HomeUncategorizedಬುರುಡೆ ಜ್ಯೋತಿಷಿಗಳ ಖತರ್ನಾಕ್ ಸೂತ್ರ

ಬುರುಡೆ ಜ್ಯೋತಿಷಿಗಳ ಖತರ್ನಾಕ್ ಸೂತ್ರ

- Advertisement -
- Advertisement -

ಮನುಷ್ಯನಿಗೆ ಅನೂಹ್ಯವಾದ ಬ್ರಹ್ಮಾಂಡದ ಭಯ ಹಿಂದಿನಿಂದಲೂ ಇತ್ತು. ಆ ಹಿನ್ನೆಲೆಯಲ್ಲಿ ಆತ ಹಲವಾರು ದೇವರುಗಳನ್ನು, ಶಕ್ತಿಗಳನ್ನು ನಂಬುತ್ತಾ ಬಂದ. ಕಾಲಾನುಕ್ರಮದಲ್ಲಿ ಈ ದೇವರುಗಳಲ್ಲಿ ಬದಲಾವಣೆಗಳಾಗಿವೆ. ವೈದಿಕ ಧರ್ಮಕ್ಕೆ ಸಂಬಂಧಿಸಿ ಹೇಳುವುದಾದರೆ, ಋಗ್ವೇದದಲ್ಲಿ ಇಂದ್ರನೇ ಪರಮ ದೇವರಾಗಿದ್ದ. ನಂತರದಲ್ಲಿ ಹೊಸಹೊಸ ದೇವರುಗಳ ಆವಿಷ್ಕಾರಗಳಾಗಿವೆ. ಆವಿಷ್ಕಾರ ಇಂದಿಗೂ ಮುಂದುವರಿದಿದೆ. ಹಾಗೆಯೇ ಮನುಷ್ಯನ ಈ ಭಯವನ್ನೇ ಬಂಡವಾಳ ಮಾಡಿಕೊಂಡು ಲಾಭ ಮಾಡಿಕೊಳ್ಳುವವರ ಸಂತಾನ ಇಂದೂ ಎಲ್ಲಾ ಧರ್ಮಗಳಲ್ಲಿ ಹುಲುಸಾಗಿ ಜೀವಿಸುತ್ತಿದೆ.
ಅದರೆ, ಕೆಲವು ಉಜ್ವಲ ಮೆದುಳುಗಳು ಈ ರಹಸ್ಯವನ್ನು ಭೇದಿಸುವ ಕೆಲಸವನ್ನು ಸಾವಿರಾರು ವರ್ಷಗಳಿಂದ ಮಾಡಿವೆ. ಫಲವಾಗಿ ಖಗೋಳಶಾಸ್ತ್ರ ಹುಟ್ಟಿಕೊಂಡಿತು. ಅದು ಭೂಮಿಯ ಸುತ್ತ ತಿರುಗುತ್ತಿದ್ದ ಸೂರ್ಯನನ್ನು ನಿಲ್ಲಿಸಿ ಭೂಮಿಯನ್ನೇ ಸೂರ್ಯನ ಸುತ್ತ ತಿರುಗಿಸುವ ಧರ್ಮದ್ರೋಹ ಮಾಡಿತು! ಚಪ್ಪಟೆಯಾಗಿದ್ದ ಭೂಮಿಯನ್ನು ಉಂಡೆಕಟ್ಟಿ ಗುಂಡಗೂ ಮಾಡಿತು! ಆದರೆ ಆ ಮಹಾನ್ ಶಾಸ್ತ್ರದ ಹೆಸರಿನಲ್ಲಿ ಜನರನ್ನು ಬೆದರಿಸಿ ಹೊಟ್ಟೆಹೊರೆಯುವ ವರ್ಗವು ಗ್ರಹ, ನಕ್ಷತ್ರ, ದೇವರಿಗೆ ಮತ್ತು ಮನುಷ್ಯನ ಭವಿಷ್ಯಕ್ಕೆ ಸಂಬಂಧ ಕಲ್ಪಿಸಿ, ಒಂದು ಕಾಲ್ಪನಿಕ ಬುರುಡೆ ಶಾಸ್ತ್ರವನ್ನು ಸೃಷ್ಟಿಸಿತು. ಅದರ ಹೆಸರೇ ಜ್ಯೋತಿಷ್ಯ ‘ಶಾಸ್ತ್ರ’!
