ಗಿರೀಶ್ ತಾಳಿಕಟ್ಟೆ |
ಕರ್ನಾಟಕದ ಮಹಾಸಮರ ಈಗಷ್ಟೇ ಮುಗಿದು ಪೊಲಿಟಿಕಲ್ ನಾಟಕಗಳು ಒಂದೊಂದಾಗಿ ಪರದೆ ಎತ್ತಿಕೊಳ್ಳುತ್ತಿವೆ. ಜನರೆಲ್ಲ ಒಂದು ಕಣ್ಣು ಕುಮಾರಣ್ಣನತ್ತ, ಮತ್ತೊಂದು ಕಣ್ಣನ್ನು ಯಡ್ಯೂರಪ್ಪನತ್ತ ಹಿಗ್ಗಲಿಸಿ ಕೂತಿರುವ ಹೊತ್ತಲ್ಲೇ ಇತ್ತ ಜಯನಗರದಿಂದ ತಾಜಾತಾಜಾ ತಾರಕ್ಕನ ಸುದ್ದಿಯೊಂದು ಹೊರಬಿದ್ದಿದೆ. ಎಲೆಕ್ಷನ್ ಇನ್ನೇನು ಕೆಲ ದಿನ ಇದೆ ಅನ್ನೋವಾಗ ಜಯನಗರ ಕ್ಷೇತ್ರದ ಬಿಜೆಪಿ ಕ್ಯಾಂಡಿಡೇಟಾಗಿದ್ದ ವಿಜಯಕುಮಾರ್ ಎದೆ ಹಿಡಿದುಕೊಂಡು ನೆಲಕ್ಕೆ ಬಿದ್ದವರು ಮತ್ತೆ ಮೇಲಕ್ಕೆ ಏಳಲೇ ಇಲ್ಲ. ಬಿಜೆಪಿಯೊಳಗಿರುವ ಕೆಲವೇ ಕೆಲವು ಮಂದಿ ಸೀದಾಸಾದಾ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ವಿಜಯ್ಕುಮಾರ್ರ ಹಠಾತ್ ಅಗಲಿಕೆಯಿಂದಾಗಿ ಜಯನಗರದ ಎಲೆಕ್ಷನ್ನೇ ಮುಂದಕ್ಕೋಯ್ತು. ಮುಂದೆ ನಡೆಯಲಿರುವ ಈ ಕ್ಷೇತ್ರದ ಚುನಾವಣೆಗೆ ವಿಜಯ್ಕುಮಾರ್ ಜಾಗದಲ್ಲಿ ನಟಿ ತಾರಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ ಅನ್ನೋ ವರ್ತಮಾನ ಬರುತ್ತಿದೆ. ಸುಮಾರು ವರ್ಷದಿಂದ ಜಯನಗರ ವ್ಯಾಪ್ತಿಯಲ್ಲೇ ನೆಲೆಸಿರುವ ತಾರಮ್ಮನಿಗೆ ವಿಜಯ್ಕುಮಾರ್ ಪರವಾಗಿ ಇಲ್ಲಿ ಕ್ಯಾನ್ವಾಸ್ ಮಾಡಿದ `ಪೊಲಿಟಿಕಲ್’ ಅನುಭವವೂ ಇದೆ. ಕಾಂಗ್ರೆಸ್ನಿಂದ ಮಾಜಿ ಮಂತ್ರಿ ಕಂ ಪಕ್ಕದ ಬಿಟಿಎಂ ಶಾಸಕ ರಾಮಲಿಂಗಾರೆಡ್ಡಿ ಮಗಳು ಸೌಮ್ಯರೆಡ್ಡಿ ಅಭ್ಯರ್ಥಿಯಾಗಿ ಫಿಕ್ಸ್ ಆಗಿರೋದ್ರಿಂದ ಮಹಿಳೆ ಎದುರು ಮಹಿಳೆಯನ್ನೇ ಕಾದಾಟಕ್ಕಿಳಿಸೋದು ಬಿಜೆಪಿಯ ಲೆಕ್ಕಾಚಾರ.
