ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಬಿಜೆಪಿ ಹಿರಿಯ ಮುಖಂಡ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಆಡಳಿತರೂಢ ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ ಸರ್ಕಾರದ ಕೊನೆಯ ದಿನಗಳನ್ನು ಎಣಿಸುತ್ತಿದೆ., ಭಾರತೀಯ ಜನತಾ ಪಕ್ಷ (ಬಿಜೆಪಿ) ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಕುರಾ ಜಿಲ್ಲೆಯ ಪುಯಬಾಗನ್ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಮಮತಾ ಬ್ಯಾನರ್ಜಿ ಸರ್ಕಾರವು ಬಡವರು, ರೈತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನರನ್ನು, ತುಳಿತಕ್ಕೊಳಗಾದವರನ್ನು ನಿರ್ಲಕ್ಷಿಸಿದೆ. ಅದರಲ್ಲೂ ವಿಶೇಷವಾಗಿ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷಿಸಿರುವ ರೀತಿ, ಅವರ ಹತ್ಯೆಗಳನ್ನು ಸ್ಪಷ್ಟವಾಗಿ ನೋಡಬಹುದು ಎಂದು ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ.
ಇದಕ್ಕೂ ಮುನ್ನಾ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿದ್ದ ಬಂಕುರಾ ಪ್ರದೇಶದ ಬುಡಕಟ್ಟು ಜನರ ನಾಯಕ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಹೂಮಾಲೆ ಹಾಕಿ ನಮನ ಸಲ್ಲಿಸಿದರು.
ಇದನ್ನೂ ಓದಿ: ’ಮೋದಿಜಿಯ ವೋಟಿಂಗ್ ಮಷಿನ್ & ಮೋದಿಜಿಯ ಮೀಡಿಯಾಕ್ಕೆ ನಾನು ಹೆದರುವುದಿಲ್ಲ’- ರಾಹುಲ್
“ಈ ಸರ್ಕಾರವನ್ನು ಉರುಳಿಸಲು ಮತ್ತು ಸುವರ್ಣ ಬಂಗಾಳವನ್ನು ನಿರ್ಮಿಸಲು ಬಿಜೆಪಿಗೆ ಅವಕಾಶ ನೀಡುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ” ಎಂದು ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ ಮಾತಿಗೆ ಕೋಲ್ಕತ್ತಾದಲ್ಲಿ ಪ್ರತಿಕ್ರಿಯಿಸಿರುವ ಟಿಎಂಸಿ ಲೋಕಸಭಾ ಸದಸ್ಯ ಮತ್ತು ಪಕ್ಷದ ವಕ್ತಾರ ಸೌಗತಾ ರಾಯ್ “ಅಮಿತ್ ಶಾ ಹಗಲುಗನಸು ಕಾಣುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. “ಬಿಜೆಪಿ ಸುವರ್ಣ ಬಂಗಾಳವನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದ್ದರೆ, ಅದು ಯಾಕೆ ಸುವರ್ಣ ಉತ್ತರ ಪ್ರದೇಶವನ್ನು ನಿರ್ಮಿಸುವುದಿಲ್ಲ?” ಎಂದು ತಿರುಗೇಟು ನೀಡಿದ್ದಾರೆ.
ಕೊಲ್ಕತ್ತಾ ಬಳಿಯ ಮಥೂವಾ ದಲಿತ ಕುಟುಂಬದೊಂದಿಗೆ ಶುಕ್ರವಾರ ಊಟದ ವ್ಯವಸ್ಥೆ ಮಾಡಿರುವ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸೌಗತಾ ರಾಯ್ ಇಬ್ಬರು ಇದನ್ನು ನಾಟಕ ಎಂದಿದ್ದಾರೆ.