ಭಾರತವೂ ಖಗೋಳ ಶಾಸ್ತ್ರದಲ್ಲಿ ಮುಂಚೂಣಿಯಲ್ಲಿತ್ತು. ನಮ್ಮಲ್ಲಿ ಯಾಜ್ಞವಲ್ಕ್ಯ (ಸುಮಾರು ಕ್ರಿ.ಪೂ. 1800), ಲಗಧ (ಸುಮಾರು ಕ್ರಿ.ಪೂ. 1350), ಆರ್ಯಭಟ (ಕ್ರಿ.ಶ. 500), ಬ್ರಹ್ಮಗುಪ್ತ (ಕ್ರಿ.ಶ. 598-668), ಭಾಸ್ಕರ (ಕ್ರಿ.ಶ. 1114-1185) ಮುಂತಾದ ಮಹಾನ್ ಖಗೋಳಶಾಸ್ತ್ರಜ್ಞರು ಆಗಿಹೋಗಿದ್ದಾರೆ. ನಮ್ಮ ಪೂರ್ವಜರು ಗ್ರಹಗತಿಗಳನ್ನು, ಗ್ರಹಣಗಳನ್ನು ನಿಖರವಾಗಿ ಲೆಕ್ಕಹಾಕಲು ಕಲಿತಿದ್ದರು. ಗ್ರಹಗತಿಗಳ ಹೆಸರಿನಲ್ಲಿ ಇಂದಿಗೂ ಚಲಾವಣೆಯಲ್ಲಿರುವ ಪುರೋಹಿತಶಾಹಿಗೆ ಇಂತಹ ಮಹಾನುಭಾವರ ಒಂದು ಕೂದಲಿನ ಯೋಗ್ಯತೆಯೂ ಇಲ್ಲ. ಆದರೆ ಆ ಮಹಾನ್ ವಿಜ್ಞಾನಿಗಳನ್ನು ತಮ್ಮದೇ ಪುರಾತನ ಪರಂಪರೆಯವರೆಂದು ಸುಳ್ಳು ಕ್ಲೈಮ್ ಮಾಡಿಕೊಂಡಿದ್ದು ಮಾತ್ರ ಇವರ ವಿಶೇಷ ಪ್ರತಿಭೆ. ಹೀಗೆ ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಲೇ ದೇವರು, ಧರ್ಮಗಳ ಹೆಸರಿನಲ್ಲಿ ಮೂಢನಂಬಿಕೆಗಳನ್ನು ಹರಡಿ ಜನರನ್ನು ಸುಲಿಯುತ್ತಿದ್ದಾರೆ. ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳು ಅವರ ಪಾಲುದಾರರಾಗಿ ಕೆಲಸ ಮಾಡುತ್ತಿರುವುದು ದುರಂತ!
ಮೇಲೆ ಹೆಸರಿಸಿದ ಮಹಾನುಭಾವರು ಮತ್ತು ಅವರ ಅಪ್ರತಿಮ ಆವಿಷ್ಕಾರಗಳಿಗೆ ವಂದಿಸುತ್ತಲೇ, ಈ ನಕಲಿಗಳ ಮಹಾನ್ ಆವಿಷ್ಕಾರಗಳನ್ನು ನೋಡೋಣ.
ಮನುಷ್ಯ ಹುಟ್ಟುತ್ತಲೇ ಈ ನಕಲಿಗಳು ಆತನನ್ನು ಸುತ್ತಿಕೊಳ್ಳುತ್ತವೆ. ಒಂದು ಶತಮಾನ ಹಿಂದಕ್ಕೆ ಹೋದರೆ, ಮಕ್ಕಳು ಹುಟ್ಟುತ್ತಲೇ ಜನರು ಪುರೋಹಿತರ ಬಳಿ ಹೆಸರಿಗಾಗಿ ಓಡುತ್ತಿದ್ದರು. ನಕ್ಷತ್ರಕ್ಕೆ ಅನುಗುಣವಾಗಿ ಬರುವ ಕೆ, ಕು, ಚು, ಚಿ… ಇತ್ಯಾದಿಯಾಗಿ ಪಂಚಾಂಗದಲ್ಲಿ ಇರುವ ಹೆಸರೇ ಇಡಲಾಗದ ಅಕ್ಷರಗಳಿಗೆ ಪುರೋಹಿತರು ಒಂದು ಹೆಸರು ಹೊಸೆದು ಸೂಚಿಸುತ್ತಿದ್ದರು. ಅದರೆ, ಹೆಚ್ಚಿನವರಿಗೆ ಹುಟ್ಟಿದ ದಿನಾಂಕ, ಜಾತಕ ಇತ್ಯಾದಿ ಬರೆದುಕೊಡುತ್ತಿರಲಿಲ್ಲ. ಅನಕ್ಷರಸ್ಥರಿಗೆ ಅವೆಲ್ಲಾ ಯಾಕೆ ಅಲ್ಲವೆ?! ಬೇಕಾದರೆ ಮುಂದೆ ಅವರು ತಮ್ಮ ಬಳಿಯೇ ಬರಬೇಕಲ್ಲ! ಇವುಗಳ ಹಿಂದಿರುವ ರಾಜಕೀಯ ಮತ್ತು ವ್ಯಾಪಾರಿ ಬುದ್ಧಿಯ ಆವಿಷ್ಕಾರಗಳನ್ನು ಗಮನಿಸೋಣ.
