಶದ ಕೆಲವೇ ಡೆಲಿವರಿ ಪಾಲುದಾರರಿಗೆ ಸೀಮಿತವಾಗಿದ್ದು, ಕೆಲವು ತೀರಾ ಉತ್ಪ್ರೇಕ್ಷಿತ ವರದಿಗಳಲ್ಲಿ ಕಾಣಿಸಲಾಗಿರುವಂತೆ ಇಡೀ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಪ್ರಶ್ನೆಯು ಮೂಲತಃ ದರಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ್ದಾಗಿದ್ದು, ಅದನ್ನು ನಾವು ಆಗಾಗ ಮಾಡುತ್ತಿರುತ್ತೇವೆ ಎಂದವರು ಹೇಳಿದ್ದಾರೆ.
ಕೋಲ್ಕತ್ತಾದ ಹೊರಭಾಗದಲ್ಲಿರುವ ಹೌರಾದ ನೌಕರರ ವಿಭಾವೊಂದು ತಾವು ಬೀಫ್ ಮತ್ತು ಪೋರ್ಕ್ (ದನ ಮತ್ತು ಹಂದಿ ಮಾಂಸ) ಇರುವ ಆಹಾರವನ್ನು ಡೆಲಿವರಿ ಮಾಡುವುದಿಲ್ಲ ಎಂದು ಕಳೆದೊಂದು ವಾರದಿಂದ ಮುಷ್ಕರ ನಡೆಸುತ್ತಿದ್ದಾರೆ.
“ಕಂಪನಿಯು ನಮ್ಮ ಬೇಡಿಕೆಗಳನ್ನು ಕೇಳುತ್ತಿಲ್ಲ. ನಮ್ಮ ಇಚ್ಛೆಗೆ ವಿರುದ್ಧವಾಗಿ ಬೀಫ್ ಮತ್ತು ಪೋರ್ಕ್ ಡೆಲಿವರಿ ಮಾಡುವಂತೆ ಒತ್ತಾಯಿಸಲಾಗುತ್ತದೆ. ಹಿಂದೂಗಳು ಬೀಫ್ ಡೆಲಿವರಿ ಮಾಡಲು ಒಪ್ಪುತ್ತಿಲ್ಲ ಮತ್ತು ಮುಸ್ಲಿಮರು ಪೋರ್ಕ್ ಡೆಲಿವರಿ ಮಾಡಲು ಬಯಸುತ್ತಿಲ್ಲ ಎಂದು ಮೌಸಿನ್ ಅಕ್ತರ್ ಎಂಬ ನೌಕರ ಟಿವಿ ವಾಹಿನಿಯೊಂದಕ್ಕೆ ಹೇಳಿದ್ದಾಗಿ ವರದಿಯಾಗಿದೆ.
ಆದರೆ, ನೌಕರರ ಅಸಮಾಧಾನವು ಬೇಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಡೆಲಿವರಿ ಪಾಲುದಾರರಿಗೆ ಆಹಾರ ದರಪಟ್ಟಿಯನ್ನು ಪರಿಷ್ಕರಿಸುವ ವ್ಯವಸ್ಥೆಗೆ ಸಂಬಂಧಿಸಿದ್ದಾಗಿದೆ ಎಂದು ಗೋಯಲ್ ತನ್ನ ಇ-ಮೈಲ್ನಲ್ಲಿ ತಿಳಿಸಿದ್ದಾರೆ.
