Homeಸಾಮಾಜಿಕವಾಸ್ತುಶಾಸ್ತ್ರ ಅನ್ನೋದು ವಂಚನೆಯ ಹೊಸ ಫ್ಯಾಶನ್

ವಾಸ್ತುಶಾಸ್ತ್ರ ಅನ್ನೋದು ವಂಚನೆಯ ಹೊಸ ಫ್ಯಾಶನ್

- Advertisement -
- Advertisement -

ಈ ಜೋಯಿಸರ ಪ್ರವರ ಬರೆದಷ್ಟು ಮುಗಿಯುವಂತದಲ್ಲ. ಎಲ್ಲಿಯವರೆಗೆ ಸೂರ್ಯ, ಚಂದ್ರ, ಗ್ರಹ ನಕ್ಷತ್ರಗಳಿರುತ್ತವೋ, ಎಲ್ಲಿಯವರೆಗೆ ಈ ಪುರೋಹಿತರು ಇರುತ್ತಾರೋ ಅಲ್ಲಿಯವರೆಗೆ ಅವರು ಕಾಲ್ಪನಿಕ ರಾಹು-ಕೇತುಗಳಂತೆ ಅಮಾಯಕ ಜನರನ್ನು ಕಾಡುತ್ತಲೇ ಇರುತ್ತಾರೆ. ಇದನ್ನು ಬರೆದು ಬರೆದು ರೋಸಿಹೋಗಿ ಕಳೆದ ಸಂಚಿಕೆಯಲ್ಲಿ ನಿಲ್ಲಿಸಿಯೇ ಬಿಡೋಣ ಎಂದು ನಿರ್ಧರಿಸಿದ್ದೆ. ಆದರೆ ಇನ್ನೆರಡು ಕಂತುಗಳನ್ನು ಬರೆಯಲೇಬೇಕು ಎಂದು ಅನಿಸಿದೆ, ಓದುಗರು ಕ್ಷಮಿಸಬೇಕು.
ಇಂದು ಜ್ಯೋತಿಷ್ಯದ ಹೆಸರಿನಲ್ಲಿ ಎಷ್ಟು ವಂಚನೆಗಳು ನಡೆಯುತ್ತಿವೆ ಎಂದರೆ ಬೆಳಗೆದ್ದು ಟಿ.ವಿ ನೋಡಿದರೆ ನಿಮ್ಮ ಕಣ್ಣಿಗೆ ಬೀಳುವುದೇ ಜ್ಯೋತಿಷಿಗಳು. ಪ್ರಳಯ ಆಗುತ್ತದೆ ಎಂದು ಬಹಿರಂಗವಾಗಿ ಟಿವಿಯಲ್ಲಿ ಘೋಷಿಸಿ ಜನರನ್ನು ಬೆದರಿಸಿದ್ದ ಬ್ರಹ್ಮಾಂಡನ ಅಂಡವನ್ನು ಯಾರೂ ಒಡೆಯದಿರುವುದರಿಂದ ಆತ ಇನ್ನೂ ತನ್ನ ಕಾಯಕ ಮುಂದುವರಿಸಿದ್ದಾನೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇರುವಷ್ಟು ಖಗೋಳದ ಪರಿಚಯ ಇಲ್ಲದಿರುವ ಈತ ಬಿಡುವ ಬರುಡೆಗಳು ಹಾಸ್ಯ ಕಾರ್ಯಕ್ರಮಗಳಂತಿವೆ. ಕೆಲವರು ಇಂತಹ ಜ್ಯೋಯಿಸರುಗಳ ಲೇವಡಿ ಮಾಡುವ ವಿಡಿಯೋಗಳನ್ನು ಯೂಟ್ಯೂಬ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದು, ಅವು ವೈರಲ್ ಆಗಿದ್ದರೂ ನಂಬುವ ಪೆದ್ದರು ಸಾವಿರರು ಸಂಖ್ಯೆಯಲ್ಲಿದ್ದಾರೆ. ಅದಕ್ಕಾಗಿಯೇ ಸುದ್ದಿವಾಹಿನಿಗಳು ಇವೆಲ್ಲಾ ಬುರುಡೆಗಳನ್ನು ಗೊತ್ತಿದ್ದೂ ಪ್ರಸಾರ ಮಾಡಿ ಮೂಢನಂಬಿಕೆಗಳಿಗೆ ಇನ್ನಷ್ಟು ಇಂಬು ನೀಡುತ್ತಿವೆ.
