Homeರಾಜಕೀಯಚನ್ನಗಿರಿ ಯುವಕನ ಸಾವು ಕಡೇಪಕ್ಷ ಒಂದು ಚರ್ಚೆಯಾದರೂ ಆಗಲಿ....

ಚನ್ನಗಿರಿ ಯುವಕನ ಸಾವು ಕಡೇಪಕ್ಷ ಒಂದು ಚರ್ಚೆಯಾದರೂ ಆಗಲಿ….

- Advertisement -
- Advertisement -

ಕರ್ನಾಟಕವಷ್ಟೇ ಯಾಕೆ ಇಡೀ ದೇಶವೇ ಬೆಚ್ಚಿ ಬೀಳಬೇಕಾಗಿದ್ದ ಪ್ರಕರಣವಿದು. ಆದರೆ ಬೆಚ್ಚಿ ಬೀಳಲಿಲ್ಲ ಎನ್ನುವುದು ದುರಂತ! ಬಜೆಟ್ ರಾಜಕಾರಣದ ಬಿಸಿಬಿಸಿ ಗದ್ದಲಗಳ ನಡುವೆ ನಮ್ಮ ಮೀಡಿಯಾಗಳೂ ನಿರ್ಲಕ್ಷಿಸಿದ ಚೆನ್ನಗಿರಿ ಯುವಕನ ಆತ್ಮಹತ್ಯೆ, ಕೇವಲ ಅವನೊಬ್ಬನ ಸಾವಾಗಿರಲಿಲ್ಲ. ಸಮಸ್ತ ಯುವಸಮೂಹದ ಆತ್ಮಸ್ಥೈರ್ಯವೇ ಸಾವಿನ ಹಾದಿಹಿಡಿಯುತ್ತಿರುವುದರ ಸೂತಕದ ಸೂಚನೆಯಾಗಿತ್ತು. ಆದರೆ ನಮ್ಮ ಸಮಾಜ, ಸರ್ಕಾರ, ಮಾಧ್ಯಮಗಳು ಸ್ಪಂದಿಸಬೇಕಾದ ರೀತಿಯಲ್ಲಿ ಸ್ಪಂದಿಸಲೇ ಇಲ್ಲ.
ದಾವಣಗೆರೆಯ ಚೆನ್ನಗಿರಿ ತಾಲ್ಲೂಕಿನಲ್ಲಿರುವ ಹೊಸನಗರ ಎಂಬ ಪುಟ್ಟ ಹಳ್ಳಿಯ ಅನಿಲ್ ರಾಥೋಡ್‍ನದ್ದು ಸಾಯುವ ವಯಸ್ಸಲ್ಲ. ಆದರೆ ನನಗಿನ್ನು ಬದುಕುವ ಅವಕಾಶವಿಲ್ಲ ಎಂಬ ಆತಂಕವನ್ನು ಈ ನಮ್ಮ ಸಮಾಜ ತುಂಬಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿ ಬಂದಿದೆ.
ಕೂಲಿ ಮಾಡಿ ಜೀವನ ಸಾಗಿಸುವ ಒಂದು ಬಡ ಕುಟುಂಬದ ಮೂವರು ಮಕ್ಕಳಲ್ಲಿ ಅನಿಲ್ ಕೂಡಾ ಒಬ್ಬನಾಗಿದ್ದ. ಬಿಎ ಪದವೀಧರ. ತಂದೆಯ ಸಾವಿನ ನಂತರ ಮುಂದಕ್ಕೆ ಓದಲಾಗದೆ ತಾಯಿಗೆ ನೆರವಾಗುತ್ತಾ ಸ್ಪರ್ಧಾತ್ಮಕ ಪರೀಕ್ಷಗಳನ್ನು ಬರೆಯುತ್ತಾ ಅದೃಷ್ಟಪರೀಕ್ಷೆಯಲ್ಲಿದ್ದ. ಆತನ ಅಣ್ಣ ಚಕ್ರವರ್ತಿ ದಾವಣಗೆರೆ ವಿವಿಯಲ್ಲಿ ಎಂಎ ಮಾಡುತ್ತಿದ್ದು ಕೊನೆಯ ತಮ್ಮ ರಾಜ್‍ಕುಮಾರ್ ಮನೆಯ ಜವಾಬ್ದಾರಿ ನಿಭಾಯಿಸಲು ಓದು ಬಿಟ್ಟು ಕೂಲಿ ಕೆಲಸ ಮಾಡುತ್ತಿದ್ದಾನೆ.
ಅನಿಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿರುವುದಲ್ಲದೆ ಅವರನ್ನು ಉದ್ದೇಶಿಸಿ ಎರಡೂವರೆ ನಿಮಿಷದ ವಿಡಿಯೋವನ್ನೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ. ಅದರಲ್ಲಿ “ಹಳ್ಳಿಗಾಡಿನ ಪದವೀಧರರಿಗೆ ಅನ್ಯಾಯವಾಗುತ್ತಿದೆ, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂತಹ ಪದವೀಧರರಿಗೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಮತ್ತು ಬಡತನ ಕಡಿಮೆ ಮಾಡಬೇಕು, ನನ್ನ ಸಾವು ನಿರುದ್ಯೋಗಿಗಳಿಗೆ ಮಾತ್ರ ಅರ್ಥವಾಗುತ್ತದೆ. ನನ್ನ ಸಾವಿನಿಂದಲಾದರು ಸರ್ಕಾರ ಎಚ್ಚೆತ್ತುಕೊಳ್ಳಲಿ. ನಿರುದ್ಯೋಗಿಗಳಿಗೆ ನನ್ನ ಸಾವಿನಿಂದಲಾದರೂ ಉದ್ಯೋಗ ಸಿಗುವಂತಾಗಲಿ” ಎಂದು ಹೇಳಿಕೊಂಡಿದ್ದಾನೆ.
ಅಧ್ಯಯನ ತಂಡವಾಗಿ ಭೇಟಿ ನೀಡಿದ್ದ ನಮಗೆ ಅನಿಲ್ ಮನೆಯಲ್ಲಿ ಕಿತ್ತು ತಿನ್ನುವ ಬಡತನವಾಗಲಿ, ಆತ ಇಷ್ಟು ತುರ್ತಾಗಿ ಆತ್ಮಹತ್ಯೆ ಮಾಡಿಕೊಳ್ಳಲೇಬೇಕಿದ್ದ ಅನಿವಾರ್ಯತೆಯಾಗಲಿ ಕಂಡು ಬರಲಿಲ್ಲ. ಆದರೆ ಕೆಲಸಕ್ಕಾಗಿ ಅಲೆದಾಡಿದ್ದ ನೋವು, ಯಾವ ಭರವಸೆಗೂ ಆಸ್ಪದವಿಲ್ಲದಂತೆ ಸುತ್ತಿಕೊಂಡಿದ್ದ ನಿರುದ್ಯೋಗ, ಬಿಎ ಪದವಿಯಿಂದ ಈ ಸಮಾಜದಲ್ಲಿ ಕೆಲಸ ಸಿಗುವುದಿಲ್ಲ ಎಂದು ಈ ಸಮಾಜ ಹುಟ್ಟುಹಾಕಿರುವ ಭ್ರಮೆ, ಕೊನೆಗೆ ತನ್ನ ಸಾವಿನಿಂದಾದರು ಈ ಸಮಸ್ಯೆಗಳು ಬಗೆಹರಿಯಬಹುದೆನ್ನುವ ಆಶಾವಾದ ಆತನನ್ನು ಸಾವಿನ ಕುಣಿಕೆಗೆ ತಳ್ಳಿವೆ. ಆತನ ಆಲೋಚನೆ, ಉದ್ದೇಶ ಸರಿಯಿರಬಹುದು, ಆದರೆ ಆಯ್ಕೆ ಮಾಡಿಕೊಂಡು ಹಾದಿಯ ಬಗ್ಗೆ ನಮಗೆಲ್ಲ ಬೇಸರವಿದೆ. ಆದರೆ ಆತನನ್ನು ಮುಂದಿಟ್ಟುಕೊಂಡು ನಾವು ಒಂದಷ್ಟು ಗಂಭೀರ ಚರ್ಚೆಯನ್ನಾದರು ಮಾಡದಿದ್ದರೆ, ರಾಥೋಡನ ಆ ಸಾವಿಗೆ ಅರ್ಥವೇ ಇಲ್ಲದಂತಾಗುತ್ತೆ. ಸಣ್ಣಪುಟ್ಟದಕ್ಕೆಲ್ಲ ದಿನಗಟ್ಟಲೆ ಪ್ಯಾನೆಲ್ ಡಿಸ್ಕಷನ್ ನಡೆಸುವ ನಮ್ಮ ಮೀಡಿಯಾಗಳು ಅದಾಗಲೇ ಅಂತಹ ತಪ್ಪು ಮಾಡಿವೆ…
