Homeಅಂಕಣಗಳುಬಿಜೆಪಿಯದ್ದು ಯಾವ ಜಾತಿ?

ಬಿಜೆಪಿಯದ್ದು ಯಾವ ಜಾತಿ?

- Advertisement -
- Advertisement -

ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ನೇತೃತ್ವದ ದಿ ಪ್ರಿಂಟ್ ವೆಬ್ ಪತ್ರಿಕೆಯ ತಂಡವು ಬಹಳ ಮಹತ್ವದ ಅಧ್ಯಯನ ನಡೆಸಿ ವರದಿಯೊಂದನ್ನು ಮಾಡಿದೆ. ಎಲ್ಲರಿಗೂ ಗೊತ್ತಿರುವ ಸತ್ಯವನ್ನು ಹೇಳಲು ಇಷ್ಟೆಲ್ಲಾ ಅಧ್ಯಯನ ಬೇಕೇ ಎಂದು ಕೇಳಬಹುದು. ಹೌದು, ಸತ್ಯವನ್ನು ಪುರಾವೆ ಸಮೇತ ಹೇಳಿದರೂ ಸುಳ್ಳನ್ನು ಸುಳ್ಳು ಮಾಡೋಕೆ ಆಗದ ಪರಿಸ್ಥಿತಿ ಇದೆ. 2018ರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಲು ನಿರ್ಧರಿಸಿದ ಕೆಲವೇ ದಿನಗಳಲ್ಲಿ ಒಂದು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿತು. ಅದರಲ್ಲಿ ಒಂದು ಸುಳ್ಳನ್ನು ಹೆಣೆದು, ಸತ್ಯದ ತಲೆ ಮೇಲೆ ಒಡೆಯಲಾಗಿತ್ತು. ‘ದೇವೇಗೌಡರು ಮೂಲತಃ ಕುರುಬರು. ಅವರ ತಂದೆ ದೊಡ್ಡೇಗೌಡರು ಕುರುಬರಾಗಿದ್ದರೂ, ತಾಯಿ ಒಕ್ಕಲಿಗರಾಗಿದ್ದರು. ನಮ್ಮ ಸಂಸ್ಕøತಿಯ ಪ್ರಕಾರ ತಂದೆಯ ಜಾತಿ ಅವರದ್ದಾಗಿರಬೇಕಿದ್ದರೂ, ದೇವೇಗೌಡರು ಒಕ್ಕಲಿಗರೆಂದೇ ಹೇಳಿಕೊಳ್ಳುತ್ತಾ ಬಂದಿದ್ದಾರೆ’.
‘ಎಂಥಾ ಸುಳ್ಳು ಹೇಳ್ತಾರಪ್ಪಾ?’ ಎಂದು ನಾವು ಅಂದುಕೊಳ್ಳಬಹುದಾದರೂ, ಇದರ ಮೂಲಕ ಎರಡು ಅಜೆಂಡಾ ಸಾಧನೆಯಾಗುತ್ತದೆ. ಒಂದು, ಮೇಲ್ಜಾತಿಗಳೆಲ್ಲರೂ ಬಿಜೆಪಿಯ ಜೊತೆಗೆ ಇರುತ್ತಾರೆ. ಅಲ್ಲದವರು ಮೇಲ್ಜಾತಿಗಳೇ ಅಲ್ಲ ಎಂದು ಸಾಧಿಸುವುದು. ಎರಡು, ಆ ಕಾರಣಕ್ಕೇ ಕಾಂಗ್ರೆಸ್ ಪಕ್ಷದ ಜೊತೆಗೆ ಒಕ್ಕಲಿಗರು ಕೈ ಜೋಡಿಸಲಾರರು. ಅವರು ಕುರುಬರಾಗಿದ್ದರಿಂದಲೇ ಕೈ ಜೋಡಿಸಿದರು ಎಂಬ ಭಾವನೆ ಬಿತ್ತುವುದು. ಭಾರತದಂಥಹ ಕೆಟ್ಟ ಜಾತಿಗ್ರಸ್ತ ಸಮಾಜದಲ್ಲಿ ಇದು ಅಸಾಧ್ಯವಲ್ಲ. ನೆಹರೂ ಕುಟುಂಬದ ಜಾತಿ/ಧರ್ಮ ಮೂಲದ ಕುರಿತು ಹರಡಿರುವ ಸುಳ್ಳುಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಇನ್ನೊಂದಷ್ಟು ಕಾಲದ ನಂತರ ದೇವೇಗೌಡರ ಜಾತಿ ಮೂಲದ ಬಗ್ಗೆಯೂ ಇದೇ ನಿಜವೆಂದು ಜನರು ನಂಬಬಹುದು.
