Homeಸಿನಿಮಾಸಿನಿ ಸುದ್ದಿಹಲೋ ಐ ಆಮ್ ಅಂಬಿ

ಹಲೋ ಐ ಆಮ್ ಅಂಬಿ

- Advertisement -
- Advertisement -

ಸಂಗ್ರಹ ನಿರೂಪಣೆ: ಗಿರೀಶ್ ತಾಳಿಕಟ್ಟೆ |

ಇತ್ತೀಚೆಗೆ ನಿಧನರಾದ ಅಂಬರೀಷ್‍ರು ತಮ್ಮ ಬದುಕಿನ ಕುರಿತು ತಾವೇ ಆಪ್ತರ ಬಳಿ ಹೇಳಿಕೊಂಡಿದ್ದ ಕೆಲ ಸ್ವಾರಸ್ಯ ಘಟನೆಗಳ ಮೆಲುಕು ಇಲ್ಲಿದೆ.

 

ಬಾಡಿಗೆ ಅಣ್ಣ, ಬಾಯ್ತುಂಬ ಬೈಗುಳ

“ನಾನು ಪಿಯುಸಿ ಓದಿದ್ದು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ. ಕಾಲೇಜಿನ ಪ್ರಿನ್ಸಿಪಾಲ್ ನಾರಾಯಣ ರಾವ್ ಅಂತ. ಬಲು ಸ್ಟ್ರಿಕ್ಟ್ ಮನುಷ್ಯ. ಒಮ್ಮೆ ತಪ್ಪು ಮಾಡಿದ ಅಂತ ತಮ್ಮ ಮಗನನ್ನೇ ಕಾಲೇಜಿಂದ ಸಸ್ಪೆಂಡು ಮಾಡಿಬಿಟ್ಟಿದ್ದ್ರು. ಅಂತಾ ಆಸಾಮಿ. ಎಸ್ಸೆಲ್ಸಿವರೆಗೂ ನಂ.1 ಸ್ಟೂಡೆಂಟಾಗಿದ್ದ ನಾನು ಪಿಯುಸಿನಲ್ಲಿ ಫಸ್ಟ್ ಟೈಮು ಕೆಮಿಸ್ಟ್ರಿ ಸಬ್ಜೆಕ್ಟ್‍ನಲ್ಲಿ ಫೇಲಾಗ್ಬಿಟ್ಟೆ. ತಕೋಳ್ಳಿ, ಆ ಪ್ರಿನ್ಸಿಪಾಲು ಅಪ್ಪನಿಗೆ ಲೆಟರು ಬರೆದುಬಿಟ್ರು. ಅಪ್ಪನಿಗೆ ವಿಷಯ ಗೊತ್ತಾದ್ರೆ, ನನ್ನ ಕಥೆ ಅಷ್ಟೇ ಅಂತ, ದಿನಾ ಬೆಳಿಗ್ಗೆ ಮನೆ ಮುಂದೆ ಪೋಸ್ಟ್‍ಮ್ಯಾನಿಗೋಸ್ಕರ ಕಾಯ್ಕೊಂಡು ನಿಂತ್ಕಂತಿದ್ದೆ. ಒಂದು ದಿನ ಆ ಲೆಟ್ರು ಬಂತು. ಅದುನ್ನ ನಾನೇ ಈಸ್ಕೊಂಡು ಹರಿದು ಹಾಕ್ಬುಟ್ಟೆ. ಅಲ್ಲಿಗೆ ಪ್ರಾಬ್ಲಂ ಸಾಲ್ವ್ ಆಯ್ತು ಅಂದ್ಕಂಡೆ. ಆದ್ರೆ ಒಂದಿನ ಇದ್ದುಕ್ಕಿದ್ದಂಗೆ ಪ್ರಿನ್ಸಿಪಾಲು ನನ್ನನ್ನು ಕರೆಯೋಕ್ಕೆ ಕಳ್ಸಿದ್ರು. ಅವರ ಚೇಂಬರಿಗೆ ಹೋಗ್ತಿದ್ದಂಗೆ, `ಯಾಕೋ ಲೆಟರ್ ಹರಿದು ಹಾಕ್ದೆ? ನಿಮ್ಮಪ್ಪನಿಗೆ ಯಾಕೆ ತೋರಿಸ್ಲಿಲ್ಲ?’ ಅಂತ ಕೇಳಿಬುಟ್ರು. ನನಿಗೆ ಶಾಕ್. ಇವರಿಗೆ ಹೆಂಗೆ ಗೊತ್ತಾಯ್ತು ಅಂತ. `ನಾಳೆ ನಿಮ್ಮಪ್ಪುನ್ನೇ ಕರ್ಕೊಂಡು ಬಾ’ ಅಂತ ಹೇಳಿದ್ರು. ನನ್ನ ಕೈಕಾಲೆಲ್ಲ ಗಡಗಡ ನಡುಗೋಕ್ಕೆ ಶುರುವಾದ್ವು. ಕೊನೆಗೆ ನನ್ನ ಫ್ರೆಂಡ್ಸ್ ಬಡ್ಡಿಮಕ್ಕಳು ಒಂದು ಐಡಿಯಾ ಕೊಟ್ರು. ನನ್ನ ಅಣ್ಣನ ಹೈಟು, ಪರ್ಸನಾಲ್ಟಿ ಇರೋ ಒಬ್ಬ ಬಾಡಿಗೆ ಅಣ್ಣನನ್ನು ರೆಡಿ ಮಾಡಿಕೊಂಡು ಮಾರನೇ ದಿನ ಪ್ರಿನ್ಸಿಯ ಬಳಿ ಕರೆದೊಯ್ದೆ. ಅವನು ನಿಜಕ್ಕೂ ನನ್ನ ಅಣ್ಣನೆಂದೇ ನಂಬಿದ ಅವರು ನನ್ನನ್ನು ಚೆನ್ನಾಗಿಯೇ ಬಯ್ದರು. ಸಿಕ್ಕಿದ್ದೇ ಚಾನ್ಸು ಅಂತ ನನ್ನ ಬಾಡಿಗೆ ಅಣ್ಣನೂ, `ನೋಡಿ ಸಾ, ಅಪ್ಪ ಇವುನನ್ನ ಡಾಕ್ಟ್ರು ಮಾಡ್ಬೇಕು ಅಂತ ಆಸೆ ಇಟ್ಟುಗೊಂಡವುರೆ. ಇವನು ಹಿಂಗೆ ಪೋಲಿ ಬಿದ್ದವುನೆ’ ಅಂತ ಬಯ್ದ. ಅವನ ರೇಗಾಟ ಕಂಡು ಪ್ರಾಂಶುಪಾಲರಿಗೇ ಅಯ್ಯೋ ಪಾಪಾ ಅನ್ನಿಸಿ, `ಪರವಾಗಿಲ್ಲ ಬಿಡಿ. ನಿಮ್ಮ ತಂದೆಯವರಿಗೆ ಇದನ್ನು ತಿಳಿಸಿ ಅವರನ್ನು ಕರೆದುಕೊಂಡು ಬರೋದೇನೂ ಬೇಡ. ಆದ್ರೆ ಇನ್ಮುಂದೆ ಇವನ ಮೇಲೆ ಗಮನ ಇರಿಸಿ’ ಅಂತ ಹೇಳಿದ್ರು. ನಾನು ತಲೆ ತಗ್ಗಿಸಿಕೊಂಡೇ ನಿಂತಿದ್ದೆ. ಯಾಕಂದ್ರೆ, ತಲೆ ಎತ್ತಿ ಪ್ರಿನ್ಸಿಯ ಮುಖವನ್ನೇನಾದರು ನೋಡಿದ್ದರೆ, ನನಗೆ ನಗು ತಡೆದುಕೊಳ್ಳಲಾಗುತ್ತಿರಲಿಲ್ಲ”

