Homeರಾಜಕೀಯಕಾಗೇರಿ-ಭೀಮಣ್ಣ ಬಲಪ್ರದರ್ಶನದ ಬಡಿದಾಟ

ಕಾಗೇರಿ-ಭೀಮಣ್ಣ ಬಲಪ್ರದರ್ಶನದ ಬಡಿದಾಟ

- Advertisement -
- Advertisement -

ಉತ್ತರ ಕನ್ನಡದ ನಗರ-ಪಟ್ಟಣ ಪ್ರದೇಶದ ಆಯಕಟ್ಟಿನ ಅಧಿಕಾರ ಕೇಂದ್ರಕ್ಕೇರಲು ಲಾಟ್-ಪುಟ್ ಲೋಕಲ್ ಪುಢಾರಿಗಳು ನಡೆಸುತ್ತಿರುವ ಕಸರತ್ತು ದಿನಕ್ಕೊಂದು ಆಯಾಮ ಪಡೆದುಕೊಂಡು ಜನರನ್ನು ರಂಜಿಸುತ್ತಿದೆ. ಈ ಮರಿ ಮುಖಂಡರ ಹಿಕಮತ್ತಿನ ಹಿಂದೆ ಚಂಡ-ಪ್ರಚಂಡರ ಅಸ್ತಿತ್ವ-ಪ್ರತಿಷ್ಠೆ ಪ್ರಶ್ನೆಗಳು ಅಡಗಿರುವುದರಿಂದ ಮುನ್ಸ್‍ಪಾಲ್ಟಿ ಜಿದ್ದಾಜಿದ್ದಿಗೆ ಹೈವೂಲ್ಟೇಜ್ ಖದರು ಬಂದುಬಿಟ್ಟಿದೆ.
ಬಿಜೆಪಿ ಶಾಸಕರಾದ ಖಾಲಿಬರಡು ಕಾಗೇರಿ ಮಾಣಿ, ದೋಖಾ ದಿನಕರÀಶೆಟ್ಟಿ, ರಂಗೀಲಾ ರೂಪಾಲಿ ನಾಯ್ಕಗೆ ತಾವಿನ್ನೂ ತಮ್ಮೂರಿನ ಸಿಟಿಗಳಲ್ಲಿ ಶಕ್ತಿಶಾಲಿ ಸಂಘಿ ಸರದಾರರೆಂದು ತೋರಿಸಿಕೊಳ್ಳುವ ಅವಿವಾರ್ಯತೆ ಎದುರಾಗಿದೆ. ಕಾಂಗ್ರೆಸ್‍ನ ಮಾಜಿಗಳಾದ ಕಾರವಾರದ ಸೋಗಲಾಡಿ ಸತೀಶ್ ಸೈಲ್, ಕುಮಟೆಯ ಸ್ವಾಹ ಶಾರದಾಶೆಟ್ಟಿಯಮ್ಮ, ಶಿರಸಿಯ ಬಂಡಲ್‍ಬಾಜಿ ಭೀಮಣ್ಣನಾಯ್ಕ್, ಯಲ್ಲಾಪುರದ ಲಾಟರಿ ಶಾಸಕ ಹೇತ್ಲಾಂಡಿ ಹೆಬ್ಬಾರ ಮತ್ತು ಹಳಿಯಾಳದ ಮುದಿ ಹುಲಿ ದೋಷಪಾಂಡೆ ಹಿಂದಾದ ಅವಮಾನದ ಸೇಡು ತೀರಿಸಿಕೊಳ್ಳಬೇಕಾದ ಗಡಿಬಿಡಿಗೆ ಬಿದ್ದಿದ್ದಾರೆ. ಕಾರವಾರದಲ್ಲಿ ಜೆಡಿಎಸ್ ಜೋಕುಮಾರ ಆನಂದ ಅಸ್ನೋಟಿಕರ್ ನಗರದಲ್ಲಿ ತನ್ನ ಬೇರುಗಳಿನ್ನೂ ಒಣಗಿಲ್ಲ ಎಂಬುದನ್ನು ಶತ್ರುಗಳಿಗೆ ತೋರಿಸಬೇಕಾಗಿದೆ. ಕಾರವಾರ ನಗರಸಭೆ ರಣಾಂಗಣದಲ್ಲಿ ಬಿಜೆಪಿಗೆ ಕಾಂಗ್ರೆಸ್‍ಗಿಂತ ಜೆಡಿಎಸ್ಸೇ ಹೆಚ್ಚು ಹೆದರಿಸುತ್ತಿದೆ. ತನ್ನ ಕೃಪಾಶೀರ್ವಾದದಲ್ಲೇ ಪುಢಾರಿಯಾಗಿ ಬೆಳೆದು ಈಗ ಶಾಸಕಿಯಾಗಿ ತನ್ನನ್ನು ಅಣಕಿಸುತ್ತಿರುವ ರೂಪಾಲಿ ರಂಗು ಇಳಿಸಲು ಅಸ್ನೋಟಿಕರ್ ಸ್ಕೆಚ್ ಹಾಕಿದ್ದಾನೆ.
