ಬಿಹಾರ ಚುನಾವಣೆಯ ಭಾಗವಾಗಿ ಮಹಾಘಟಬಂಧನ್ ಪಕ್ಷಗಳಾದ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ವಿರೋಧ ಪಕ್ಷಗಳ ಒಕ್ಕೂಟವು ಇಂದು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನವನ್ನು ನೀಡುವುದಕ್ಕೆ ಟ್ರಂಪ್ ಬರುತ್ತಾರೆಯೇ ಎಂದು ತೇಜಸ್ವಿ ಯಾದವ್ ಬಿಜೆಪಿಯ ಕಾಲೆಳೆದಿದ್ದಾರೆ.
ಈ ಪ್ರಾಣಾಳಿಕೆಯಲ್ಲಿ, ತಾವು ಅಧಿಕಾರಕ್ಕೆ ಬಂದರೆ, 10 ಲಕ್ಷ ಉದ್ಯೋಗಳನ್ನು ಸೃಷ್ಟಿ ಮಾಡಿ, ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುತ್ತೇವೆ ಎಂದು ಆಶ್ವಾಸನೆ ನೀಡಲಾಗಿದೆ.
ಫೆಬ್ರವರಿಯಲ್ಲಿ ಅಮೆರಿಕಾ ಅಧ್ಯಕ್ಷರ ಅದ್ಧೂರಿ ಭೇಟಿಯನ್ನು ಉಲ್ಲೇಖಿಸಿ ಮಾತನಾಡಿದ ಮೈತ್ರಿಕೂಟದ ಅಭ್ಯರ್ಥಿ ಮತ್ತು ಆರ್ಜೆಡಿ ನಾಯಕರಾದ ತೇಜಸ್ವಿ ಯಾದವ್, “ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ 15 ವರ್ಷಗಳಿಂದ ರಾಜ್ಯವನ್ನು ಆಳುತ್ತಿದ್ದಾರೆ. ಆದರೆ ರಾಜ್ಯಕ್ಕೆ ಇನ್ನೂ ವಿಶೇಷ ವರ್ಗದ ಸ್ಥಾನಮಾನ ನೀಡಿಲ್ಲ. ಇದನ್ನು ಅಮೇರಿಕಾ ಅಧ್ಯಕ್ಷ ಟ್ರಂಪ್ ಬಂದು ಅದನ್ನು ಕೊಡುವುದಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಯುಪಿ ಉಪಚುನಾವಣೆ: ಹೆಚ್ಚುತ್ತಿರುವ ಅಪರಾಧಗಳ ನೆರಳಲ್ಲಿ ಮತದಾರರು ಯಾರ ಕೈಹಿಡಿಯಲಿದ್ದಾರೆ?
ತಮ್ಮ ಒಕ್ಕೂಟದ ಪ್ರಣಾಳಿಕೆಯನ್ನು ಉಲ್ಲೇಖಿಸುತ್ತಾ, “ಬದಲಾವಣೆಯನ್ನು ತರುವುದೇ ನಮ್ಮ ಸಂಕಲ್ಪ. ಜೆಡಿಯು-ಬಿಜೆಪಿ ಸೇರಿಕೊಂಡು ಬಿಹಾರದ ಬೆನ್ನಿಗೆ ಚೂರಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ನೀಡಿದ ಭರವಸೆಗಳು ಹುಸಿಯಾಗಿದ್ದು, ಇನ್ನೂ ಮುಚ್ಚಿಯೇ ಇರುವ ಮೋತಿಹಾರಿ ಮಿಲ್ನ ಸಕ್ಕರೆಯಿಂದ ಟೀ ಕುಡಿಯಲಿಲ್ಲ, ಅಪರಾಧ ಮತ್ತು ನಿರುದ್ಯೋಗ ದರ ಹೆಚ್ಚಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಬಿಹಾರ ಸಕ್ಕರೆ ಕಾರ್ಖಾನೆಗಳು, ಸೆಣಬಿನ ಗಿರಣಿಗಳು, ಪೇಪರ್ ಗಿರಣಿಗಳು ಮುಚ್ಚಲ್ಪಟ್ಟಿರುವುದನ್ನು ಇಂದಿಗೂ ನೀವು ನೋಡಬಹುದು. ಇದುವರೆಗೂ ಯಾವುದೇ ಆಹಾರ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಿಲ್ಲ” ಎಂದು ಹೇಳುತ್ತಾ, ಭಾರತವು ಪ್ರಧಾನಿ ಮೋದಿ ಅವರೊಂದಿಗೆ ಇರುವಂತೆ ರಾಜ್ಯವು ನಿತೀಶ್ ಕುಮಾರ್ ಅವರೊಂದಿಗೆ ಸುರಕ್ಷಿತವಾಗಿದೆ ಎನ್ನುವ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರ ಹೇಳಿಕೆಯ ಉಲ್ಲೇಖದ ‘ಡಬಲ್ ಎಂಜಿನ್ ಸರ್ಕಾರ’ವನ್ನು ತರಾಟೆಗೆ ತೆಗೆದುಕೊಂಡರು.
ಇಂದು ನಡೆದ ಪ್ರಣಾಳಿಕೆ ಬಿಡುಗಡೆಯಲ್ಲಿ, ಅಭಿವೃದ್ಧಿಯ ಕೊರತೆಯಿಂದಾಗಿ ಬಿಹಾರದ ಜನರು ಕೋಪಗೊಂಡಿದ್ದಾರೆ. ಅವರು ನಮ್ಮನ್ನು ಅಧಿಕಾರಕ್ಕೆ ತಂದರೆ, ಮೊದಲ ಕ್ಯಾಬಿನೆಟ್ ಸಭೆಯಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. ಮುಂದುವರಿದು, ಪ್ರವಾಹದಿಂದ ಎಷ್ಟು ಜನರು ಹಾನಿಗೊಳಗಾಗಿದ್ದಾರೆಂದು ನೋಡಲು ಕೇಂದ್ರ ತಂಡವು ಇಲ್ಲಿಯವರೆಗೆ ರಾಜ್ಯಕ್ಕೆ ಭೇಟಿ ನೀಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ’ಯುಪಿ, ಬಿಹಾರದಂತೆ ಪ.ಬಂಗಾಳವೂ ಮಾಫಿಯಾ ರಾಜ್ಯವಾಗುತ್ತಿದೆ’- ಬಿಜೆಪಿ ನಾಯಕ
ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದರೆ, ಆರ್ಜೆಡಿಯ ತೇಜಸ್ವಿ ಯಾದವ್ ಅವರ ನೇತೃತ್ವದಲ್ಲಿ ಕಳೆದ ತಿಂಗಳು ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ವಿರೋಧಿ ಕಾನೂನುಗಳನ್ನು ಮೊದಲ ವಿಧಾನಸಭಾ ಅಧಿವೇಶನದಲ್ಲಿಯೇ ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಲಿದೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ, “ಮಹಾಘಟಬಂಧನ್” ಮೈತ್ರಿಕೂಟದ ಪಕ್ಷಗಳು ಬಿಹಾರ ವಿಧಾನಸಭೆಯ 243 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಬಿಹಾರದಲ್ಲಿ ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದು, ಫಲಿತಾಂಶಗಳನ್ನು ನವೆಂಬರ್ 10 ರಂದು ಘೋಷಿಸಲಾಗುತ್ತದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಎನ್ಡಿಎ ಮೈತ್ರಿ ತೊರೆದ ಚಿರಾಗ್ ಪಾಸ್ವಾನ್!