ಸೆಕೆಂಡ್ ಹ್ಯಾಂಡ್ ಕಾರು ಯಾಮಾರಿಸಿದ್ದು

“ನನಿಗೆ ಕಾರು ತಗೋಬೇಕು ಅನ್ನೋ ಹುಚ್ಚಿತ್ತು. ಅಪ್ಪನ್ನ ಕೇಳಿದೆ. ಅದುಕ್ಕವುರು `ಕಾರು ಕೊಡ್ಸಿದ್ರೆ, ಆಮೇಲೆ ಪೆಟ್ರೋಲಿಗೂ ನನ್ನಾತ್ರನೇ ಕಾಸು ಕೇಳ್ತೀಯಾ. ಸುಮ್ಕಿರು ಮಾರಾಯಾ’ ಅಂತ ರೇಗಿದ್ರು. ಆದ್ರೆ ನಾನು ಹಠ ಬಿಡ್ಲಿಲ್ಲ. ಕೊನೆಗೆ `ಸರಿ ಒಂದು ಸೆಕೆಂಡ್ ಹ್ಯಾಂಡ್ ಕೊಡುಸ್ತೀನಿ. ಎಲ್ಲಾದ್ರು ಇದ್ದ್ರೆ ನೋಡು’ ಅಂತಂದ್ರು. ಸಿಕ್ಕಿದ್ದೇ ಚಾನ್ಸು ಅಂತ, ಕಾರು ಹುಡಿಕ್ಕ್ಯಂಡು ಮದ್ರಾಸಿಗೆ ಹೋಗಿ ಐದು ಸಾವಿರ ಖರ್ಚು ಮಾಡಿಬಂದೆ. ಆ ಕಾಲಕ್ಕೆ ಬರೀ ಕಾರು ಹುಡುಕೋಕ್ಕೇ ಐದು ಸಾವುರ ಖರ್ಚು ಮಾಡಿವ್ನಿ ಅಂದ್ರೆ ಬಡ್ಡೇತದು ನನ್ನ ಶೋಕಿ ಅದಿನ್ನೆಂತದ್ದಿರಬೇಡ ನೋಡಿ. ಕೊನೆಗೆ ನಮ್ಮ ಪರಿಚಯಸ್ತ ಡಾಕ್ಟ್ರು ಒಬ್ಬ್ರು ತಮ್ಮ ಫಿಯೆಟ್ ಕಾರು ಮಾರ್ತಾರೆ ಅನ್ನೋ ವಿಚಾರ ಗೊತ್ತಾಯ್ತು. ಹೋಗಿ ಕೇಳಿದೆ. `ಇದು ನನ್ನ ಹೆಂಡ್ತಿ ಗಿಫ್ಟ್ ಕೊಟ್ಟಿದ್ದು, ಅಲ್ಲದೇ ನನ್ನ ಮಗನಿಗೂ ಈ ಕಾರು ಅಂದ್ರೆ ತುಂಬಾ ಇಷ್ಟ. ಹಾಗಾಗಿ ಮೈಸೂರಿನಲ್ಲಿ ಇರೋರಿಗೆ ಮಾರಲ್ಲ. ಬೇರೆ ಊರಿನವರಿಗೆ ಮಾತ್ರ ಮಾರೋದು’ ಅಂದುಬಿಟ್ಟ್ರು. ಒಂದ್ ಸ್ವಲ್ಪ ದಿನ ಸುಮ್ಕಿದ್ದೆ. ಮತ್ತೆ ಅವುರತ್ರ ಹೋಗಿ `ಬೆಂಗಳೂರಿನಲ್ಲಿರೋ ವೀರಾಸ್ವಾಮಿಯವುರಿಗೆ ಬೇಕಂತೆ ಕೊಡ್ತೀರಾ’ ಅಂತ ಕೇಳಿದೆ. ಒಪ್ಕೊಂಡು ಒಂದು ಲಕ್ಷಕ್ಕೆ ವ್ಯಾಪಾರನೂ ಮುಗೀತು. ನಾನೇ ಕಾರನ್ನ ತಕೊಂಡು ಬೆಂಗಳೂರಿನ ಕೆಸಿಎನ್ ಚಂದ್ರು ಮನೇಲ್ಲಿ ಸ್ವಲ್ಪ ದಿನ ಬಿಟ್ಟಿದ್ದೆ. ಒಂದು ತಿಂಗಳಾದ ಮೇಲೆ ವಾಪಾಸು ಮೈಸೂರಿಗೆ ತಗೊಂಡೋಗಿ `ಸಾರ್ ಅವುರಿಗ್ಯಾಕೋ ಕಾರಿನ ರೇಟು ಜಾಸ್ತಿ ಆಯ್ತಂತೆ. ಅದುಕ್ಕೆ ಬೇಡ ಅಂತಿದಾರೆ. ನೀವು ವಾಪಾಸ್ ತಗೊಂಡು ಅವುರ ದುಡ್ಡು ಕೊಡ್ಬೇಕಂತೆ’ ಅಂದೆ. ಆದ್ರೆ ಅವರು ವಾಪಾಸ್ ತಗೋಳಕ್ಕೆ ಒಪ್ಪಲಿಲ್ಲ. ಆಗ `ಸರಿ, ನಿಮಗೆ ದುಡ್ಡು ಕೊಡೋಕೆ ಆಗಲ್ಲ ಅನ್ನೋದಾದ್ರೆ, ಈ ಕಾರನ್ನ ನಾನೇ ಇಟ್ಕೊಂಡು, ಅವುರಿಗೆ ನಾನೇ ದುಡ್ಡು ಕೊಡ್ತೀನಿ ಬಿಡಿ’ ಅಂದೆ. ಒಪ್ಕೊಂಡ್ರು. ಹೀಗೆ ಅವುರಿಗೆ ಯಾಮಾರಿಸಿ ನನ್ನ ಆಸೆ ಪಟ್ಟಿದ್ದ ಕಾರು ಕೊಂಡ್ಕೊಂಡೆ ಕಣ್ರೀ”