“ನಮ್ಮ ದೇಶ ನಿರುದ್ಯೋಗದ ಟೈಮ್‍ಬಾಂಬ್ ಮೇಲೆ ಕೂತಿದೆ” ಈ ಮಾತು ಹೇಳಿದ್ದು ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್. ರಾಥೋಡ್‍ನ ಆತ್ಮಹತ್ಯೆಯನ್ನು ರೆಫೆರೆನ್ಸ್ ಆಗಿಟ್ಟುಕೊಂಡು ಇಂದಿನ ಯುವಜನರ ಪರಿಸ್ಥಿತಿ ಗಮನಿಸಿದರೆ ಆ ಟೈಂ ಬಾಂಬ್‍ನ ಕೌಂಟ್‍ಡೌನ್ ಶುರುವಾಗಿ ಸ್ಫೋಟಗೊಳ್ಳಲು ಅಣಿಯಾಗಿದೆಯೇನೋ ಎಂಬ ಭಯ ಭಾಸವಾಗುತ್ತದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿಯ (ಎನ್.ಎಸ್.ಡಿ.ಸಿ) ವರದಿ ಪ್ರಕಾರ ನಮ್ಮ ರಾಜ್ಯವೊಂದರಲ್ಲೆ 95 ಲಕ್ಷದಷ್ಟು ಯುವಜನರು ನಿರುದ್ಯೋಗಿಗಳು ಮತ್ತು ಅರೆ ಉದ್ಯೋಗಿಗಳಾಗಿದ್ದಾರೆ. ಇನ್ನು ದೇಶದಲ್ಲಿ ಪ್ರತಿವರ್ಷ 1.2 ಕೋಟಿ ಯುವಜನರು ತಮ್ಮ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿ ಹೊರಬರುತ್ತಿದ್ದಾರೆ! ಇಂತಹ ಕೋಟ್ಯಾಂತರ ಯುವಜನರಿಗೆ ಸರ್ಕಾರದ ಬಳಿ ಉದ್ಯೋಗಕ್ಕಾಗಿ ಸಮಗ್ರವಾದ ಯೋಜನೆಯಿದೆಯೇ ಎಂದು ನೋಡಿದರೆ ನಿರಾಶೆಯ ಉತ್ತರ ಸಿಗುತ್ತದೆ. ಬಹುತೇಕ ನಿರುದ್ಯೋಗ ಯುವಕರೇ ಅಪರಾಧ, ಕೋಮುಗಲಭೆ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಇಂತಹ ಅನಾಹುತಗಳನ್ನು ತಪ್ಪಿಸಿ, ದುಡಿಯುವ ಶಕ್ತಿಯುಳ್ಳ ಯುವಜನರಿಗೆ ಉದ್ಯೋಗ ಸೃಷ್ಟಿಯಾಗಬೇಕು ಮತ್ತು ಅಭದ್ರ ಸ್ಥಿತಿಯಲ್ಲಿರುವ ಗುತ್ತಿಗೆ ನೌಕರರಿಗೆ ಸುಭದ್ರ ಉದ್ಯೋಗ ಕಲ್ಪಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ಕರ್ನಾಟಕದಲ್ಲಿ ‘ಉದ್ಯೋಗಕ್ಕಾಗಿ ಯುವಜನರು’ ವೇದಿಕೆಯು ಕಳೆದ ಒಂದು ವರ್ಷದಿಂದ ಆಂದೋಲನ ನಡೆಸಿಕೊಂಡು ಬರುತ್ತಿದೆ. ಆದರೆ ಸರ್ಕಾರಗಳು ಇದರ ಗಂಭೀರತೆಯನ್ನು ಮನಗಾಣದೆ ಜಾಣ ಕಿವುಡರಂತೆ ವರ್ತಿಸುತ್ತಿವೆ. ಸರ್ಕಾರಗಳ ಈ ಧೋರಣೆಯಿಂದಾಗಿಯೇ ಹತಾಶ ಯುವಕರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಅಂದರೆ ತಪ್ಪಾಗಲಿಕ್ಕಿಲ್ಲ.