ಹೆಸರು ಹೇಳಿದ ಕೂಡಲೇ ವ್ಯಕ್ತಿ ಮುಂದೊಮ್ಮೆ ಪೂಜೆ, ದೋಷ, ಪರಿಹಾರ ಎಂದು ಬಂದಾಗ ಮೇಲ್ಜಾತಿಯವನೋ, ಕೆಳಜಾತಿಯವನೋ, ಮೇಲ್ಜಾತಿಯವನಾಗಿದ್ದರೆ, ಸ್ಥಿತಿವಂತನೋ ಬಡವನೋ, ಅಥವಾ ದಲಿತ ಸಮುದಾಯದವನೋ ಎಂದು ಗೊತ್ತಾಗಬೇಕು. ಇಲ್ಲಿ ಪುಲ್ಲಿಂಗ ಮಾತ್ರ ಬಳಸಿರುವುದು ಉದ್ದೇಶಪೂರ್ವಕವಾಗಿಯೇ! ಪೂಜೆಗಳಲ್ಲಿ ಹೆಣ್ಣುಗಳಿಗೆ ಸ್ಥಾನ ಇಲ್ಲದುದರಿಂದ ಅವರ ಹೆಸರುಗಳಿಗೆ ಹೆಚ್ಚು ಮಹತ್ವವಿರಲಿಲ್ಲ. ಅಪ್ಪ ಇದ್ದಲ್ಲಿ ಅಮ್ಮ ಮಾಡಿದರೆ ಆಯಿತು.
ಕರಾವಳಿಯ ಮಟ್ಟಿಗೆ ಹೇಳುವುದಾದರೆ, ಬಡ ಶೂದ್ರರಾದರೆ ಚೊಂಗ, ಪೋಂಕ, ಮುದರ ಎಂಬ ಹೆಸರುಗಳು; ಸ್ವಲ್ಪ ಸ್ಥಿತಿವಂತ ಶೂದ್ರರಾದರೆ ಚೆನ್ನಪ್ಪ, ಸಂಕಪ್ಪ, ವಾಸಪ್ಪ ಇತ್ಯಾದಿ ಹೆಸರುಗಳು! ಅವೇ ಹೆಸರುಗಳು ಬ್ರಾಹ್ಮಣರಿಗಾದರೆ ಚೆನ್ನಕೇಶವ, ಶಂಕರನಾರಾಯಣ, ವಾಸುದೇವ ಮುಂತಾದ ಘನ ಹೆಸರುಗಳಾಗುತ್ತಿದ್ದವು! ಈ ಶೂದ್ರರು ಸಾಕಷ್ಟು ಸ್ಥಿತಿವಂತರಾಗಿದ್ದರೆ, ಅಥವಾ ವಿದ್ಯಾವಂತರಾಗಿದ್ದರೆ ಅಶೋಕ, ಲಕ್ಷಣ, ದೇವದಾಸ ಇತ್ಯಾದಿ ಹೆಸರುಗಳು ಪ್ರಾಪ್ತವಾಗುತ್ತಿದ್ದವು.
