ನೋಟು ರದ್ದತಿ ಮಾಡಲು ಹೊರಟಾಗ ಅದರಿಂದ ಕಪ್ಪುಹಣ ಹಿಡಿಯುತ್ತೇವೆಂದು ಹೇಳಿದ್ದರು. 3 ರಿಂದ 4 ಲಕ್ಷ ಕೋಟಿ ಕಪ್ಪುಹಣ ಬ್ಯಾಂಕ್ಗಳಿಗೆ ವಾಪಸ್ ಬರಲ್ಲ, ಅದೇ ದೊಡ್ಡ ಸಾಧನೆಯೆಂದು. ಶೇ.99.99ರಷ್ಟು ಹಣ ವಾಪಸ್ ಬಂದಿತು. ಏನೂ ಪ್ರಯೋಜನವಾಗಲಿಲ್ಲ. ಬದಲಿಗೆ ಸರ್ಕಾರವು ಹೊಸ ನೋಟು ಮುದ್ರಿಸಲು ಸಾವಿರಾರು ಕೋಟಿ ರೂ. ವೆಚ್ಚ ಮಾಡಬೇಕಾಯಿತು.
ಖೋಟಾ ನೋಟು ಹಿಡಿಯುತ್ತೇವೆಂದು ಹೇಳಿದ್ದರು. ಅದಕ್ಕಾಗಿ ಇಂತಹ ದೊಡ್ಡ ಸರ್ಕಸ್ ಬೇಕಿಲ್ಲವೆಂದು ತಜ್ಞರು ಹೇಳಿದ್ದರು. ಕೆಲವೇ ದಿನಗಳಲ್ಲಿ ಹೊಸ 2000 ರೂ. ಖೋಟಾ ನೋಟೂ ಪತ್ತೆಯಾಯಿತು.
ಭಯೋತ್ಪಾದನೆ ತಡೆಯುತ್ತೇವೆಂದಿದ್ದರು. ಈ ದೇಶದ ದುರಂತವೆಂದರೆ, ಯಾವ ಪಕ್ಷವೂ ಭಯೋತ್ಪಾದನೆ ನಿರ್ಮೂಲನೆಗೆ ಬೇಕಾದ ಸಮಗ್ರ ಕ್ರಮ ತೆಗೆದುಕೊಳ್ಳುತ್ತಿಲ್ಲ. ನೋಟು ರದ್ದತಿಯ ನಂತರ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದವೆಂದು ಅಂಕಿ-ಅಂಶ ಹೇಳುತ್ತಿವೆ.
ಇರಲಿ, ಅವೆಲ್ಲಾ ವಿವರಗಳಿಗೆ ಇಲ್ಲಿ ಹೋಗಲ್ಲ.
ನೋಟು ರದ್ದತಿಯಿಂದಾಗುವ ಅನುಕೂಲವೆಂದು ಕಡೆಯಲ್ಲಿ ಹೇಳಿದ ಸುಳ್ಳು ಯಾವುದು ಗೊತ್ತೇ? ಡಿಸೆಂಬರ್ ಹೊತ್ತಿಗೆ ಮಿಕ್ಕವೆಲ್ಲಾ ಸುಳ್ಳು ಎಂದು ಬಯಲಾದ ನಂತರ ಹೊಸೆದ ಹೊಸ ಕಾರಣ ಅದು. ನವೆಂಬರ್ 8ರಂದು ಪ್ರಸ್ತಾಪಿಸಿಯೇ ಇರದಿದ್ದ ಕ್ಯಾಷ್ಲೆಸ್/ನಗದು ರಹಿತ ವಹಿವಾಟು ಹೆಚ್ಚಿಸುವುದು. ಹಾಗಾಗಿ ಇನ್ನು ಮುಂದೆ ನೋಟುಗಳ ಚಲಾವಣೆ ಬಹಳ ಕಡಿಮೆ ಇರುತ್ತದೆಂದು ಬಿಜೆಪಿ ಮತ್ತದರ ಪ್ರಚಾರಕರು ಹೇಳುತ್ತಾ ಹೋದರು.