“ಅವರಿಗೆ ಗೊತ್ತಿಲ್ಲ, ಕಳೆದ 20-25 ವರ್ಷಗಳಿಂದ ಬೊರೊಮಾ (ಮಥೂವಾ ಸಮುದಾಯದ ಹಿರಿಯ ತಾಯಿ) ಜೀವಂತವಾಗಿರುವವರೆಗೂ, ನಾನು ಅವರನ್ನು ನೋಡಿಕೊಳ್ಳುತ್ತಿದ್ದೆ. ನಾನು ಅವರನ್ನು ಆಸ್ಪತ್ರೆಗೆ ಸೇರಿಸುತ್ತಿದ್ದೆ ಆರೈಕೆ ಮಾಡುತ್ತಿದೆ. ಅಲ್ಲಿಗೆ ಮೊದಲು ಭೇಟಿ ನೀಡಿ ಪ್ರದೇಶವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದ್ದು ನಾನು. ಕೆಲವರು ಹೊಸಬರು ಈಗ ಅಲ್ಲಿಗೆ ಧುಮಕುಕಲು ಪ್ರಯತ್ನಿಸುತ್ತಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಇನ್ನೂ ಟಿಎಂಸಿ ಲೋಕಸಭಾ ಸದಸ್ಯ ಸೌಗತಾ ರಾಯ್, “ಬಿಜೆಪಿ ಶ್ರೀಮಂತರ ಪಕ್ಷವಾಗಿದೆ. ಬುಡಕಟ್ಟು ಕುಟುಂಬದ ಮನೆಯಲ್ಲಿ ಊಟ ಮಾಡುವುದು ಕೇವಲ ನಾಟಕ. ಬಂಗಾಳದ ಜನರು ಎಂದಿಗೂ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಿಲ್ಲ ”ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಗಳು: ಪಂಜಾಬ್ ’ರಾಷ್ಟ್ರ ವಿರೋಧಿ’ ಎಂದವರ ವಿರುದ್ಧ ಅಮರಿಂದರ್ ಸಿಂಗ್ ವಾಗ್ದಾಳಿ
ಪಶ್ಚಿಮ ಬಂಗಾಳದಲ್ಲಿ ಶತಾಯಗತಾಯ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಪ್ರಯತ್ನ ಪಡುತ್ತಿರುವ ಬಿಜೆಪಿ ಸರ್ಕಾರ ಬಂಗಾಳದಲ್ಲಿ ಹಲವಾರು ರ್ಯಾಲಿಗಳನ್ನು ಆಯೋಜಿಸುತ್ತಿದೆ. ಲಾಕ್ಡೌನ್ ಮುಂಚೆ ಕೂಡ ಅಮಿತ್ ಶಾ ಬಂಗಾಳಕ್ಕೆ ಭೇಟಿ ನೀಡಿದ್ದರು. ಆದರೆ ಆ ರ್ಯಾಲಿ ಅಷ್ಟು ಯಶಸ್ವಿಯಾಗಿರಲಿಲ್ಲ.
ಈಗ ಮತ್ತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕೈಗೊಳ್ಳಬೇಕಾಗಿದ್ದ ಪ್ರವಾಸವನ್ನು ರದ್ದುಗೊಳಿಸಿ ತಾವೇ ಎರಡು ದಿನಗಳ ಪ್ರವಾಸ ಆರಂಭಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟಿಸುತ್ತಿದ್ದಾರೆ. ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ಬಿಜೆಪಿ ರಾಜ್ಯ ಅಧ್ಯಕ್ಷರವರೆಗೂ ಸಭೆಗಳನ್ನು ನಡೆಸುತ್ತಿದ್ದಾರೆ.
ಕಳೆದ ತಿಂಗಳು ಕೂಡ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಆಡಳಿತವನ್ನು ವಿರೋಧಿಸಿ ನಾಲ್ಕು ಸ್ಥಳಗಳಲ್ಲಿ ರ್ಯಾಲಿ ಆಯೋಜಿಸಿತ್ತು. ಪ್ರತಿಭಟನೆಯಲ್ಲಿ ಮಮತಾ ಬ್ಯಾನರ್ಜಿ ಅವರ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನ ಪಟ್ಟಿತ್ತು. ಆದರೆ ಕೊರೊನಾ ಕಾರಣ ನೀಡಿ ಸಿಎಂ ಮಮತಾ ಕಚೇರಿಗೆ ರಜೆ ಘೋಷಿಸಿ ರ್ಯಾಲಿಯನ್ನು ವಿಫಲಗೊಳಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ. ಇನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳುಗಳು ಇರುವ ಕಾರಣ ಈಗಿನಿಂದಲೇ ಪಕ್ಷವನ್ನು ಬಲ ಪಡಿಸಲು ಬಿಜೆಪಿ ಪಣ ತೊಟ್ಟಿದೆ. ಇದಕ್ಕೆ ಪೂರಕವೆಂಬಂತೆ ಬಂಕುರಾ ಜಿಲ್ಲೆಯಲ್ಲಿ ನಡೆದ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿಸಿತ್ತು.