ಬಿಹಾರ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರೋಧಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ನಿತೀಶ್ ಕುಮಾರ್ ನಾಯಕತ್ವ ವಿರೋಧಿಸಿ ಚಿರಾಗ್ ಪಾಸ್ವಾನ್ ಎನ್ಡಿಎ ಮೈತ್ರಿ ಮುರಿದಿದ್ದಾರೆ. ಈಗ ಚಿರಾಗ್ ಪಾಸ್ವಾನ್ ಪರ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಬ್ಯಾಟ್ ಬೀಸಿದ್ದಾರೆ.
ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಆಡಳಿತರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್ಡಿಎ) ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ತಾವು ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹೋರಾಡುತ್ತಿದ್ದರೂ ಕೂಡ ಬಿಜೆಪಿಗೆ ಮಿತ್ರರಾಗಿಯೇ ಇರಬೇಕೆಂದು ಬಯಸಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದಾರೆ. ಇದು ನಿತೀಶ್ ಕುಮಾರ್ ಅವರಲ್ಲಿ ಆತಂಕ ಉಂಟು ಮಾಡಿದೆ.
ಇದನ್ನೂ ಓದಿ: ಬಿಜೆಪಿ ’ಸಮ್ಮಿಶ್ರ ಧರ್ಮ’ ನೀತಿ ಅನುಸರಿಸುತ್ತಿದೆ: ಚಿರಾಗ್ ಪಾಸ್ವಾನ್
What Nitish Kumar Ji did with Chirag Paswan is not good. Chirag Paswan needs his father at this time more than ever before but Ram Vilas Paswan ji is not among us and we are sad about it. Nitish Kumar did injustice to Chirag Paswan: RJD leader Tejashwi Yadav#BiharElections2020 pic.twitter.com/ojJuY8gd3b
— ANI (@ANI) October 19, 2020
“ಚಿರಾಗ್ ಪಾಸ್ವಾನ್ ಅವರೊಂದಿಗೆ ನಿತೀಶ್ ಕುಮಾರ್ ವರ್ತಿಸಿರುವ ರೀತಿ ಸರಿಯಲ್ಲ. ಚಿರಾಗ್ ಪಾಸ್ವಾನ್ ಅವರಿಗೆ ಹಿಂದೆಂದಿಗಿಂತಲೂ ಈ ಸಮಯದಲ್ಲಿ ಅವರ ತಂದೆಯ ಅಗತ್ಯವಿದೆ. ಆದರೆ ರಾಮ್ ವಿಲಾಸ್ ಪಾಸ್ವಾನ್ ನಮ್ಮ ನಡುವೆ ಇಲ್ಲ. ಈ ಬಗ್ಗೆ ನಾವು ದುಃಖಿತರಾಗಿದ್ದೇವೆ. ನಿತೀಶ್ ಕುಮಾರ್ ಅವರು ಚಿರಾಗ್ ಪಾಸ್ವಾನ್ಗೆ ಅನ್ಯಾಯ ಮಾಡಿದ್ದಾರೆ” ಎಂಬ ತೇಜಸ್ವಿ ಯಾದವ್ ಅವರ ಹೇಳಿಕೆ ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಚಿರಾಗ್ ಪಾಸ್ವಾನ್, ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಅವರ ತಂದೆ, ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ನಿತೀಶ್ ಕುಮಾರ್ ಅವರ ವರ್ತನೆಯಿಂದ ತೀವ್ರ ನೋವುಂಟಾಗಿರುವುದಾಗಿ ತಿಳಿಸಿದ್ದರು.
ದುಖಃದ ಸಮಯದಲ್ಲೂ ಕೂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮಗಾಗಲಿ, ತಮ್ಮ ತಾಯಿಗಾಗಲಿ ಸಮಾಧಾನದ ಮಾತು ಕೂಡ ಆಡಲಿಲ್ಲ ಎಂದು ದೂಷಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ತೇಜಸ್ವಿ ಯಾದವ್ ಹೇಳಿಕೆ ಹೊರಬಿದ್ದಿದೆ.
ಇದನ್ನೂ ಓದಿ: ಬಿಹಾರ: ಟ್ರಂಪ್ ಬಂದು ವಿಶೇಷ ಸ್ಥಾನಮಾನ ನೀಡುತ್ತಾರಾ?- ನಿತೀಶ್ಗೆ ತೇಜಸ್ವಿ ಯಾದವ್ ಪ್ರಶ್ನೆ!
ಬಿಹಾರ ಚುನಾವಣೆಯಲ್ಲಿ ಚಿರಾಗ್ ನೇತೃತ್ವದ ಎಲ್ಜೆಪಿ, 243 ಸದಸ್ಯರ ವಿಧಾನಸಭೆಗೆ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅಕ್ಟೋಬರ್ 21ರಿಂದ ಚಿರಾಗ್ ಪ್ರಚಾರ ಆರಂಭಿಸಲಿದ್ದಾರೆ. ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಮತದಾನ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ.
ಬಿಜೆಪಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ಕೋಪ ಇದ್ದರೂ ಸಹ ಮಿತ್ರರಾಗಿ “ಸಮ್ಮಿಶ್ರ ಧರ್ಮ” ವನ್ನು ಅನುಸರಿಸುತ್ತಿದೆ ಎಂದು ಚಿರಾಗ್ ಪಾಸ್ವಾನ್ ನಿನ್ನೆ ಹೇಳಿದ್ದರು.
ಆದರೆ ಕಳೆದ ಕೆಲವು ದಿನಗಳಲ್ಲಿ ಚಿರಾಗ್ ಹಿರಿಯ ನಾಯಕರ ಸಾಮೀಪ್ಯವನ್ನು ತಿಳಿಸುವ ಮೂಲಕ ಗೊಂದಲವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಎನ್ಡಿಎ ಮೈತ್ರಿಕೂಟವು ಜಯಗಳಿಸಿದರೆ ನಿತೀಶ್ ಕುಮಾರ್ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಪುನರುಚ್ಚರಿಸಿದೆ.