ಈ ರೀತಿಯಾಗಿ ತಾನು ಒಂದು ಮೇಲ್ಜಾತಿ ಪಕ್ಷವೆಂದು, ಅದರಲ್ಲೂ ಬ್ರಾಹ್ಮಣರ ಮೇಲರಿಮೆಯನ್ನು ಒಪ್ಪಿಕೊಂಡ ಪಕ್ಷವೆಂದು ಬಿಜೆಪಿಯು ಸ್ಪಷ್ಟವಾಗಿಯೇ ಬಿಂಬಿಸಿಕೊಂಡಿದೆ. ಗುಲಾಮಗಿರಿ ಮನಸ್ಥಿತಿಯಿಂದ, ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲಿ ತನಗೆ ಸೂಕ್ತ ಸ್ಥಾನ ಸಿಗಲಿಲ್ಲವೆಂದು ಹೇಳಿ ಅಥವಾ ಬಿಜೆಪಿಗೆ ಅಗತ್ಯವಿರುವ ಮುಖವಾಡವಾಗಿ ಸೇವೆ ಸಲ್ಲಿಸಿದರೆ ಒಳ್ಳೆಯ ಲಾಭವಿದೆಯೆಂದು ಹಲವು ಶೂದ್ರ ಮತ್ತು ದಲಿತ ನಾಯಕರು ಮತ್ತು ಸಾಮಾನ್ಯ ಜನರೂ ಸಹಾ ಅವಕಾಶವಾದದಿಂದ ಬಿಜೆಪಿ ಸೇರುತ್ತಾರೆ. ಈ ರೀತಿ ಸೇರುವವರು ಬಿಜೆಪಿಯು ಎಲ್ಲಾ ಜಾತಿಗಳಿಗೂ ಪ್ರಾಧಾನ್ಯತೆ ಕೊಡುತ್ತದೆ ಎಂದು ಹೇಳಿಕೊಳ್ಳಲು ಬಳಕೆಯಾಗುತ್ತಾರೆ. ಅದೇ ಕಾರಣಕ್ಕಾಗಿಯೇ ಬಂಗಾರು ಲಕ್ಷ್ಮಣ್ ಎಂಬ ದಲಿತ ಸಮುದಾಯದ ವ್ಯಕ್ತಿಯನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿಸಿದ್ದು ಮತ್ತು ಶೋಷಿತ ಸಮುದಾಯದ ರಾಮನಾಥ ಕೋವಿಂದರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಿದ್ದು.
ಕರ್ನಾಟಕದಲ್ಲೇ ನೋಡುವುದಾದರೆ, ಜನತಾದಳದಲ್ಲಿ ಈ ಹಿಂದೆ ಸಿದ್ದರಾಮಯ್ಯನವರು ಸೇರಿದಂತೆ ಕೆಲವು ಹಿಂದುಳಿದ ವರ್ಗಗಳಿಗೆ ಸೇರಿದ ಕೆಲವು ವ್ಯಕ್ತಿಗಳ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿತ್ತು. ಈಗ ಜೆಡಿಎಸ್ ಬಹುತೇಕ ಒಕ್ಕಲಿಗರ ಪಕ್ಷವಾಗಿ ಹೋಗಿದೆ. ಕಾಂಗ್ರೆಸ್ಸಿನಲ್ಲಿ ಈಗಾಗಲೇ ನಾಲ್ಕು ಜನ ಹಿಂದುಳಿದ ವರ್ಗಗಳಿಗೆ ಸೇರಿದ ಮುಖ್ಯಮಂತ್ರಿಗಳು ಆಳ್ವಿಕೆ ಮಾಡಿದ್ದಾರೆ. ಬಿಜೆಪಿಯಲ್ಲಿ ಕ್ಯೂನಲ್ಲಿ ಇರುವವರಲ್ಲಿ ಮೇಲ್ಜಾತಿಗಳನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ. ಈಶ್ವರಪ್ಪನವರ ಹೆಸರು ಹೇಳಬಹುದಾದರೂ, ಅವರು ತಮ್ಮ ಟಿಕೆಟ್ ಖಾತ್ರಿ ಪಡಿಸಿಕೊಳ್ಳಲಿಕ್ಕೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಬೇಕಾಯಿತು ಎಂಬುದನ್ನು ಮರೆಯಲಾಗದು.