ಅದರೆ, ಸಮಾಜದ ಕೆಳಸ್ತರದ ಶೋಷಿತ ಜನಾಂಗಗಳ ಮಕ್ಕಳಿಗೆ ಹೆಸರಿಡುವಾಗ ಪಂಚಾಂಗ ನೋಡುವ ಕಷ್ಟವನ್ನೂ ಯಾರೂ ತೆಗೆದುಕೊಳ್ಳುತ್ತಿರಲಿಲ್ಲ! ವಾರದ ದಿನಗಳ ಹೆಸರುಗಳಿಗೆ ಅನುಗುಣವಾಗಿ ಐತಾರ ಅಂದರೆ ಆದಿತ್ಯವಾರ ಹುಟ್ಟಿದವರಿಗೆ ಐತಾರ, ಸೋಮಾರದವರಿಗೆ ಚೋಮ, ಅಂಗಾರೆಯವರಿಗೆ ಅಂಗಾರ, ಬುದಾರದವರಿಗೆ ಬೂದ, ಗುರುವಾರದವರಿಗೆ ಗುರುವ, ಸುಕ್ರಾರದವರಿಗೆ ತುಕ್ರ, ಸನಿವಾರದವರಿಗೆ ತನಿಯ ಮುಂತಾದ ಹೆಸರುಗಳನ್ನು ಬಿಸಾಕಲಾಗುತ್ತಿತ್ತು! ಹೆಣ್ಣು ಮಕ್ಕಳಿಗೆ ಹೆಸರಿಡಲೂ ಒದ್ದಾಡಬೇಕಾಗಿರಲಿಲ್ಲ! ಐತನನ್ನು ಐತೆ, ಚೋಮನನ್ನು ಚೋಮು ಮಾಡಿದರೆ ಮುಗಿಯಿತು! ಇದೇ ಹೆಸರುಗಳಿಗೆ ಎಂದಿಗೂ ಪೂಜೆ ಮಾಡಲು ಬರದ ದಂಡಪಿಂಡ ಸೂದ್ರಮುಂಡೇವಕ್ಕೆ ಇದೇ ಹೆಸರುಗಳನ್ನು ಅಪ್ಪ ಸೇರಿಸಿ ಇಟ್ಟರಾಯಿತು!
ಪುರೋಹಿತ ಕಂ ಜ್ಯೋತಿಷಿಗಳ ಲೆಕ್ಕಾಚಾರವೆಂದರೆ, ಈ ಶೂದ್ರರು ಜೀವನದಲ್ಲಿ ಮುಂದೆ ಒಂದಲ್ಲ ಒಂದು ದಿನ ತಮ್ಮ ಬಳಿಗೆ ಬರಲೇಬೇಕು. ಬರದಿದ್ದರೆ ಬರುವಂತೆ ಮಾಡುವ ಆವಿಷ್ಕಾರಗಳಿವೆ! ಪೂಜೆ ಮಾಡಿಸುವಾಗ ಹುಟ್ಟಿದ ನಕ್ಷತ್ರಗಳ ಹೆಸರು ಹೇಳಲೇಬೇಕು. ಇದೊಂದು ಯುನೀಕ್ ಐಡೆಂಟಿಫಿಕೇಶನ್ ನಂಬರ್ ಇದ್ದಂತೆ! ಇಲ್ಲದಿದ್ದಲ್ಲಿ ಸಂಬಂಧಪಟ್ಟ ದೇವರುಗಳು ಅರ್ಜಿಗಳನ್ನು ಸ್ವೀಕರಿಸುವುದಿಲ್ಲ! ದಡ್ಡ ಶೂದ್ರರಿಗೆ ಅದು ನೆನಪಿಡುವುದು ಬಿಡಿ, ಉಚ್ಛರಿಸಲೂ ಬರುವುದಿಲ್ಲ! ಆಧಾರ್ ಕಾರ್ಡ್ ಮರೆತಂತೆ ಮರೆತು ಬಿಡುತ್ತಾರೆ. ಅದಕ್ಕೆ ಅವರನ್ನು ಈ ಕಷ್ಟದಿಂದ ಪಾರುಮಾಡಲು ಈ ಮಹಾನ್ ಆವಿಷ್ಕಾರ ಮಾಡಲಾಗಿತ್ತು! ಒಬ್ಬ ಮನುಷ್ಯ ಎಷ್ಟೇ ದಡ್ಡನಾಗಿದ್ದರೂ ಸ್ವಂತ ಮತ್ತು ತನ್ನ ಹೆಂಡತಿ ಮಕ್ಕಳ ಹೆಸರನ್ನು ಮರೆತುಬಿಡುವುದು ಸಾಧ್ಯವಿಲ್ಲವಾದುದರಿಂದ ಹೆಸರು ಹೇಳಿದರೆ ಸಾಕು ಭಟ್ಟರು ಕಂಪ್ಯೂಟರಿಗಿಂತ ಬೇಗ ನಕ್ಷತ್ರವನ್ನು ಕಂಡುಹಿಡಿದುಬಿಡುತ್ತಾರೆ! ಆದುದರಿಂದ ಸ್ವಲ್ಪ ಮಂದ ಭಟ್ಟರಿಗೆ ಅನುಕೂಲವಾಗಲೆಂದು ಹುಡುಕಾಟದ ವ್ಯಾಪ್ತಿ (ಸರ್ಚ್ ಫೀಲ್ಡ್) ಕಿರಿದುಗೊಳಿಸಲಾಗಿತ್ತು. ಹೆಸರುಗಳ ಸಂಖ್ಯೆ ಕಡಿಮೆ ಇದ್ದಷ್ಟು ಅವರ ಮಸ್ತಿಷ್ಕದ ಭಾರ ಕಡಿಮೆಯಾಗುತ್ತಿತ್ತು! ಆದುದರಿಂದಲೇ ಊರಿನಲ್ಲಿ ಹತ್ತಿಪ್ಪತ್ತು ಸಂಕಪ್ಪ ವೆಂಕಪ್ಪರು ಕಂಡುಬರುತ್ತಿದ್ದು, ಗುರುತಿಗಾಗಿ ಅವರಿಗೆ ಕುಂಟ, ಪೆದ್ದ, ದೋಂಟಿ, ಕಳ್ಳ ಇತ್ಯಾದಿ ಅಡ್ಡ ಹೆಸರುಗಳು ಅವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಜೀವನದುದ್ದಕ್ಕೂ ಅಂಟಿಕೊಳ್ಳುತ್ತಿದ್ದವು!
ಇಂತಹ ಒಂದು ಸರಳವಾದ, ‘ವೈಜ್ಞಾನಿಕ’ವಾದ ‘ಹ್ಯೂಮನ್ ಕಾಸ್ಟ್ ಎಂಡ್ ಸ್ಟೇಟಸ್ ರೆಕಗ್ನಿಶನ್ ಸಿಸ್ಟಮ್’ ಭಾರತೀಯ ಪುರೋಹಿತಶಾಹಿಗಳ ಮಹಾನ್ ಆವಿಷ್ಕಾರಗಳಲ್ಲಿ ಒಂದು! ಪ್ರಪಂಚದಲ್ಲಿ ಯಾರೂ ಇಂಥ ಸಾಧನೆ ಮಾಡಿಲ್ಲ!
ಇದರಲ್ಲೂ ಇನ್ನೊಂದು ವ್ಯವಸ್ಥೆಯನ್ನು ಅಳವಡಿಸಲಾಗಿತ್ತು! ಈ ಆವಿಷ್ಕಾರದ ಹೆಸರೇ ‘ಹ್ಯೂಮನ್ ಫಿಲ್ತ್ ಸೆಪರೇಷನ್ ಸಿಸ್ಟಮ್’ ಅಂತ! ಇದನ್ನು ವಿದೇಶಗಳಲ್ಲಿ ಬಣ್ಣ ಮತ್ತು ಜನಾಂಗೀಯ ನೆಲೆಗಳಲ್ಲಿ ಮಾಡುತ್ತಿದ್ದರೆ ನಮ್ಮ ಪುರೋಹಿತರು ಅದಕ್ಕಿಂತಲೂ ಹಿಂದೆಯೇ ಅದಕ್ಕಿಂತಲೂ ಸೂಕ್ಷ್ಮವಾದ ಜಾತಿ ಆಧರಿತ ವೈಜ್ಞಾನಿಕ ವ್ಯವಸ್ಥೆ ಕಂಡುಹಿಡಿದಿದ್ದರು! ಅದುವೇ ದಲಿತರಲ್ಲಿ ದಲಿತರನ್ನು ಹೆಸರಿನಿಂದಲೇ ಗುರುತಿಸಿ ಪ್ರತ್ಯೇಕಿಸುವ, ದೂರವಿಡುವ ವ್ಯವಸ್ಥೆಯಿದು!
ಇಂತಹ ಹುಲು ಮಾನವರನ್ನು ಮಾನವರೆಂದೇ ಪರಿಗಣಿಸಬಾರದು ಎಂದು ಅಂತವರಿಗೆ ಪಿಜಿನ (ಇರುವೆ) ಬೊಗ್ಗು, ಬೊಗುರ ಮತ್ತು ಬೊಗ್ಗಿ (ನಾಯಿಗಳು), ನಕ್ಕುರ (ಎರೆಹುಳ), ಕಜವು (ಕಸ), ನಾದೆಲ (ಕೊಳಕು ವಾಸನೆಯವ), ಸೀಂಕ್ರ (ಕಸಬರಿಕೆಯ ಕಡ್ಡಿ), ಮೈಪು (ಕಸಬರಿಕೆ) ಮುಂತಾದ ಪವಿತ್ರ ಹೆಸರುಗಳನ್ನು ದಯಪಾಲಿಸಲಾಗುತ್ತಿತ್ತು! ಇವರಲ್ಲಿ ಇಂದು ನಕ್ಕುರ (ಎರೆಹುಳ) ಮಾತ್ರ ಮೇಲ್ಜಾತಿಯವರ ಮನಸ್ಸಿನಲ್ಲಿ ಸಾವಯವ ಕೃಷಿಯ ಹೆಸರಿನಲ್ಲಿ ಸ್ವಲ್ಪ ಸ್ಥಾನಮಾನ ಪಡೆದಿದ್ದಾನೆ!
ಕಾಲ ಬದಲಾದಂತೆ ಸಾಫ್ಟ್‍ವೇರ್ ಅಪ್‍ಗ್ರೇಡ್ ಆಗುತ್ತಲೇ ಇದೆ. ಮೊದಲಿಗೆ ಮೇಲ್ಜಾತಿಯ ಹೆಸರುಗಳು ಕೆಳಕ್ಕೂ ಇಳಿಯಲಾರಂಭಿಸಿದವು. ದಲಿತರಲ್ಲಿಯೂ ಶಂಕರ, ರಾಮರು ಕಾಣಿಸಿಕೊಳ್ಳಲಾರಂಭಿಸಿದರು. ಎಲ್ಲರಿಗೂ ಅನುಕೂಲವಾಗಲಿ ಎಂದು ಪಂಚಾಂಗಗಳಲ್ಲಿಯೇ ನಕ್ಷತ್ರಗಳ ಮುಂದೆ ಹೆಸರುಗಳ ಆರಂಭದ ಅಕ್ಷರಗಳನ್ನು ಕೊಡಲಾಯಿತು. ಆಧುನಿಕ ಹೆಸರುಗಳು ಬಂದಂತೆ ಜನರು ತಮ್ಮ ಹುಟ್ಟಿದ ನಕ್ಷತ್ರಗಳನ್ನು ನೆನಪಿಡಲು ಆರಂಭಿಸಿದುದರಿಂದ ದೊಡ್ಡ ಪ್ರಮಾದಗಳೇನೂ ಆಗುತ್ತಿಲ್ಲ. ಅರ್ಥಿಕ ನಷ್ಟವೂ ಆಗುತ್ತಿಲ್ಲ. ಜನರು ಅವರದ್ದೇ ಸಿಸ್ಟಮ್ ಕಂಡುಹಿಡಿದಿದ್ದಾರೆ. ಹೆಚ್ಚಿನವರು ವಾಡಿಕೆ ಹೆಸರು, ಜಾತಕದ ಹೆಸರು ಎಂದು ಎರಡೆರಡು ಹೆಸರು ಇಟ್ಟುಕೊಂಡಿರುತ್ತಾರೆ!
ಆರ್ಥಿಕ ನಷ್ಟ ಇಲ್ಲ ಯಾಕೆಂದರೆ, ಪುರೋಹಿತರು ಎಂತೆಂತಹಾ ಮಹಾನ್ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ ಒಂದೊಂದೂ ಲಕ್ಷಗಟ್ಟಲೆ ವರಮಾನ ತರುತ್ತವೆ. ಹೀಗೆ ಲಕ್ಷಗಟ್ಟಲೆ ಸಂಪಾದನೆಯ ಹೊಸಹೊಸ ಕ್ರಿಯಾಕರ್ಮಗಳ ನಡುವೆ ಜುಜುಬಿ ಚಿಲ್ಲರೆ ದಕ್ಷಿಣೆಯ ನಾಮಕರಣ ಮಾಡುತ್ತಾ ಕೂರಲು ಪುರುಸೊತ್ತಾದರೂ ಯಾರಿಗಿದೆ!? ಇನ್ನಷ್ಟು ಇಂತಹ ಮಹಾನ್ ವೈಜ್ಞಾನಿಕ ಆವಿಷ್ಕಾರಗಳನ್ನು ಮುಂದೆ ನೋಡೋಣ.

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...