Homeರಾಜಕೀಯತೂತ್ತುಕುಡಿಯ ನರಮೇಧದ ಪಾಠಗಳು

ತೂತ್ತುಕುಡಿಯ ನರಮೇಧದ ಪಾಠಗಳು

- Advertisement -
- Advertisement -

ಪ್ರೊ. ನಗರಗೆರೆ ರಮೇಶ್ |

2007ರಲ್ಲಿ ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ ನರಮೇಧದ ನಂತರ ಈಗ ತಮಿಳುನಾಡಿನಲ್ಲಿ ಅದಕ್ಕಿಂತಲೂ ಭೀಕರವಾದ ತೂತ್ತುಕುಡಿ ನರಮೇಧ ನಡೆದಿದೆ. ಆದರೆ ಮೇ 22 ಮತ್ತು 23 ರಂದು ತೂತ್ತುಕುಡಿ ಎಂಬ ಜಿಲ್ಲಾ ಕೇಂದ್ರದಲ್ಲಿ ನಡೆದ ಪೊಲೀಸ್ ಫೈರಿಂಗ್‍ನಲ್ಲಿ 13 ಜನರ ಪ್ರಾಣಕಳೆದುಕೊಂಡಿದ್ದು, 100ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿ ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ.

ಈ ದುರ್ಘಟನೆಗೆ ಮುನ್ನ ನೂರು ದಿನಗಳ ಕಾಲ ಜನರು ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಹೀಗಿದ್ದರೂ ತಮ್ಮತ್ತ ಕಣ್ಣನ್ನು ಹಾಯಿಸದ ಸರ್ಕಾರವನ್ನು ಬಡಿದೆಬ್ಬಿಸಲು ಮೇ 22ರಂದು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟಿದ್ದರು, ಅಷ್ಟೆ. ಘೇರಾವ್, ಮುತ್ತಿಗೆ ಇತ್ಯಾದಿ ಯಾವುದೇ ಯೋಜನೆಗಳಿರಲಿಲ್ಲ. ತಮ್ಮ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ, ಬೃಹತ್ ಜನಬೆಂಬಲ ಪ್ರದರ್ಶನ ಮಾಡುವುದಷ್ಟೇ ಹೋರಾಟಗಾರರ ಉದ್ದೇಶವಾಗಿತ್ತು. ಹೀಗಿದ್ದಾಗ ಮಾರ್ಗಮಧ್ಯದಲ್ಲೇ ಏಕಾಏಕಿ ನಿರಾಯುಧ ಜನರ ಮೇಲೆ ಮುಗಿಬಿದ್ದ ಪೋಲಿಸ್ ಬಲಗಳು ಜಲಿಯನ್‍ವಾಲಾಬಾಗ್ ಹತ್ಯಾಕಾಂಡದ ಮಾದರಿ ಕಾರ್ಯಾಚರಣೆ ನಡೆಸಿದ್ದಾರೆ.

ತೂತ್ತುಕುಡಿಯ ಜನರ ಅಪರಾಧವಾದರೂ ಏನು?

ಕಡಲ ಕಿನಾರೆಯಲ್ಲಿರುವ ತೂತ್ತುಕುಡಿಯಲ್ಲಿ ‘ಸ್ಟೆರ್‍ಲೈಟ್ ಕಾಪರ್’ ಎಂಬ ತಾಮ್ರ ತಯಾರಿಕಾ ಕಂಪನಿಯಿದೆ. ಇದು ‘ವೇದಾಂತ’ ಎಂಬ ಹೆಸರಿನ ಹಾಲಿ ಲಂಡನ್‍ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಕಂಪನಿಯ ಅಂಗಸಂಸ್ಥೆ. 1994ರಲ್ಲಿ ಇಲ್ಲಿ ಸ್ಥಾಪನೆಗೊಂಡ ಈ ಕಾರ್ಖಾನೆ ಬಹುಬೇಗನೆ ಸುತ್ತಲಿನ ವಾತವರಣವನ್ನು ಕಲುಷಿತಗೊಳಿಸಿತು. ಅಂತರ್ಜಲ ಮಲಿನಗೊಂಡು, ಕುಡಿಯುವ ಗಾಳಿ ಧೂಳು, ಹೊಗೆಮಯವಾಗಿ ವಿಚಿತ್ರ ಕಾಯಿಲೆಗಳು ವ್ಯಾಪಕವಾಗಿವೆ. ಹತ್ತಾರು ಬಾರಿ ಅಪಾಯಕಾರಿ ಗ್ಯಾಸ್ ಲೀಕ್ ಆಗಿ ಜನರು ಸಾವುನೋವು ಉಂಡಿದ್ದಾರೆ. ಸ್ಟೆರ್‍ಲೈಟ್ ವಿರುದ್ಧ ಪ್ರತಿಭಟನೆಗಳೂ ನಿರಂತರ ನಡೆಯುತ್ತಲೇ ಇವೆ.

ಇಂಥಾ ಚರಿತ್ರೆಯಿರುವ ಸ್ಟೆರ್‍ಲೈಟ್ ಕಂಪನಿಯ ತಾಮ್ರ ಉತ್ಪಾದನಾ ಸಾಮಥ್ರ್ಯ ವಾರ್ಷಿಕ 4 ಲಕ್ಷ ಟನ್‍ಗಳು! ಇದು ತಾಮ್ರ ತಯಾರಿಕೆಯಲ್ಲಿ ಜಗತ್ತಿನ ಕೆಲವೇ ಬೃಹತ್ ಕೈಗಾರಿಕೆಗಳಲ್ಲಿ ಒಂದು. ಸ್ಟೆರ್‍ಲೈಟ್ ಕಂಪನಿಯ ತೂತ್ತುಕುಡಿ ಘಟಕದ ಸಾಮಥ್ರ್ಯವನ್ನು ವಾರ್ಷಿಕ 8 ಲಕ್ಷ ಟನ್‍ಗಳಿಗೆ ವಿಸ್ತರಿಸುವ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ಕೊಟ್ಟಿವೆ. ಹೊಸ ಘಟಕದ ನಿರ್ಮಾಣ ಕಾರ್ಯವೂ ಬಿರುಸಿನಿಂದ ನಡೆದಿತ್ತು. ಆಗಲೇ ಹೈರಾಣಾಗಿರುವ ಜನರನ್ನು ಈ ಕ್ರಮ ಮತ್ತಷ್ಟು ಕೆರಳಿಸಿತ್ತು.

ತಮ್ಮ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಈ ಕಂಪನಿಯನ್ನು ಶಾಶ್ವತವಾಗಿ ಮುಚ್ಚಬೇಕೆಂಬುದು ಈಗ ತೂತ್ತುಕುಡಿಯ ಜನರ ಒಕ್ಕೊರಲಿನ ಆಗ್ರಹವಾಗಿದೆ. ಕಳೆದ ನೂರು ದಿನಗಳಿಂದ ಧರಣಿ, ಸತ್ಯಾಗ್ರಹ ನಡೆಸಿದ್ದು ಕೂಡ ಈ ಒಂದು ಬೇಡಿಕೆಗಾಗಿಯೇ. ಜಿಲ್ಲಾಧಿಕಾರಿ ಕಚೇರಿಗೆ ಹೊರಟಿದ್ದ ಮೆರವಣಿಗೆಯನ್ನು ಅಡ್ಡಗಟ್ಟಿದ ಪೊಲೀಸ್‍ಪಡೆಗಳು ಜನರಲ್ ಡಯರ್‍ನ ಮಾದರಿಯಲ್ಲಿ ಫೈರಿಂಗ್ ನಡೆಸಿವೆ. ಎಲ್ಲಕ್ಕಿಂತಲೂ ಆಘಾತಕಾರಿಯಾದ ಅಂಶವೆಂದರೆ, ಹೀಗೆ ಗೋಲಿಬಾರ್ ನಡೆಸಬೇಕಾದ ಸ್ಥಿತಿಯೂ ಅಲ್ಲಿರಲಿಲ್ಲ; ಗೋಲಿಬಾರ್‍ಗೆ ಮುನ್ನ ಕೈಗೊಳ್ಳಲೇಬೇಕಾದ ಯಾವ ಕ್ರಮವನ್ನೂ ಪೊಲೀಸರು ಅನುಸರಿಸಲಿಲ್ಲ. ಜನರ ಗುಂಪು ನಿಯಂತ್ರಣಕ್ಕೆ ಬಾರದೇ ಇದ್ದಾಗ ಜನರನ್ನು ಚದುರಿಸಲು ಟಿಯರ್ ಗ್ಯಾಸ್ ಬಳಸಬೇಕು, ನಂತರ ರಬ್ಬರ್ ಗುಂಡುಗಳನ್ನು ಬಳಸಬೇಕು, ಫೈರಿಂಗ್ ಮಾಡುವ ಮುಂಚೆ ಧ್ವನಿವರ್ದಕ ಬಳಸಿ ಅನೌನ್ಸ್ ಮಾಡಬೇಕು, ಗಾಳಿಯಲ್ಲಿ ಗುಂಡು ಹಾರಿಸಬೇಕು. ಇವೆಲ್ಲ ಕ್ರಮಗಳೂ ಫಲ ನೀಡದಿದ್ದಾಗ ಅಂತಿಮವಾಗಿ ಸೊಂಟದ ಕೆಳಗಿನ ಭಾಗಕ್ಕೆ ಗುಂಡು ಹಾರಿಸಬಹುದು, ಅದೂ ಸಂಬಂಧಪಟ್ಟ ವರಿಷ್ಠಾಧಿಕಾರಿಯ ಆದೇಶ ಬಂದ ನಂತರ.

ಆದರೆ ಸ್ಟೆರ್‍ಲೈಟ್ ಕಂಪನಿಯ ಕೃಪಾಕಟಾಕ್ಷದಲ್ಲಿದ್ದ ತಮಿಳುನಾಡಿನ ಪೊಲೀಸ್ ಮತ್ತು ಆಡಳಿತ ಯಂತ್ರಾಂಗಕ್ಕೆ ಈ ಯಾವ ಕಾನೂನು ಕ್ರಮಗಳನ್ನು ಅನುಸರಿಸುವುದೂ ಬೇಕಿರಲಿಲ್ಲ. ಅವರಿಗೆ ಬೇಕಾಗಿದ್ದುದೆಲ್ಲಾ ಒಂದೆ. ತಮ್ಮ ‘ನೆಚ್ಚಿನ’ ಕಂಪನಿಯ ವಿರುದ್ಧದ ದನಿಗಳನ್ನು ಅಡಗಿಸುವುದಷ್ಟೇ ಅವರ ಅಜೆಂಡಾ ಆಗಿತ್ತು. ಆದ್ದರಿಂದಲೇ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ಬಳಸಲಾಗುವ ಸ್ನೈಪರ್ ರೈಫಲ್ಲುಗಳನ್ನು ಬಳಸಲಾಯ್ತು. ಶಾರ್ಪ್ ಶೂಟರ್‍ಗಳನ್ನು ಕರೆಸಲಾಯ್ತು. ಪೊಲೀಸ್ ಸಮವಸ್ತ್ರವಿಲ್ಲದೆ ಸಾಮಾನ್ಯ ದಿರಿಸಿನಲ್ಲಿದ್ದ ಶೂಟರ್‍ಗಳು ಪೋಲೀಸ್ ವಾಹನದ ಮೇಲೇರಿ ತಮ್ಮ ಟಾರ್ಗೆಟ್‍ಗಳಿಗೆ ಗುರಿಮಾಡಿ ಗುಂಡು ಹಾರಿಸುತ್ತಿದ್ದ ವಿಡಿಯೋಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿವೆ. ಅಲ್ಲದೆ, ‘ಕನಿಷ್ಟ ಒಂದು ಹೆಣವಾದರೂ ಬೀಳಬೇಕು’ ಎಂಬ ಪೊಲೀಸರ ನಡುವಿನ ಸಂಭಾಷಣೆ ಈಗ ವೈರಲ್ ಆಗಿದೆ.

