ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಮತ್ತು ಕ್ರಮೇಣ ಇದು ಉತ್ತರ ಪ್ರದೇಶ ಮತ್ತು ಬಿಹಾರದಂತಹ ಮಾಫಿಯಾ ಆಡಳಿತದ ರಾಜ್ಯವಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್, ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶ ಮತ್ತು ಬಿಹಾರ ಎರಡು ರಾಜ್ಯಗಳಲ್ಲಿ ಮಾಫಿಯಾ-ರಾಜ್ ಅಸ್ತಿತ್ವದಲ್ಲಿದೆ ಎಂದು ಒಪ್ಪಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಎಂದು ವ್ಯಂಗ್ಯವಾಡಿದೆ.
‘ಪಶ್ಚಿಮ ಬಂಗಾಳವು ಉತ್ತರ ಪ್ರದೇಶ ಮತ್ತು ಬಿಹಾರದಂತಹ ಮಾಫಿಯಾ-ರಾಜ್ ವ್ಯವಸ್ಥೆಗೆ ಜಾರುತ್ತಿದೆ. ಸ್ಟೆನ್ಗನ್ ಬಳಸಿ ಪೊಲೀಸ್ ಠಾಣೆಯ ಮುಂದೆಯೇ ಕೌನ್ಸಿಲರ್ನನ್ನು ಗುಂಡಿಕ್ಕಿ ಕೊಂದಿದ್ದು ನಾಚಿಕೆಗೇಡಿನ ಘಟನೆ’ ಎಂದು ಘೋಷ್ ಹೇಳಿದ್ದರು.
ಉತ್ತರ 24 ಪರಗಣ ಜಿಲ್ಲೆಯ ತಿತಾಗರ್ನಲ್ಲಿ ಬಿಜೆಪಿ ನಾಯಕ ಮನೀಶ್ ಶುಕ್ಲಾ ಅವರನ್ನು ಭಾನುವಾರ ಇಬ್ಬರು ಬೈಕ್ನಲ್ಲಿ ಬಂದ ದುರ್ಷ್ಕಮಿಗಳು ಗುಂಡಿಟ್ಟು ಕೊಂದಿದ್ದರು.
ಇದನ್ನೂ ಓದಿ: ಕೃಷಿ ಮಸೂದೆಗಳಿಂದ ಎಲ್ಲವೂ ಅಸ್ತವ್ಯಸ್ತ: ಪಶ್ಚಿಮ ಬಂಗಾಳ ಸರ್ಕಾರದ ಆತಂಕ
“ದಿನ ಕಳೆದಂತೆ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ 120 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹತರಾಗಿದ್ದಾರೆ. ಇಂತಹ ಅರಾಜಕ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಯುತ ಮತದಾನ ಸಾಧ್ಯವೇ..?’ ಎಂದು ಘೋಷ್ ಪ್ರಶ್ನಿಸಿದ್ದಾರೆ. ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಆರೋಪಕ್ಕೆ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು ಘೋಷ್ ಅವರ ಟೀಕೆಗಳನ್ನು ಅಪಹಾಸ್ಯ ಮಾಡಿದೆ.
“ಬಿಜೆಪಿ ಆಡಳಿತದ ಯುಪಿ ಮತ್ತು ಬಿಹಾರದಲ್ಲಿ ಮಾಫಿಯಾ ರಾಜ್ ಅಸ್ತಿತ್ವದಲ್ಲಿದೆ ಎಂದು ಅವರು ಒಪ್ಪಿಕೊಂಡಿರುವುದು ಒಳ್ಳೆಯದು. ಒಮ್ಮೆಯಾದರೂ ಅವರು ಸತ್ಯವನ್ನು ಮಾತನಾಡಿದ್ದಕ್ಕೆ ನಮಗೆ ಸಂತೋಷವಾಗಿದೆ” ಎಂದು ಟಿಎಂಸಿಯ ಹಿರಿಯ ಮುಖಂಡ ಮತ್ತು ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.
ಇದೇ ವಿಷಯಕ್ಕೆ ಟ್ವೀಟ್ ಮಾಡಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ’ ದಿಲೀಪ್ ಘೋಷ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತು ಬಿಹಾರದ ನಿತೀಶ್ ಕುಮಾರ್ ಸರ್ಕಾರದಲ್ಲಿ ಮಾಫಿಯಾ ರಾಜ್ ನಡೆಯುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದ’ ಎಂದಿದ್ದಾರೆ.
.@DilipGhoshBJP का बहुत-बहुत आभार यह मानने के लिए कि उत्तर प्रदेश में @myogiadityanath और बिहार में इनके गठबंधन के सहयोगी @NitishKumar ने माफिया राज को कायम रखा है। ?https://t.co/btcUNfJir0
— Abhishek Banerjee (@abhishekaitc) October 6, 2020