Homeಅಂಕಣಗಳುಬಂಡವಾಳವಾದ, ಇತಿಹಾಸ ಕುರಿತ  ಲೋಹಿಯಾ ಚಿಂತನೆಗಳು

ಬಂಡವಾಳವಾದ, ಇತಿಹಾಸ ಕುರಿತ  ಲೋಹಿಯಾ ಚಿಂತನೆಗಳು

- Advertisement -
ಅಧುನಿಕ ಭಾರತದ ಪುರೋಗಾಮಿ ಚಿಂತಕರಲ್ಲಿ ಲೋಹಿಯಾ ಅಗ್ರಗಣ್ಯರು. ಭಾರತದ ಆಧುನಿಕಪೂರ್ವ ಮತ್ತು ಆಧುನಿಕ ಸಾಮಾಜಿಕ ಚಿಂತನೆಯನ್ನು ಲೋಹಿಯಾರನ್ನು ಹೊರತಾಗಿಸಿ ನೋಡಲು ಸಾಧ್ಯವಿಲ್ಲ. ಮೊದಲನೆಯದಾಗಿ ಲೋಹಿಯಾ ಎಲ್ಲಾ ರೀತಿಯ ಅನ್ಯಾಯ ಅಸಮಾನತೆಗಳ ವಿರುದ್ಧ ಕಿಡಿಕಾರಿದ ಒಬ್ಬ ಮಾನವತಾವಾದಿ.  ಸಾಮಾನ್ಯವಾಗಿ ಎಲ್ಲಾ ಪ್ರಮುಖ  ಕ್ರಾಂತಿಕಾರಿಗಳೂ ಮಾನವತಾವಾದಿಗಳೇ, ಆದರೆ ಎಲ್ಲಾ ಮಾನವತಾವಾದಿಗಳೂ, ಲೋಕಹಿತೈಷಿಗಳೂ ಕ್ರಾಂತಿಕಾರಿಗಳಾಗಿರುವುದಿಲ್ಲ. ಅಂದರೆ ಅವರಿಂದ ಮೂಲಭೂತ ಬದಲಾವಣೆ ಸಾಧ್ಯವಾಗುವುದಿಲ್ಲ. ಇದು ಲೋಹಿಯಾರವರಿಗೂ, ಅನೇಕ ಸಂತರಿಗೂ ಅನ್ವಯವಾಗುವಂತಹದು.
ಲೋಹಿಯಾ ಚಿಂತನೆಗಳು ಮತ್ತು ಅವರ ಸಮಾಜವಾದಿ ಪಕ್ಷ ನಮ್ಮ ಜಾತ್ಯತೀತತೆಗೂ, ಹಿಂದುಳಿದ ಜಾತಿ ಜನಾಂಗಗಳ ಉನ್ನತಿಯ ವಿಚಾರಗಳಿಗೂ, ಜನಾಂಗೀಯ ಭೇದಭಾವದ ವಿರುದ್ಧವೂ, ಜಾತಿವ್ಯವಸ್ಥೆಯ ವಿನಾಶಕ್ಕೂ, ವಿಚಾರವಾದಕ್ಕೂ, ಪ್ರಜಾಸತ್ತಾತ್ಮಕತೆಗೂ, ರೈತರು ಮತ್ತು ಇತರೆ ದುಡಿಯುವ ವರ್ಗಗಳ ಸಂಘಟನೆ ಹೋರಾಟಗಳಿಗೂ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಇವುಗಳ ವಿವರಣೆಯನ್ನು ಇಲ್ಲಿ ನಾನು ಮಾಡುವುದಿಲ್ಲ. ಜೊತೆಜೊತೆಗೆ ಸಲ್ಲದ ಸೈದ್ಧಾಂತಿಕ, ರಾಜಕೀಯ ರಾಜಿಗಳೂ, ಇದಲ್ಲದೆ ಅವರ ಸಿದ್ಧಾಂತಗಳ ಮೂಲಭೂತ ದೋಷಗಳೇನು ಎಂದು ತಿಳಿದುಕೊಳ್ಳುವುದು ಇನ್ನೂ ಅತಿ ಮುಖ್ಯವಾದುದು. ಈ ಸರಣಿ ಲೇಖನದಲ್ಲಿ ನಾನು ಈ ವಿಷಯದ ಬಗ್ಗೆ ಗಮನಹರಿಸಲು ಪ್ರಯತ್ನಿಸಿರುವೆ.
