ಚಿತ್ರದುರ್ಗ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊರೋನ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರಿಗೆ ಕೊರೊನ ಸೋಂಕು ಇರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಮನೆಯಲ್ಲಿ ಜಿ.ಎಂ ಸಿದ್ದೇಶ್ವರ ಪುತ್ರಿ ಇದ್ದು ಅವರನ್ನು ಗೃಹಬಂಧನದಲ್ಲಿಡಲಾಗಿದೆ. ಸಂಸದ ಸಿದ್ದೇಶ್ವರ ಪುತ್ರಿ ಗಯಾನದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಭೀಮಸಮುದ್ರಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.
ಸಂಸದ ಜಿ.ಎಂ.ಸಿದ್ದೇಶ್ವರ್ ಸೇರಿ 6 ಮಂದಿ ವಿದೇಶದಿಂದ ತವರಿಗೆ ಮರಳಿದ್ದರು. ಸಿದ್ದೇಶ್ವರ ಅವರ ಪುತ್ರಿಯಲ್ಲಿ ಸೋಂಕು ಕಂಡುಬಂದಿರುವುದರಿಂದ ಮನೆ ಸುತ್ತಲೂ 5 ಕಿಲೋ ಮೀಟರ್ ರೆಡ್ ಝೋನ್ ಎಂದು ಘೋಷಿಸಲಾಗಿದೆ.
ರೆಡ್ ಜೋನ್ ಎಂದು ಘೋಷಿಸಿರುವುದರಿಂದ ಭೀಮಸಮುದ್ರದ ಸಂಸದರ ಮನೆಗೆ ಯಾರೂ ಬರುವಂತೆ ಇಲ್ಲ. ಹೊರಗೆ ಯಾರೂ ಹೋಗುವಂತಿಲ್ಲ. ಮನೆಯವರೆಲ್ಲರನ್ನು ಗೃಹಬಂಧನದಲ್ಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದ್ದಾರೆ.
ಸಂಸದ ಜಿ.ಎಂ.ಸಿದ್ದೇಶ್ವರ ಸೇರಿ 6 ಮಂದಿಯ ರಕ್ತ, ಕಫ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ನಾಲ್ವರಲ್ಲಿ ನೆಗೆಟೀವ್ ಎಂಬ ವರದಿ ಬಂದಿದೆ. ಇಬ್ಬರ ವರದಿ ಬರುವುದು ಬಾಕಿ ಇದೆ. ಕೊರೊನಾ ಸೋಂಕಿತ
ಮಹಿಳೆ ಜೊತೆ ಮಕ್ಕಳು ಇದ್ದರು. ಅವರಲ್ಲಿ ಸೋಂಕು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.