Homeಅಂಕಣಗಳು20ನೆ ಶತಮಾನದ ಭಾರತದ ಮುಸ್ಲಿಂ ಮಹಿಳೆಯರ ಅನನ್ಯ ಸಾಧನೆಗಳು

20ನೆ ಶತಮಾನದ ಭಾರತದ ಮುಸ್ಲಿಂ ಮಹಿಳೆಯರ ಅನನ್ಯ ಸಾಧನೆಗಳು

ಇಂದು ಮುಸ್ಲಿಂ ಸಮುದಾಯವು ಮತಾಂಧರ ಟೀಕೆಗೆ ಉತ್ತರಿಸಲು ತಾನು ರಾಷ್ಟ್ರೀಯವಾದಿ ಎಂದು ತಮ್ಮ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ ಎನ್ನುತ್ತಿವೆ ಈ ಹೆಸರುಗಳು

- Advertisement -
- Advertisement -

|ಬಿ. ಶ್ರೀಪಾದ್ ಭಟ್|

ಮುಸ್ಲಿಂ ಮಹಿಳೆಯರ ಹಕ್ಕುಗಳ ಪರವಾಗಿ ಕೆಲಸ ಮಾಡುತ್ತಿರುವ ಮುಸ್ಲಿಂ ಮಹಿಳಾ ವೇದಿಕೆಯು “ಸಿದ್ದ ಮಾದರಿಗಳನ್ನು ಮುರಿದವರು, 20ನೆ ಶತಮಾನದ ಭಾರತದ ಮುಸ್ಲಿಂ ಮಹಿಳೆಯರು” ಎನ್ನುವ ಮಾತುಕತೆಯನ್ನು ಇತ್ತೀಚೆಗೆ ಏರ್ಪಡಿಸಿತ್ತು. ಜನಮಾನಸದ ನೆನಪಿನಿಂದ ಮರೆತು ಹೋದ ಈ ಕಥನವನ್ನು ಮತ್ತೆ ಸಾರ್ವಜನಿಕ ಚರ್ಚೆಗೆ ತಂದು ನಮ್ಮನ್ನು ವಿಸ್ಮೃತಿಯಿಂದ ಹೊರಗೆಳೆಯಲು ಈ ಮುಕ್ತ ಮಾತುಕತೆ ಅವಕಾಶ ಕಲ್ಪಿಸಿಕೊಟ್ಟಿತು. ಸ್ವಾತಂತ್ರಪೂರ್ವ ಮತ್ತು ಸಾತಂತ್ರ್ಯೋತ್ತರ ಸಾರ್ವಜನಿಕ ಬದುಕಿನ ವಿವಿದ ವಲಯಗಳಲ್ಲಿ 21 ಮುಸ್ಲಿಂ ಮಹಿಳೆಯರ ಸಾಧನೆಯನ್ನು ಈ ಸಂವಾದ ವಿವರವಾಗಿ ಬಿಚ್ಚಿಟ್ಟಿತು.

ಸುರಯ್ಯ ತಾಯಬ್ಜಿ, ಹಮೀದ ಹಬೀಬುಲ್ಲ, ಅಜೀಜ ಫಾತಿಮ ಇಮಾಮ್, ಕುದ್ಸಿಯ ಜೈದಿ, ಸಯೀದ ಕುರ್ಶೀದ್, ಮೊಫಿದ ಅಹಮದ್, ಜಹರ ಅಲಿ ಯಾವರ ಜಂಗ್, ರಜಿಯಾ ಸಜ್ಜದ ಜಹೀರ್, ತಾಯಿಬ ಜಂಗ್, ಅತಿಯ ಫೈಜೀ, ಶರೀಫ ಹಮೀದ ಅಲಿ, ಫಾತಿಮ ಇಸ್ಮಾಯಿಲ್, ಮಾಸೌಮ ಹೊಸೇನ ಖಾನ್, ಅನಿಸ್ ಕಿದ್ವಾಯಿ, ಹಜ್ರ ಬೇಗಂ, ಕುದ್ಸಿಯ ಐಜಾಜ್ ರಸೂಲ್, ಮಮ್ತಾಜ್ ಜಹಾನ್ ಹೈದರ್, ಸಿದ್ದಿಕ ಕಿದ್ವಾಯಿ, ಅತ್ತಿಯಾ ಹೊಸೇನ, ಸಲೀಹ ಅಬಿದ್ ಹೊಸೇನ, ಸಫಿಯಾ ಜಾನ್ ನಿಸಾರ್ ಅಕ್ತರ್ ಈ ಮುಸ್ಲಿಂ ಮಹಿಳೆಯರು ವಿಬಿನ್ನ ವರ್ಗಗಳ ಹಿನ್ನೆಲೆಯಿಂದ ಬಂದವರು. ತಮ್ಮ ಸಮಾಜದ ಕಟ್ಟಳೆಯನ್ನು ಕಿತ್ತೊಗೆದು ಲೇಖಕಿಯರಾಗಿ, ಕಲಾವಿದೆಯರಾಗಿ, ರಾಜಕಾರಣಿಗಳಾಗಿ, ಸ್ತ್ರೀವಾದಿಗಳಾಗಿ, ಹೋರಾಟಗಾರ್ತಿಯರಾಗಿ ಬದುಕನ್ನು ಕಟ್ಟಿಕೊಂಡರು. ಮಾನವೀಯ, ಸಮಸಮಾಜವನ್ನು ಕಟ್ಟಿದರು. ಸ್ವಾತಂತ್ರ್ಯ ನಂತರ ಆಧುನಿಕ ಭಾರತ ರೂಪುಗೊಂಡ ಆ ದಶಕಗಳ ಜೊತೆಗೆ ಇವರ ಬದುಕಿನ ನಿರೂಪಣೆ ಹೆಣೆದುಕೊಂಡಿದೆ, ಬೆಸೆದುಕೊಂಡಿದೆ.