ಲೋಹಿಯಾ ಜಗತ್ತಿನ ರಾಜಕೀಯ ಸಿದ್ಧಾಂತಗಳನ್ನು ಅಧ್ಯಯನ ಮಾಡಿದವರು. ಆದರೆ ಅವರ ಓದು ಮತ್ತು ಗ್ರಹಿಕೆಗಳಲ್ಲಿ ಅಪಾರವಾದ ಗೊಂದಲಗಳಿರುವುದು ಅವರ ಬರಹಗಳಿಂದ ಕಂಡುಬರುತ್ತದೆ. ರಾಜಕೀಯ ಸಿದ್ಧಾಂತಗಳ ಕುರಿತ ಅವರ ಗ್ರಹಿಕೆ ತುಂಬಾ ಅವಸರದ್ದು, ಈ ಕಾರಣಕ್ಕಾಗಿ, ಅವರ ಬರಹಗಳು ತುಂಬಾ ಉಳುಚಿಕೊಳ್ಳುತ್ತಾ ಹೋಗುತ್ತವೆ. ಪ್ರಕೃತಿಗೆ ಹೇಗೆ ನಿಯಮಗಳಿವೆಯೋ ಹಾಗೆಯೇ ಸಮಾಜದ ಬೆಳವಣಿಗೆ, ಚಲನವಲನಗಳಿಗೂ ಅದರದ್ದೇ ಆದ ನಿಯಮಗಳಿವೆ ಎನ್ನುವುದನ್ನು ಸಾರಾಸಗಟಾಗಿ ತಿರಸ್ಕರಿಸಿ, ತಾವು ಯಾವುದು ಒಳ್ಳೆಯದು, ಉಚಿತವಾದದ್ದು, ಆದರ್ಶವಾದುದು ಎಂದು ಕಲ್ಪಿಸಿಕೊಳ್ಳುತ್ತಾರೋ ಅದನ್ನು ಸಂಕಲ್ಪಶಕ್ತಿಯಿಂದ ಸಾಧಿಸುವುದು ಎನ್ನುವ ದಾರಿಯನ್ನು ಹಿಡಿದುಕೊಂಡವರು.
ಲೋಹಿಯಾರ ಮಾನವ ಸಮಾಜದ ಇತಿಹಾಸದ ತಿಳಿವಳಿಕೆ ಬಹಳ ಗೊಂದಲಮಯವಾದದ್ದು. ಲೋಹಿಯಾರವರ ಪ್ರಕಾರ `ಇಲ್ಲಿಯವರೆಗಿನ ಎಲ್ಲಾ ಮಾನವ ಇತಿಹಾಸವು ಜಾತಿ ಮತ್ತು ವರ್ಗಗಳ ನಡುವಿನ ಆಂತರಿಕ ಓಲಾಟ ಹಾಗೂ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಶಕ್ತಿ ಮತ್ತು ಸಮೃದ್ಧಿಗಳ  ಸ್ಥಳಾಂತರವಾದುದಾಗಿದೆ.’ `ವರ್ಗ ಎಂದರೆ ಚಲನ ಸಾಮಥ್ರ್ಯವುಳ್ಳ ಜಾತಿ.’ `ಜಾತಿ ಎಂದರೆ ಚಲನರಹಿತ ವರ್ಗ’. ಇದು ಒಂದು ತರಹ ಚಲನರಹಿತತೆ ಚಲನಶೀಲತೆಗಳ ನಡುವೆ ವ್ಯತ್ಯಾಸವೇ ಇಲ್ಲದ ಅಸಂಬದ್ಧ ತೀರ್ಮಾನದಂತಿದೆ. `ಒಮ್ಮೆ ರೋಮ್, ಒಮ್ಮೆ ಗ್ರೀಸ್, ಒಮ್ಮೆ ಚೈನಾ, ಒಮ್ಮೆ ಅರೇಬಿಯಾ, ಒಮ್ಮೆ ಮೆಕ್ಸಿಕೊ, ಒಮ್ಮೆ ಇಂಡಿಯಾ ಇತಿಹಾಸದ ಶಿಖರಾಗ್ರದಲ್ಲಿ ಆಸೀನವಾಗಿದ್ದವು’ ಎಂದು ಲೋಹಿಯಾ ಇದನ್ನು ಶಕ್ತಿ ಸಮೃದ್ಧಿಗಳ ಖಂಡಾಂತರ ಪಲ್ಲಟ ಎಂದು ಹೇಳುತ್ತಾರೆ. ಇದು ಇತಿಹಾಸದ ಬೇರೆಬೇರೆ ಕಾಲಘಟ್ಟದಲ್ಲಿ ಬೇರೆಬೇರೆ ಪ್ರದೇಶಗಳು ಹೆಚ್ಚು ಮುಂದುವರಿದಿದ್ದು ಆಗಿರುವುದೇ ಹೊರತು ಖಂಡಾಂತರ ಪಲ್ಲಟವೇನೂ ಆಗಿಲ್ಲ. ಮಕ್ಕಳಿಗೆ ಹೇಳಿಕೊಡುವ ಕಾಗೆ-ಗುಬ್ಬಚ್ಚಿಯ ಸುಂದರವಾದ ಕಥೆಯಂತಿರುವ ಲೋಹಿಯಾರವರ ಈ ವಿವರಣೆ ಇತಿಹಾಸದ ಚಲನೆಯ ಬಗೆಗೆ ಏನನ್ನೂ ತಿಳಿಸದು.
ಸಮಾಜಗಳ ಸ್ವರೂಪ ಮತ್ತು ಬದಲಾವಣೆಗಳು ಅವುಗಳ ಸತ್ವಗಳಲ್ಲಾಗಿರುವ ಬದಲಾವಣೆಯಿಂದಾಗಿವೆ. ಈ ಸತ್ವದ ಬದಲಾವಣೆಗಳನ್ನು ತಿರಸ್ಕರಿಸಿ ಮೇಲ್‍ಸ್ತರದ ಅಂಶಗಳಿಂದಷ್ಟೇ ಇತಿಹಾಸವನ್ನು ಅರ್ಥೈಸುವ ಲೋಹಿಯಾರವರು `ಹುಟ್ಟಿದ್ದು ಸಾಯಲೇಬೇಕೆಂಬ ಮಾತು ಸತ್ಯವಾದರೆ…… ಸತ್ತದ್ದು ಮತ್ತೆ ಹುಟ್ಟಲೇ ಬೇಕು’. `ಯುಗಗಳೂ ಪ್ರದೇಶಗಳೂ ಸದಾ ತಿರುಗುತ್ತಲೇ ಇರುತ್ತವೆ. ಸಮಾನತೆಯಿಂದ ವರ್ಗ, ವರ್ಗದಿಂದ ವಿಘಟನೆ, ಈ ಕ್ರಿಯೆಯಿಂದ ಅದರ ವಿರುದ್ಧ ಕ್ರಿಯೆಯಾದ ನ್ಯಾಯದಿಂದ ಜಾತಿ, ಜಾತಿಯಿಂದ ಜಡತ್ವ, ಮತ್ತೆ ಪನಃ ಸಮಾನತೆಯ ಕಡೆಗೆ- ಇದು ಮಾನವ ನಿಯತಿಯ ಪೂರ್ಣ ಚಕ್ರ’ `ನಾಗರಿಕತೆಗಳು ಈ ವಿಧಿಯ ಆಟದ ರಂಗಸ್ಥಳ’ ಎಂದು ‘ಬೊಂಬೆಯಾಟವಯ್ಯ’ ಎಂದು ಹಳೆಯ ಸಿನಿಮಾದಲ್ಲಿ ನಾರದ ಮುನಿಯ ಪಾತ್ರಧಾರಿ ಇಂಪಾಗಿ ಹಾಡುವಂತೆ, ಮಾನವ ಇತಿಹಾಸ ಒಂದು ವಿಧಿಯ ಆಟವಾಗಿದೆ ಎನ್ನುವ ವಿಧಿವಾದ  ಅಥವಾ ಹಣೆಯಬರಹವಾದವನ್ನೇ ಲೋಹಿಯಾ  ಮುಂದಿಡುತ್ತಾರೆ.