ಇದೀಗ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ವಿವರವಾಗಿ ಬರೆದಿರುವಂತೆ, ವಾಸ್ತವದಲ್ಲಿ ನೋಟುಗಳ ಚಲಾವಣೆ ಹೆಚ್ಚಾಗಿದೆ. ಅಂದರೆ ಆರ್ಬಿಐ ನೋಟು ಮುದ್ರಣವನ್ನು ಹೆಚ್ಚಿಸಬೇಕಾಗಿ ಬಂದಿದೆ. 2016 ನವೆಂಬರ್ 4ರಂದು (ಅಂದರೆ ನೋಟು ರದ್ದತಿಗೆ ನಾಲ್ಕು ದಿನ ಮುಂಚೆ ಆರ್ಬಿಐ ಬಿಡುಗಡೆ ಮಾಡಿದಂತೆ) ದೇಶದಲ್ಲಿ 17.97 ಲಕ್ಷ ಕೋಟಿಗಳಷ್ಟು ನೋಟು ಚಲಾವಣೆ ಇತ್ತು. ಮಾರ್ಚ್ 15, 2015ರ ಹೊತ್ತಿಗೆ ಭಾರತದ ಆರ್ಥಿಕತೆಯಲ್ಲಿ 21.41 ಲಕ್ಷ ಕೋಟಿಗಳಷ್ಟು ನೋಟುಗಳ ಚಲಾವಣೆ ಆಗುತ್ತಿದೆ. ಇದು ಸ್ವತಃ ಆರ್ಬಿಐ ಬಿಡುಗಡೆ ಮಾಡಿದ ಅಂಕಿ-ಅಂಶ ಆಗಿದೆ. ಅಂದರೆ ಶೇ.19ರಷ್ಟು ಹೆಚ್ಚಳ!
ನೋಟು ರದ್ದತಿಯಾದ ತಕ್ಷಣ ಸುಳ್ಳು ಪ್ರಚಾರಕರು ಬ್ಲ್ಯಾಕ್ ಅಂಡ್ ವೈಟ್ ಕಾರ್ಯಕ್ರಮ ಮಾಡಲು ಹೊರಟಿದ್ದರು. ಅದು ಫೇಕ್ ಎಂದು ಸಾಬೀತಾದ ನಂತರ ಕ್ಯಾಷ್ಲೆಸ್ ದುನಿಯಾ ಅಂತಹ ಸುಳ್ಳು ಹರಡಲು ಹೊರಟರು. ಈಗ ಕ್ಯಾಷ್ಫುಲ್ ಆಗಿದೆ. ಸಾಮಾನ್ಯ ಜನರು ಮಾತ್ರ ಕ್ಯಾಷ್ಲೆಸ್ ಆಗಿದ್ದಾರೆ.
ನೋಟು ರದ್ದತಿಯಂತಹ ಒಂದು ಅಪಕ್ವವಾದ, ದುರುದ್ದೇಶಪೂರ್ವಕವಾದ ಕ್ರಮದಿಂದ ಆದ ನಷ್ಟ ಅಗಾಧವಾದದ್ದು. ಅದರಿಂದ ಒಂದೇ ಒಂದು ಲಾಭವೂ ಆಗಲಿಲ್ಲ; ಬದಲಿಗೆ ಜನರಲ್ಲಿ ಹುಟ್ಟಿಸಿದ ಹೆದರಿಕೆಯಿಂದ ಜನರು ಹೆಚ್ಚೆಚ್ಚು ಕ್ಯಾಷ್ ಇಟ್ಟುಕೊಳ್ಳಲು ಆರಂಭಿಸಿರುವುದಷ್ಟೇ ಇದಕ್ಕೆ ಕಾರಣವಲ್ಲ. ಕ್ಯಾಷ್ಲೆಸ್ ಮಾಡಲು ಬೇಕಾದ ನಿಧಾನಗತಿಯ ಪ್ರೋತ್ಸಾಹಕರ ಕ್ರಮಗಳ ಮೂಲಕ ಬದಲಾವಣೆ ತರದೇ, ಕೆಟ್ಟ ಆಪರೇಷನ್ ಮಾಡಿದರು. ಕ್ಯಾಷ್ಲೆಸ್ ಆಗಲು ಪ್ರೋತ್ಸಾಹ ಕೊಡುವ ಬದಲು, ಜನರು ಕ್ಯಾಷ್ಲೆಸ್ ವಹಿವಾಟು ಮಾಡಿದರೆ, ಕಮೀಷನ್ ಕಟ್ ಆಗಲು ಶುರುವಾಯಿತು.
ಹಾಗಾಗಿ ಸುಳ್ಳು ಪ್ರಚಾರಕರು ಭಾಷಣಗಳ ಮುಖಾಂತರ ಮತ್ತು ವಾಟ್ಸಾಪ್ ಫಾರ್ವರ್ಡ್ಗಳ ಮೂಲಕ ಜನರನ್ನು ದಿಕ್ಕುತಪ್ಪಿಸಲು ಹೊಸ ಹೊಸ ಸುಳ್ಳುಗಳನ್ನು ಹೆಣೆಯಯುತ್ತಾ ಸಾಗಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿಗೆ ನೋಡಿ: