Homeಮುಖಪುಟತೆರಿಗೆ ಹೆಸರಲ್ಲಿ ಮೋದಿ ಸರ್ಕಾರದ ಸುಲಿಗೆ

ತೆರಿಗೆ ಹೆಸರಲ್ಲಿ ಮೋದಿ ಸರ್ಕಾರದ ಸುಲಿಗೆ

- Advertisement -
- Advertisement -
  • ವಿಕಾಸ್ ಆರ್. ಮೌರ್ಯ |

2012ರ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆ ಚುನಾವಣೆ ಆದತಕ್ಷಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದವು. ಬಿಜೆಪಿ ಮತ್ತು ಎಡಪಕ್ಷಗಳು ಬೀದಿಗಿಳಿದು ಯುಪಿಎ ಸರ್ಕಾರದ ವಿರುದ್ಧ ಹೋರಾಡಿದ್ದವು. ಜನರು ಸಹ ಬೇಸತ್ತುಹೋಗಿದ್ದರು. ಮಾಧ್ಯಮಗಳಂತೂ ದಿನಗಟ್ಟಲೆ ಬೆಲೆ ಏರಿಕೆಯ ವಿರುದ್ಧದ ಹೋರಾಟವನ್ನು ಪ್ರಸಾರ ಮಾಡಿದ್ದವು, ಜೊತೆಗೆ ತೈಲಬೆಲೆ ಏರಿಕೆಯನ್ನು ಪ್ರಧಾನ ವಿಚಾರವಾಗಿ ಚರ್ಚಿಸಿದ್ದರು. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಬ್ಯಾರೆಲ್ಲಿಗೆ 113 ಡಾಲರ್ ಇದ್ದದ್ದನ್ನು ಮುಂದು ಮಾಡಿ ಯುಪಿಎ ಸರ್ಕಾರ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಜೊತೆಗೆ ರಾಜ್ಯ ಸರ್ಕಾರಗಳಿಗೆ ತಮ್ಮ ಪಾಲಿನ ತೆರಿಗೆಯನ್ನು ಕಡಿಮೆ ಮಾಡಿಕೊಳ್ಳಲು ತಿಳಿಸಿತ್ತು. ಇಂತಹ ಪರಿಸ್ಥಿತಿಯಲ್ಲೂ ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ರೂ. 73 ಮತ್ತು ರೂ. 64 ರೂಪಾಯಿಗಳಿತ್ತು. ಪೆಟ್ರೋಲ್ ಗರಿಷ್ಠ ರೂ. 76 ಮುಟ್ಟಿತ್ತು. ಆದರೆ ಅಂದು ಯುಪಿಎ ಸರ್ಕಾರದ ತೈಲ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದು ಬೊಬ್ಬಿರಿದಿದ್ದ ಬಿಜೆಪಿಯವರು ತಮ್ಮದೇ ಆಡಳಿತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರೂ. 84 ಮತ್ತು ರೂ. 68 ಆಗಿರುವುದಕ್ಕೆ ತುಟಿ ಬಿಚ್ಚುತ್ತಿಲ್ಲ. ಬದಲಾಗಿ ಈ ಹಿಂದೆ ಯುಪಿಎ ಸರ್ಕಾರ ರಾಜ್ಯಗಳಿಗೆ ತಾಕೀತು ಮಾಡಿದಂತೆ ರಾಜ್ಯ ತೆರಿಗೆ ಕಡಿಮೆ ಮಾಡುವಂತೆ ಒತ್ತಾಯಿಸುತ್ತಿದೆ.

ಈ ರೀತಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಸತ್ಯವೆಂದರೆ ತೈಲ ಬೆಲೆ ಏರಿಕೆಯ ಹಿಂದೆ ಕೇಂದ್ರ ಸರ್ಕಾರದ ಹೆಚ್ಚು ಪಾಲಿದೆಯಾದರೂ ರಾಜ್ಯದ ಪಾಲನ್ನು ಕಡೆಗಣಿಸುವಂತಿಲ್ಲ. ಜೊತೆಗೆ ಸರ್ಕಾರಗಳ ನೀತಿಗಳ ಮೇಲೆ ನಿಯಂತ್ರಣ ಹೊಂದಿರುವ ಖಾಸಗಿ ತೈಲ ಕಂಪೆನಿಗಳ ದಂಧೆಯ ಪಾಲನ್ನೂ ಕಡೆಗಣಿಸುವಂತಿಲ್ಲ.