ಕೇವಲ ಮುಗ್ಧ ಜನರಷ್ಟೇ ಇಂತಹ ಜ್ಯೋತಿಷಿಗಳ ಬಲೆಗೆ ಬೀಳುತ್ತಾರೆ ಎಂದಲ್ಲ. ನಾವು ಆಳಲೆಂದು ಆರಿಸಿಕಳುಹಿಸುವ ರಾಜಕಾರಣಿಗಳೂ ಇದರಲ್ಲಿ ಹಿಂದೆ ಬಿದ್ದಿಲ್ಲ. ದೇವಾಲಯ, ಮಸೀದಿಗಳನ್ನು, ಚರ್ಚುಗಳನ್ನು ಸುತ್ತುವುದು ವೈಯಕ್ತಿಕ ನಂಬಿಕೆ ಎಂದುಕೊಂಡರೂ ಕೂಡಾ ಇವರು ಅನಿಷ್ಟ ಪರಿಹಾರಕ್ಕೆ ಗ್ರಹಶಾಂತಿ, ಹೋಮಹವನಗಳನ್ನು ಮಾಡಿಸುವುದು ವಾಸ್ತುವಿನ ಹೆಸರಿನಲ್ಲಿ ಲಕ್ಷಾಂತರ ವೆಚ್ಚಮಾಡಿ ಕೊಠಡಿಗಳ ನವೀಕರಣ ಮಾಡಿಸುವುದು, ಅಲ್ಲಿ ಪುರೋಹಿತರುಗಳನ್ನು ಕರೆಸಿ ಹೋಮಹವನಗಳನ್ನು ಮಾಡಿಸುತ್ತಿರುವಾಗ ನೂರಾರು ತರಲೆ ತಾಪತ್ರಯಗಳಿಂದ ಬಳಲುತ್ತಿರುವ ಸಾಮಾನ್ಯ ಜನರ ಪಾಡೇನು?
ಜನರ ಮತದಿಂದ ಆಯ್ಕೆಯಾಗಿರುವ ಸರಕಾರವೊಂದು ಹಾಗೆಂದು ಹೇಳದೆ ‘ದೇವರ ದಯದಿಂದ ಅಧಿಕಾರಕ್ಕೆ ಬಂದಿದ್ದೇವೆ’, ದೇವರ ದಯೆ ನಮಗಿರುವ ಕಾರಣದಿಂದ ನಮ್ಮ ಸರಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುರೋಹಿತರ ನಾಯಕತ್ವದ ಪಕ್ಷದವರನ್ನು ಮೀರಿಸುವಂತೆ ಬಹಿರಂಗ ಹೇಳಿಕೆ ನೀಡುವುದು, ಅದಕ್ಕಾಗಿ ಜ್ಯೋತಿಷ್ಯಗಳ ಬಳಿ ಓಡುವುದು, ಇವರು ಜನರಿಗೆ, ಜನಶಕ್ತಿಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದನ್ನು ತೋರಿಸುವುದಿಲ್ಲವೆ? ಒಬ್ಬರಂತೂ ಮುಖ್ಯಮಂತ್ರಿಯಾಗುವ ಆಸೆಯಿಂದ ತನ್ನ ಹೆಸರಿನ ಇಂಗ್ಲೀಷ್ ಅಕ್ಷರಗಳನ್ನೇ ನ್ಯೂಮೆರಾಲಜಿ(ಸಂಖ್ಯಾಶಾಸ್ತ್ರ) ಎಂಬ ಬುರುಡೆಯ ಹೆಸರಲ್ಲಿ ಬದಲಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಇಲ್ಲಿ ಸಂಖ್ಯಾಶಾಸ್ತ್ರ ಎಂದರೆ ಸ್ಟಾಟಸ್ಟಿಕ್ಸ್ ಎಂಬುದು ವಿಜ್ಞಾನದಾವಿಷ್ಕಾರವಾದರೆ ಅಂಕೆ, ಸಂಖ್ಯೆ, ಅಕ್ಷರಗಳನ್ನು ನಿಮ್ಮ ಭವಿಷ್ಯವಾದ ಬ್ರಹ್ಮಾಂಡದಲ್ಲಿ ಇರುವ ಲೆಕ್ಕಹಾಕಿದರೇ ತಲೆ ಕೆಡಬಹುದಾದ ಕೋಟಿಕೋಟ್ಯಂತರ ನಕ್ಷತ್ರ ಗ್ರಹಪುಂಜಗಳ ನಡುವೆ ಇರುವ ಅಶ್ವಿನಿ, ಭರಣಿ……., ಇತ್ಯಾದಿಯಾಗಿ ಖಗೋಳಶಾಸ್ತ್ರಜ್ಞರು ಗುರುತಿಸಿರುವ ಕೆಲವೇ ಕೆಲವು ನಕ್ಷತ್ರಗಳು ನಮ್ಮ ಭವಿಷ್ಯ ನಿರ್ಧರಿಸುತ್ತವೆ ಎನ್ನುವಷ್ಟೇ ಅವೈಜ್ಞಾನಿಕ ಭಾರತೀಯ ಪರಂಪರೆಯ ಭಾಗ ಈ ಬುರುಡೆ ಜೋತಿಷ್ಯ ಎನ್ನುವ ಈ ಮಹಾನ್ ನಾಯಕ ಭಾರತೀಯನಾದ ತನ್ನ ಭವಿಷ್ಯವನ್ನು ಕೆಲವೇ ಶತಮಾನಗಳ ಹಿಂದೆ ನಮಗೆಲ್ಲಾ ಪರಿಚಯವಾದ ಇಂಗ್ಲೀಷ್ ಭಾಷೆಯ ಅಕ್ಷರಗಳು ತನ್ನ ಹೆಸರಿಲ್ಲಿ ಆಚೆ ಈಚೆ ಆಗಿರುವುದು ತನ್ನ ಭವಿಷ್ಯ ನಿರ್ಧರಿಸುತ್ತದೆ ಎಂದು ನಂಬಿದರೆ, ನಾವು ಮೋಸಕ್ಕೆ ಒಳಗಾಗುವ ಜನಸಾಮಾನ್ಯರನ್ನು ಯಾಕೆ ದೂರಬೇಕು?! ಅವರನ್ನು ರಕ್ಷಿಸಬೇಕಾದ ಅಗತ್ಯವಿದೆ. ಆದರೆ, ಅದನ್ನು ಮಾಡಬೇಕಾದ ಶಾಸಕ ಅಂದರೆ ಶಾಸನ ಮಾಡಬೇಕಾದ ಬುದ್ಧಿವಂತರೇ ಮೂರ್ಖರಾಗಿರುವಾಗ ಜನರಿಗೆ ಇದನ್ನೇ ಬರೆದು ಪ್ರಯೋಜನ ಎನ್ನುತ್ತೀರಾ?