`ನಾಗರಿಕತೆಗಳ ಏಳುಬೀಳುಗಳನ್ನು ನೋಡುತ್ತಾ, ತನ್ನ ಮುಂದೆ ಇತಿಹಾಸದ ಅನಂತ ಮರುಭೂಮಿ ಹರಡಿರುವುದನ್ನು ನೋಡುತ್ತಾ, ವರ್ಗದ ಕೊಂಬೆಯಿಂದ ಜಾತಿಯ ಕೊಂಬೆಗೆ ಕೋತಿಯಂತೆ ಜಿಗಿಯುತ್ತಿರುವುದೇ ಮಾನವನ ಸದಾ ಕಾಲದ ಹಣೆಯಬರಹವೆ’. `ಶಕ್ತಿ ಮತ್ತು ಸಮೃದ್ಧಿ, ಬಡತನ ಮತ್ತು ಸುಪ್ತಾವಸ್ಥೆಗಳ ನಡುವೆ ಯುಗಗಳೂ ಪ್ರದೇಶಗಳೂ ಓಲಾಡುತ್ತಾ ಸದಾ ತಿರುಗುತ್ತಲೇ ಇರುತ್ತವೆ’ `ಮಾನವ ಕುಲಕ್ಕೆ ವರ್ಗರಹಿತ ಸಮಾಜ ಅಥವಾ ಏಕಜಗತ್ತಿನ ಸಾಧನೆಯ ಭರವಸೆ ತೀರಾ ಅತ್ಯಲ್ಪ’. `ಬಡತನ  ಮತ್ತು ಯುದ್ಧಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಿರುವ, ಮನುಷ್ಯನು ಅಂತರಂಗದ ತೃಪ್ತಿಯನ್ನೂ, ಬಹಿರಂಗದ ಶಾಂತಿಯನ್ನೂ ಸಾಧಿಸುವ ಜೀವನಕ್ರಮವನ್ನು ಹೊಂದುವಂಥ ಸುವರ್ಣಯುಗ ಒಂದು  ಹಳೆಯ ಭ್ರಾಂತಿಯೆಂದು ತೋರುತ್ತದೆ’ ಎನ್ನುವ ಅಪರಿಮಿತವಾದ ನಿರಾಶಾವಾದವನ್ನು ಲೋಹಿಯಾ ಮಂಡಿಸುತ್ತಾರೆ.
ಲೋಹಿಯಾರವರ ಪ್ರಕಾರ ಇಲ್ಲಿಯವರೆಗೂ ಇತಿಹಾಸ ನಿರ್ಮಿಸಿರುವುದು ಮಾನವರಲ್ಲ, ಬದಲು `ಇತಿಹಾಸವೇ ಇತಿಹಾಸವನ್ನು ನಿರ್ಮಿಸಿದೆ’. ಅದು ವಿಧಿಯ ಆಟವಾಗಿದೆ. ಹೀಗಾಗಿ ಲೋಹಿಯಾ ಇತಿಹಾಸ ಚಲನೆಯ ಪ್ರೇರಕಶಕ್ತಿಯನ್ನೇ  ಕಾಣಲಿಲ್ಲ. `ಪುನರ್ಜನ್ಮ ಮತ್ತು ಕರ್ಮಸಿದ್ಧಾಂತ ವ್ಯಕ್ತಿಗೆ ಸಂಬಂಧಪಟ್ಟಂತೆ ಸಮಂಜಸವಿಲ್ಲದಿರಬಹುದೇನೋ. ಆದರೆ ರಾಷ್ಟ್ರ ಮತ್ತು ಗುಂಪುಗಳಿಗೆ ಸಂಬಂಧಪಟ್ಟಂತೆ ಅದು ಸಮಂಜಸವಾದುದೆಂದು ತೋರುತ್ತದೆ’ ಎನ್ನುವುದರ ಮೂಲಕ ಹಿಂದೂ ಧರ್ಮದ ಪುನರ್ಜನ್ಮ ಸಿದ್ಧಾಂತವನ್ನು ನಾಗರಿಕತೆಗಳ ಇತಿಹಾಸಕ್ಕೆ ಅಳವಡಿಸಿದ ದೃಷ್ಟಿಯೇ ಆಗಿದೆ ಎನ್ನುವುದು ಲೋಹಿಯಾರವರ ಆ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಲೋಹಿಯಾ ‘ಮಾಕ್ರ್ಸ್ ನಂತರದ ಅರ್ಥಶಾಸ್ತ್ರ’ ಎನ್ನುವ ಶೀರ್ಷಿಕೆಯಲ್ಲಿ ದೀರ್ಘ ಲೇಖನವೊಂದನ್ನು ಬರೆದಿದ್ದಾರೆ. ಇದನ್ನು ಕೆಲವು ಲೋಹಿಯಾವಾದಿಗಳು ಅವರ ‘ಮ್ಯಾಗ್ನಮ್ ಓಪಸ್’ ಎಂದು ಬಣ್ಣಿಸಿರುವುದುಂಟು. ಅದು ಒಂದು ರೀತಿಯ ಭ್ರಮೆ ಹಾಗೂ ಪೊಳ್ಳುವಾದ. ಆ ಲೇಖನವು ಹೇಗೆ ಮಾಕ್ರ್ಸ್‍ವಾದದ ಬಗ್ಗೆ ಲೋಹಿಯಾರವರ ಅತ್ಯಂತ ಕಳಪೆ ತಿಳಿವಳಿಕೆಯೇ ಆಗಿದೆ. ಹೆಚ್ಚಿನ ಲೋಹಿಯಾವಾದಿಗಳು ಮಾಕ್ರ್ಸ್‍ವಾದವನ್ನು ಓದಿದವರಲ್ಲ. ಲೋಹಿಯಾ ಮಾಕ್ರ್ಸ್‍ವಾದದ ಬಗ್ಗೆ ಏನು ಹೇಳಿದರೋ ಅದು ಅದ್ಭುತ ಸತ್ಯ ಎಂದೇ ಭಾವಿಸಿಬಿಟ್ಟರು. ಲೋಹಿಯಾ ಟೀಕಿಸಿದ್ದು ಮಾಕ್ರ್ಸ್ ಏಂಗೆಲ್ಸ್ ರೂಪಿಸಿದ ಮಾಕ್ರ್ಸ್‍ವಾದವನ್ನಲ್ಲ, ಬದಲಿಗೆ ಲೋಹಿಯಾ ಟೀಕಿಸಿದ್ದು ತನ್ನ ಕಲ್ಪನೆಯ ಮಾಕ್ರ್ಸವಾದವನ್ನು.
