ಹೈದರಾಬಾದ್ ಪಾಲಿಕೆ ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿ ನಾಯಕರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಸತತ ಚುನಾವಣಾ ಪ್ರಚಾರ ನಡೆಸುತ್ತಿರುವ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತೆಲಂಗಾಣ ಬಿಜೆಪಿ ಮುಖ್ಯಸ್ಥ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ಹೈದರಾಬಾದ್ನಲ್ಲಿ ’ಸರ್ಜಿಕಲ್ ಸ್ಟ್ರೈಕ್’ ಬೆದರಿಕೆ ಹಾಕಿದ್ದಾರೆ.
ಹೈದರಾಬಾದ್ನ ಓಲ್ಡ್ ಸಿಟಿ ಪ್ರದೇಶದಲ್ಲಿ ಒಳನುಸುಳುವವರ ಮೇಲೆ ’ಸರ್ಜಿಕಲ್ ಸ್ಟ್ರೈಕ್’ ಮಾಡುವುದಾಗಿ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಬೆದರಿಕೆ ಹಾಕಿದ್ದಾರೆ. ನಗರದಲ್ಲಿ ವಾಸಿಸುವ ಅಕ್ರಮ ಬಾಂಗ್ಲಾದೇಶಿಗರು, ಪಾಕಿಸ್ತಾನಿಗಳರು ಮತ್ತು ರೋಹಿಂಗ್ಯಾಗಳನ್ನು ಒಳನುಸುಳುಕೋರರು ಎಂದು ಉಲ್ಲೇಖಿಸಲಾಗಿದೆ.
“ಅಕ್ರಮ ಒಳನುಸುಳುಕೋರರ ಮತಗಳನ್ನು ಬಳಸಿಕೊಂಡು ನೀವು ಚುನಾವಣೆಯಲ್ಲಿ ಗೆಲ್ಲಲು ಬಯಸುತ್ತೀರಿ. ಅದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೈದರಾಬಾದ್ನ ಮೇಯರ್ ಚುನಾವಣೆಯಲ್ಲಿ ಆಯ್ಕೆಯಾದ ನಂತರ ಅವರೆಲ್ಲರನ್ನೂ ಹೊರಹಾಕುತ್ತೇವೆ” ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: BJP ಎಂದೂ ಸಂವಿಧಾನವನ್ನು ನಂಬುವುದಿಲ್ಲ: ತೇಜಸ್ವಿ ಸೂರ್ಯ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಾದ್ಯಂತದ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಗೆ “ಸರ್ಜಿಕಲ್ ಸ್ಟ್ರೈಕ್” ಎಂಬ ಹೆಸರು ನೀಡಲಾಗಿದೆ. ಈ ಪದವನ್ನು ಹೈದರಾಬಾದ್ ಜನರಿಗೆ ಅನ್ವಯಿಸಿ ಮಾತನಾಡಿರುವ ಸಂಸದ ಬಂಡಿ ಸಂಜಯ್ ಕುಮಾರ್ ಮಾತಿಗೆ ರಾಜ್ಯದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
’ಕೇವಲ ಮತಗಳ ಸಲುವಾಗಿ, ಬಿಜೆಪಿ ಹೈದರಾಬಾದಿಗರ ಜೀವವನ್ನು ತೆಗೆಯುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಿದೆ. “ಹೈದರಾಬಾದ್ ಪಾಕಿಸ್ತಾನದಲ್ಲಿದೆಯೇ? ನೀವು ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿದ್ದೀರಾ? ಚುನಾವಣೇ ಗೆಲ್ಲುವ ಸಲುವಾಗಿ ಹೈದರಾಬಾದ್ನಲ್ಲಿ ಬೆಂಕಿ ಹಚ್ಚಲು ಬಯಸುತ್ತೀರಾ..? ಎಂದು ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ಆಕ್ರೋಶ ಹೊರಹಾಕಿದ್ದಾರೆ.
’ನಮಗೆ ಬಡತನ, ಭ್ರಷ್ಟಾಚಾರ ಮತ್ತು ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ಗಳು ಬೇಕು, ಹೈದರಾಬಾದಿಗಳ ವಿರುದ್ಧವಲ್ಲ’ ಎಂದು ಸಚಿವ ಕೆ.ಟಿ.ರಾಮರಾವ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ತಿರುಗೇಟು ನೀಡಿದ್ದಾರೆ. ಹೇಳಿದ್ದಾರೆ.
