- Advertisement -
ಉತ್ತರಪ್ರದೇಶದ ಬರೇಲಿಯಲ್ಲಿ ಮಾಂಸದ ಫ್ಯಾಕ್ಟರಿಯಿಂದ ಮನೆಗೆ ಬರುವಾಗ 17 ವರ್ಷದ ಬಾಲಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆತನಿಗೆ ಥಳಿಸಿ ಕೊಲೆ ಮಾಡಿದ ಆರೋಪದ ಮೇಲೆ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.
17 ವರ್ಷದ ಅರ್ಕನ್ ಅಲಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಬರೇಲಿ ಪೊಲೀಸರು ಹೇಳಿಕೊಂಡಿದ್ದರು. ಆದರೆ ಘಟನೆ ನಡೆದು ನಾಲ್ಕು ತಿಂಗಳ ಬಳಿಕ ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಆ.17ರಂದು ಬರೇಲಿಯ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ತಂದೆ ಪಪ್ಪು ಖುರೇಷಿ ಅವರ ದೂರಿನ ಮೇರೆಗೆ ಬಿತ್ರಿ ಚೈನ್ಪುರ ಠಾಣಾಧಿಕಾರಿ ಅಶ್ವಿನಿ ಕುಮಾರ್ ಚೌಬೆ, ಸಬ್ ಇನ್ಸ್ಪೆಕ್ಟರ್ ಧರ್ಮೇಂದ್ರ ಕುಮಾರ್, ಕಾನ್ಸ್ಟೆಬಲ್ಗಳಾದ ರಾಜೇಶ್, ವಿಪಿನ್ ಕಂಡ್ವಾಲ್ ಮತ್ತು ಹೋಮ್ ಗಾರ್ಡ್ ವೀರಪಾಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳ ಮೇಲೆ ನರಹತ್ಯೆ, ಸುಲಿಗೆ, ಕ್ರಿಮಿನಲ್ ಪಿತೂರಿ, ದರೋಡೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ತನ್ನ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಲ್ಲದೆ, ಆತನಿಂದ 30,400 ರೂಪಾಯಿ ದೋಚಿದ್ದಾರೆ ಎಂದು ಪಪ್ಪು ಖುರೇಷಿ ಆರೋಪಿಸಿದ್ದಾರೆ.
ಎಪ್ರಿಲ್ 17 ರಂದು ಅರ್ಕಾನ್ ಅವರು ಎಮ್ಮೆ ಸಾಗಿಸಿದ ಹಣವನ್ನು ಸಂಗ್ರಹಿಸಲು ಮಾರಿಯಾ ಫ್ರೋಜನ್ ಮಾಂಸದ ಕಾರ್ಖಾನೆಗೆ ಹೋದಾಗ ಈ ಘಟನೆ ನಡೆದಿದೆ. ಅರ್ಕಾನ್ ಗೆ ತಂದೆ ಖುರೇಷಿ 11.30 ರವರೆಗೆ ಕಾಯುತ್ತಾ ಕುಳಿತಿದ್ದರು. ಬಳಿಕ ಕರೆ ಮಾಡಿದಾಗ, ಆತ ಹಣ ತೆಗೆದುಕೊಂಡಿದ್ದು ಮನೆಗೆ ಬರುತ್ತಿರುವುದಾಗಿ ಹೇಳಿದ್ದ. ಆದರೆ ಮತ್ತೆ 11:45 ಕ್ಕೆ ನನಗೆ ಮಗನ ಫೋನ್ ನಿಂದ ಕರೆ ಬಂದಿದೆ. ಆಗ ತನ್ನನ್ನು ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿ 50,000 ರೂಪಾಯಿಯೊಂದಿಗೆ ಬೇಗ ಸ್ಥಳಕ್ಕೆ ತಲುಪುವಂತೆ ಖುರೇಷಿಗೆ ಕೇಳಿಕೊಂಡಿದ್ದಾನೆ . ಇಲ್ಲವಾದರೆ ಮಗನ ಮೇಲೆ ಗೋಹತ್ಯೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಸಿದ್ದರು ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.