ಸರಿ! ವಿಜ್ಞಾನದ ಪ್ರತಿಯೊಂದು ಆವಿಷ್ಕಾರಗಳಿಗೆ ಪ್ರತಿಸ್ಪಂದಿಯಾಗಿ ಜೋಯಿಸರುಗಳು ತಮ್ಮದೇ ಆದ ಪ್ರತಿಸ್ಪಂದಿ ಶಾಖೆಗಳನ್ನು ತೆಗೆದಿದ್ದಾರೆ. ಸಂಖ್ಯಾಶಾಸ್ತ್ರಕ್ಕೆ ನ್ಯುಮೆರಾಲಜಿ, ಆರ್ಕಿಟೆಕ್ಟರ್‍ಗೆ ವಾಸ್ತು ಇತ್ಯಾದಿ ಬುರುಡೆಗಳನ್ನು ಗಮನಿಸಬಹುದು. ಇವುಗಳಲ್ಲಿ ಬಡಜನರನ್ನು ಬಹುವಾಗಿ ಆಕರ್ಷಿಸುವುದು ಮನಶಾಸ್ತ್ರದ ಕಾಪಿಯಾಗಿರುವ ವಶೀಕರಣ ವಿದ್ಯೆ. ಯಾವುದೇ ದಿನಪತ್ರಿಕೆಯನ್ನು ತೆರೆದು ನೋಡಿದರೆ ನಿಮಗೆ ಗಂಡು-ಹೆಣ್ಣಿನ ವಶೀಕರಣ ಮಾಡುವುದಾಗಿ ನಂಬಿಸಿ ಕೊರಳು ಕೊಯ್ಯುವ ಜಾಹೀರಾತುಗಳು ಕಾಣಸಿಗುತ್ತವೆ. ಇಂತಹ ವಂಚಕರು ಗಂಡು-ಹೆಣ್ಣಿನ ಪ್ರೇಮ-ಕಾಮವನ್ನೇ ಬಂಡವಾಳ ಮಾಡಿಕೊಂಡು ಕೇವಲ ಒಂದು ಹೆಂಚಿನ ರೂಮು ಮತ್ತು ಮೊಬೈಲ್ ನಂಬರನ್ನೇ ಬಳಸಿಕೊಂಡು ತಮ್ಮ ದಂಧೆ ನಡೆಸುತ್ತಾರೆ. ತಾವು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಮಂತ್ರಶಕ್ತಿಯಿಂದ ಮತ್ತು ಪೂಜೆ ಮಾಡಿಸಿ ವಶೀಕರಣ ಅಥವಾ ಹಿಪ್ನೋಟಿಸಂ ಮಾಡಿ ಹೆಣ್ಣು-ಗಂಡುಗಳನ್ನು ವಶಮಾಡಿಕೊಡುವುದಾಗಿ ಬುರುಡೆ ಬಿಡುತ್ತಾರೆ. ಜೊತೆಗೆ ಮಹಿಳೆಯರಿಗೆ ವಿಶೇಷ ರಿಯಾಯತಿಯನ್ನೂ ಘೋಷಿಸುತ್ತಾರೆ.
ಈ ವೈದ್ಯಕೀಯ ಪರಿಭಾಷೆಯಾಗಿರುವ ಮನಶಾಸ್ತ್ರಜ್ಞರು ಸೂಕ್ತ ಅರ್ಹತಾಪತ್ರದೊಂದಿಗೆ ಚಿಕಿತ್ಸೆಗಾಗಿ ಬಳಸಬಹುದಾದ ‘ವಶೀಕರಣ’ ಅಥವಾ ‘ಸೈಕೋಥೆರಪಿ’ ಎಂಬ ಪದಬಳಕೆಯೇ ಪೊಲೀಸರಿಗೆ ಕೇಸು ಜಡಿಯಲು ಸಾಕು. ಪತ್ರಿಕೆಗಳು ಯಾವುದೇ ಸಾಮಾಜಿಕ ಜವಬ್ದಾರಿ ಇಲ್ಲದ ಹಣದಾಸೆಗಾಗಿ ಇಂತಹ ಕಳ್ಳ ಜ್ಯೋತಿಷಿಗಳು-ಮಾಟಮಂತ್ರವಾದಿಗಳ ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದರೂ, ಪೊಲೀಸರು ಸ್ವಯಂಆಗಿ ಕೇಸು ದಾಖಲಿಸಲು ಸಾಧ್ಯವಿದ್ದರೂ ಇಂತಹ ಕಪ್ಪು ದಂಧೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಮುಖ್ಯವಾಗಿ ಬಡವರು, ಕೂಲಿ ಕಾರ್ಮಿಕರು ಮತ್ತು ಪ್ರೇಮ-ಕಾಮ ಸಂಬಂಧಿ ಸಮಸ್ಯೆಗಳಿಂದ ಬಳಲುವ ಪೆದ್ದ ಜನರು ಇವರಿಗೆ ಬಲಿಪಶುಗಳಾಗುತ್ತಾರೆ.