ಸುರಯ್ಯ ತಾಯಬ್ಜಿ

ಸುರಯ್ಯ ತಾಯಬ್ಜಿ ಕುಟುಂಬದೊಂದಿಗೆ

ಭಾರತದ ರಾಷ್ಟ್ರೀಯ ಧ್ವಜವನ್ನು ವಿನ್ಯಾಸಗೊಳಿಸಿದ ಸುರಯ್ಯ ತಾಯಬ್ಜಿ ಇಂದು ಯಾರ ಸ್ಮೃತಿಪಟಲದಲ್ಲೂ ಇಲ್ಲ. ಭಾರತದ ದ್ವಜಕ್ಕೆ ಹೆಮ್ಮೆ, ಭಕ್ತಿಯಿಂದ ಸೆಲ್ಯೂಟ್ ಹೊಡೆಯುವ ಇಲ್ಲಿನ ಪ್ರಜೆಗಳಿಗೆ ಅದರ ಸೃಷ್ಟಿಕರ್ತೆ ಸುರಯ್ಯ ತಾಯಬ್ಜಿ  ಕುರಿತು ಅವಜ್ಞೆ ಇದೆ. ಸುರಯ್ಯ ಅವರು ಅಮೀರ್ ಅಲಿ, ಲೈಲ ಹಸನ್ ಲತಿಫ್ ಅವರ ಮಗಳು. 1919ರಲ್ಲಿ ಹೈದರಬಾದ್‍ನಲ್ಲಿ ಜನಿಸಿದರು. ಇವರ ಪತಿ ಬದ್ರುದ್ದೀನ್ ತಾಯಬ್ಜಿ ಅಂದಿನ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು, ಸ್ವಾತಂತ್ರ ಹೋರಟಗಾರರಾಗಿದ್ದರು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ್ದರು. ಇತಿಹಾಸಕಾರರು ‘ಮೊದಲು ಭಾರತದ ಧ್ವಜದಲ್ಲಿ ಕಾಂಗ್ರೆಸ್ ಪಕ್ಷದ ಚಿನ್ಹೆ ಚರಕವನ್ನು ಮಾತ್ರ ಬಳಸಿಕೊಳ್ಳಲಾಗಿತ್ತು. ಆದರೆ ಸುರಯ್ಯ ತಾಯಬ್ಜಿಯವರು ಚರಕದ ಬದಲು ಅಶೋಕ ಚಕ್ರವನ್ನು ಬಳಸಿಕೊಳ್ಳಬೇಕೆಂದು ಪ್ರತಿಪಾದಿಸಿದರು.