ಇದು ಒಂದು ರಾಜ್ಯದ ಸ್ಥಿತಿಯಲ್ಲ. ಪ್ರಿಂಟ್ ಮಾಡಿರುವ ಅಧ್ಯಯನದ ಪ್ರಕಾರ ಬಿಜೆಪಿಯ ಅಖಿಲ ಭಾರತ ಮಟ್ಟದ ಪದಾಧಿಕಾರಿಗಳಲ್ಲಿ ಶೇ.75ರಷ್ಟು ಜನ ಮೇಲ್ಜಾತಿಗಳಿಗೆ ಸೇರಿದವರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಶೇ.60ರಷ್ಟು ಜನರು ‘ಜನರಲ್ ಕ್ಯಾಟಗರಿ’ಗೆ ಬರುವವರು. ಈ ಜನರಲ್ ಕ್ಯಾಟಗರಿಯವರೇ ಶೇ.65ರಷ್ಟು ರಾಜ್ಯಘಟಕಗಳ ಅಧ್ಯಕ್ಷರುಗಳಾಗಿದ್ದಾರೆ. ಇನ್ನೂ ಕೆಳಗೆ ಬಂದರೂ ಬಿಜೆಪಿಯ ಜಿಲ್ಲಾಧ್ಯಕ್ಷರುಗಳಲ್ಲೂ ಶೇ.65ರಷ್ಟು ಜನರು ಮೇಲ್ಜಾತಿಗಳಿಗೆ ಸೇರಿದವರಿದ್ದಾರೆ. ಇಡೀ ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಇಬ್ಬರು ಮಾತ್ರ ದಲಿತ, ಆದಿವಾಸಿ, ಮುಸ್ಲಿಮರಿದ್ದಾರೆ. ಈ ಜಾತಿಗಳಿಗೆ ಸೇರಿದ ಒಬ್ಬ ರಾಜ್ಯಾಧ್ಯಕ್ಷನೂ ಇಲ್ಲ.
ಇದಕ್ಕಾಗಿ ಪ್ರಿಂಟ್, 50 ರಾಷ್ಟ್ರೀಯ ಪದಾಧಿಕಾರಿಗಳು, 97 ರಾಷ್ಟ್ರೀಯ ಕಾರ್ಯಕಾರಿಣಿಯವರು, 36 ರಾಜ್ಯ ಅಧ್ಯಕ್ಷರುಗಳು (ರಾಜ್ಯ & ಕೇಂದ್ರಾಡಳಿತ ಪ್ರದೇಶಗಳು), 752 ಜಿಲ್ಲಾಧ್ಯಕ್ಷರುಗಳು (ಸಂಘಟನೆಯ ಅನುಕೂಲಕ್ಕಾಗಿ ಕೆಲವು ದೊಡ್ಡ ಜಿಲ್ಲೆಗಳನ್ನು ಎರಡು ಜಿಲ್ಲೆ ಮಾಡಿಕೊಂಡಿದ್ದಾರೆ).