ತೈಲಬೆಲೆ ಏರಿಕೆಯ ಮೂಲ 90ರ ದಶಕದಲ್ಲಿ ಹಂತಹಂತವಾಗಿ ಭಾರತದಲ್ಲಿ ಜಾರಿಯಾದ ಮುಕ್ತ ಮಾರುಕಟ್ಟೆ ನೀತಿಯಲ್ಲಿದೆ. ಎಲ್.ಪಿ.ಜಿ (ಉದಾರಿಕರಣ, ಖಾಸಗೀಕರಣ, ಜಾಗತೀಕರಣ) ಯಿಂದಾಗಿ ಭಾರತ ‘ಮುಕ್ತ ಮಾರುಕಟ್ಟೆ’ಗೆ ತೆರೆದುಕೊಳ್ಳುತ್ತಾ ಹೋಯಿತು. ಇದರ ಪರಿಣಾಮವಾಗಿ ಖಾಸಗಿ ಕಂಪೆನಿ ಲೂಟಿಕೋರರು ಸರ್ಕಾರದ ನೀತಿಗಳ ಮೇಲೆ ನಿಯಂತ್ರಣ ಸಾಧಿಸುತ್ತಾ ಹೋದರು. ಕ್ರಮೇಣ ಸಾರ್ವಜನಿಕ ವಲಯಕ್ಕೆ ಸರ್ಕಾರಗಳು ನೀಡುತ್ತಿದ್ದ ‘ಸಬ್ಸಿಡಿ’ ಗಳ ಮೇಲೆ ಕಣ್ಣಿಟ್ಟ ಖಾಸಗಿ ಕುಳಗಳು ‘ಸಬ್ಸಿಡಿ’ ಗಳನ್ನು ಕಡಿತಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಿದವು. ಬಂಡವಾಳಶಾಹಿಗಳ ಮೇಲೆ ಅವಲಂಬಿತವಾದ ಸರ್ಕಾರಗಳು ಅವರಿಗೆ ರತ್ನಗಂಬಳಿ ಹಾಸುತ್ತಾ ಬಂದು ಇಂದು ಭಾರತ ದೇಶವನ್ನು ಈ ಸ್ಥಿತಿಯಲ್ಲಿಟ್ಟಿವೆ. ಈ ಬೆಳವಣಿಗೆ ಮೋದಿ ಸರ್ಕಾರದಲ್ಲಿ ಇನ್ನಿಲ್ಲದಷ್ಟು ಹದ್ದು ಮೀರಿದೆ.

