2020-21ರ ಶೈಕ್ಷಣಿಕ ವರ್ಷಕ್ಕೆ ಪಠ್ಯಕ್ರಮದಿಂದ ಪೌರತ್ವ, ಒಕ್ಕೂಟ ವ್ಯವಸ್ಥೆ, ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯ ಅಧ್ಯಾಯಗಳನ್ನು ಕೈಬಿಟ್ಟಿದ್ದ CBSE ನಡೆಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಸಮರ್ಥಿಸಿಕೊಂಡಿದ್ದಾರೆ.
ಪಠ್ಯ ಕೈಬಿಟ್ಟಿರುವುದಕ್ಕೆ ಕೇಳಿಬಂದಿರುವ ಟೀಕೆಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಸಮರ್ಪಕ ಮಾಹಿತಿ ಇಲ್ಲದವರು ಬೇಕಂತಲೇ ಟೀಕಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತು ಟ್ವಿಟ್ಟರ್ನಲ್ಲಿ ಸರಣಿ ಟ್ವೀಟ್ ಮಾಡಿದ ಡಾ. ಪೋಖ್ರಿಯಲ್ “ಶಾಲೆಗಳಿಗೆ ಎನ್ಸಿಇಆರ್ಟಿ ಪರ್ಯಾಯ ಅಕಾಡೆಮಿಕ್ ಕ್ಯಾಲೆಂಡರ್ ಅನ್ನು ಅನುಸರಿಸಲು ಸೂಚಿಸಿದೆ. ಉಲ್ಲೇಖಿಸಲಾದ ಎಲ್ಲಾ ವಿಷಯಗಳನ್ನು ಒಂದೇ ಅಕಾಡೆಮಿಕ್ ಕ್ಯಾಲೆಂಡರ್ ಅಡಿಯಲ್ಲಿ ಬೋಧಿಸಲಾಗುವುದು. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಕಾರಣದಿಂದ ಮಾತ್ರವೇ ಈಗ ಕೆಲವು ಪಠ್ಯಗಳನ್ನು ಕೈಬಿಡಲಾಗುತ್ತದೆ ಎಂದಿದ್ದಾರೆ.
As @cbseindia29 has clarified, schools have been advised to
follow the #NCERT Alternate Academic Calendar, and all the topics mentioned have been covered under the same Academic Calendar. The exclusions are merely a 1-time measure for exams, due to the #COVID19 pandemic.— Dr. Ramesh Pokhriyal Nishank (@DrRPNishank) July 9, 2020
ರಾಷ್ಟ್ರೀಯತೆ, ಸ್ಥಳೀಯ ಸರ್ಕಾರ, ಫೆಡರಲಿಸಂ ಮುಂತಾದ 3-4 ವಿಷಯಗಳನ್ನು ಕೈಬಿಡಲಾಗಿದೆ ಎಂದು ತಪ್ಪಾಗಿ ಗ್ರಹಿಸುವುದು ಮತ್ತು ಸುಳ್ಳು ನಿರೂಪಣೆ ಹರಡಲಾಗುತ್ತಿದೆ. ಆಳವಾಗಿ ಪರಿಶೀಲನೆ ನಡೆಸಿದರೆ ಎಲ್ಲಾ ವಿಷಯಗಳಲ್ಲಿಯೂ ಪಠ್ಯ ಕೈಬಿಟ್ಟಿರುವುದು ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ರಾಜಕೀಯ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಸಮಾಜ ಶಾಸ್ತ್ರದ ಹೊರತಾಗಿ ಬೇರೆ ಅಧ್ಯಾಯಗಳು ಮತ್ತು ವಿಷಯಗಳನ್ನು ಕೂಡಾ ಕೈಬಿಡಲಾಗಿದೆ ಎಂದು ಡಾ. ಪೋಖ್ರಿಯಾಲ್ ಹೇಳಿದ್ದಾರೆ.
“ಅರ್ಥಶಾಸ್ತ್ರದಲ್ಲಿ ಪ್ರಸರಣದ ಕ್ರಮಗಳು, ಪಾವತಿಗಳ ಸಮತೋಲನ, ಭೌತಶಾಸ್ತ್ರದಲ್ಲಿ ಹೀಟ್ ಎಂಜಿನ್ ಮತ್ತು ರೆಫ್ರಿಜರೇಟರ್, ಶಾಖ ವರ್ಗಾವಣೆ, ಸಂವಹನ ಮತ್ತು ವಿಕಿರಣ ಇತರ ವಿಷಯಗಳನ್ನು ಕೂಡಾ ಪಠ್ಯದಿಂದ ಹೊರಗಿಡಲಾಗಿದೆ” ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
“ಇದು ನನ್ನ ವಿನಮ್ರ ವಿನಂತಿಯಾಗಿದೆ; ಮಕ್ಕಳ ಶಿಕ್ಷಣವು ನಮ್ಮ ಪವಿತ್ರ ಕರ್ತವ್ಯವಾಗಿದ್ದು, ರಾಜಕೀಯವನ್ನು ಶಿಕ್ಷಣದಿಂದ ಹೊರಗಿಟ್ಟು ನಮ್ಮ ಮಕ್ಕಳನ್ನು ಹೆಚ್ಚು ವಿದ್ಯಾವಂತರನ್ನಾಗಿ ಮಾಡೋಣ” ಎಂದು ಅವರು ಹೇಳಿದ್ದಾರೆ.
ಓದಿ: ಪಠ್ಯದಿಂದ ಪೌರತ್ವ, ಒಕ್ಕೂಟ ವ್ಯವಸ್ಥೆ, ರಾಷ್ಟ್ರೀಯತೆ, ಜಾತ್ಯತೀತತೆಯ ಅಧ್ಯಾಯಗಳನ್ನು ಕೈಬಿಟ್ಟ CBSE