ಇಷ್ಟೇ ಹೇಳಿದರೆ ಸಾಕಾಗುವುದಿಲ್ಲ. ಬಿಜೆಪಿಯ 50 ಜನ ರಾಷ್ಟ್ರೀಯ ಪದಾಧಿಕಾರಿಗಳ ಪೈಕಿ 17 ಜನ ಬ್ರಾಹ್ಮಣರಾಗಿದ್ದರೆ, 21 ಜನ ಇತರ ಮೇಲ್ಜಾತಿಗಳಾಗಿದ್ದಾರೆ. 3 ಜನ ಎಸ್‍ಸಿ, ಇಬ್ಬರು ಎಸ್‍ಟಿ ಮತ್ತು ಇಬ್ಬರು ಮುಸ್ಲಿಮರಿದ್ದಾರಾದರೂ, ಅವರಲ್ಲಿ ತಲಾ ಒಬ್ಬರು ಆಯಾ ಮೋರ್ಚಾಗಳ ರಾಷ್ಟ್ರಾಧ್ಯಕ್ಷರುಗಳಾಗಿರುವ ಕಾರಣದಿಂದ ಸಮಿತಿಯಲ್ಲಿದ್ದಾರೆ ಅಷ್ಟೇ.
97 ಜನರ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ 29 ಜನರು ಬ್ರಾಹ್ಮಣರಾಗಿದ್ದಾರೆ, 37 ಜನರ ಮೇಲ್ಜಾತಿಗಳಾಗಿದ್ದಾರೆ. ಮೇಲ್ಜಾತಿಗಳಲ್ಲೂ ಶೂದ್ರ ಸಮುದಾಯಗಳಿಗಿಂತ ಹೆಚ್ಚು ಸಿಂಧಿ, ಜೈನ, ಮಾರ್ವಾಡಿ, ಕ್ಷತ್ರಿಯದಂತಹ ಜಾತಿಗಳವರೇ ಮೇಲುಗೈ ಹೊಂದಿದ್ದಾರೆ.
ಮೇಲುಮೇಲೆ ಹೋದಂತೆಲ್ಲಾ ಮೇಲ್ಜಾತಿಯವರಿದ್ದಾರೆ, ಏನು ಮಾಡೋದು? ಮೊದಲಿಂದ ಇದ್ದವರು, ಸೀನಿಯರ್‍ಗಳು ಇತ್ಯಾದಿ ಸಮಜಾಯಿಷಿಗಳನ್ನು ಬಿಜೆಪಿಯವರು ಕೊಡುವುದೂ ಸಾಧ್ಯವಿಲ್ಲ. ಏಕೆಂದರೆ, ಜಿಲ್ಲಾ ಮಟ್ಟದಲ್ಲೂ 65% ಮೇಲ್ಜಾತಿಯವರಿದ್ದು ಅವರಲ್ಲಿ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚು ಬ್ರಾಹ್ಮಣರಿದ್ದಾರೆ. ಎಲ್ಲಾ ಬಗೆಯ ಹಿಂದುಳಿದ ವರ್ಗಗಳವರು 25% ಇದ್ದರೆ, ಎಸ್‍ಸಿ 4% ಮತ್ತು 1%ಕ್ಕಿಂತ ಕಡಿಮೆ ಅಲ್ಪಸಂಖ್ಯಾತರಿದ್ದಾರೆ. ದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದವರು 16.6%, ಎಸ್‍ಟಿ 8.6%, ಮುಸ್ಲಿಮರು 14% ಇದ್ದರೆ ಓಬಿಸಿ 41% ಇದ್ದಾರೆ. ಇದು ಬಿಜೆಪಿಯ ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್‍ನ ಸ್ವರೂಪ.