ಉತ್ತರ ಕನ್ನಡದ ಲೋಕಲ್ ಫೈಟಿಂಗ್‍ನಲ್ಲಿ ದೊಡ್ಡ ಮಟ್ಟದ ಕುತೂಹಲ ಕೆರಳಿಸಿರುವುದು ಘಟ್ಟದ ಮೇಲಿನ ಶಿರಸಿ ನಗರಸಭೆ ಗದ್ದುಗೆ ಗುದ್ದಾಟ! ಬಿಜೆಪಿ-ಕಾಂಗ್ರೆಸ್ “ಹಣಾ”ಹಣಿ ಇಲ್ಲಿ ನಡೆದಿದೆ. ಕೇಸರಿ ತಂಡಕ್ಕೆ ಕಾಗೇರಿ ಮಾಣಿ “ದಂಡ” ನಾಯಕನಾದರೆ, ಕಾಂಗ್ರೆಸ್ ಬೆಟಾಲಿಯನ್‍ಗೆ ಭೀಮಣ್ಣನಾಯ್ಕ ಬ್ರಿಗೇಡಿಯರ್. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮುಖಾಮುಖಿಯಾಗಿ ನಿಂತು ಸೆಣಸಾಡಿದ್ದ ಈ ಇಬ್ಬರು ಹೋಪ್‍ಲೆಸ್‍ಗಳು ಈಗ ಎರಡನೇ ಸುತ್ತಿನ ಕಾಳಗಕ್ಕೆ ಅಣಿಯಾಗಿದ್ದಾರೆ. ಕಾಗೇರಿ ಶಾಸಕನಾಗಿರುವುದು ಅನಿರೀಕ್ಷಿತ; ಭೀಮಣ್ಣ ಲಾಗಾಹಾಕಿರುವುದು ಅಚ್ಚರಿಯೆಂಬುದು ಇವತ್ತಿಗೂ ಶಿರಸಿಯಲ್ಲಿ ಚರ್ವಿತಚರ್ವಣ! ಈಗ ನಡೆದಿರುವ ಮುನ್ಸ್‍ಪಾಲ್ಟಿ ಎಲೆಕ್ಷನ್ ಕಾಳಗ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ತಕರಾರು-ತಲ್ಲಣ ಎಬ್ಬಿಸಿಬಿಟ್ಟಿದೆ. ಎರಡೂ ಕಡೆ ಬಂಡಾಯದ ಬಾವುಟ ಬಾನೆತ್ತರಕ್ಕೆ ಹಾರಾಡುತ್ತಿದೆ. ಕಾಗೇರಿಯಷ್ಟೇ ಪೀಕಲಾಟ ಭೀಮಣ್ಣನಿಗೂ ಶುರುವಾಗಿದೆ. ಸ್ವಕೀಯರೇ ಶತ್ರುಗಳಿಗಿಂತ ಅಪಾಯಕಾರಿ ಆಗಿದ್ದಾರೆಂಬ ದುಗುಡ ಕೈ-ಕಮಲ ಪಾಳೆಯವನ್ನು ಕಂಗಾಲಾಗಿಸಿಬಿಟ್ಟಿದೆ.