ತೈಲಬೆಲೆ ಏರಿಕೆಯಲ್ಲೂ ಇದೇ ‘ಮುಕ್ತಬೆಲೆ ನೀತಿ’ ಪ್ರಮುಖ ಪಾತ್ರ ವಹಿಸಿದೆ. ಇಂಧನ ಬೆಲೆಯನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಬೆಲೆ ನೀತಿಗೊಳಪಡಿಸಬೇಕೆಂದು ಮೊದಲು ತೀರ್ಮಾನಿಸಿದ್ದು 1997 ರ ಯುನೈಟೆಡ್ ಫ್ರಂಟ್‌ನ ದೇವೇಗೌಡರ ಸರ್ಕಾರ. ಆದರೆ ಆ ಸರ್ಕಾರ ಅಲ್ಪಾಯುಷಿಯಾಗಿದ್ದುದರಿಂದ 2002 ರಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ತೈಲಬೆಲೆಯನ್ನು ಮುಕ್ತಬೆಲೆ ನೀತಿಗಳವಡಿಸುವ ಖಚಿತ ನಿರ್ಧಾರ ತೆಗೆದುಕೊಂಡಿತು. ಆದರೆ ವಿರೋಧ ಪಕ್ಷಗಳ ವಿರೋಧದಿಂದ ಅದು ಜಾರಿಗೊಳ್ಳಲಿಲ್ಲ. ಈ ಬೆಳವಣಿಗೆ ಭಾರತದ ಖಾಸಗಿ ತೈಲ ಸಂಸ್ಕರಣೆ ಮತ್ತು ವಿತರಣೆ ಕಂಪೆನಿಗಳಾದ ಶೆಲ್, ರಿಲಯನ್ಸ್ ಮತ್ತು ಎಸ್ಸಾರ್‌ಗಳಿಗೆ ಹಲವು ತೊಡಕುಂಟುಮಾಡಿತು. ಕೇಂದ್ರ ಸರ್ಕಾರದ ಸಬ್ಸಿಡಿಯಿಂದಾಗಿ ಸಾರ್ವಜನಿಕ ಸಂಸ್ಥೆಗಳ ಬಂಕ್‌ಗಳು ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ರಿಲಯನ್ಸ್ನಂತ ಖಾಸಗಿ ಬಂಕ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರುತ್ತಿದ್ದವು. ಈ ಕಾರಣಕ್ಕಾಗಿಯೇ 2004 ರಿಂದ ಯುಪಿಎ ಸರ್ಕಾರದ ಮೇಲೆ ಖಾಸಗಿ ತೈಲ ಕಂಪೆನಿಗಳು ತೈಲಗಳ ಮೇಲಿನ ಸಬ್ಸಿಡಿಯನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿದವು. ಇದರ ಭಾಗವಾಗಿಯೇ 2012 ರಲ್ಲಿ ರಚನೆಯಾದದ್ದು ಕೇತನ್ ಪಾರೆಖ್ ಸಮಿತಿ. ಚಿಂತಕ ಶಿವಸುಂದರ್ ಗುರುತಿಸುವಂತೆ ಪಾರೆಖ್ ಸಮಿತಿಯು ‘ಇಂಧನ ಸಬ್ಸಿಡಿ ಹೊರೆಯನ್ನು ಸರ್ಕಾರವಾಗಲೀ, ಸಾರ್ವಜನಿಕ ಇಂಧನ ಕಂಪೆನಿಗಳಾಗಲೀ ಹೊರಲು ಸಾಧ್ಯವಿಲ್ಲವೆಂದೂ ಸರ್ಕಾರ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲಗಳಿಗೆ ಕೊಡುತ್ತಿರುವ ಎಲ್ಲಾ ಸಬ್ಸಿಡಿಯನ್ನೂ ವಾಪಸ್ ತೆಗೆದುಕೊಳ್ಳಬೇಕೆಂದೂ, ಬೆಲೆ ನಿಗದಿಯ ಪರಮಾಧಿಕಾರವನ್ನು ಮಾರುಕಟ್ಟೆಗೆ ಬಿಟ್ಟುಕೊಡಬೇಕೆಂದೂ ಶಿಫಾರಸ್ಸು ಮಾಡಿತು’. ಬಿಜೆಪಿಯ ಆರ್ಥಿಕ ವ್ಯವಹಾರಗಳ ಸೆಲ್ ಸಹ ಪಾರೆಖ್ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿತ್ತು!

ಈ ರೀತಿ ಇಂಧನಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ನಿಂತಿತು. ಮಾರುಕಟ್ಟೆ ಮುಕ್ತ ನೀತಿಗೆ ಒಳಪಟ್ಟ ಇಂಧನಗಳ ಬೆಲೆಯನ್ನು ಖಾಸಗಿ ತೈಲ ಕಂಪೆನಿಗಳು ನಿರ್ಧರಿಸುವಂತಾಯಿತು. ರಿಲಯನ್ಸ್ ಬಂಕ್‌ಗಳು ಸಾರ್ವಜನಿಕ ಬಂಕ್‌ಗಳಿಗಿಂತ ಒಂದು ರೂಪಾಯಿ ಕಡಿಮೆ ಬೆಲೆಗೆ ಪೆಟ್ರೋಲ್ ಡೀಸೆಲ್ ಮಾರುವಂತಾಯಿತು. ಶೆಲ್ ಪೆಟ್ರೋಲ್ ಬಂಕ್‌ಗಳು ಹೆಚ್ಚು ಸಂಸ್ಕರಿತ ಮತ್ತು ಕಡಿಮೆ ಸಂಸ್ಕರಿತವೆಂಬ ಹೆಸರಲ್ಲಿ ಹಣ ಸುಲಿಯಲು ಆರಂಭಿಸಿದವು. ಇಂದಿನ ಈ ಸ್ಥಿತಿಗೆ ಹಿಂದಿನ ಎಲ್ಲಾ ಸರ್ಕಾರಗಳು ಕಾರಣವಾದರೂ, ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಅಧಿಕಾರ ಹಿಡಿದ ಬಿಜೆಪಿ ಸರ್ಕಾರದಲ್ಲಿ ಯಾವ ವ್ಯತ್ಯಾಸಗಳೂ ಕಾಣಲಿಲ್ಲ. ಬದಲಾಗಿ ಯುಪಿಎ ಸರ್ಕಾರಕ್ಕಿಂತ ಹೆಚ್ಚು ಮೋದಿ ಸರ್ಕಾರ ಜನರ ಮೇಲೆ ತೆರಿಗೆಯ ಹೊರೆ ಏರಿದೆ.