ರಾಥೋಡ್‍ನ ವಿಚಾರಕ್ಕೇ ಮರಳುವುದಾದರೆ, ಉದ್ಯೋಗಕ್ಕಾಗಿ ಯುವಜನರು ಆಂದೋಲನ ಬಿಡುಗಡೆ ಮಾಡಿದ್ದ ‘ಯುವಜನ ಪ್ರಣಾಳಿಕೆ’ಯನ್ನು ಮೂರು ಪಕ್ಷದವರ ಮುಂದಿಟ್ಟು, ತಮ್ಮ ಪ್ರಣಾಳಿಕೆಯಾಗಿಸಿಕೊಳ್ಳಲು ಒತ್ತಾಯಿಸಿತ್ತು. ಜೆಡಿಎಸ್‍ನ ಕುಮಾರಸ್ವಾಮಿಯವರು ಆಂದೋಲನದ ಪ್ರಣಾಳಿಕೆಯ ಅಂಶಗಳ ಸಾಲುಗಳನ್ನಿಟ್ಟುಕೊಂಡು ಉದ್ಯೋಗ ಸೃಷ್ಟಿಯ ಕುರಿತು ಪತ್ರಿಕೆ ಮತ್ತು ಟಿವಿಗಳಲ್ಲಿ ಪ್ರಚಾರ ಮಾಡಿದ್ದರು. ಇದನ್ನು ಅಪಾರವಾಗಿ ನಂಬಿದ್ದ ಅನಿಲ್ ಚುನಾವಣೆ ಸಮಯದಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದಲ್ಲದೇ ತನ್ನ ಗೆಳೆಯರ ಬಳಿ, “ಜೆಡಿಎಸ್ ಗೆಲ್ಲಬೇಕು, ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ” ಎಂದು ಹೇಳಿಕೊಂಡಿದ್ದ. ತಾನು ಮಾಡಿದ ವಿಡಿಯೋದಲ್ಲಿಯೂ ಕುಮಾರಸ್ವಾಮಿ ಅವರನ್ನು “ಅನುಭವಿಗಳು, ಮೋಸ್ಟ್ ಇಂಟಲಿಜೆಂಟ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ” ಎಂದು ಬಣ್ಣಿಸಿರುವುದು ಸಿಎಂ ಮೇಲೆ ಆತನಿಟ್ಟಿರುವ ಭರವಸೆಯನ್ನು ತೋರಿಸುತ್ತದೆ.
ಇದೀಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ, ಅನಿಲ್ ಆತ್ಮಹತ್ಯೆ ಮಾಡಿಕೊಂಡು ವಾರಗಳೆ ಕಳೆದರು ಸಾಂತ್ವನಕ್ಕಾದರು ಸಿಎಂ ಆತನ ಮನೆಕಡೆ ತಲೆ ಹಾಕದಿರುವುದು ನಿರುದ್ಯೋಗಿಗಳ ವಿಚಾರದಲ್ಲಿ ಅವರೆಷ್ಟು ಗಂಭೀರವಾಗಿದ್ದಾರೆ ಮತ್ತು ಚುನಾವಣಾ ಪೂರ್ವ ಅವರು ಕೊಟ್ಟಿದ್ದ ಆಶ್ವಾಸನೆಗಳ ಗಟ್ಟಿತನವೆಷ್ಟು ಎಂಬುದು ಅರ್ಥವಾಗುತ್ತದೆ.