ಈ ಸುದ್ದಿ ಕೇಳಿ ತಾರಕ್ಕ ಹಿರಿಹಿರಿ ಹಿಗ್ಗಬೇಕೆನ್ನುವಷ್ಟರಲ್ಲಿ ಅದೇ `ಲೋಟಸ್ ಮಹಲ್’ನಿಂದ ಹೊರಬಿದ್ದ ಮತ್ತೊಂದು ಸುದ್ದಿ ತಾರಕ್ಕನಿಗೆ ಕಸಿವಿಸಿ ಮಾಡುತ್ತಿದೆಯಂತೆ. ಏನೆಂದ್ರೆ, ಕೇಂದ್ರ ಗೊಬ್ಬರದ ಮಂತ್ರಿ ಅನಂತ್ ಕುಮಾರ್ ಮಡದಿ ತೇಜಸ್ವಿನಿಯವರನ್ನು ಅಭ್ಯರ್ಥಿಯಾಗಿಸಿದರೆ ಹೇಗೆ ಅನ್ನೊ ಸಾಧ್ಯತೆಯನ್ನೂ ಬಿಜೆಪಿ ಅಳೆದು ತೂಗುತ್ತಿದೆಯಂತೆ. ಬ್ರಾಹ್ಮಣ ಮತಗಳು ಸ್ಟ್ರಾಂಗಾಗಿರುವ ಇಲ್ಲಿ ತೇಜಸ್ವಿನಿ ಮೇಡಮ್ಮು ಅದಮ್ಯ ಚೇತನ ಎಂಬ ಎನ್ಜಿಒ ಕಟ್ಟಿ ಓಡಾಡಿಕೊಂಡಿರುವುದರಿಂದ ಒಂದಷ್ಟು ಜನಪರಿಚಯವೂ ಅವರಿಗಿದೆ. ಸಾಲದ್ದಕ್ಕೆ ಅವರ ಪತಿಯೇ ಈ ಭಾಗದ ಸಂಸದ. ಜಾತಿ ಕೆಮಿಸ್ಟ್ರಿ ಪ್ಲಸ್ ಫ್ಯಾಮಿಲಿ ಕೆಮಿಸ್ಟ್ರಿ ಎರಡೂ ಮ್ಯಾಚ್ ಆಗೋದ್ರಿಂದ ಅವರನ್ನೇ ಕಣಕ್ಕಿಳಿಸಬೇಕೆಂಬ ಬಿಜೆಪಿಗರ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಂತೆ. ಹಾಗೇನಾದರು ಆದಲ್ಲಿ ತಾರಕ್ಕನ ಖುಷಿ ಠುಸ್ ಆಗಬಹುದು. ಫ್ಯಾಮಿಲಿ ಪೊಲಿಟಿಕ್ಸ್ ನೆಪವಿಟ್ಟುಕೊಂಡು ಮೈಸೂರಿನಲ್ಲಿ ಯಡ್ಯೂರಪ್ಪನ ಮಗ ವಿಜಯೇಂದ್ರನಿಗೆ ಟಿಕೇಟ್ ತಪ್ಪಿಸಿದ್ದ ಸೇಡು ಏನಾದ್ರು ಮುನ್ನೆಲೆಗೆ ಬಂದು, ಒಂದು ಕುಟುಂಬದ ಇಬ್ಬರಿಗೆ ಟಿಕೆಟ್ ಯಾಕೆ? ಅನ್ನೊ ಕಾಲೆಳೆದಾಟವೇನಾದ್ರು ಶುರುವಾದ್ರೆ ತಾರಕ್ಕನೇ ಅಭ್ಯರ್ಥಿಯಾದ್ರು ಅಚ್ಚರಿಯಿಲ್ಲ!