ಬರೋಬ್ಬರಿ 31 ಸದಸ್ಯ ಬಲದ ಶಿರಸಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಕಾಗೇರಿ ಶಾಸಕನಾಗಿದ್ದರೂ ಶಿರಸಿಯಲ್ಲಿ ಬಿಜೆಪಿ ಸೋತಿರುವುದು ಆತನ ಸ್ವಪಕ್ಷೀಯ ಶತ್ರು ಅನಂತ್ಮಾಣಿ ಕರಾಮತ್ತಿನಿಂದಾಗಿ. ಈ ಸಲ ಅನಂತ್ಮಾಣಿ ಕೇಂದ್ರಮಂತ್ರಿಯಾಗಿದ್ದಾನೆ. ಹಾಗಾಗಿ ತಾನು ದಿಲ್ಲಿ ಲೆವಲ್ ನಾಯಕನೆಂಬ ದುರಹಂಕಾರದಿಂದ ಲೋಕಲ್ ರಾಜಕಾರಣದಿಂದ ದೂರಾಗಿದ್ದಾನೆ. ಮುನ್ಸ್‍ಪಾಲ್ಟಿ ಮಟ್ಟ ಏನಿದ್ದರೂ ಕಾಗೇರಿಯದೆಂಬ ಕುಹಕದ ಪೋಸು ಕೊಟ್ಟು ಸುಮ್ಮನಿದ್ದಾನೆ. ಕಾಗೇರಿ ಇಮೇಜು ಈ ಎಲೆಕ್ಷನ್‍ನಿಂದ ಹೆಚ್ಚಾಗುತ್ತದೆಂದು ಕಂಡರೆ ಅನಂತ್ಮಾಣಿ ಒಳಏಟು ಕೊಡದೆ ಬಿಡಲಾರ. ನಗರಸಭೆಯ ಎರಡನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಹೊತ್ತಲ್ಲಿ ಇದೇ ಅನಂತ್ಮಾಣಿ ಕಾಂಗ್ರೆಸ್‍ನ ಬಂಡಾಯಗಾರ ಪ್ರದೀಪ್ ಶೆಟ್ಟಿ ಟೀಮಿಗೆ ಬೆಂಬಲ ಕೊಟ್ಟು ಅಧ್ಯಕ್ಷನಾಗಿಸಿದ್ದು ಕಾಗೇರಿ ಮರೆಯಲು ಸಾಧ್ಯವಾ!
ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್‍ಗೆ ಕೆಲವರು ಬಂದಿದ್ದಾರೆ. ಒಂದಷ್ಟು ಮಂದಿ ಕಾಂಗ್ರೆಸ್‍ನಲ್ಲಿ ಛಾನ್ಸ್ ಇಲ್ಲವೆಂದು ಬಿಜೆಪಿ ಸೇರಿ ಬೀದಿ ಪಾಲಾಗಿದ್ದಾರೆ. ಬಿಜೆಪಿಯಲ್ಲಿದ್ದ ಅರುಣ ಪ್ರಭು, ಕೇಶವ ಶೆಟ್ಟಿ ಈ ಸಲ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಕೈಕೊಟ್ಟಿದ್ದರಿಂದ ಮುನಿದು ಶೀಲುರಾಜ್, ರಜಿಯಾಬಿ ಜೆಡಿಎಸ್ ಪಾಲಾಗಿದ್ದಾರೆ. ಉಪಾಧ್ಯಕ್ಷೆಯಾಗಿದ್ದ ಅರುಣಾ ವೆರ್ಣೀಕರ್, ಜಯಲಕ್ಷ್ಮಿ ಬೈಲೊರ್, ಅಬ್ದುಲ್ ಶೇಕ್ ಬಂಡೆದ್ದು ಕಾಂಗ್ರೆಸ್ ಕಿಂಗ್‍ಗಳಿಗೆ ಸೆÀಡ್ಡು ಹೊಡೆದಿದ್ದಾರೆ. ಬಿಜೆಪಿ ಜತೆಸೇರಿ ಅಧ್ಯಕ್ಷನಾಗಿದ್ದ ಅಧಿಕಪ್ರಸಂಗಿ ಪ್ರದೀಪ್‍ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ಕೊಡಬಾರದೆಂದು ಹಿಂದಿನ ಬಿಜೆಪಿ ಅಧ್ಯಕ್ಷ ರಮೇಶ್ ದುಬಾಷಿ ಗ್ಯಾಂಗ್ ಮಾರಾಮಾರಿಗೂ ಇಳಿದಿತ್ತು. ಆದರೂ 12ನೇ ವಾರ್ಡಿನಲ್ಲಿ ಶೆಟ್ಟಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದಾನೆ. ವಾರ್ಡ್ ನಂಬರ್ 12, 18, 20, 1, 17, 9, 16, 26, 27 ಮತ್ತು 31ರಲ್ಲಿ ಬಂಡಾಯದ ಕಾವು ಕಾಂಗ್ರೆಸನ್ನು ಕರಗಿಸುತ್ತಿದೆ.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಗಣಪತಿನಾಯ್ಕ್ ಎಂಬ ಶಾಸಕ ಕಾಗೇರಿ ಶಿಷ್ಯನಿಗೆ ಭಿನ್ನಮತ ಮುಳುವಾಗಿದೆ. ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಸಂಧ್ಯಾ ಕುರ್ಡೇಕರ್, ಮಾಜಿ ಸದಸ್ಯ ನಾಗರಾಜ್ ಮುಕ್ತಾ, ಭೀಮಣ್ಣ ತಳವಾರ, ಯೋಗೀಶ್ ಪಾಟೀಲ, ಎ.ಪಿ.ನಾಯ್ಕ್ ಸಿಡಿದೆದ್ದಿದ್ದಾರೆ. ವಾರ್ಡ್ ನಂಬರ್ 31, 28, 6, 8, 10ರಲ್ಲಿ ಬಿಜೆಪಿ ಬಂಡಾಯಗಾರರು ಕಣದಲ್ಲಿದ್ದಾರೆ. ಕಾಗೇರಿ ಕಚೇರಿಗೆ ಹೋದಾಗ ಬಿ. ಫಾರ್ಮ್ ಕೊಡದೆ ಕಳಿಸಿದ್ದು ಅನೇಕ ಹಳೆ ಸದಸ್ಯರ ಕೆರಳಿಸಿದೆ.
ಇವರೆಲ್ಲಾ ಕಾಗೇರಿಗೆ ಶಾಪ ಹಾಕುತ್ತ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕಡೆ ಈ ಸಲ ಹೊಸಬರನೇಕರಿಗೆ ಛಾನ್ಸ್ ಕೊಡಲಾಗಿದೆ. ಇದೇ ಅಸಮಾಧಾನದ ಮೂಲ.
ವಾರ್ಡ್‍ಗಳ ವಿಭಜನೆ, ಮೀಸಲಾತಿ ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಂಗ್ರೆಸ್‍ಗೆ ಒಂಚೂರು ಗೆಲ್ಲುವ ಅವಕಾಶ ಜಾಸ್ತಿ ಅನ್ನಿಸುತ್ತದೆ. ಆದರೆ ಬಿಜೆಪಿಯ ಮತಾಂಧ ಅಲೆ ಎದುರಿಸುವುದು ಅಷ್ಟು ಸುಲಭವೇನಿಲ್ಲ. ಕಾಂಗ್ರೆಸ್ ಬಿಸಿಸಿ ಅಧ್ಯಕ್ಷ ಉಪೇಂದ್ರ ಪೈ ಶಿರಸಿಯ ಲ್ಯಾಂಡ್ ಮಾಫಿಯಾದ ಕಿಂಗ್‍ಪಿನ್. ಈತ ಮಂತ್ರಿ ದೇಶಪಾಂಡೆ ಜಾತ್ಯಸ್ಥ. ಹೀಗಾಗಿ ಪೈ ಜಿಲ್ಲಾಧ್ಯಕ್ಷ ಭೀಮಣ್ಣನಿಗೂ ಕೇರ್ ಮಾಡದೆ ತನ್ನ ಆಪ್ತರಾದ ಭೂ ಭಾನ್ಗಡಿದಾರರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದಾನೆಂಬ ಪುಕಾರು ಕಾಂಗ್ರೆಸ್‍ಗೆ ಡ್ಯಾಮೇಜ್ ಮಾಡುತ್ತಿದೆ.