ಅನೇಕ ಸುತ್ತಿನ ಚರ್ಚೆಗಳ ನಂತರ ಹಟಮಾರಿ ಗಾಂಧೀಜಿ ಸುರಯ್ಯ ಅವರ ಮಾತಿಗೆ ಮಣಿಯಬೇಕಾಯಿತು. ಈ ಧ್ವಜಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನು ವಿನ್ಯಾಸಗೊಳಿಸಿದ ಸುರಯ್ಯ ಇದು ನಮ್ಮ ದೇಶಪ್ರಮೇದ ಸಂಕೇತ ಎಂದು ಹೇಳಿದ್ದರು’ ಎಂದು ಬರೆಯುತ್ತಾರೆ. ಗಾಂಧಿಯವರ ಆಯ್ಕೆಯಾದ ಈ ಚರಕವು ಕಾಂಗ್ರೆಸ್‍ನ ಪಕ್ಷಪಾತಿಯಾಗಿ ಸಂಕೇತಿಸುತ್ತದೆ ಎಂದು ವಿರೋದಿಸಿದ್ದ ಸುರಯ್ಯ ಅದರ ಬದಲು ಶಾಂತಿ ಸಂದೇಶವನ್ನು ಹೇಳುವ ಅಶೋಕ ಚಕ್ರದ ಪರ ವಾದಿಸಿದರು. ಮುಸ್ಲಿಂ ಸಮುದಾಯಕ್ಕೆ ನಿಮ್ಮ ದೇಶಪ್ರೇಮವನ್ನು ಸಾಬಿತುಗೊಳಿಸಿ ಎಂದು ಒತ್ತಾಯಿಸುವ ಇಲ್ಲಿನ ಮತಾಂದರು ಮೊದಲು ಈ ಸುರಯ್ಯ ತಾಯಬ್ಜಿಯವರ ಮಾನವೀಯತೆಯನ್ನೊಳಗೊಂಡ ದೇಶಪ್ರೇಮದ ಪ್ರಾಥಮಿಕ ಪಾಠವನ್ನು ಕಲಿಯಬೇಕು. ಕಲಾವಿದೆಯಾಗಿದ್ದ ಸುರಯ್ಯ ತಾಯಬ್ಜಿ 1978ರಲ್ಲಿ ಮುಂಬೈಯಲ್ಲಿ ತೀರಿಕೊಂಡರು.

ಬೇಗಂ ಹಮೀದ್‌ ಹಬೀಬುಲ್ಲ

ಬೇಗಂ ಹಮೀದ

ಮಹಿಳೆಯರ ಸಬಲೀಕರಣದ ಪರವಾಗಿ ನಿರಂತರ ಹೋರಾಡಿದ ಬೇಗಂ ಹಮೀದ ಹಬೀಬುಲ್ಲ  ಅವರು ಸ್ವಯಂ ಉದ್ಯೋಗ ಮಹಿಳಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು. 20, ನವೆಂಬರ್ 1916ರಲ್ಲಿ ಜನಿಸಿದ ಹಮೀದ, ಭಾರತ ರಾಜಕಾರಣದ ಎಲ್ಲಾ ಏಳುಬೀಳುಗಳನ್ನು ಕಣ್ಣಾರೆ ಕಂಡವರು, ಅನುಭವಿಸಿದವರು. ವಿಭಜನೆಯ ರಕ್ತಪಾತವನ್ನು ಕಂಡರು. ನಂತರ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಭಾಗಿಯಾದರು. ಉ.ಪ್ರ. ಸರಕಾರದಲ್ಲಿ ಮಂತ್ರಿಯಾಗಿದ್ದರು, ರಾಜ್ಯಸಭಾ ಸದಸ್ಯೆಯಾಗಿದ್ದರು. ಇವೆಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಪರವಾದ ಹೋರಾಟಗಾರ್ತಿಯಾಗಿದ್ದರು. ಲಕ್ನೋದ ಐಕಾನ್ ಎಂದೆ ಪ್ರಸಿದ್ದರಾಗಿದ್ದ ಹಮೀದ ಅವರು ಅವಧ್‍ನ ಮಹಿಳಾ ಪದವಿ ಕಾಲೇಜ್‍ನ ಸ್ಥಾಪಕರಲ್ಲೊಬ್ಬರು. ಮುಸ್ಲಿಂ ಬಾಲಕಿಯರ ಶಿಕ್ಷಣಕ್ಕಾಗಿ ಸ್ಥಾಪಿತಗೊಂಡ ‘ತಲೀಮ್-ಎ-ನಿಶಾನ್’ ಸಂಸ್ಥೆಯ ಅದ್ಯಕ್ಷೆಯಾಗಿದ್ದರು. ಲಕ್ನೋದ ನಾರಿ ಸೇವಾ ಸಮಿತಿಯ ಪೋಷಕರಾಗಿದ್ದರು, 13, ಮಾರ್ಚ್ 2018ರಲ್ಲಿ ತಮ್ಮ 102ನೆ ವಯಸ್ಸಿನಲ್ಲಿ ತೀರಿಕೊಂಡರು.

ಬೇಗಂ ಕುದ್ಸಿಯ ಜೈದಿ

23, ಡಿಸೆಂಬರ್ 1914ರಲ್ಲಿ ಜನಿಸಿದ ಬೇಗಂ ಕುದ್ಸಿಯ ಜೈದಿ ಅವರು ಹಬೀಬ್ ತನ್ವೀರ್ ಜೊತೆ ಸೇರಿ 1955ರಲ್ಲಿ ಹಿಂದುಸ್ತಾನಿ ಥಿಯೇಟರ್ ಅನ್ನು ಸ್ಥಾಪಿಸಿದರು. ಆರಂಭದಲ್ಲಿ ಹವ್ಯಾಸಿ ತಂಡವಾಗಿ ಪ್ರಾರಂಭಗೊಂಡು ಇಂದು ಪಕ್ಕ ವೃತ್ತಿಪರ ನಾಟಕ ತಂಡವಾಗಿ ಪ್ರಸಿದ್ದಿ ಪಡೆದ ಹಿಂದುಸ್ತಾನಿ ಥಿಯೇಟರ್ ಅನ್ನು ಕಟ್ಟಿದರು. ಕಾಳಿದಾಸನ ‘ಶಾಕುಂತಲ’ವನ್ನು ಬ್ರೆಕ್ಟ್‍ನ ಕಕೇಸಿಯನ್ ಚಾಕ್ ಸರ್ಕಲ್‍ವನ್ನು, ಇಸ್ಬೆಲ್‍ನ ‘ಎ ಡಾಲ್ಸ್ ಹೌಸ್’, ಬರ್ನಾಡ್ ಶಾನ ಪಿಗ್ಮೇಲಿಯನ್ ನಾಟಕಗಳನ್ನು ಅನುವಾದಿಸಿ ರಂಗಭೂಮಿಗೆ ಅಳವಡಿಸಿ ಪ್ರಯೋಗಿಸಿದರು. ಮಕ್ಕಳಿಗಾಗಿ ‘ಚಾಚ ಚಕ್ಕನ್ ಕೆ ಡ್ರಾಮೆ’ ನಾಟಕಗಳ ಸರಣಿಯನ್ನು ಪ್ರಯೋಗ ಮಾಡಿದರು. ಆದರೆ ಹಠಾತ್ತನೆ 1960ರಲ್ಲಿ ತಮ್ಮ 46ನೆ ವಯಸ್ಸಿನಲ್ಲಿ ತೀರಿಕೊಂಡರು.

ಬೇಗಂ ಶರೀಫ ಹಮೀದ್ ಅಲಿ 1907ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ್ದರು. ಸರೋಜಿನಿ ನಾಯ್ಡು, ಕಮಲದೇವಿ ಚಟ್ಟೋಪಾದ್ಯಯ, ರಾಣಿ ರಾಜವಾಡೆ ಜೊತೆಗೂಡಿ ‘ಅಖಿಲ ಬಾರತ ಮಹಿಳಾ ಅದಿವೇಶನ’ವನ್ನು ಸ್ಥಾಪಿಸಿದರು. ಮಹಿಳೆಯರ ವಿವಾಹ ವಯಸ್ಸನ್ನು ಹೆಚ್ಚಿಸಬೇಕು ಎನ್ನುವ ಸರ್ದ ಕಾಯಿದೆ ಪರವಾಗಿ ಪ್ರಚಾರ ನಡೆಸಿದರು. ಮುಸ್ಲಿಂ ಮಹಿಳೆಯರ ಮದುವೆಗಳಿಗೂ ಈ ಸರ್ದ ಕಾಯಿದೆ ಅನ್ವಯವಾಗಬೇಕು ಎನ್ನುವ ಚಳುವಳಿ ಪ್ರಾರಂಬಿಸಿದರು. ಈ ಕಾಯಿದೆಯ ಪರವಾಗಿ ಮುಸ್ಲಿಂ ಮಹಿಳೆಯರ ಸಹಿ ಚಳುವಳಿಯನ್ನು ಹಮ್ಮಿಕೊಂಡರು. ಲಂಡನ್‍ನಲ್ಲಿ ನಡೆದ ದುಂಡು ಮೇಜಿನ ಸಬೆಗೆ ಮುಸ್ಲಿಂ ಮಹಿಳ ಪ್ರತಿನಿದಿಯಾಗಿ ಬಾಗವಹಿಸಿ ಮಹಿಳೆ ಮತ್ತು ಪುರುಷರಿಗೆ ಸಮಾನ ಅವಕಾಶ ಕಲ್ಪಿಸಬೇಕೆಂದು ತಮ್ಮ ವಾದ ಮಂಡಿಸಿದರು. 1937ರಲ್ಲಿ ಜೆಕಸ್ವೋವೇಕಿಯದಲ್ಲಿ ಜರುಗಿದ ಶಾಂತಿ ಮತ್ತು ಸ್ವತಂತ್ರಕ್ಕಾಗಿ ಅಂತರಾಷ್ಟ್ರೀಯ ಮಹಿಳಾ ಕಾಂಗ್ರೆಸ್‍ನಲ್ಲಿ ಭಾಗವಹಿಸಿದ್ದರು.

1920ರಲ್ಲಿ ಜನಿಸಿದ ಜಹರ ಅಲಿ ಯಾವರ ಜಂಗ್ ಅವರು ಮಹಿಳಾ ಖೈದಿಗಳ ನೈರ್ಮಲ್ಯ, ಶುಚಿತ್ವ ಮತ್ತು ಹಕ್ಕುಗಳ ಪರವಾಗಿ ಹೋರಾಡಿದರು. ನಗರ ಪ್ರದೇಶಗಳ ಸ್ಲಂವಾಸಿಗಳ ಸೌಕರ್ಯ ಮತ್ತು ಶುಚಿತ್ವದ ಕುರಿತಾಗಿ ಚಿಂತಿಸಿದರು

1906ರಲ್ಲಿ ಜನಿಸಿದ ಬೇಗಂ ಅನಿಸಾ ಕಿದ್ವಾಯಿ ಲೇಖಕಿ, ಹೋರಾಟಗಾರ್ತಿ, ರಾಜಕಾರಣಿಯಾಗಿದ್ದರು. ದೇಶ ವಿಭಜನೆಯ ಸಂದರ್ಭದಲ್ಲಿ ನಿರಾಶ್ರಿತರ ಪುನರ್ವಸತಿಗೆ ನಿರಂತರವಾಗಿ ಶ್ರಮಿಸಿದರು. 1947ರ ಕೋಮು ಗಲಭೆಗಳಲ್ಲಿ ಅವರ ಪತಿ ಶಫಿ ಅಹಮದ್ ಕಿದ್ವಾಯಿ ಕೊಲೆಯಾದರು. ಆದರೆ ದೃತಿಗಡೆದ ಅನಿಸಾ ಅವರು ಬುರ್ಖ ತೊಡುವುದನ್ನು ತ್ಯಜಿಸಿ ದೆಹಲಿಗೆ ಬಂದು ನಿರಾಶ್ರಿತರ ಶಿಬಿರಗಳಲ್ಲಿ ದುಡಿದರು. ಪೂರ್ಣ ಪ್ರಮಾಣದ ಲೇಖಕಿ, ರಾಜಕಾರಣಿಯಾಗಿ ತೊಡಗಿಸಿಕೊಂಡರು.

1907ರಲ್ಲಿ ಜನಿಸಿದ ಮಮ್ತಾಜ್ ಜಹಾನ್ ಹೈದರ್ ಅವರು ಅಲಿಘರ್ ಚಳುವಳಿಯ ಆಧಾರಸ್ತಂಬವಾಗಿದ್ದವರು. ಅಲಿಘರ್ ಮುಸ್ಲಿಂ ವಿಶ್ವ ವಿದ್ಯಾಲಯದ ಮಹಿಳಾ ಕಾಲೇಜ್ ಅನ್ನು ಮೂವತ್ತು ವರ್ಷಗಳ ಕಾಲ ತಳಮಟ್ಟದಿಂದ ಕಟ್ಟಿ, ಬೆಳೆಸಿದರು. ಇಂದು ದೇಶದ ಪ್ರತಿಷ್ಟಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಈ ಸಂಸ್ಥೆಯನ್ನು ರೂಪಿಸಿದವರು ಮಮ್ತಾಜ್ ಜಹಾನ್. ಈ ಅಲಿಘರ್ ಮುಸ್ಲಿಂ ವಿವಿಯ ಮಹಿಳಾ ಕಾಲೇಜ್‍ನಿಂದ ಪದವೀಧರರಾಗಿ ಇಂದು ಉನ್ನತ ಹುದ್ದೆ, ಅಕಡೆಮಿಕ್ ವಲಯಗಳಲ್ಲಿರುವ ನೂರಾರು  ಮುಸ್ಲಿಂ ಮಹಿಳೆಯರ ಯಶಸ್ಸಿನ ಹಿಂದೆ ಮಮ್ತಾಜ್ ಜಹಾನ್ ಅವರ ಶ್ರಮವಿದೆ. ಅವರು ನಿರಂತರವಾಗಿ ಕಟ್ಟಿಕೊಟ್ಟ ಶಿಕ್ಷಣವಿದೆ. ಮಾನವೀಯ ಪಾಠಗಳಿವೆ