ಅವರು ಹೇಳುವುದೇನೆಂದರೆ `ಮಾಕ್ರ್ಸ್‍ವಾದದ ಬಂಡವಾಳಶಾಹಿ ಚಿತ್ರಣ ಒಂದು ಪಶ್ಚಿಮ ಯೂರೋಪಿನ ಒಳಕ್ರಿಯೆ ಯಾಗಿದೆಯಷ್ಟೆ. ಬಂಡವಾಳಶಾಹಿಯ ಚಲತ್ವವನ್ನು  ಆಂತರಿಕ ರಚನೆಯಲ್ಲಿ; ಮೌಲ್ಯ-ಉಪಯೋಗಮೌಲ್ಯಗಳ ವೈರುಧ್ಯದಲ್ಲಿ; ಒಂದೇ ರಚನೆಯ ಕಾರ್ಮಿಕವರ್ಗ-ಬಂಡವಾಳಗಾರ ವರ್ಗಗಳ ವೈರುಧ್ಯದಲ್ಲಿ ಮಾತ್ರ ಕಾಣಲಾಗಿದೆ. ಮಾಕ್ರ್ಸ್‍ರವರ ಬಂಡವಾಳಶಾಹಿ ಚಿತ್ರಣ ಸ್ವಯಂಚಲನೆ ಹೊಂದಿದ ಪಶ್ಚಿಮ ಯೂರೋಪಿನ ಒಳ ವೃತ್ತವಾಗಿದೆ’ ‘ಮಾಕ್ರ್ಸ ವಸಾಹತುಶಾಹಿ ಶೋಷಣೆಯನ್ನು ಕಾಣಲಿಲ್ಲವೆಂದೂ, ವಸಾಹತುಗಳ ಶೋಷಣೆಯಿಂದಲೇ ಬಂಡವಾಳಶಾಹಿ ಬೆಳೆದುಬಂದುದನ್ನು ಕಾಣಲಿಲ್ಲವೆಂದೂ’ ಲೋಹಿಯಾ ಆರೋಪಿಸುತ್ತಾರೆ.
ಮಾಕ್ರ್ಸ್‍ವಾದ ನಿಜಕ್ಕೂ ಹೀಗಿದೆಯೇ? ಎಂದು ಪರಿಶೀಲಿಸೋಣ. 1847ರಲ್ಲಿ ಪ್ರಕಟವಾದ ಕಮ್ಯುನಿಸ್ಟ್ ಮ್ಯಾನಿಫೆಸ್ಟೋದಲ್ಲಿ ಮಾಕ್ರ್ಸ್ ಮತ್ತು ಏಂಗಲ್ಸ್ ನೀಡಿದ ಬಂಡವಾಳಶಾಹಿ ಚಿತ್ರಣ ಇದು. `ಮಧ್ಯಯುಗದ ಜೀತಗಾರರಿಂದ ಮೊದಲ ಪಟ್ಟಣಗಳ ಚಾರ್ಟರ್ಡ್ ಬರ್ಗರ್ಸ್ ಉದಯವಾದರು. ಈ  ಬರ್ಗರ್ಸ್‍ಗಳಿಂದ ಬಂಡವಾಳಶಾಹಿಯ ಮೊದಲ ಅಂಶಗಳು ಬೆಳೆದುಬಂದವು. ಅಮೆರಿಕವನ್ನು ಕಂಡುಹಿಡಿದುದು, ಗುಡ್‍ಹೋಪ್ ಭೂಶಿರವನ್ನು ಬಳಸಿ ಜಲಮಾರ್ಗಗಳ ಶೋಧನೆ ನಡೆಸಿದುದು, ಮೊಳಕೆಯೊಡೆಯುತ್ತಿದ್ದ ಬಂಡವಾಳಶಾಹಿಗೆ ಹೊಸ ನೆಲೆಗಳನ್ನು ತೆರೆಯಿತು. ಪೂರ್ವಭಾರತ ಮತ್ತು ಚೈನಾ ಮಾರುಕಟ್ಟೆಗಳು, ಅಮೆರಿಕದ ವಸಾಹತೀಕರಣ, ವಸಾಹತುಗಳೊಂದಿಗಿನ ವ್ಯಾಪಾರ, ಕ್ರಯವಸ್ತುಗಳಲ್ಲಿ ಹಾಗೂ ವಿನಿಮಯ ಸಾಧನಗಳಲ್ಲಿ ಆದ ಬೆಳವಣಿಗೆಗಳು ಸಾಮಾನ್ಯವಾಗಿ ವಾಣಿಜ್ಯ, ನೌಕಾಯಾನ, ಕೈಗಾರಿಕೆಗಳಿಗೆ ಹಿಂದೆಂದೂ ಇರದಷ್ಟು ಉತ್ತೇಜನ ನೀಡಿತು. ಇದು ತತ್ತರಿಸುತ್ತಿದ್ದ ಪಾಳೆಯಗಾರಿ ಸಮಾಜ ವ್ಯವಸ್ಥೆಯ ಗರ್ಭದೊಳಗಿದ್ದ ಕ್ರಾಂತಿಕಾರಿ ಅಂಶಕ್ಕೆ ತ್ವರಿತಗತಿಯ ಬೆಳವÀಣಿಗೆಯನ್ನು ಉಂಟುಮಾಡಿತು.