ಪರಿಣಾಮವಾಗಿ, 11 ವರ್ಷದ ಬಾಲಕಿ, 17 ವರ್ಷದ ಒಬ್ಬ ಹುಡುಗ, ಹಲವು ಮಹಿಳೆಯರೂ ಒಳಗೊಂಡು ಒಟ್ಟು 13 ಮಂದಿ ಹತರಾಗಿದ್ದಾರೆ. ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾದ ಪೊಲೀಸ್ ಫೈರಿಂಗ್ ಆದೇಶ ಕೊಟ್ಟವರು ಯಾರು ಎಂಬುದೇ ನಿಗೂಡ! ಕೊನೆಗೆ ಹೇಗೋ ಮಾಡಿ ಒಬ್ಬ ತಹಸೀಲ್ದಾರ್‍ನ ತಲೆಗೆ ಈ ಜವಾಬ್ದಾರಿ ಕಟ್ಟಿ, ಆತನನ್ನು ಸಸ್ಪೆಂಡ್ ಮಾಡುವ ನಾಟಕ ನಡೆಸಿ ಕಣ್ಣೊರೆಸುವ ಪ್ರಯತ್ನ ನಡೆಸಿದೆ. ‘ದುಷ್ಕರ್ಮಿಗಳು’ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಿದರು, ಆತ್ಮರಕ್ಷಣೆಯ ಸಲುವಾಗಿ ಪೊಲೀಸರು ‘ಅನಿವಾರ್ಯವಾಗಿ’ ಗುಂಡು ಹಾರಿಸಬೇಕಾಯ್ತು ಎಂಬ ಮಾಮೂಲಿ ಸ್ಟೋರಿಯನ್ನು ಸರ್ಕಾರ ಮತ್ತು ಪೊಲೀಸರು ಹೇಳುತ್ತಿದ್ದಾರೆ. ಆದರೆ ಅದನ್ನು ತಮಿಳುನಾಡಿನ ಜನ ಮಾತ್ರವಲ್ಲ; ಸಂವೇದನೆಯುಳ್ಳ ಯಾವೊಬ್ಬ ಮನುಷ್ಯರೂ ನಂಬಲು ತಯಾರಿಲ್ಲ. ಯಾಕೆಂದರೆ ಸತ್ಯ ಎಲ್ಲರ ಕಣ್ಣೆದುರಿಗಿದೆ. ಪೊಲೀಸರ ಈ ಹೇಳಿಕೆಯ ಬಗ್ಗೆ ‘ಆತ್ಮ ರಕ್ಷಣೆಗಾಗಿ ಗುಂಡು ಹಾರಿಸುವವರು ಸ್ನೈಪರ್ ರೈಫಲ್‍ಗಳನ್ನು ಬಳಸಿ, ವಾಹನದ ಮೇಲೇರಿ ಗುಂಡು ಹಾರಿಸುತ್ತಾರಾ?’ ಎಂಬ ನಟ ಕಮಲ್ ಹಾಸನ್ ಪ್ರಶ್ನೆಗೆ ಸದ್ಯ ಯಾರಬಳಿಯೂ ಉತ್ತರವಿಲ್ಲ. ಒಂದಂತೂ ಸ್ಪಷ್ಟ. ಫೈರಿಂಗ್ ಮಾಡಿ ಹೋರಾಟಗಾರರ ಹೆಣಗಳನ್ನು ಕೆಡವಬೇಕೆಂಬ ಒಂದು ಪೂರ್ವನಿಗದಿತ ಯೋಜನೆಯ ಭಾಗವಾಗಿಯೇ ಇಷ್ಟೆಲ್ಲಾ ನಡೆದಿದೆ. ಇದು ಬಹುತೇಕ ವಿಶ್ಲೇಷಕರ ಅಭಿಪ್ರಾಯ ಕೂಡ.