ನಿರುದ್ಯೋಗದ ವಿಚಾರ 70-80ರ ದಶಕದ ನಂತರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ರಾಜಕೀಯ ಪಕ್ಷಗಳೂ ಚುನಾವಣೆ ಆಶ್ವಾಸನೆಯಲ್ಲಿ ಉದ್ಯೋಗ ಸೃಷ್ಟಿಯ ಭರವಸೆ ನೀಡುವ ಅನಿವಾರ್ಯಕ್ಕೆ ತುತ್ತಾಗಿವೆ. ಆದರೆ ಇವೆಲ್ಲ ಕೇವಲ ಎಲೆಕ್ಷನ್‍ಗೆ ಮಾತ್ರವೇ ಸೀಮಿತವಾಗುಳಿಯುತ್ತಿವೆ. ನಮ್ಮ ಪ್ರಧಾನಮಂತ್ರಿಗಳು ಮತ್ತು ಇತರೆ ರಾಜಕಾರಣಿಗಳ ಹೇಳಿಕೆಗಳು ಇದನ್ನು ಪುಷ್ಠೀಕರಿಸುತ್ತಿವೆ. ಉದ್ಯೋಗ ಸೃಷ್ಟಿಯ ಪ್ರಶ್ನೆ ಬಂದಾಗ ‘ಪಕೋಡ ಮಾರುವುದು ಉದ್ಯೋಗವಲ್ಲವೇ’ ಎಂಬ ಉಡಾಫೆಯ ಉತ್ತರ ಪ್ರಧಾನಿಗಳಿಂದ ಬಂದರೆ, ಆರ್.ವಿ. ದೇಶಪಾಂಡೆಯಂತಹ ರಾಜ್ಯದ ಕಂದಾಯ ಮಂತ್ರಿಗಳೂ ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಇದರಿಂದ, ಯುವಜನರನ್ನು ವಂಚಿಸುವಲ್ಲಿ ರಾಜಕಾರಣಿಗಳ ನಡುವೆ ಯಾವ ಪಕ್ಷಬೇಧವೂ ಇಲ್ಲ ಅನ್ನೋದು ಸಾಬೀತಾಗುತ್ತೆ. ಭಾರತದ ಸಮಸ್ತ ಜನರಿಗೆ ಸರ್ಕಾರವೇ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ ನಿಜ. ಆದರೆ, ಉದ್ಯೋಗ ಸೃಷ್ಟಿಯಾಗುವಂತ ವಾತಾವರಣ ನಿರ್ಮಿಸಿಲು ಸಾಧ್ಯವಿದೆ. ಅದು ಈ ಸರ್ಕಾರಗಳ ಜವಾಬ್ದಾರಿಯೂ ಹೌದು.
ತಮ್ಮ ಹೆತ್ತವರಿಗೆ ಹೊರೆಯಾಗಿದ್ದೇವೆ ಪಾಪಪ್ರಜ್ಞೆಯಿಂದ ಹೊರಬರಲು ಹಲವು ಯುವಜನರು ತಮ್ಮ ಓದಿಗೆ ಸಂಬಂಧವೇ ಇಲ್ಲದಂತ ತಾತ್ಕಾಲಿಕ ಉದ್ಯೋಗಗಳ ಬೆನ್ನುಹತ್ತಿ ಅಭದ್ರತೆಯಲ್ಲೇ ಬದುಕು ಸಾಗಿಸುತ್ತಾರೆ. ಇನ್ನು ಕೆಲವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿಯನ್ನು ಹಿಡಿದಿದ್ದಾರೆ!!
ಸಂಪನ್ಮೂಲಗಳ ಶ್ರೀಮಂತಿಕೆಯನ್ನು ಹೊಂದಿರುವ ಭಾರತದಂತ ದೇಶದಲ್ಲಿಯೂ ನಿರುದ್ಯೋಗ ಸಮಸ್ಯೆಯಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ಇದು ಪ್ರಜಾಪ್ರಭುತ್ವದ ದೊಡ್ಡ ವ್ಯಂಗ್ಯವೇ ಸರಿ!

– ಸರೋವರ್ ಬೆಂಕಿಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...