“ದರ ಪರಿಷ್ಕರಣೆಯ ಬಳಿಕ ನಮ್ಮ ಡೆಲಿವರಿ ಪಾಲುದಾರರು ಅಷ್ಟೇ ಪ್ರಮಾಣದಲ್ಲಿ ಅಷ್ಟೇ ಪ್ರಮಾಣದಲ್ಲಿ ಹಣ ಗಳಿಸುತ್ತಾರೆ. ಇದರಿಂದ ನಮ್ಮ ಘಟಕಗಳ ಆರ್ಥಿಕತೆ ಸುಧಾರಿಸುತ್ತದೆ ಮತ್ತು ವ್ಯಾಪಾರವು ಹೆಚ್ಚು ಕಾರ್ಯಸಾಧುವಾಗುತ್ತದೆ. ಇದು ನಮ್ಮ ವಹಿವಾಟಿನ ವಿಸ್ತರಣೆಗೆ ಅವಕಾಶ ಮಾಡಿಕೊಟ್ಟು ಹೆಚ್ಚುಹೆಚ್ಚು ಡೆಲಿವರಿ ಪಾಲುದಾರರಿಗೆ ಉದ್ಯೋಗಾವಕಾಶ ಒದಗಿಸಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ಕೆಲವೊಂದು ಡೆಲಿವರಿ ಹುಡುಗರಿಗೆ ದರಪಟ್ಟಿ ಪರಿಷ್ಕರಣೆ ಅರ್ಥವಾಗುವುದಿಲ್ಲ. ಅವರು ಬದಲಾವಣೆಯ ವಿರುದ್ಧ ಪ್ರತಿಭಟಿಸುತ್ತಾರೆ. ಹೌರಾದ ಈ ಪ್ರಕರಣದಲ್ಲಿ ಡೆಲಿವರಿ ಹುಡುಗರು ಸಂಸ್ಥೆಯ ಪ್ರತಿನಿಧಿಗಳ ಜೊತೆಗೆ ರಚನಾತ್ಮಕ ಮಾತುಕತೆಯಲ್ಲಿ ತೊಡಗುವುದು ಬಿಟ್ಟು ಸ್ಥಳೀಯ ರಾಜಕಾರಣಿಯೊಬ್ಬರ ಜೊತೆ ಸೇರಿಕೊಂಡು ಸಮಸ್ಯೆಯನ್ನು ತಪ್ಪಾಗಿ ಪ್ರತಿಬಿಂಬಿಸಿದರು” ಎಂದು ಗೋಯಲ್ ವಿವರಿಸಿದ್ದಾರೆ.
“ಇದು ನಮಗೆ ಗೊತ್ತಾದುದು ಹೇಗೆಂದರೆ ನಾವು ನಮ್ಮ ಡೆಲಿವರಿ ಡಾಟಾಬೇಸನ್ನು ಪರಿಶೀಲಿಸಿದಾಗ ಇಡೀ ಪ್ರದೇಶದಲ್ಲಿ ಕಳೆದ ಮೂರು ತಿಂಗಳಲ್ಲಿ ಪೋರ್ಕಿಗೆ ಒಂದೇ ಒಂದು ಬೇಡಿಕೆ ಬಂದಿಲ್ಲ. ಬೀಫಿಗೆ ಒಂದೇ ಒಂದು ಬೇಡಿಕೆ ಬಂದಿದ್ದು, ಆ ಗ್ರಾಹಕರು ಕೂಡಾ ಆಹಾರ ಡೆಲಿವರಿ ಮಾಡುವ ಮೊದಲೇ ಅದನ್ನು ರದ್ದುಪಡಿಸಿದ್ದರು” ಎಂದು ಅವರು ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ಬಿಜೆಪಿಯ ಉತ್ತರ ಹೌರಾ ಮಂಡಲದ ಬಿಜೆಪಿ ಕಾರ್ಯದರ್ಶಿ, ಸದಸ್ಯತ್ವ ಅಭಿಯಾನದ ಉಸ್ತುವಾರಿ ಎಂದು ಹೇಳಿಕೊಂಡಿರುವ ಸಂಜೀವ ಕುಮಾರ್ ಶುಕ್ಲಾ ಎಂಬ ಸ್ಥಳೀಯ ರಾಜಕಾರಣಿಯೊಬ್ಬ ಈ ಪ್ರಕರಣದಲ್ಲಿ ಶಾಮೀಲಾದ ಬಳಿಕ ಅದು ಪ್ರಚಾರ ಪಡೆದುಕೊಂಡಿತು. ಹೌರಾದಲ್ಲಿ ಝೊಮಾಟೊದ ಹೊಟೇಲುಗಳ ಸರಣಿಯಲ್ಲಿ ಅಲ್ಲಿನ ಬೀಫ್ ಬಿರಿಯಾನಿ ಹೊಟೇಲೊಂದನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂಬ ವದಂತಿಯ ಬಳಿಕ ಈ ಪ್ರತಿಭಟನೆ ಜೀವತಳೆಯಿತು.
ಇತ್ತೀಚೆಗಷ್ಟೇ ಮತಾಂಧನೊಬ್ಬ ಮುಸ್ಲಿಮ್ ವ್ಯಕ್ತಿಯೊಬ್ಬ ತಂದ ಆಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದಾಗಿ ಫೇಸ್ಬುಕ್ನಲ್ಲಿ ಪ್ರಚಾರ ಮಾಡಿದಾಗ ಝೊಮಾಟೊ ಸುದ್ದಿ ಮಾಡಿತ್ತು. “ಆಹಾರಕ್ಕೆ ಧರ್ಮವಿಲ್ಲ; ಆಹಾರವೇ ಧರ್ಮ” ಎಂದು ಪ್ರತಿಕ್ರಿಯೆ ನೀಡುವ ಮೂಲಕ ಝೊಮಾಟೊ ಮೆಚ್ಚುಗೆಗೆ ಪಾತ್ರವಾಗಿತ್ತು.