ಇದರಿಂದ ಭಯಗೊಂಡ ಖುರೇಷಿ ಸ್ಥಳೀಯರ ಜೊತೆ ಬರೇಲಿಯ ಕಂಟೋನ್ಮೆಂಟ್ ಪ್ರದೇಶದ ಬಿಲಾಲ್ ಮಸೀದಿ ಪ್ರದೇಶಕ್ಕೆ ಹೋಗಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್, ಕಾನ್ಸ್ಟೆಬಲ್ಗಳು ಮತ್ತು ಹೋಮ್ ಗಾರ್ಡ್ ತನ್ನ ಮಗನನ್ನು ಅಮಾನುಷವಾಗಿ ಥಳಿಸುವುದನ್ನು ನಾನು ನೋಡಿದ್ದೇನೆ ಎಂದು ಅವರು ಆರೋಪಿಸಿದ್ದಾರೆ.
ಮಗ ರಕ್ತದ ಮಡುವಿನಲ್ಲಿ ನೆಲದ ಮೇಲೆ ಮಲಗಿದ್ದ. ಸ್ಥಳದಲ್ಲಿ ಬಿಳಿ ಕಾರು ಮತ್ತು ಬೈಕ್ ನಿಂತಿತ್ತು. ಗ್ರಾಮದ ಮುಖ್ಯಸ್ಥ ಪೋನ್ ಕರೆ ಮಾಡಿದ ನಂತರ SHO ಚೌಬೆ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಅವರು ಎಸ್ ಎಚ್ ಒ ಪೊಲೀಸರನ್ನು ಸಮರ್ಥಿಸಿಕೊಂಡಿದ್ದಾರೆ. ವಾದಿಸಿದರೆ ಗ್ರಾಮಕ್ಕೆ ಬೆಂಕಿ ಹಚ್ಚುವುದಾಗಿ ಹಾಗೂ ಶೂಟ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೇ 4 ರಂದು ಸ್ಥಳೀಯ ನ್ಯಾಯಾಲಯದಲ್ಲಿ CrPC 156 (3) ಅಡಿಯಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, ಖುರೇಷಿ ಅವರು ಸ್ಥಳೀಯರು ಚಿತ್ರೀಕರಿಸಿದ ವೀಡಿಯೊವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು ಮತ್ತು ಪೊಲೀಸ್ ಅಧಿಕಾರಿಯು ಅವರಿಗೆ ಬೆದರಿಕೆ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.
ಬಾಲಕ ತಲೆಗೆ ಆದ ಗಾಯದಿಂದ ಮೃತಪಟ್ಟಿದ್ದಾನೆಂದು ಖುರೇಷಿ ಹೇಳಿದ್ದು, ಗಾಯದ ನಿಜವಾದ ಸ್ವರೂಪ ಅಥವಾ ನಿಖರವಾದ ಕಾರಣದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ.
ಮರಣೊತ್ತರ ಪರೀಕ್ಷೆ ವರದಿಯು ತನ್ನ ಮಗನ ದೇಹದಲ್ಲಿ “16 ಗಾಯಗಳು” ಇದೆ ಎಂದು ತೋರಿಸಿದೆ ಎಂದು ಖುರೇಷಿ ಹೇಳಿದರು. ಆದರೆ, ಬರೇಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ, ಇನ್ಸ್ಪೆಕ್ಟರ್ ಜನರಲ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಬರೇಲಿಯ ಉನ್ನತ ಅಧಿಕಾರಿಗಳಿಗೆ ಲಿಖಿತ ದೂರುಗಳನ್ನು ಸಲ್ಲಿಸಿದ್ದರೂ, ಈ ಬಗ್ಗೆ ಯಾವುದೇ ಎಫ್ಐಆರ್ ದಾಖಲಿಸಿರಲಿಲ್ಲ ಎಂದು ಅವರು ಹೇಳಿದರು.
ಆದರೆ ಸ್ಥಳದಲ್ಲಿ ಪೊಲೀಸ್ ತಂಡದ ಮೇಲೆ ಹಲ್ಲೆ ಮಾಡಿದ್ದಾರೆಂದು ಪೊಲೀಸರು ತನ್ನ ಮತ್ತು ಇತರ ಗ್ರಾಮಸ್ಥರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ರಾಜೀವ್ ಗಾಂಧಿಯ ರಾಜಕೀಯ ಜೀವನ ಕ್ರೂರ ರೀತಿಯಲ್ಲಿ ಕೊನೆಗೊಂಡಿದೆ: ಸೋನಿಯಾ ಗಾಂಧಿ
- Advertisement -