ರಾಜಣ್ಣನ ನಮಸ್ಕಾರ, ಅಮ್ಮನ ಬೈಗುಳ

“1975ರಲ್ಲಿ `ದೇವರ ಕಣ್ಣು’ ಸಿನಿಮಾಗಾಗಿ ನನಿಗೆ ಅತ್ಯುತ್ತಮ ಖಳನಟನ ಪ್ರಶಸ್ತಿ ಬಂತು. ಅಮ್ಮನೂ ನೋಡಿ ಖುಷಿಪಡ್ಲಿ ಅಂತ ಟೌನ್‍ಹಾಲ್‍ನ ಕಾರ್ಯಕ್ರಮಕ್ಕೆ ಆಕೆಯನ್ನೂ ಕರೆದೊಯ್ದು ಮೊದಲ ಲೈನಿನಲ್ಲೇ ಕುಂತೆ. ಅಷ್ಟರಲ್ಲಾಗಲೇ ರಾಜ್‍ಕುಮಾರ್ ಮೊದಲಾದ ಅತಿಥಿಗಳೆಲ್ಲ ಸ್ಟೇಜ್ ಮ್ಯಾಲೆ ಕುಂತ್ಕಂಡಿದ್ದ್ರು. ನಮ್ಮಮ್ಮ ಭಾಳ ಮುಗ್ಧ ಹೆಂಗಸು. ರಾಜಣ್ಣನ್ನ ನೋಡಿದ್ದೇ ತಡ, ನನಗೆ ತಿವಿದು, `ಹೋಗು, ರಾಜ್‍ಕುಮಾರ್‍ರಿಗೆ ನಮುಸ್ಕಾರ ಮಾಡಿ ಬಾ’ ಅಂದ್ರು. ನಾನು ಸುಮ್ನಿರಮ್ಮ ಹಂಗೆಲ್ಲ ಸ್ಟೇಜ್ ಮೇಲೆ ಹೋಗಿ ಅವುರಿಗೆ ಕಿರಿಕಿರಿ ಮಾಡೋದು ಬೇಡ ಅಂತ ಹೇಳಿದ್ರೂ ಕೇಳದೆ ಹೋಗು, ಹೋಗು ಅಂತ ತಿವೀತಾನೆ ಇದ್ದರು. ಅಷ್ಟರಲ್ಲಿ ನನ್ನ ದುರಾದೃಷ್ಟಕ್ಕೆ ಯಾರಿಗೋ ಹಾರ ಹಾಕಿ ಸನ್ಮಾನ ಮಾಡೋಕೆ ಅಂತ ವೇದಿಕೆ ಮುಂದಕ್ಕೆ ಎದ್ದು ಬಂದ ರಾಜಣ್ಣ ನನ್ನನ್ನ ನೋಡಿ, `ಹಲೋ ಅಂಬರೀಷ್ ನಮಸ್ಕಾರ, ಹ್ಯೇಗಿದೀರಾ’ ಅಂತ ಕೇಳಿಬಿಟ್ಟ್ರು. ನಾನು ಚೆನ್ನಾಗಿದೀನಿ ಸರ್ ಅಂತ ಹೇಳಿ ಮುಜುಗರದ ಮುದ್ದೆಯಾದೆ. ತಗೋಳ್ಳಿ ನಮ್ಮಮ್ಮನ ಪಿತ್ತ ನೆತ್ತಿಗೇರಿತು. ಮನೆಗೆ ಹೊರಡಲು ಕಾರು ಹತ್ತಿದ್ದೇ ತಡ, `ಅಂಥಾ ದೊಡ್ಡೋರಿಗೆ ನೀನೇ ಹೋಗಿ ನಮಸ್ಕಾರ ಹೇಳಿಕ್ಕೆ ಆಗಲಿಲ್ಲವಾ, ಅವುರೇ ನಿನಿಗೆ ನಮುಸ್ಕಾರ ಹೇಳ್ಬೇಕಾ?’ ಅಂತ ಮನೆ ಮುಟ್ಟೋವರೆಗೂ ಬೈದು ಬಿಟ್ಟ್ರು”.