ಆಶ್ಚರ್ಯವೆಂದರೆ ಭಾರತದಿಂದ ತೈಲವನ್ನು ಖರೀದಿಸುವ ಶ್ರೀಲಂಕ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಭಾರತಕ್ಕಿಂತಲೂ ಕಡಿಮೆ ಬೆಲೆಯಲ್ಲಿ ತಮ್ಮ ಪ್ರಜೆಗಳಿಗೆ ಇಂಧನವನ್ನು ನೀಡುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿತು. ಇದಕ್ಕೆ ಮೋದಿ ಸರ್ಕಾರದ ತುಘಲಕ್ ತೆರಿಗೆ ನೀತಿಯೇ ಕಾರಣವಾಗಿದೆ.

ನಾನಾಗಲೇ ತಿಳಿಸಿದಂತೆ 2012 ರಲ್ಲೂ ಸಹ ಯುಪಿಎ ಸರ್ಕಾರ ಇನ್ನಿಲ್ಲದಂತೆ ತೈಲ ಬೆಲೆ ಏರಿಸಿತ್ತು. ಅದರ ಹಿಂದೆಯೂ ಖಾಸಗಿ ತೈಲ ಕಂಪೆನಿಗಳ ಕೈವಾಡವಿತ್ತು. ಜೊತೆಗೆ ಅಂತಾರಾಷ್ಟ್ರೀಯ ತೈಲ ಬೆಲೆಯೂ ಹೆಚ್ಚಾಗಿತ್ತು. ಅಂತಾರಾಷ್ಟ್ರೀಯ ಕಚ್ಛಾತೈಲ ಬೆಲೆ ಬ್ಯಾರೆಲ್‌ಗೆ 113 ಡಾಲರ್ ಇದ್ದಾಗಲೂ ಮನಮೋಹನ್ ಸಿಂಗ್ ಅವರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ರೂ.73 ಮತ್ತು ರೂ.64ಕ್ಕೆ ನೀಡುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ, ಅಂದರೆ ಜನವರಿ, 2015 ರಷ್ಟೊತ್ತಿಗೆ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 50 ಡಾಲರ್‌ಗೆ ಕುಸಿಯಿತು. ಸ್ವತಃ ಮೋದಿಯವರೇ ಇದನ್ನು ಅದೃಷ್ಟವೆಂದು ಹೇಳಿಕೊಂಡಿದ್ದರು. ಈ ಅದೃಷ್ಟ ಮುಂದುವರಿದು ಜನವರಿ, 2016 ರಷ್ಟೊತ್ತಿಗೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ 29 ಡಾಲರ್‌ಗೆ ಕುಸಿಯಿತು. ಆದರೆ ಮೋದಿಯವರ ಸರ್ಕಾರ ಜನತೆಯ ಮೇಲೆ ಹೊರೆ ಇಳಿಸಲೇ ಇಲ್ಲ. ಪೆಟ್ರೋಲ್ ಬೆಲೆ ಆಗಲೂ ಪ್ರತಿ ಲೀಟರ್‌ಗೆ ರೂ.60 ಇತ್ತು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಚ್ಚಾ ತೈಲ 113 ಡಾಲರ್ ಇದ್ದಾಗ ರೂ.73 ಕ್ಕೆ ಪೆಟ್ರೋಲ್ ದೊರಕುತ್ತಿತ್ತು. ಆದರೆ ಮೋದಿಯವರ ಸರ್ಕಾರದಲ್ಲಿ ಕಚ್ಚಾ ತೈಲ ರೂ.29 ಇದ್ದಾಗಲೂ ಪೆಟ್ರೊಲ್ ರೂ.60 ರಲ್ಲೆ ಏಕೆ ಉಳಿಯಿತು. ಈಗ 72 ಡಾಲರ್ ಇದ್ದಾಗಲೂ ಪ್ರತಿ ಲೀಟರ್‌ಗೆ ರೂ.84 ರಷ್ಟು ಹೆಚ್ಚಾಗಿದ್ದು ಹೇಗೆ? ಉತ್ತರ ಒಂದೇ ಸುಲಿಗೆ. ತೆರಿಗೆ ಎಂಬ ಹೆಸರಿನಲ್ಲಿ ಜನತೆಯ ಸುಲಿಗೆ.