ಇಂತಹ ಬಿಜೆಪಿಯು ತನ್ನ ಪರಮೋಚ್ಛ ನಾಯಕ, ಪ್ರಧಾನಮಂತ್ರಿ ಮೋದಿಯೇ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಹೇಳಿಕೊಂಡು ಪ್ರಚಾರ ಗಿಟ್ಟಿಸಬಹುದಲ್ಲವೇ? ಮೋದಿ ತನ್ನ ಪಕ್ಷದ ನೀತಿಗನುಗುಣವಾಗಿ ಬ್ರಾಹ್ಮಣ-ಬನಿಯಾ ಮೌಲ್ಯಗಳು ಮತ್ತು ಆ ಜಾತಿಗಳ ಪರವಾಗಿ ಕೆಲಸ ಮಾಡುತ್ತಿದ್ದರೂ, ಜನ್ಮತಃ ಹಿಂದುಳಿದ ವರ್ಗಕ್ಕೆ ಸೇರಿದವರು. ತಾವು ಜಾತಿ ನೋಡುವುದಿಲ್ಲವಾದ್ದರಿಂದ ಅದನ್ನು ಬಳಸಿಕೊಳ್ಳುತ್ತಿಲ್ಲವೆಂದು ಹೇಳಬಹುದು. ಅದನ್ನು ಹೇಳದೇ ಇರುವುದಕ್ಕೆ ಕಾರಣವೆಂದರೆ, ತನ್ನ ಗಟ್ಟಿ ಸಾಮಾಜಿಕ ನೆಲೆಯಾಗಿ ಮೇಲ್ಜಾತಿಗಳನ್ನೇ ಹೊಂದಬಯಸುತ್ತದೆ. ಇದಕ್ಕೆ ಒಂದು ಉದಾಹರಣೆಯನ್ನೂ ಕೊಡಬಹುದು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಒಂದು ಸುದ್ದಿ ಹೊರಬಂದಿತು. ಸರ್ಕಾರದ ಕಡೆಯಿಂದ ಕೆಲವು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಿತ್ತುಕೊಳ್ಳಲಾಗಿದೆ ಎಂಬುದೇ ಆ ಸುದ್ದಿ. ವಾಸ್ತವದಲ್ಲಿ ಅಂತಹದೊಂದು ಆದೇಶವನ್ನು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗಲೇ ಹೊರಡಿಸಲಾಗಿತ್ತು. ಆದರೂ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ ಇದನ್ನು ಪ್ರಚಾರಕ್ಕೆ ತರಲಾಯಿತು; ಆ ರೀತಿ ತಂದವರು ಸ್ವತಃ ಬಿಜೆಪಿಯವರೇ. ಏಕೆಂದರೆ ಉಳಿದವರು ಇದನ್ನೊಂದು ನೆಗೆಟಿವ್ ಸಂಗತಿ ಎಂದುಕೊಂಡರೆ, ಬಿಜೆಪಿಯು ತಾನು ಹಿಂದುಳಿದ ಮತ್ತು ದಲಿತ ಸಮುದಾಯಗಳನ್ನು ‘ಹದ್ದುಬಸ್ತಿನಲ್ಲಿಡುವ’ ಪಕ್ಷವೆಂದೇ ಬಿಂಬಿಸಿಕೊಳ್ಳಬಯಸುತ್ತದೆ. ಮುಂದೊಂದು ದಿನ ಸೋಲುವ ಭೀತಿ ಕಾಣಿಸಿಕೊಂಡ ದಿನ ನರೇಂದ್ರ ಮೋದಿಯವರನ್ನು ಹಿಂದುಳಿದ ವರ್ಗಗಳ ನೇತಾರನೆಂದು ಬಿಂಬಿಸುವ ಕೆಲಸವನ್ನು ಮಾಡುವುದಿಲ್ಲವೆಂದು ಹೇಳಲಾಗದು. ಏಕೆಂದರೆ, ಮೋದಿ-ಷಾ-ಆರೆಸ್ಸೆಸ್ ತ್ರಿವಳಿಯು ಇದುವರೆಗೆ ಮಾಡಿಕೊಂಡು ಬಂದ ಎಲ್ಲಾ ಹುನ್ನಾರಗಳನ್ನು ಮುಂದುವರೆಸಿದಾಗ್ಯೂ ಜನರು ಬಿಜೆಪಿಯನ್ನು ತಿರಸ್ಕರಿಸುವ ಸಂದರ್ಭ ಬಂದರೆ ಅದನ್ನೂ ಮಾಡುತ್ತಾರೆ. ಆದರೆ, ಈ ಸದ್ಯ ಅದನ್ನು ಮಾಡದೇ ಇರುವ ಪ್ರಮಾಣಕ್ಕೆ ಬಿಜೆಪಿಯು ಮೇಲ್ಜಾತಿಗಳ ತೆಕ್ಕೆಯಲ್ಲಿಯೇ ಇದ್ದು, ಮೇಲ್ಜಾತಿಗಳ ಪರವಾಗಿಯೇ ಕೆಲಸ ಮಾಡಬಯಸುತ್ತದೆ.