ಈ ಹತ್ಯಾಕಾಂಡದ ದಾರುಣ ಸುದ್ದಿ ತಿಳಿದು ತಮಿಳುನಾಡಿನ ಜನತೆ ಬೀದಿಗಿಳಿದರು. ಸಂಘಟನೆಗಳು, ವಿರೋಧ ಪಕ್ಷಗಳೂ ಹೋರಾಟಕ್ಕಿಳಿದಿದ್ದಾರೆ. ಈ ಪ್ರತಿಭಟನೆಯ ದನಿ ದೇಶಾದ್ಯಂತ ಮಾರ್ದನಿಸಿದೆ. ವೇದಾಂತ ಕಂಪನಿಯ ಮಾಲಿಕ ಅನಿಲ್ ಅಗರ್‍ವಾಲ್‍ನ ಲಂಡನ್ ನಿವಾಸದೆದುರು ಸಾವಿರಾರು ಮಂದಿ ಒಗ್ಗೂಡಿ ಪ್ರತಿಭಟಿಸಿದ್ದಾರೆ. ಲಂಡನ್‍ನ ಹೈಕಮಿಷನರ್ ಕಚೇರಿಯ ಮುಂದೆಯೂ ಪ್ರತಿಭಟನೆ ನಡೆದಿದೆ.

ಹೀಗೆ ತಮ್ಮ ಬಂಡವಾಳ ಬಯಲಾಗುತ್ತಿದ್ದಂತೆ, ಅಲ್ಲಿನ ಜಿಲ್ಲಾಧಿಕಾರಿ ಮತ್ತು ಎಸ್‍ಪಿಯನ್ನು ವರ್ಗಾವಣೆ ಮಾಡುವ ನಾಟಕ ನಡೆಸಿದ್ದಾರೆ. ಜೊತೆಗೆ ‘ಕ್ರಿಶ್ಚಿಯನ್ ಮೆಷಿನರಿಗಳ ಕುತಂತ್ರ’, ‘ಫಾರಿನ್ ಫಂಡೆಡ್ ಸಂಘಟನೆಗಳು, ಸಮಾಜ ಘಾತುಕ ಶಕ್ತಿಗಳು ಇದರಲ್ಲಿ ನುಸುಳಿವೆ’ ಎಂಬಂಥಾ ಮಾಮೂಲಿ ಹಳಸಲು ವಾದಗಳನ್ನು ತೂರಿಬಿಡುವ ಹತಾಶ ಪ್ರಯತ್ನಕ್ಕೆ ಈಗ ಸರ್ಕಾರ ಇಳಿದಿದೆ. ಏನೇ ಆದರೂ ಸರಿ, ಸ್ಟೆರ್‍ಲೈಟ್ ಕಂಪನಿಯ ಮಾಲಿಕರಿಗೆ ಮಾತ್ರ ಯಾವುದೇ ಚ್ಯುತಿ ಬರಬಾರದಷ್ಟೇ. ಇದು ಕೇಂದ್ರ ಹಾಗೂ ರಾಜ್ಯದ ಆಡಳಿತಾರೂಡ ಸರ್ಕಾರಗಳ ಆದ್ಯತೆ.

ಸ್ಟೆರ್‍ಲೈಟ್ ಅನಿವಾರ್ಯತೆ ಯಾರಿಗಿದೆ?

ತಮಿಳುನಾಡಿನ ಜನರಿಗಾಗಲಿ, ಭಾರತದ ಜನರಿಗಾಗಲಿ ಈ ಸ್ಟೆರ್‍ಲೈಟ್‍ನ ಅನಿವಾರ್ಯತೆ ಖಂಡಿತಾ ಇಲ್ಲ. ಆದರೆ ಸರ್ಕಾರಗಳು ಹಾಗೂ ಅವರ ಆಸ್ಥಾನ ಪಂಡಿತರು ಇಂಥಾ ಕಂಪನಿಗಳು ಬಂಡವಾಳ ತೊಡಗಿಸುವುದರಿಂದಲೇ ದೇಶದ ಅಭಿವೃದ್ಧಿ ಎಂಬ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಹರಡಿಬಿಟ್ಟಿದ್ದಾರೆ. ಆದರೆ ಈ ಕಂಪನಿಯ ವಾಸ್ತವ ಇನ್ನಷ್ಟು ವಿಚಿತ್ರವಾಗಿದೆ. ಸ್ಟೆರ್‍ಲೈಟ್ ಕಂಪನಿಯ ಮಾಲಿಕತ್ವ ವೇದಾಂತ ರಿಸೋರ್ಸಸ್ ಎಂಬ ಕಂಪನಿಯ ಕೈಯಲ್ಲಿದೆ. ಈ ವೇದಾಂತ ಕಂಪನಿ ನಮ್ಮಲ್ಲಿ ಬಂಡವಾಳ ಹೂಡಿ, ಉದ್ಧಾರ ಮಾಡೋದು ಹಾಗಿರಲಿ, ನಮ್ಮದೇ ಬ್ಯಾಂಕುಗಳ ಲಕ್ಷಾಂತರ ಕೋಟಿ ಬಂಡವಾಳವನ್ನು ನುಂಗಿ ನೀರು ಕುಡಿದಿದೆ. 2015ರ ಅಂಕಿ ಅಂಶಗಳ ಪ್ರಕಾರ ವೇದಾಂತ ಕಂಪನಿ ನಮ್ಮ ರಾಷ್ಟ್ರೀಯ ಬ್ಯಾಂಕುಗಳಿಂದ 1.03 ಲಕ್ಷ ಕೋಟಿ ಸಾಲ ಪಡೆದು ಸುಸ್ತಿದಾರ ಪಟ್ಟಿಯಲ್ಲಿದೆ.