ಶಿರಸಿ ನಗರಸಭೆ ಎಂದರೆ ಒಂಥರಾ ಲೇವಾದೇವಿ ಅಡ್ಡೆಯಂತೆ. ಬಿಜೆಪಿ-ಕಾಂಗ್ರೆಸ್ ಎಂಬ ಭೇದವಿಲ್ಲದೆ ಸದಸ್ಯರು ಸಿಕ್ಕಷ್ಟು ಸ್ವಾಹ ಮಾಡಿದ್ದಾರೆ. ಚರಂಡಿ ಇಲ್ಲದ ಏರಿಯಾಗಳು, ಗುಂಡಿ ಬಿದ್ದ ರಸ್ತೆಗಳು, ಕಸ-ಕೊಳೆಯಿಂದ ಗಬ್ಬೆದ್ದ ನಗರ ಐದು ವರ್ಷ ಸದಸ್ಯರಾಗಿದ್ದವರ ಹಣೆಬರಹ ಹೇಳುತ್ತಿದೆ. ನಗರದ ಆಡಳಿತ ಅದ್ವಾನ ಎದ್ದುಹೋಗಿದೆ. ಆಡಳಿತ ಕಾಂಗ್ರೆಸ್‍ನೊಳಗಿನ ಬಂಡಾಯದಿಂದ ಪ್ರದೀಪ್‍ಶೆಟ್ಟಿಗೆ ಏನೂ ಮಾಡಲಾಗಲಿಲ್ಲ. ಆತ ವಿಪ್ ಉಲ್ಲಂಘನೆಯ ಆರೋಪದಿಂದ ಸದಸ್ಯತ್ವಕ್ಕೆ ಸಂಚುಕಾರ ತಂದುಕೊಂಡು ಕೋರ್ಟು-ಕಚೇರಿ ಅಲೆದನೇ ಹೊರತು ಊರು ಉದ್ಧಾರದ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಧಿಕಾರಾರೂಢ ಕಾಂಗ್ರೆಸ್‍ನ ಗೊಂದಲ-ಗಲಾಟೆ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಿತು. ನೊಂದವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಯಾವ ಪಕ್ಷದವರಿಂದಲೂ ಆಗಲಿಲ್ಲ. ಕಾಂಗ್ರೆಸ್‍ನೊಳಗಿನ ಭಿನ್ನಮತ ಬಿಜೆಪಿ ಸದಸ್ಯರು ಸ್ವಲಾಭಕ್ಕೆ ತಕ್ಕಂತೆ ಬಳಸಿಕೊಂಡು ಹಾಯಾಗಿ ತಿಂದು ದುಂಡಗಾದರು. ಎಲೆಕ್ಷನ್ ಬರುವಸೂಚನೆ ಸಿಕ್ಕಾಗ ಆಡಳಿತಗಾರರ ಗ್ಯಾಂಗಿನಲ್ಲಿದ್ದ ಬಿಜೆಪಿ ನಗರಾಡಳಿತ ಸರಿಯಿಲ್ಲವೆಂದು ಪ್ರತಿಭಟನೆಯ ನಾಟಕ ನಡೆಸಿತು.