ಆಧುನಿಕ ಕೈಗಾರಿಕೆ ವಿಶ್ವಮಾರುಕಟ್ಟೆಯನ್ನು ಸ್ಥಾಪಿಸಿದೆ. ಇದಕ್ಕೆ ಅಮೆರಿಕದ ಶೋಧನೆ ನಾಂದಿಯಾಯಿತು. ಈ ವಿಶ್ವಮಾರುಕಟ್ಟೆಯು ವಾಣಿಜ್ಯ, ನೌಕಾಯಾನ, ಭೂಸಂಪರ್ಕ ವ್ಯವಸ್ಥೆಯ ತ್ವರಿತಗತಿಯ ಬೆಳವಣಿಗೆಗೆ ಪ್ರೇರಕವಾಯಿತು. ತಾನು ಉತ್ಪಾದಿಸಿದ ಮಾಲುಗಳಿಗೆ ಸತತವಾಗಿ ಮಾರುಕಟ್ಟೆಯು ವಿಸ್ತರಣೆಯಾಗಬೇಕಾದ ಅಗತ್ಯವು ಬಂಡವಾಳಶಾಹಿಯನ್ನು ಭೂಗೋಳದ ಮೇಲ್ಮೈಯಾದ್ಯಂತ ಓಡಿಸುತ್ತದೆ……… ವಿಶ್ವಮಾರುಕಟ್ಟೆಯ ಶೋಷಣೆಯಿಂದ ಬಂಡವಾಳಶಾಹಿಯು ಪ್ರತಿಯೊಂದು ದೇಶದ ಉತ್ಪಾದನೆ ಬಳಕೆಗಳಿಗೆ ಸಾರ್ವತ್ರಿಕವಾದ ಲಕ್ಷಣಗಳನ್ನು ನೀಡುತ್ತಿದೆ. ಸ್ಥಳೀಯ ಕಚ್ಚಾಪದಾರ್ಥಗಳಿಂದಲ್ಲದೆ ಯಾವುದೋ ಮೂಲೆಯ ವಲಯಗಳಿಂದ ತರುವ ಕಚ್ಚಾಪದಾರ್ಥಗಳ ಮೇಲೆಯೇ ನಡೆಯುವ; ಉತ್ಪನ್ನಗಳು ದೇಶದೊಳಗಡೆಯಷ್ಟೇ ಬಳಸಲ್ಪಡದೆ  ಭೂಮಿಯ ಪ್ರತಿಯೊಂದು ಮೂಲೆಗಳಲ್ಲೂ ಬಳಸಲ್ಪಡುವ ಕೈಗಾರಿಕೆಗಳು, ದೇಶದ ಉತ್ಪಾದನೆಯಿಂದಲೇ ನೀಗಿಸಲ್ಪಡುತ್ತಿದ್ದ ಬೇಡಿಕೆಗಳ ಬದಲು ದೂರದ, ಭಿನ್ನವಾದ ಭೂವಾತಾವರಣಗಳ ಉತ್ಪನ್ನಗಳೇ ಬೇಕಾಗುವ ಬೇಡಿಕೆಗಳು ಉಂಟಾಗುವುದು ನಾವು ಕಾಣುತ್ತೇವೆ. ಹಳೆಯ, ಸ್ಥಳೀಯ, ರಾಷ್ಟ್ರೀಯ ಪ್ರತ್ಯೇಕತೆ, ಸಂಕುಚಿತತೆ, ಸ್ವಂತಕ್ಕೆ ಸಾಕಾಗುವಷ್ಟು ಉತ್ಪಾದನೆ, ಇವುಗಳ ಬದಲು ಪ್ರತಿಯೊಂದು ದಿಕ್ಕಿನಲ್ಲೂ ಪರಸ್ಪರ ವ್ಯವಹಾರ, ವಿಶ್ವದಾದ್ಯಂತ ರಾಷ್ಟ್ರಗಳ ಪರಸ್ಪರಾವಲಂಬನೆಗಳು ಏರ್ಪಟ್ಟಿವೆ. ಬಂಡವಾಳಶಾಹಿಯು