ಫೆಬ್ರವರಿ 1917ರಲ್ಲಿ ಅಜ್ಮೀರ್‍ನಲ್ಲಿ ಜನಿಸಿದ ರಜಿಯಾ ಸಜ್ಜದ ಜಹೀರ್ ಉರ್ದು ಬಾಷೆಯ ಮಹತ್ವದ ಲೇಖಕಿ. ಫೆಬ್ರವರಿ 1903ರಲ್ಲಿ ಜನಿಸಿದ ಫಾತಿಮ ಇಸ್ಮಾಯಿಲ್ ಮಹಿಳೆಯರ ಶಿಕ್ಷಣದ ಪರವಾಗಿ ನಿರಂತರ ಸಂಘಟನೆ ಮಾಡಿದವರು. ಪೋಲಿಯೋ ಕಾಯಿಲೆಯ ವಿರುದ್ದ ಸತತವಾಗಿ ಸಂಘಟನೆಗಳನ್ನು ರೂಪಿಸಿದರು, ಆಶ್ರಮಗಳನ್ನು ಸ್ಥಾಪಿಸಿದರು. ಜನವರಿ 2017ರಲ್ಲಿ ಭಾರತವು ಸತತವಾಗಿ ಐದು ವರ್ಷಗಳ ಕಾಲ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿದಾಗ ಅದರ ಹಿಂದೆ ಫಾತಿಮ ಇಸ್ಮಾಯಿಲ್ ಅವರ ಪರಿಶ್ರಮವಿದೆ. ನಿಸ್ವಾರ್ಥ ಸೇವೆಯಿದೆ.

ಈ ಪಟ್ಟಿಯಲ್ಲಿರುವ ಇತರರ ಬದುಕು ಭಿನ್ನವಾಗೇನಿಲ್ಲ. ಇವರೆಲ್ಲ ನಮ್ಮ ರೂಢಿಗತ ಸಮಾಜದ ಸಿದ್ದ ಮಾದರಿಯೊಳಗೆ ಅಡಕಗೊಳ್ಳುವುದಿಲ್ಲ. ಮೇಲಿನ ಮಾತುಕತೆಯಲ್ಲಿ ಭಾಗವಹಿಸಿದ ಪತ್ರಕರ್ತೆ ಸೀಮಾ ಮುಸ್ತಾಫ ಅವರು “ಈ ಮುಸ್ಲಿಂ ಮಹಿಳೆಯರು ಬುರ್ಖ ದರಿಸಿದ, ಸಂಪ್ರದಾಯವಾದಿಗಳ ಶೋಷಣೆಗೊಳಗಾದ ಮಹಿಳೆಯರ ಪ್ರತಿನಿಧಿಗಳಲ್ಲ, ತಮ್ಮ ಕಾಲಘಟ್ಟದ ಎಲ್ಲ ಬಿಕ್ಕಟ್ಟುಗಳನ್ನು ಎದುರಿಸಿದವರು, ಧರ್ಮದ ಎಲ್ಲ ಕಟ್ಟುಪಾಡುಗಳನ್ನು ಮುರಿದು ಪುರುಷಾಧಿಕಾರಕ್ಕೆ ಸವಾಲೊಡ್ಡಿದವರು. ಇಸ್ಲಾಂ ಅನ್ನು ಅದರ ಸ್ವಾತಂತ್ರ್ಯದ ಸ್ಪೂರ್ತಿಯಲ್ಲಿ ಪಾಲಿಸಿದವರು” ಎಂದು ಹೇಳುತ್ತಾರೆ.