ದುರಂತವೆಂದರೆ ಕೋಟಿ-ಕೋಟಿ ಅನುದಾನ ಬಂದರೂ ಶಿರಸಿ ನಗರ ಮಾತ್ರ ಅಭಿವೃದ್ಧಿ-ಪ್ರಗತಿ ಕಾಣಲೇ ಇಲ್ಲ! ಖಾತಾ ಬದಲಾವಣೆಯಂಥ ಗಂಭೀರ ಸಮಸ್ಯೆ ನಗರಾಡಳಿತಾಗಾರರಿಂದ ಪರಿಹರಿಸಲಾಗಲೇ ಇಲ್ಲ. ಫಾರ್ಮ್‍ನಂಬರ್ 3 ಎಂಬ ಸಮಸ್ಯೆ ಇವತ್ತಿಗೂ ಜನರ ಜೀವ ಹಿಂಡುತ್ತಿದೆ. ಕಸ-ಕೊಳಕು ನಗರದ ತುಂಬೆಲ್ಲಾ ರಾರಾಜಿಸುತ್ತಿದೆ. ಆದರೂ ನಗರಸಭೆ ಖರೀದಿಸಿದ್ದ ಕಸ ಸಂಗ್ರಹ ಬಕೆಟ್ ಜನರಿಗೆ ವಿತರಿಸಲು ಪ್ರದೀಪ್ ಶೆಟ್ಟಿ ಮತ್ತಾತನ ಬಿಜೆಪಿ ಬೆಂಬಲಿಗರಿಂದ ಆಗಲೇ ಇಲ್ಲ. ಕುಡಿಯುವ ನೀರಿನ ನಳಗಳಿಗೆ ಮೀಟರ್ ಅಳವಡಿಸುವ ಗೊಂದಲ, ಘನತ್ಯಾಜ್ಯ ಸಂಗ್ರಹ ಶುಲ್ಕಹೆಚ್ಚಳ, ಹೊಸರಸ್ತೆಯಾದ ಮೂರು ತಿಂಗಳಿಗೇ ಕಿತ್ತು ಹೋದಗರಣ, ಅರೆಬರೆಯಾದ ದೇವಿಕೆರೆ ಕಾಮಗಾರಿ…… ಒಂದೇ ಎರಡೇ?! ಬರೀ ಅವ್ಯವಹಾರ, ಅವಾಂತರ, ಕಳಪೆ ಕಾಮಗಾರಿ ಆದಂತೆಲ್ಲಾ ನಗರ ಪಿತೃಗಳ ಆತ್ಮಕ್ಕೆ ಸದ್ಗತಿ ಸಿಕ್ಕಿದೆ!!
ನಗರಸಭೆ ಒಟ್ಟುಗೂಡಿಸುವ ತೆರಿಗೆ, ಎಸ್‍ಎಫ್‍ಸಿ ವಿಶೇಷ ಅನುದಾನ , 14ನೇ ಹಣಕಾಸು ಆಯೋಗದ ಅನುದಾನ, ಮಾರಿಕಾಂಬಾ ಜಾತ್ರಾ ವಿಶೇಷ ಅನುದಾನ, ನಗರೋತ್ಥಾನ ಯೋಜನೆ ಫಂಡ್…… ನಾನಾ ನಮೂನೆಯ ಅನುದಾನ ಶಿರಸಿ ನಗರಸಭೆಗೆ ಬಂದಿದೆ. ಆದರೆ ಸದ್ಬಳಕೆ ಮಾತ್ರÀ್ರ ಆಗಿಲ್ಲ. ಜನರು ಗೋಳು ತಪ್ಪಿಲ್ಲ. ಭೂರಹಿತರಿಗೆ ಮನೆ ಮಂಜೂರಿ ಮಾಡುವ ಯೋಜನೆಯಲ್ಲೂ ಕಣ್ಕಟ್ಟು ನಡೆದಿದೆ. ಶಾಸಕ ಕಾಗೇರಿ ಮತ್ತು ನ.ಪ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕುಳಿತು ಲಾಟರಿ ಹಾಕಿ ಫಲಾನುಭವಿಗಳ ಆಯ್ಕೆ ಮಾಡಿದ್ದಾರಂತೆ. ಆದರೆ ಭೂರಹಿತರಿಗೆ ಸಿಗÀಬೇಕಾದ ಈ ಯೋಜನೆ ಉಳ್ಳವರಿಗೆ ಸಿಕ್ಕಿದ್ದಾದರೂ ಹೇಗೆ! ಶಾಸಕ-ಅಧ್ಯಕ್ಷರ ಲಾಟರಿ ಮಹಿಮೆ ಅಸಹಾಯಕ ಬಡವರಿಗೆ ಇನ್ನೂ ಅರ್ಥವೇ ಆಗುತ್ತಿಲ್ಲ.
ಇಂಥ ಕೆಟ್ಟ ಘಳಿಗೆಯಲ್ಲಿ ಧರ್ಮಕಾರಣ, ಜಾತಿಯತೆ, ಹಣದ ವ್ಯಾಮೋಹಕ್ಕೆ ಮತದಾರ ಬಿದ್ದರೆ ಮತ್ತದೇ ದುರ್ದಿನಗಳು, ಕರಾಳ ಆಡಳಿತ ಖಂಡಿತ.

– ನಹುಷ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...