ಕೊಲ್ಕೊತ್ತಾದ ಮಾಜಿ ಪೊಲೀಸ್ ಕಮೀಷನರ್ರನ್ನು ಸಿಬಿಐ ಕಸ್ಟಡಿಗೆ ನೀಡಲು ಪುರಾವೆ ಕೇಳಿದ ಸುಪ್ರೀಂ ಕೋರ್ಟ್
ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸಿದಾಗ, ಸಾಕ್ಷ್ಯ ನಾಶ ಮಾಡಿದರು ಎಂಬ ಆರೋಪವನ್ನು ಹೊತ್ತಿರುವ ಕೊಲ್ಕೊತ್ತಾದ ಮಾಜಿ ಪೊಲೀಸ್ ಕಮೀಷನರ್ರನ್ನು ವಶಕ್ಕೆ ತೆಗೆದುಕೊಳ್ಳಲು ಅನುಮತಿ ಕೊಡಿ ಎಂದು ಸಿಬಿಐ ಕೇಳಿತ್ತು. ಆದರೆ, ಅವರು ಸಾಕ್ಷ್ಯ ನಾಶ ಮಾಡಿದ್ದಾರೆಂದು ಅನುಮಾನ ಪಡಲು ಕಾರಣವಾದ ಯಾವುದಾದರೂ ಪುರಾವೆ ಕೊಡಿ ಎಂದು ಸುಪ್ರೀಂಕೋರ್ಟ್ ಇಂದು ಕೇಳಿತು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ರಿದ್ದ ಪೀಠವು ಸಿಬಿಐನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪುರಾವೆ ಕೊಡಿ ಎಂದು ತಾಕೀತು ಮಾಡಿತು. ಅದನ್ನು ಮರುದಿನವೇ ಒದಗಿಸುವುದಾಗಿ ಮೆಹ್ತಾ ಅವರು ಹೇಳಿದ್ದರಿಂದ ನಾಳೆ ಮತ್ತೆ ಈ ಮೊಕದ್ದಮೆ ವಿಚಾರಣೆಗೆ ಬರಲಿದೆ.
ಈ ಸಂಬಂಧ ಕೊಲ್ಕೊತ್ತಾದ ಮಾಜಿ ಪೊಲೀಸ್ ಕಮೀಷನರ್ ರಾಜೀವ್ಕುಮಾರ್ರನ್ನು ಬಂಧಿಸಲು ಸಿಬಿಐ ಅಲ್ಲಿಗೆ ಬಂದಿಳಿದಾಗ, ಸಿಬಿಐ ಅಧಿಕಾರಿಗಳನ್ನೇ ಮಮತಾ ಸರ್ಕಾರವು ಬಂಧಿಸಿದ ಪ್ರಕರಣ ನಡೆದಿತ್ತು. ಅಷ್ಟೇ ಅಲ್ಲದೇ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರವನ್ನು ವಿರೋಧಿಸಿ ಧರಣಿ ಕೂತಿದ್ದರು.
ನಂತರ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ರಾಜೀವ್ಕುಮಾರ್ರನ್ನು ಬಂಧಿಸಬಾರದು ಮತ್ತು ಹೊರರಾಜ್ಯದಲ್ಲಿ ಅವರನ್ನು ಪ್ರಶ್ನಿಸಿ ಎಂದು ಹೇಳಿತ್ತು. ಇದೀಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ಈ ಸಮರವು ಸುಪ್ರೀಂನ ಅಂಗಳದಲ್ಲಿದ್ದು, ಕುತೂಹಲ ಮೂಡಿಸಿದೆ. ನಾವು ಪ್ರಶ್ನೆ ಮಾಡಿದಾಗ ರಾಜೀವ್ ಅವರು ಸರಿಯಾದ ಉತ್ತರ ನೀಡಿಲ್ಲವಾದ್ದರಿಂದ ಅವರನ್ನು ವಶಕ್ಕೆ ಕೊಡಿ ಎಂದು ಸಿಬಿಐ ಕೇಳುತ್ತಿದೆ.