ಒಂದು ಕುತೂಹಲದ ವಿಷಯವೆಂದರೆ ಇಲ್ಲಿನ ಬಹುಪಾಲು ಮಹಿಳೆಯರು 1900-1920ರ ಆಸುಪಾಸಿನಲ್ಲಿ ಜನಿಸಿದವರು. ಪ್ರತಿಯೊಬ್ಬರೂ ವೈವಿಧ್ಯವಾದ ಹಿನ್ನೆಲೆಯುಳ್ಳವರು. ಬಹುತೇಕ ಮಹಿಳೆಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರು. ಆದರೆ ಇವರೆಲ್ಲ ಏಕರೂಪಿ ಸಂಸ್ಕೃತಿಯನ್ನು ವಿರೋಧಿಸಿದರು. ಬಹುತ್ವವನ್ನು ಪ್ರತಿಪಾದಿಸಿದರು ಮತ್ತು ಅದರ ನೆರಳಲ್ಲಿಯೇ ತಮ್ಮ ಬದುಕನ್ನು ರೂಪಿಸಿಕೊಂಡರು. ಮೇಲಿನ ಮುಸ್ಲಿಂ ಮಹಿಳೆಯರು ಧರ್ಮಾತೀತವಾಗಿ ಈ ಸ್ತ್ರೀವಾದದ ಹೊಣೆಗಾರಿಕೆಯನ್ನು ಹೊತ್ತಿದ್ದರು. ಯಾವುದೇ ಘೋಷಣೆಗಳಿಲ್ಲದೆ ತಣ್ಣಗೆ ಸಾಮಾಜಿಕ ಬದ್ದತೆಯನ್ನು ಪಾಲಿಸುತ್ತ ಎಲ್ಲರಿಗೂ ಸಹನೀಯವಾದ, ಮಾನವೀಯ ಸಮಾಜದ ನಿರ್ಮಾಣಕ್ಕೆ ಜೀವ ಕೊಟ್ಟಿದ್ದಾರೆ.

ಫರೀದ ಖಾನ್ ಅವರು “ಇವರ ಸಾಧನೆ ಮತ್ತು ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಈಗಾಗಲೆ ಈ ದೇಶದಲ್ಲಿ ಎಲ್ಲರಿಗೂ ಚಿರಪರಿಚಿತರಾಗಬೇಕಿತ್ತು, ಮುಖ್ಯವಾಹಿನಿಯ ಭಾಗವಾಗಬೇಕಿತ್ತು, ಪ್ರತಿಯೊಬ್ಬರಿಗೂ ಇವರು ನೀಡಿದ ಕೊಡುಗೆ, ಮಾಡಿದ ಕೆಲಸದ ಪರಿಚಯವಾಗಿರಬೇಕಿತ್ತು. ಆದರೆ ದುರಂತವೆಂದರೆ ನಾವು ಈ ರೀತಿಯ ಮುಸ್ಲಿಂ ಮಹಿಳೆಯರು 20ನೆ ಶತಮಾನದಲ್ಲಿ ಬದುಕಿದ್ದರು ಎಂದು ಪ್ರದರ್ಶನ ಮಾಡಬೇಕಿದೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಆದರೆ ವಿಚಿತ್ರ ಎನ್ನುವ ರೀತಿಯಲ್ಲಿ ಹಠಾತ್ತನೆ ಈ ತಲೆಮಾರು ಅಂತ್ಯಗೊಂಡಂತಿದೆ. ಇವರು ರೂಪಿಸಿದ ಶಿಕ್ಷಣ, ಸಾಮಾಜಿಕ ಕಳಕಳಿ, ಮಾನವೀಯ ಗುಣಗಳು, ಮತ್ತು ಸಮಾನತೆ ಎಲ್ಲವೂ ಇವರೊಂದಿಗೆ ಕಣ್ಮರೆಯಾದಂತಿದೆ.  ಭಾರತ ಈ ಮೇಲಿನ ತಲೆಮಾರನ್ನು ಮರೆತಿದೆ. ಈ ಮುಸ್ಲಿಂ ಮಹಿಳೆಯರು ರೂಪಿಸಿದ ಸಮಾಜ, ಕಟ್ಟಿಕೊಟ್ಟ ಬದುಕನ್ನು ಮುಂದುವರೆಸಿಕೊಂಡು ಹೋಗಬೇಕಾಗಿದ್ದ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ತಮ್ಮ ಜವಬ್ದಾರಿಯನ್ನು ನಿಭಾಯಿಸಿಲ್ಲ ಮಾತ್ರವಲ್ಲ ಸೋತಿವೆ. ಈ ಕಾರಣಕ್ಕಾಗಿಯೆ 21ನೆ ಶತಮಾನದಲ್ಲಿನ ಈ ದಿನಗಳಲ್ಲಿ ಮುಸ್ಲಿಂ ಮಹಿಳೆ ಅತ್ಯಂತ ಶೋಷಿತಳಾಗಿ ಬದುಕು ಸವೆಸುತ್ತಿದ್ದಾಳೆ.  ಪುರುಷಾಧಿಪತ್ಯ, ಧರ್ಮದ ಅಮಾನವೀಯ ಪದ್ದತಿಗಳ ವಿರುದ್ದ ಹೋರಾಡಲು ಹೆಣಗುತ್ತಿದ್ದಾಳೆ. ಏಕಾಂಗಿಯಾದ ಆಕೆಗೆ ಈ ಮೂಲಭೂತವಾzದ ಪ್ರವಾಹದ ವಿರುದ್ದ ಈಜಲು ಕಸುವು ಸಾಲುತ್ತಿಲ್ಲ. ಜಾಮಿಯಾ ಮಿಲಿಯ ಇಸ್ಲಾಮಿಯ ಸಂಸ್ಥೆಯ ಮಾಜಿ ಡೀನ್ ಆಗಿದ್ದ ಫರೀದ್ ಖಾನ್ ‘ಪ್ರತಿಯೊಂದು ಧರ್ಮವೂ ಮಹಿಳೆಯನ್ನು ಶೋಷಿಸುತ್ತದೆ. ಆದರೆ ಇಸ್ಲಾಂ ಮಾತ್ರ ಯಾಕೆ ಈ ಸ್ತ್ರೀವಾದದ ಭಾರವನ್ನು ಹೊರಬೇಕು’ ಎಂದು ಪ್ರಶ್ನಿಸುತ್ತಾರೆ.