ಗುಂಡು, ತುಂಡು ಇಲ್ಲದ ಊಟಕ್ಕೆ ಚಕ್ಕರ್

“ಒಂದ್ಸಾರಿ ಎಂಪಿ ಪ್ರಕಾಶ್ ಮಗಳ ಮದುವೆಗೆ ಹೋಗಿದ್ದೆ. ಅರ್ಜೆಂಟ್ ಇದ್ದಿದ್ದ್ರಿಂದ ಊಟ ಮಾಡದೆ ಬಂದುಬಿಟ್ಟೆ. ಅದು ಹೆಂಗೋ ಆ ಮನುಷ್ಯನಿಗೆ ಗೊತ್ತಾಗಿಬಿಟ್ಟಿದೆ. ಎರಡು ದಿನ ಆದ್ಮೇಲೆ ಒಂದು ಫೋನ್ ಬಂತು, `ಹಲೋ ನಾನು ಎಂಪಿ ಪ್ರಕಾಶ್ ಮಾತಾಡ್ತಾ ಇರೋದು. ಮದುವೆಗೆ ಬಂದು ಊಟ ಮಾಡದೆ ಹೋಗಿಬಿಟ್ಟ್ರಲ್ಲಾ ನೀವು ಖಂಡಿತ ನಮ್ಮ ಮನಿಗೆ ಊಟಕ್ಕೆ ಬರ್ಬೇಕು’ ಅಂದ್ರು. ಖಂಡಿತ ಬರ್ತೀನಿ, ನಾನೇ ನಿಮಗೆ ಫೋನ್ ಮಾಡ್ತೀನಿ ಅಂತ ಹೇಳಿದೆ. ನನಿಗೆ ಅಷ್ಟಾಗಿ ಅವರ ಪರಿಚಯ ಇರ್ಲಿಲ್ಲ. ಒಬ್ಬರನ್ನು ಕರೆದು ಈ ಎಂಪಿ ಪ್ರಕಾಶ್ ಹೆಂಗೆ, ಅಭ್ಯಾಸ ಏನಾದ್ರು (ಗುಂಡು, ಮಟನ್) ಉಂಟಾ ಅಂತ ಕೇಳಿದೆ. ಅದಕ್ಕವುರು `ಇಲ್ಲಾ ಸಾರ್ ಭಾರೀ ಸಿಂಪಲ್. ಗುಂಡು ಹಾಕೋಲ್ಲ, ಮಟನ್ ಚಿಕನ್ ಅಂದ್ರೇನೂ ಗೊತ್ತಿಲ್ಲ. ಸಾತ್ವಿಕ ಮನುಷ್ಯ’ ಅಂದ್ರು. ಓಹ್ ನನಿಗ್ಯಾಕೋ ಸರಿ ಬರಲ್ಲ ಅನ್ನಿಸ್ತು. ಗುಂಡು, ತುಂಡು ಇಲ್ಲದಿದ್ದ್ರೆ ಅದೂ ಒಂದು ಊಟಾನಾ? ವಾಪಾಸ್ ಫೋನ್ ಮಾಡಿದೆ. ಸಾರ್ ನಾನು ತುಂಬಾ ಬ್ಯುಸಿ, ಶೂಟಿಂಗ್ ಮುಗಿಸ್ಕೊಂಡು ರಾತ್ರಿ ಎಷ್ಟೊತ್ತಿಗೋ ಬರ್ತೀನಿ. ಅಲ್ಲದೇ ಜೊತೆಗೆ ಯಾರ್ಯಾರೋ ಇರ್ತಾರೆ. ನನಿಗೋಸ್ಕರ ನೀವು ಕಾದು ನಿರಾಸೆ ಆಗೋದು ಬೇಡ ಅಂತ ರೀಲು ಬಿಟ್ಟೆ. ಆದ್ರೂ ಬಲವಂತ ಮಾಡಿದ್ರು. ಸರಿ ಸಾರ್. ಊಟಕ್ಕೆ ಬರೋಲ್ಲ, ಆದ್ರೆ ತಿಂಡಿಗೆ ಬರ್ತೀನಿ ಅಂತ ಒಪ್ಕೊಂಡೆ. ಮಾರನೇ ದಿನ ಮುಖ್ಯಮಂತ್ರಿ ಚಂದ್ರೂನ ಕರ್ಕೊಂಡು ತಿಂಡಿಗೆ ಹೋದೆ. ಆಮೇಲೆ ಅವರಿಂದ ನಾನು ತುಂಬಾ ಪಾಠ ಕಲಿತೆ. ಅವರಿಂದಾನೇ ನಾನೊಬ್ಬ ಮನುಷ್ಯ ಅಂತಾದೆ. ಬೆಂಗಳೂರಲ್ಲಿ ಮನೆ ಕಟ್ಟಿಸಿದ್ದು ಕೂಡಾ ಅವರ ಸಹಕಾರದಿಂದಲೇ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...