20, ಮೇ 2018 ರಂದು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಬ್ಯಾರೆಲ್ಲಿಗೆ 72.5 ಡಾಲರ್ ಅಂದರೆ 4930 ರೂಪಾಯಿಗಳು. ಒಂದು ಬ್ಯಾರೆಲ್‌ನಲ್ಲಿ ಸುಮಾರು 159 ಲೀಟರ್ ಇರುತ್ತದೆ. ಅಲ್ಲಿಗೆ ಒಂದು ಲೀಟರ್ ಕಚ್ಚಾ ತೈಲದ ಬೆಲೆ 31 ರೂಪಾಯಿಗಳಾಗುತ್ತದೆ. ಈ ಕಚ್ಚಾ ತೈಲದಿಂದ ಪೆಟ್ರೋಲನ್ನು ಸಂಸ್ಕರಿಸಲು ಪ್ರತಿ ಲೀಟರಿಗೆ 2.62 ರೂಪಾಯಿ ಮತ್ತು ಡೀಸಲ್‌ಗೆ 5.91 ರೂಪಾಯಿ ತಗಲುತ್ತದೆ. ಸರಬರಾಜು ಮತ್ತು ವಿತರಣೆಗೆ ಪೆಟ್ರೋಲ್ ಗೆ 3.31 ರೂಪಾಯಿ ಮತ್ತು ಡೀಸೆಲ್‌ಗೆ 2.87 ರೂಪಾಯಿ ಖರ್ಚಾಗುತ್ತದೆ. ಇವೆರಡನ್ನೂ ಸೇರಿಸಿದ ನಂತರ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.36.93 ಮತ್ತು ಡೀಸೆಲ್ ರೂ.39.78 ಆಗುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಅಸಲಿ ಬೆಲೆ. ಈ ಬೆಲೆಗೆ ಕೇಂದ್ರ ಸರ್ಕಾರ ಎಕ್ಸೈಜ್ ತೆರಿಗೆ ಮತ್ತು ರೋಡ್ ಟ್ಯಾಕ್ಸ್ ಎಂದು ಪ್ರತಿ ಲೀಟರ್ ಪೆಟ್ರೋಲಿಗೆ ರೂ.19.48 ಮತ್ತು ಡೀಸೆಲ್‌ಗೆ ರೂ.15.33 ಸೇರಿಸುತ್ತದೆ. ರಾಜ್ಯ ಸರ್ಕಾರಗಳು ಇದಕ್ಕೆ ಕ್ರಮವಾಗಿ ವ್ಯಾಟ್ ತೆರಿಗೆ ರೂ.16.21 ಮತ್ತು ರೂ.9.91 ಜೊತೆಗೆ 25 ಪೈಸೆ ಪರಿಸರ ಸೆಸ್ ಸೇರಿಸುತ್ತದೆ. ನಂತರ ಬಂಕ್‌ಗಳು ಕ್ರಮವಾಗಿ ರೂ.3.62 ಮತ್ತು ರೂ.2.52 ಕಮಿಷನ್ ಸೇರಿಸಿ 76.24 ಮತ್ತು 67.54 ಆಗಿದೆ. ಈ ಪರಿಣಾಮದಿಂದಾಗಿಯೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಐತಿಹಾಸಿಕ ರೂ.84 ಮತ್ತು ರೂ.70 ಮುಟ್ಟಿದೆ.