ಆದರೆ ಇತಿಹಾಸದಲ್ಲಿ ಈ ಧೀಮಂತ ಮಹಿಳೆಯರು ಶಿಕ್ಷಣದಲ್ಲಿ, ಸಾಹಿತ್ಯ, ಸಂಸ್ಕೃತಿ ವಲಯದಲ್ಲಿ, ರಾಜಕೀಯದಲ್ಲಿ, ಸ್ತ್ರೀ ಚಳುವಳಿಗಳಲ್ಲಿ ಬಿತ್ತಿದ ಸಮಾನತೆ, ಸ್ವಾತಂತ್ರ್ಯ, ಮಾನವೀಯತೆಯ ಬೀಜ ಈಗ ಮರವಾಗಿದೆ. ಇದು ಎಂದಿಗೂ ಸಾಯುವುದಿಲ್ಲ. ಈ ಮರವನ್ನು ಕಡಿಯಲೂ ಸಾದ್ಯವಿಲ್ಲ. ಉರ್ದು ಲೇಖಕಿ, ವೈದ್ಯೆ, 20ನೆ ಶತಮಾನದ ಅತ್ಯಂತ ಪ್ರಮುಖ ಸ್ತ್ರೀವಾದಿ, ಪ್ರಗತಿಪರ ಲೇಖಕರ ಒಕ್ಕೂಟದ ಸದಸ್ಯೆಯಾಗಿದ್ದ ರಶೀದ ಜಹಾನ್ ಕುರಿತು ಲೇಖಕಿ ಇಸ್ಮತ್ ಚುಗ್ತಾಯಿ ಅವರು ‘ಆಕೆ ನನ್ನನ್ನು ಹಾಳು ಮಾಡಿದಳು. ಏಕೆಂದರೆ ಆಕೆ ದಿಟ್ಟೆಯಾಗಿದ್ದಳು. ಎಲ್ಲ ಬಗೆಯ ಸಂಗತಿಗಳನ್ನು ಬಹಿರಂಗವಾಗಿ ಮತ್ತು ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದಳು. ನಾನು ಅವಳನ್ನು ಅನುಕರಣೆ ಮಾಡಲು ಬಯಸುತ್ತೇನೆ’ ಎಂದು ಹೇಳುತ್ತಾರೆ.

ಇಂದು ಮುಸ್ಲಿಂ ಸಮುದಾಯವು ಮತಾಂಧರ ಟೀಕೆಗೆ ಉತ್ತರಿಸಲು ತಾನು ರಾಷ್ಟ್ರೀಯವಾದಿ ಎಂದು ತಮ್ಮ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಮೇಲಿನ ಮುಸ್ಲಿಂ ಮಹಿಳೆಯರ ಬದುಕು ಅನುಕರಣೀಯವಾಗಬೇಕು. ಮರಳಿ ಈ ತಲೆಮಾರನ್ನು ರೂಪಿಸಲು ಅನುವಾಗುವಂತಹ ವಾತವರಣ ರೂಪಿಸಬೇಕು.

ಇದನ್ನು ಓದಿ: ಆಧುನಿಕ ಶಿಕ್ಷಣದ ಪ್ರವಾದಿ ಸೈಯದ್ ಅಹಮದ್ ಖಾನ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...