2022-23ನೇ ಸಾಲಿನಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಬಿಸಿಯೂಟ ತಯಾರಕರು, ಬಿಸಿಯೂಟ ಸಹಾಯಕರು, ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರು, ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳ ಗೌರವಧನ ಹೆಚ್ಚಿಸಲಾಗಿದೆ. ಇದರಿಂದ 4.45 ಲಕ್ಷ ಜನರಿಗೆ ಫಲ ದೊರೆತಿದ್ದು, ಒಟ್ಟು 775 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿಯವರು ಈ ವರ್ಷದ ಬಜೆಟ್ನಲ್ಲಿ ಘೋಷಿಸಿದ್ದಾರೆ.
ಆದರೆ ಕಳೆದ ವರ್ಷ ಸರ್ಕಾರ ಅಷ್ಟೆಲ್ಲ ಮಾಡಿದರೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೊಮ್ಮಾಯಿಯವರು ಮೇಲೆ ಉಲ್ಲೇಖಿಸಿದ ಬಹುತೇಕ ಸಮುದಾಯಗಳು ಇಂದಿಗೂ ಹೋರಾಟದಲ್ಲಿ ನಿರತವಾಗಿವೆ.
ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಶಾಲೆಗಳಲ್ಲಿ ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (AITUC) ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ.
ಆರೋಗ್ಯ ಇಲಾಖೆಯ NHM ಒಳಗುತ್ತಿಗೆ ನೌಕರರು ಖಾಯಂ ಮಾಡಲು ಒತ್ತಾಯಿಸಿ ಪ್ರತಿಭಟನೆಗೆ ಕೂತಿದ್ದಾರೆ.
ಸ್ಥಳೀಯ ಸಂಸ್ಥೆಗಳ ನೌಕರರೆಂದು ಪರಿಗಣಿಸಿ, ಶತಮಾನಗಳ ಬಿಟ್ಟಿ ಚಾಕರಿ ತೊಲಗಿಸಿ ಎಂದು ಆಗ್ರಹಿಸಿ ಮಸಣ ಕಾರ್ಮಿಕರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
PCP ನೌಕರರ ಹುದ್ದೆ ವ್ಯತ್ಯಾಸ ಗೊಳಿಸಿ ಹೊರಗುತ್ತಿಗೆಗೆ ಬದಲಾಯಿಸಿರುವ ಕ್ರಮವನ್ನು ವಿರೋಧಿಸಿ, ಕಳೆದ ಎರಡು ವರ್ಷಗಳಿಂದ ವೇತನ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಪ್ರತಿಭಟನೆ ನಡೆಸುತ್ತಿದೆ.
ರಾಜ್ಯದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು ʼಡಿʼ ಗ್ರೂಪ್ ನೌಕರರ ಪಟ್ಟಿಗೆ ಸೇರಿಸಿ ಮೇಲ್ದರ್ಜೆಗೇರಿಸಬೇಕು, ಗೌರವಧನ ಬೇಡ ನಿಶ್ಚಿತ ವೇತನ ಕೊಡಿ ಎಂದು ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ ಹೋರಾಟ ನಡೆಸುತ್ತಿದೆ.
ಕಳೆದ ತಿಂಗಳು ಅಂಗನವಾಡಿ ಅವ್ವಂದಿರು ವಾರಗಳ ಕಾಲ ಹಗಲು ರಾತ್ರಿ ಫ್ರೀಡಂ ಪಾರ್ಕ್ನಲ್ಲಿ ಚಳಿಯನ್ನು ಲೆಕ್ಕಿಸದೇ ಹೋರಾಟ ನಡೆಸಿದ್ದರು. ಅದಕ್ಕೂ ಹಿಂದೆ ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು ತಿಂಗಳುಗಟ್ಟಲೇ ಹೋರಾಟ ನಡೆಸಿದ್ದರು.
ಆಶಾ ಕಾರ್ಯಕರ್ತೆಯರು ಸಾಗರೋಪಾದಿಯಾಗಿ ಬೆಂಗಳೂರಿಗೆ ಆಗಮಿಸಿ ಹತ್ತಾರು ಹೋರಾಟಗಳನ್ನು ನಡೆಸಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ.
ಇನ್ನು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾರಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಎರಡು ತಿಂಗಳಿನಿಂದ ಹೋರಾಟ ನಿರತವಾಗಿದೆ.
ಬೊಮ್ಮಾಯಿಯವರು ನಾವು 4.45 ಲಕ್ಷ ಜನರಿಗೆ ಫಲ ದೊರೆಯಲು ಒಟ್ಟು 775 ಕೋಟಿ ರೂ ಬಿಡುಗಡೆ ಮಾಡಿದ್ದೇವೆ ಎಂದು ಬಜೆಟ್ ಸಂದರ್ಭದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಹಾಗಿದ್ದರೂ ಇಂದೂ ಸಹ ಆ ಸಮುದಾಯಗಳು ಏಕೆ ಹೋರಾಟ ನಿರತವಾಗಿವೆ? ಅವರ ನೋವುಗಳನ್ನು ಕೇಳಲು, ಬಗೆಹರಿಸಲು ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಲೇ ಇವೆ.
ಇದನ್ನೂ ಓದಿ: ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಗುಮಾಸ್ತ ತಯಾರಿಸಿದ ಲೆಕ್ಕಾಚಾರದ ಬಜೆಟ್: ಬಡಗಲಪುರ ನಾಗೇಂದ್ರ