ಬಿಜೆಪಿ ನಾಯಕನ ಹೇಳಿಕೆಯನ್ನು ಅಪಹಾಸ್ಯ ಮಾಡಿದ ಎಐಎಂಐಎಂ ನಾಯಕ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, “ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಿಯರ ವಿರುದ್ಧ ಏಕೆ ಯಾವುದೇ ಸರ್ಜಿಕಲ್ ಸ್ಟ್ರೈಕ್ಗಳು ನಡೆಸಿಲ್ಲ” ಎಂದು ಪ್ರಶ್ನಿಸಿದ್ದಾರೆ. “ನೀವು ಯಾರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತೀರಿ? ಚೀನಾದ ಪಡೆ ಪಿಎಲ್ಎ ಲಡಾಖ್ನಲ್ಲಿ 970 ಚದರ ಕಿ.ಮೀ ಆಕ್ರಮಿಸಿಕೊಂಡಿದೆ. ಆದರೂ ಅವರು ಚೀನಾದ ಹೆಸರನ್ನು ಸಹ ತೆಗೆದುಕೊಳ್ಳುವುದಿಲ್ಲ” ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ನಿದ್ದೆ ಮಾಡುತ್ತಿದ್ದಾರೆಯೆ?: ಓವೈಸಿ
“ಹೈದರಾಬಾದ್ನಲ್ಲಿ ಎಷ್ಟು ಪಾಕಿಸ್ತಾನಿಗಳು ಅಥವಾ ರೋಹಿಂಗ್ಯಾಗಳು ಇದ್ದಾರೆ ಎಂದು ನಮಗೆ ತಿಳಿಸಿ. ಇನ್ನೊಂದು ವಿಷಯ ನೆನಪಿಡಿ, ಹೈದರಾಬಾದ್ನಲ್ಲಿರುವವರು ಹಿಂದೂ, ಮುಸ್ಲಿಂ, ದಲಿತ, ಸಿಖ್, ಕ್ರಿಶ್ಚಿಯನ್ ಎಲ್ಲಾ ಧರ್ಮದವರು, ಎಲ್ಲರೂ ಭಾರತೀಯರು. ನಾವು ಪಾಕಿಸ್ತಾನಿಯರನ್ನು ಇಲ್ಲಿಗೆ ಬಿಡುವುದಿಲ್ಲ” ಎಂದು ಓವೈಸಿ ಹೇಳಿದ್ದಾರೆ.
ರಾಜ್ಯದ ಅಭಿವೃದ್ಧಿ ಅಥವಾ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಲು ಬಿಜೆಪಿ ಬಯಸುವುದಿಲ್ಲ, “ಬಿಜೆಪಿಯವರು ಬಿರುಕುಗಳನ್ನು ಸೃಷ್ಟಿಸಲು ಮಾತ್ರ ಬಯಸುತ್ತಾರೆ” ಎಂದು ಓವೈಸಿ ಆರೋಪಿಸಿದ್ದಾರೆ. ಓವೈಸಿಯವರನ್ನು ಸಂಸದ ತೇಜಸ್ವಿ ಸೂರ್ಯ, ಜಿನ್ನಾ ಅವತಾರ ಎಂದು ಕರೆದಿದ್ದರು.
ವಿಶ್ವ ಪ್ರಸಿದ್ಧ ಸಾಫ್ಟ್ವೇರ್ ಕೇಂದ್ರವಾದ ಹೈದರಾಬಾದ್ ಅನ್ನು ಭಾಗ್ಯನಗರವನ್ನಾಗಿ ಮಾಡಲು ಬಿಜೆಪಿ ಬಯಸಿದೆ. ಹೈದರಾಬಾದ್ ನಮ್ಮ ಗುರುತು, ನಮ್ಮ ಸಂಸ್ಕೃತಿ. ಅವರು ಎಲ್ಲವನ್ನೂ ಬದಲಾಯಿಸಲು ಬಯಸುತ್ತಾರೆ. ಆದರೆ ಹಾಗೆ ಮಾಡಲು ನಾವು ಬಿಡುವುದಿಲ್ಲ” ಎಂದು ಓವೈಸಿ ಹೇಳಿದ್ದಾರೆ.