ಈ ವೇದಾಂತ ಕಂಪನಿಯ ಮಾಲಿಕ ಅನಿಲ್ ಅಗರ್‍ವಾಲ್ ಎಂಬ ಮಾರ್ವಾಡಿಯ ಕತೆ ಕೇಳಿದರೆ ಬಹುಶಃ ಯಾರೂ ನಂಬಲಿಕ್ಕಿಲ್ಲ. ಪಾಟ್ನಾ ಮೂಲದ ಈತ ಮೂಲತಃ ಒಬ್ಬ ಸಣ್ಣ ಗುಜರಿ ವ್ಯಾಪಾರಿ. 80ರ ದಶಕದಲ್ಲಿ ತನ್ನ ವ್ಯಾಪಾರದ ವಿಸ್ತರಣೆಗಾಗಿ ಈತ 25 ಲಕ್ಷ ರೂಪಾಯಿಗಳ ಸಾಲದ ಪಡೆಯಲು ಪಟ್ಟಪಾಡು ಅಷ್ಟಿಷ್ಟಲ್ಲ. ವಿವಿಧ ಬ್ಯಾಂಕುಗಳ ಮುಂದೆ ವರ್ಷಾನುಗಟ್ಟಲೆ ಅಲೆದರೂ ಇವನಿಗೆ 25 ಲಕ್ಷ ಸಾಲ ಕೊಡಲು ಯಾರೂ ಮುಂದಾಗಲಿಲ್ಲ. ಕೊನೆಗೆ ಈತನಿಗೆ ಆ ಸಾಲ ಸಿಕ್ಕಿದ್ದು ಕರ್ನಾಟಕದ ಮಣಿಪಾಲ ಮೂಲದ ಸಿಂಡಿಕೇಟ್ ಬ್ಯಾಂಕ್‍ನಿಂದ. ತನ್ನ ಮೇಲೆ ನಂಬಿಕೆಯಿಟ್ಟು 25 ಲಕ್ಷ ಸಾಲ ಕೊಟ್ಟ ಬ್ಯಾಂಕ್ ಮ್ಯಾನೇಜರ್‍ನನ್ನು ಹೊಗಳಿ ಈತ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾನೆ. ಆ 25 ಲಕ್ಷ ಮೊತ್ತವೇ ತನ್ನ ಜೀವನದ ಟರ್ನಿಂಗ್ ಪಾಯಿಂಟ್ ಎಂದು ಹೇಳಿಕೊಂಡಿದ್ದಾನೆ.

ನಂತರ ಈತ ಮಾಡಿದ್ದೇನು? ವಿವಿಧ ರಾಜ್ಯಗಳ ಹಾಗೂ ಕೇಂದ್ರದ ಸರ್ಕಾರಿ ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಬುಟ್ಟಿಗೆ ಹಾಕಿಕೊಂಡು ಸರ್ಕಾರಿ ಸ್ವಾಮ್ಯದ ಸ್ವತ್ತುಗಳನ್ನು ದುಗ್ಗಾಣಿ ಬೆಲೆಗೆ ವಶಪಡಿಸಿಕೊಂಡು ಕೋಟಿ ಕೋಟಿ ಬಾಚುತ್ತಾ ನಡೆದ. ನಂತರ ಮೈನಿಂಗ್ ಧಂದೆಗೆ ಇಳಿದು ಬಳ್ಳಾರಿ ಗಣಿಧಣಿಗಳಂತೆ ಸಾವಿರಾರು ಕೋಟಿಗಳನ್ನು ಲೂಟಿಹೊಡೆದ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಯೋಜನೆ ಅತ್ಯಂತ ದೊಡ್ಡ ಫಲಾನುಭವಿಗಳಲ್ಲಿ ಈತನೂ ಅಗ್ರಗಣ್ಯ. ಭಾರೀ ಲಾಭದಲ್ಲಿದ್ದ ಸರ್ಕಾರಿ ಸ್ವಾಮ್ಯದ ಅಲ್ಯುಮಿನಿಯಂ, ಬಾಕ್ಸೈಟ್ ಉದ್ಯಮಗಳನ್ನು ಅಂದಿನ ಎನ್‍ಡಿಎ ಸರ್ಕಾರ ಈತನ ಬಾಯಿಗೆ ಹಾಕಿತು. ಜೊತೆಗೆ ಹೊಂದಿಕೊಂಡಿದ್ದ ಅದಿರು ಗಣಿಗಳನ್ನೂ ನೀಡಿತು. ಅಂದಿನ ರಾಜಕಾರಣಿಗಳೂ, ಅಧಿಕಾರಿಗಳೂ ಕೂಡ ಒಂದುರೀತಿಯಲ್ಲಿ ಈತನ ಪಾಲುದಾರರಾಗಿದ್ದರು. ಹೀಗೆ ರಾಜಕಾರಣಿ-ಅಧಿಕಾರಿಗಳ ಪಾಲುದಾರಿಕೆಯೊಂದಿಗೆ, ನಮ್ಮದೇ ಬ್ಯಾಂಕುಗಳ ಬಂಡವಾಳವನ್ನು ಬಳಸಿಕೊಂಡು ಒಂದಾದ ನಂತರ ಒಂದರಂತೆ ವಿವಿಧ ಕ್ಷೇತ್ರಗಳಿಗೆ ಈತ ಎಂಟ್ರಿ ಕೊಟ್ಟಿದ್ದಾನೆ. ತೈಲ ಸಂಸ್ಕರಣೆ, ಗಣಿಗಾರಿಕೆ, ಉಕ್ಕು, ತಾಮ್ರ, ಅಲ್ಯುಮಿನಿಯಂ ಮುಂತಾದ ಲೋಹಗಳ ತಯಾರಿಕೆ ಮುಂತಾದ ನಾನಾ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದ್ದಾನೆ.

ಹೀಗಿದ್ದಾಗ ವೇದಾಂತ ಹೆಸರಿನಲ್ಲಿ ಬಾಂಬೆ ಷೇರು ಮಾರುಕಟ್ಟೆಯಲ್ಲಿದ್ದ ಕಂಪನಿ ನೋಂದಣಿಯನ್ನು ರದ್ದುಪಡಿಸಿಕೊಂಡು, ವೇದಾಂತ ಪಿಎಲ್‍ಸಿ ಹೆಸರಿನಲ್ಲಿ ಲಂಡನ್ ಸ್ಟಾಕ್ ಎಕ್ಸ್‍ಚೇಂಜ್‍ನಲ್ಲಿ 2004ರಲ್ಲಿ ನೋಂದಣಿ ಮಾಡಿಸಿದ್ದಾನೆ. ಅಲ್ಲಿಂದಾಚೆಗೆ ಈ ಮಹಾನುಭಾವನ ಕಂಪನಿ ಫಾರಿನ್ ಕಂಪನಿ ಎಂಬ ಹಣೆಪಟ್ಟಿ ತಗುಲಿಸಿಕೊಂಡು ವ್ಯವಹರಿಸಲು ಶುರುಮಾಡಿದೆ. ವಿದೇಶಿ ಹೂಡಿಕೆಯನ್ನು ತರುವ ನೆಪದಲ್ಲಿ ಭಾರತದ ಸಂಪನ್ಮೂಲಗಳನ್ನು ಹಾಗೂ ಮಾರುಕಟ್ಟೆಯನ್ನು ದೋಚಲು ನಮ್ಮ ಸರ್ಕಾರಗಳು ರತ್ನಗಂಬಳಿ ಹಾಸಿಕೊಟ್ಟಿವೆ. ಜಾಗತೀಕರಣದ ಒಳಮರ್ಮಗಳಲ್ಲಿ ಇಂಥಾ ಮಸಲತ್ತೂ ಕೂಡ ಪ್ರಮುಖವಾದುದು.