ಬಿಜೆಪಿಯು ಕೇವಲ ಬ್ರಾಹ್ಮಣರ ನೇತೃತ್ವದ (ಬ್ರಾಹ್ಮಣ ಎಂದಾಗ ಬ್ರಾಹ್ಮಣ ಜಾತಿಯ ಜೊತೆಗೆ ಬನಿಯಾ, ಸಿಂಧಿ, ಮಾರ್ವಾಡಿಗಳನ್ನೂ ಸೇರಿಸಿಕೊಂಡು ಹೇಳಲಾಗಿದೆ) ಮೇಲ್ಜಾತಿಗಳ ಪಕ್ಷವೆಂದು ತನ್ನನ್ನು ಪರಿಗಣಿಸಿದೆ. ಯಾರ ಪಕ್ಷ, ಆದರೆ ಯಾರ ನೇತೃತ್ವ ಎಂಬ ಎರಡು ಅಂಶಗಳಲ್ಲೂ ಅದು ಸ್ಪಷ್ಟವಾಗಿದೆ. ಹಾಗಾಗಿಯೇ ಬಸವಣ್ಣನವರ ತತ್ವವನ್ನು ಒಪ್ಪುವ ಲಿಂಗಾಯಿತರು ಅಥವಾ ಆ ಧರ್ಮ ಎಂಬುದು ಮಾನ್ಯತೆಯನ್ನು ಪಡೆದುಕೊಳ್ಳಬಾರದು ಎಂದು ಅದು ಬಯಸುತ್ತದೆ. ವೈದಿಕ ತತ್ವವನ್ನು ಅನುಸರಿಸುವ ಒಕ್ಕಲಿಗರು ಬೇಕೇ ಹೊರತು, ಕರ್ನಾಟಕದಲ್ಲಿ ಬ್ರಾಹ್ಮಣ್ಯ ವಿರೋಧದ ಮೂಲಕ ಅಸ್ಮಿತೆಯನ್ನು ಕಂಡುಕೊಂಡ ಶ್ರಮಿಕ ಒಕ್ಕಲಿಗ ಪರಂಪರೆಯನ್ನಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರ ಥರದವರು ರೂಪಿಸುವ ಹುನ್ನಾರಗಳಿಗಾಗಿ ಬೀದಿಗಳಲ್ಲಿ ಹೊಡೆದಾಡಿ ಜೈಲಿಗೆ ಸೇರುವ ಬಿಲ್ಲವರು, ನಾಯಕರು, ಮರಾಠ, ಒಕ್ಕಲಿಗ ಹುಡುಗರು ಬೇಕೇ ಹೊರತು, ಸಮಾನತೆಯನ್ನು ಕೇಳುವ ಶೂದ್ರ ಸಮುದಾಯದ ವ್ಯಕ್ತಿಗಳಲ್ಲ.
ದಿ ಪ್ರಿಂಟ್ ಸ್ಪಷ್ಟವಾದ ಸಂಗತಿಗಳನ್ನು ನಮ್ಮ ಮುಂದಿಟ್ಟಿದೆ. ಈ ಅಂಕಿ-ಅಂಶಗಳನ್ನು ನೀವು ಮುಂದಿಟ್ಟರೆ ಬಿಜೆಪಿಯ ವಾದ ಸಿದ್ಧವಾಗಿರುತ್ತದೆ. ದೇಶವನ್ನು ಜಾತಿಯ ಹೆಸರಿನಲ್ಲೇಕೆ ಒಡೆಯುತ್ತೀರಿ? ಅವರನ್ನು ಕೇವಲ ಬಿಜೆಪಿ ಎಂದು ನೋಡಿ, ಭಾರತೀಯರೆಂದು ನೋಡಿ. ಹೌದೌದು ಬಿಜೆಪಿಯ ಭಾರತದಲ್ಲಿ ಬ್ರಾಹ್ಮಣರ ನೇತೃತ್ವದಲ್ಲಿ ಮೇಲ್ಜಾತಿಗಳಿಗಷ್ಟೇ ಜಾಗವಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...