ಇದು ಇಂಧನ ಬೆಲೆ ಏರಿಕೆಯ ಅಸಲಿಯತ್ತು. ಮೋದಿ ಸರ್ಕಾರ ಬಂದನಂತರ ಇಂಧನ ತೈಲಗಳ ಮೇಲೆ 12 ಬಾರಿ ಎಕ್ಸೈಸ್ ತೆರಿಗೆಯನ್ನು ಏರಿಸಲಾಗಿದೆ. ಅಂದರೆ ಪೆಟ್ರೋಲ್ ಮೇಲೆ ಶೇ.54 ರಷ್ಟು, ಡೀಸೆಲ್ ಮೇಲೆ ಶೇ.154 ರಷ್ಟು ಪೆಟ್ರೋಲ್ ತೆರಿಗೆಯನ್ನೂ, ಶೇ.46 ರಷ್ಟು ವ್ಯಾಟ್ ತೆರಿಗೆಯನ್ನೂ, ಶೇ.73 ರಷ್ಟು ಡೀಲರ್‌ಗಳ ಕಮಿಷನ್ ಏರಿಸಲಾಗಿದೆ. ಒಂದು ಕಡೆ ಕಚ್ಚಾತೈಲ ಬೆಲೆ ಕುಸಿಯುತ್ತಿದ್ದರೆ ಮತ್ತೊಂದು ಕಡೆ ಮೋದಿಯವರು ಜನತೆಯ ಮೇಲೆ ತೈಲ ಬೆಲೆ ಹೆಚ್ಚು ಮಾಡುತ್ತಾ ಹೋದರು. ಇದರಿಂದಾಗಿ ಮೋದಿ ಸರ್ಕಾರ ತನ್ನ ಖಜಾನೆಯನ್ನು ಜನಸಾಮಾನ್ಯರು ಬೆವರು ಸುರಿಸಿ ಸಂಪಾದಿಸಿದ ಹಣದಿಂದ ತುಂಬಿಸಿಕೊಂಡಿದೆ. 2014-15 ನೇ ಸಾಲಿನಲ್ಲಿ ತೈಲ ತೆರಿಗೆಗಳಿಂದ 99 ಸಾವಿರ ಕೋಟಿ ಖಜಾನೆ ಸೇರಿತ್ತು. ಆದರೆ 2016-17ನೇ ಸಾಲಿನಲ್ಲಿ ಬರೋಬ್ಬರಿ 2.42 ಲಕ್ಷ ಕೋಟಿ ಖಜಾನೆ ಸೇರಿದೆ! ಇದು ಜನರಿಂದ ಮೋದಿಯವರು ಸುಲಿದಿರುವ ಹಣವಲ್ಲದೆ ಬೇರೇನಲ್ಲ.

ಕೊನೆಯದಾಗಿ, ಮತ್ತೊಂದು ಕಡೆ ಮೋದಿಯವರ ಆಡಳಿತದಲ್ಲಿ ಸಾರ್ವಜನಿಕ ಬ್ಯಾಂಕ್‌ಗಳು ಶ್ರೀಮಂತ ಉದ್ಯಮಿಗಳ 2.42 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿವೆ. ಇದರ ಅರ್ಥ ಇಷ್ಟೆ. ಜನರಿಂದ ಸುಲಿಗೆ ಮಾಡಿದ ಹಣವನ್ನು ಸರ್ಕಾರಗಳು ಜನಕಲ್ಯಾಣ ಕಾರ್ಯಗಳಿಗೆ ಬಳಸಲಾರವು. ಬದಲಾಗಿ ಉದ್ಯಮಿಗಳ ಸಾಲಮನ್ನಾ ಮಾಡಲು ಬಳಸಿಕೊಳ್ಳುತ್ತದೆ. ಈ ಶ್ರೀಮಂತರಿಂದ ಸರ್ಕಾರ ನ್ಯಾಯಬದ್ಧವಾಗಿ ಸಾಲ ಮರುಪಾವತಿ ಮಾಡಿಸಿಕೊಂಡಿದ್ದರೆ ಇಂದು ಪೆಟ್ರೋಲ್ ಮತ್ತು ಡೀಸಲ್ ಪ್ರತಿ ಲೀಟರ್‌ಗೆ ಕೇವಲ ರೂ. 30 ಕ್ಕೆ ದೊರಕುತ್ತಿತ್ತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...