ಹಳ್ಳಿಗಳನ್ನು ನಗರಗಳ ಆಡಳಿತಕ್ಕೆ ಒಳಮಾಡಿದಂತೆ, ಅನಾಗರಿಕ ಅರೆನಾಗರಿಕ ದೇಶಗಳನ್ನು ನಾಗರಿಕ ದೇಶಗಳ ಮೇಲೆ, ರೈತರ ರಾಷ್ಟ್ರಗಳನ್ನು ಬಂಡವಾಳಶಾಹಿ ರಾಷ್ಟ್ರಗಳ ಮೇಲೆ ಬಲಾತ್ಕಾರದ ಪರಾವಲಂಬನೆಗೆ ಒಳಪಡಿಸಿದೆ’.  (ಕಮ್ಯುನಿಸ್ಟ್ ಮ್ಯಾನಿಫೆಸ್ಟೋ)
ಹೀಗೆ ಕಮ್ಯುನಿಸ್ಟ್ ಮ್ಯಾನಿಫೆಸ್ಟೋದ ಮೊದಲಿನ ಪುಟಗಳಲ್ಲೇ ಈ ರೀತಿಯಾಗಿ ಬಂಡವಾಳಶಾಹಿಯ ವಿಶ್ವವ್ಯಾಪಿ ಅಂಶಗಳನ್ನೂ, ಪರಿಣಾಮಗಳನ್ನೂ ವಿವರಿಸಿರುವಾಗ ‘ಮಾಕ್ರ್ಸ್‍ರವರ ಬಂಡವಾಳಶಾಹಿ ಚಿತ್ರಣ ಪಶ್ಚಿಮ ಯೂರೋಪಿನ ವೃತ್ತವಾಗಿದೆ ಅಥವಾ ಒಳಕ್ರಿಯೆಯಷ್ಟೇಯಾಗಿದೆ’ ಎಂದು ಹೇಳಲು ಸಾಧ್ಯವಿದೆಯೇ? ಮಾಕ್ರ್ಸ್‍ರವರ ಬಂಡವಾಳಶಾಹಿ ಚಿತ್ರ ವಾಸ್ತವವಾಗಿ ಜಾಗತಿಕ  ಯೂರೋಪಿನ ಬಂಡವಾಳಶಾಹಿ ಬೆಳವಣಿಗೆಗೆ ಬಂಡವಾಳದಪೂರ್ವ ಶೇಖರಣೆ  ಹೇಗಾಯಿತೆನ್ನುವುದನ್ನು ಅಲ್ಲಿ ವಸಾಹತುವಾದ ಏಕೆ ಅನಿವಾರ್ಯವಾಯಿತೆಂದೂ ಮಾಕ್ರ್ಸ್ ತಮ್ಮ ‘ಬಂಡವಾಳ’ ಗ್ರಂಥದಲ್ಲಿ ಹಾಗೂ ಇನ್ನಿತರ ಬರಹಗಳಲ್ಲಿ ವಿವರಿಸಿದ್ದಾರೆ.
ಲೋಹಿಯಾರವರ ಮೂಲ ಆರೋಪಕ್ಕೆ ಆಧಾರವೇ ಇಲ್ಲದಿರುವಾಗ, ಅದರಿಂದ ಹುಟ್ಟುವ ಇತರೆ ಆರೋಪಗಳೂ ತಾವಾಗಿಯೇ ಉದುರಿಹೋಗುತ್ತವೆ. ಹೆಚ್ಚಿನ ವಿವರಗಳಿಗೆ ನನ್ನ ‘ಲೋಹಿಯಾ ವಿಚಾರಗಳ ಒಂದು ವಿಮರ್ಶೆ’ ಪುಸ್ತಕವನ್ನು ನೋಡಬಹುದು.
(ಮುಂದುವರಿಯುವುದು)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...