ಹೀಗೆ ದೈತ್ಯಾಕಾರದಲ್ಲಿ ಬೆಳೆದಿರುವ ಅನಿಲ್ ಅಗರ್‍ವಾಲ್ ಇಂದಿನ ಪ್ರಧಾನಿ ನರೇಂದ್ರಮೋದಿಯವರಿಗೆ ಪರಮಾಪ್ತ. ಕಳೆದ ತಿಂಗಳು ಪ್ರಧಾನಿಯ ಲಂಡನ್ ಭೇಟಿಯ ವೇಳೆಯಲ್ಲಿ ವೇದಾಂತ ಕಂಪನಿ ‘ಮೋದಿಯವರ ಅಬಿವೃದ್ಧಿಯ ಯೋಜನೆಗಳಲ್ಲಿ ತಾವು ಹೆಮ್ಮೆ ಪಾಲುದಾರರು’ ಎಂದು ಅಲ್ಲಿನ ಪತ್ರಿಕೆಗಳಿಗೆ ಜಾಹಿರಾತು ಕೂಡ ನೀಡಿತ್ತು. ಹೀಗೆ ಹಳ್ಳಿಯಿಂದ ದೆಲ್ಲಿಯವರೆಗೆ ಈತನ ಕಬಂಧ ಬಾಹುಗಳು ಚಾಚಿಕೊಂಡಿವೆ. ಸದ್ಯ ತಮಿಳುನಾಡು ಸರ್ಕಾರ ಸ್ಟೆರ್‍ಲೈಟ್ ಕಂಪನಿ ಮುಚ್ಚುವುದಾಗಿ ಘೋಷಿಸಿದ್ದರೂ ಅದು ಕೇವಲ ತಾತ್ಕಾಲಿಕ ನಡೆ ಮಾತ್ರ. ಈಗಿನ ಹೋರಾಟದ ಕಾವು ತಣಿಸುವ ಒಂದು ಉಪಕ್ರಮವಷ್ಟೆ. ಹೀಗೆ ಒಮ್ಮೆ ಮುಚ್ಚುವುದು, ಮತ್ತೆ ಕೆಲವು ದಿನಗಳಲ್ಲೇ ಪುನರಾರಂಭ ಮಾಡುವುದು ಇದು ಸ್ಟೆರ್‍ಲೈಟ್ ಇತಿಹಾಸದಲ್ಲಿ ಈಗಾಗಲೇ ಐದು ಬಾರಿ ಪುನರಾವರ್ತನೆಯಾಗಿದೆ.

ಅಭಿವೃದ್ದಿಯ ಹೆಸರಿನಲ್ಲಿ, ವಿದೇಶಿ ಬಂಡವಾಳದ ಮುಸುಕಿನಲ್ಲಿ ಭಾರತದ ಆರ್ಥಿಕತೆ, ರಾಜಕೀಯ, ಸಂಪನ್ಮೂಲ, ಜನಜೀವನ ಎಲ್ಲೆಡೆ ಅಮರಿಕೊಂಡಿರುವ ಈ ದುಷ್ಟಶಕ್ತಿಗಳನ್ನು ತೊಲಗಿಸದಿದ್ದರೆ ಭಾರತೀಯರಿಗೆ ನೆಮ್ಮದಿಯೆಂಬುದು ಕನಸಿನ ಮಾತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...