ಕೆಲವು ತಿಂಗಳುಗಳ ಹಿಂದೆ ಮಂಗಳೂರಿನ ವಿಚಾರವಾದಿ ನರೇಂದ್ರ ನಾಯಕ್ ಅವರು ತಮ್ಮ ಶಿಷ್ಯೆಯೊಬ್ಬರನ್ನು ಮಗಳೆಂದು ಹೇಳಿಕೊಂಡು ಇಂತಹ ಕಳ್ಳ ಜ್ಯೋಯಿಸನ ಬಳಿಗೆ ಹೋಗಿ ವಿಡಿಯೋ ರೆಕಾರ್ಡಿಂಗ್ ಮಾಡಿ ಪೊಲೀಸರಿಗೆ ದೂರು ನೀಡಿ ಆತನ ಬಣ್ಣ ಬಯಲು ಮಾಡಿದ್ದರು! ವಿಶೇಷವೆಂದರೆ ಊರವರಿಗೆ ‘ಭವಿಷ್ಯ’ ಹೇಳುವ ಈ ಕಳ್ಳನಿಗೆ ತನಗೆ ಪೊಲೀಸರ ಅತಿಥಿಯಾಗುವ ಭಾಗ್ಯ ಲಭಿಸಲಿದೆ ಎಂದು ಗೊತ್ತಿರಲಿಲ್ಲ!
ಇದೇ ರೀತಿ ವಿದ್ಯಾವಂತರೂ ನಂಬಿಕೊಂಡು ಹಣ ಚೆಲ್ಲುತ್ತಿರುವ ವಾಸ್ತುಶಾಸ್ತ್ರ. ಕಟ್ಟಡ ನಿರ್ಮಾಣ ಮತ್ತು ಇಂಟೀರಿಯರ್ ಡೆಕೋರೇಷನ್ ಎಂಬ ವಿಜ್ಞಾನ ಮತ್ತು ಕಲೆಯನ್ನು ವಂಚನೆಗಾಗಿ ಬಳಸುವುದು ಇತ್ತೀಚೆಗೆ ಒಂದು ದೊಡ್ಡ ದಂಧೆ ಮತ್ತು ಫ್ಯಾಷನ್ ಆಗಿಬಿಟ್ಟಿದೆ. ಅಡುಗೆ ಕೋಣೆ ಅಲ್ಲಿರಬಾರದು-ಇಲ್ಲಿರಬೇಕು ಈ ಮೇಜು ಅಲ್ಲಿದ್ದರೆ ದೋಷ-ಇಲ್ಲಿರಬೇಕು, ಬಾಗಿಲು ಈ ಕಡೆ ಇರಬೇಕಿತ್ತು……. ಇತ್ಯಾದಿ ಕತೆಗಳನ್ನು ಹೆಣೆದು ಹಣ ಮಾಡುವುದು ಇಂತವರ ಚಾಳಿ. ಇಂತಹ ವಾಸ್ತು ಕಳ್ಳರನ್ನು ನಂಬಿ ಹಾಳಾದ ಗೆಳೆಯನೊಬ್ಬನ ವಿಷಯವನ್ನು ಹಿಂದೆ ಬರೆದಿದದ್ದೆ. ನನ್ನ ನೆರೆಮನೆಯ ಕಿರಿಯ ಗೆಳೆಯನೊಬ್ಬ ಬಂದು ಹೊಸಮನೆ ಕಟ್ಟಿದ. ಅನುಕೂಲ ಮತ್ತು ಸೌಂಧರ್ಯದ ದೃಷ್ಟಿಯಿಂದ ಅಚ್ಚುಕಟ್ಟಾಗಿದ್ದ ಮನೆಯದು. ಯಾರೋ ಅವನ ಮನಸ್ಸಿಗೆ ವಾಸ್ತುದೋಷದ ಹುಳಬಿಟ್ಟರು. ಒಂದು ದಿನ ಒಬ್ಬ ವಾಸ್ತುತಜ್ಞ ಬಂದ. ಇವನಿಗೆ ಪೂರ್ಣ ನಂಬಿಕೆ ಇಲ್ಲದೇ ಇದ್ದುದ್ದರಿಂದ ನನ್ನನ್ನು ಕರೆದಿದ್ದ. ಆತ ನಿರೀಕ್ಷೆಯಂತೆ ಅದು ಆ ದಿಕ್ಕಿನಲ್ಲಿ ಇರಬೇಕು-ಇದು ಈ ದಿಕ್ಕಿನಲ್ಲಿ ಇರಬೇಕಿತ್ತು ಎಂದು ತಗಾದೆ ತೆಗೆದು-ಅದು ಒಡೆಯಬೇಕು-ಇದು ಒಡೆಯಬೇಕು ಎಂದು ಹೇಳತೊಡಗಿದ ಆಪೂಜೆ-ಈ ಪೂಜೆ ಎಂದು ಕೆಲವು ಖರ್ಚಿನ ಬಾಬತ್ತು ಹೇಳತೊಡಗಿ, ಕೊನೆಗೆ ಕೆಲವು ಕನ್ನಡಿಗಳನ್ನು ಅಲ್ಲಲ್ಲಿ ಆಳವಡಿಸಬೇಕೆಂದು ಹೇಳಿ ಕೆಲವು ಸಾವಿರಗಳ ಕೊಟೇಷನ್ ಕೊಟ್ಟ! ಒಂದು ಕನ್ನಡಿ ಹೇಗೆ ಈ ಮನೆಯ ಭವಿಷ್ಯ ಬದಲಿಸುತ್ತದೆ ಎಂದು ನಾನು ತಗಾದೆ ತೆಗೆದು ಚರ್ಚೆಗಿಳಿದಾಗ ಸುಣ್ಣವಾದ. ಆತನನ್ನು ಕರೆದ ಕರ್ಮಕ್ಕೆಂದು 500ರೂ ಕೊಟ್ಟು ನನ್ನ ಗೆಳೆಯ ಸಾಗಹಾಕಿದ.
ಮುಂದೆ ಇಂತಹ ಕೆಲವು ಕತೆಗಳನ್ನು ಮತ್ತು ವರ್ಚುವಲ್ ಭವಿಷ್ಯ ಮತ್ತು ಪೂಜೆಯ ಬಗ್ಗೆ ನೋಡೋಣ.

– ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಹತ್ಯೆ

0
ಗದಗದ ಬೆಟಗೇರಿ ನಗರಸಭೆ ಅಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ನಾಲ್ವರನ್ನು ಹತ್ಯೆಗೈದಿರುವ ಘಟನೆ ನಗರದಲ್ಲಿ ಗುರುವಾರ (ಏ.18) ಮಧ್ಯರಾತ್ರಿ ನಡೆದಿದೆ. ನಗರದ ಚನ್ನಮ್ಮ ವೃತ್ತದ ಸಮೀಪವಿರುವ ದಾಸರ ಓಣಿಯಲ್ಲಿ ಈ ಘಟನೆ...