ಅಮಿತಾಬ್ ಬಚ್ಚನ್ ಅಭಿನಯದ ‘ಝುಂಡ್’ ಚಲನಚಿತ್ರ ಬಿಡುಗಡೆಯ ಮೇಲಿನ ತಡೆಯಾಜ್ಞೆಯನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಚಿತ್ರದ ಬಿಡುಗಡೆಯನ್ನು ತಡೆಹಿಡಿಯುವಂತೆ ತೆಲಂಗಾಣ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು.
ಚಲನಚಿತ್ರ ತಡೆಗೆ ಸಂಬಂಧಿಸಿದಂತೆ ಅಕ್ಟೋಬರ್ 19 ರಂದು ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ (ಟಿ ಸೀರಿಸ್) ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠ ವಜಾಗೊಳಿಸಿದೆ.
ಸ್ಲಮ್ ಸಾಕರ್ (ಫುಟ್ಬಾಲ್) ಎನ್ಜಿಒ ಸಂಸ್ಥಾಪಕ ವಿಜಯ್ ಬಾರ್ಸೆ ಅವರ ಜೀವನವನ್ನು ಆಧರಿಸಿದ ಈ ಚಿತ್ರವನ್ನು ಇದೇ ತಿಂಗಳು ಒಟಿಟಿ ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.
ಇದನ್ನೂ ಓದಿ: ಮನುಸ್ಮೃತಿ ಸುಟ್ಟಿದ್ದು ಏಕೆಂದು ವಿವರಿಸಿದ ಅಮಿತಾಬ್ ಬಚ್ಚನ್ ವಿರುದ್ಧ FIR!
ಇದನ್ನು ಈ ಮೊದಲು ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಅದು ತೆರೆಗೆ ಬರಲಿಲ್ಲ.
ಈ ಚಲನಚಿತ್ರ ನಿರ್ಮಾಪಕರ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿದ್ದಾರೆ ಎಂದು ಹೈದರಾಬಾದ್ ಮೂಲದ ಕಿರುಚಿತ್ರ ನಿರ್ಮಾಪಕ ನಂದಿ ಚಿನ್ನಿ ಕುಮಾರ್ ಆರೋಪಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ಇದು ಆಸಕ್ತಿದಾಯಕ ಪ್ರಕರಣವೆಂದು ಗಮನಿಸಿದ್ದು, ಆರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳ್ಳಲಿದೆ ಎಂದು ನಿರ್ದೇಶಿಸಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ನಟ ಅಮಿತಾಬ್ ಬಚ್ಚನ್ ದಾವೂದ್ ಇಬ್ರಾಹಿಂನನ್ನು ಭೇಟಿ ಆಗಿದ್ದು ನಿಜವೆ?
“ಚಲನಚಿತ್ರ ತಯಾರಕರ ಪರ ಹಾಜರಾದ ವಕೀಲರು, ಆರು ತಿಂಗಳಲ್ಲಿ ಚಲನಚಿತ್ರವು ನಿಷ್ಪ್ರಯೋಜಕವಾಗಲಿದೆ. ದೂರು ಸಲ್ಲಿಸಿರುವ ವ್ಯಕ್ತಿಗೆ ಹಣ ಪಾವತಿಸುವುದಾಗಿಯೂ ಒಪ್ಪಿದ್ದೇವೆ. ಇಬ್ಬರ ನಡುವೆ 1.3 ಕೋಟಿ ರೂ.ಗಳ ಮೊತ್ತದ ಒಪ್ಪಂದವಾಗಿದೆ. ಆದರೆ ಈಗ ಅವರು ಒಪ್ಪಂದಕ್ಕೆ ಬದ್ಧರಾಗಿಲ್ಲ” ಎಂದು ಹೇಳಿದರು.
“ಉತ್ಪಾದನೆ, ವಿತರಣೆ, ಮಾರುಕಟ್ಟೆ ಮತ್ತು ಪ್ರಚಾರದಲ್ಲಿ ತಾವು ಗಣನೀಯ ಮೊತ್ತವನ್ನು ಹೂಡಿಕೆ ಮಾಡಿದ್ದೇವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಮಾಣದಲ್ಲಿ ಪ್ರಸಾರವಾಗಲಿರುವ ಈ ಚಿತ್ರದ ಬಗ್ಗೆ ತೃತೀಯ ವ್ಯಕ್ತಿಯ ಹಕ್ಕು ಸ್ವಾಮ್ಯಗಳನ್ನೂ ಸಹ ಸೃಷ್ಟಿಸಿದ್ದೇವೆ. ಈಗ ಚಿತ್ರ ಬಿಡುಗಡೆಯಾಗಿಲ್ಲ ಎಂದರೆ ನಿರ್ಮಾಪಕರಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ” ಎಂದು ಟಿ ಸೀರೀಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬಹುಜನ ಭಾರತ: ಬಾಬಾಸಾಹೇಬರು ಮನುಸ್ಮೃತಿಯನ್ನು ಸುಟ್ಟಿದ್ದು ಸುಳ್ಳೇನು?