Homeಕರ್ನಾಟಕಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರು: ಸಚಿವ ಸುಧಾಕರ್‌ ಹೇಳಿಕೆಗೆ ಆಕ್ಷೇಪ

ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರು: ಸಚಿವ ಸುಧಾಕರ್‌ ಹೇಳಿಕೆಗೆ ಆಕ್ಷೇಪ

ಅರ್ಟಿಕಲ್ 15 ಪ್ರಕಾರ ಯಾವುದೇ ಧರ್ಮ, ಜಾತಿ, ವ್ಯಕ್ತಿಯನ್ನು ನಿಂದಿಸುವುದು ಅಪರಾಧ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಇನ್ನೊಬ್ಬರನ್ನು ಮೆಚ್ಚಿಸಲು ಅವಹೇಳನ ಮಾಡಿದ್ದಾರೆ- ಆರ್ ಧ್ರುವನಾರಾಯಣ್

- Advertisement -
- Advertisement -

ಚಿಕ್ಕಬಳ್ಳಾಪುರ ತಾಲ್ಲೂಕು ಬ್ರಾಹ್ಮಣರ ಸಂಘವು ಇತ್ತೀಚೆಗೆ ಏರ್ಪಡಿಸಿದ್ದ ‘ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, “ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡರಾದ ಡಾ.ಎಚ್.ಸಿ ಮಹದೇವಪ್ಪ ಮತ್ತು ಮಾಜಿ ಸಂಸದರಾದ ಆರ್.ಧ್ರುವನಾರಾಯಣ್ ಸುಧಾಕರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಸುದ್ದಿವಾಣಿ’ ವೆಬ್‌ಸೈಟ್‌ನಲ್ಲಿ ಆಗಿರುವ ವರದಿ (ಮಂಗಳವಾರ ಸಂಜೆ ವೇಳೆಗೆ ಸುದ್ದಿಯನ್ನು ಡಿಲೀಟ್ ಮಾಡಲಾಗಿದೆ. ಫೆ. 27ರಂದು ಸುದ್ದಿ ಅಪ್‌ಲೋಡ್ ಆಗಿತ್ತು.)
‘ಸುದ್ದಿವಾಣಿ’ ವೆಬ್‌ಸೈಟ್‌ ವರದಿಯ ಸ್ಕ್ರೀನ್‌ಶಾಟ್‌ ಅನೇಕ ಬಾರಿ ಫಾರ್ವಡ್‌ ಆಗಿದೆ.
ಚಿಕ್ಕಬಳ್ಳಾಪುರ ಸ್ಥಳೀಯ ಪತ್ರಿಕೆ ‘ಸುವರ್ಣ ಪಾಲಾರ್‌’ನಲ್ಲಿ ಮಾರ್ಚ್ 1ರಂದು ಆಗಿರುವ ವರದಿ.

“ಬೌದ್ಧಧರ್ಮದ ಅಪಾಯದಿಂದ ಭಾರತವನ್ನು ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ: ಡಾ.ಕೆ.ಸುಧಾಕರ್‌” ಎಂಬ ಶೀರ್ಷಿಕೆಯಲ್ಲಿ ‘ಸುವರ್ಣ ಪಾಲಾರ್‌’ ವರದಿ ಮಾಡಿದ್ದು, “ಬೌದ್ಧಧರ್ಮದ ಸುಳಿಗೆ ಸಿಕ್ಕ ವಿಶ್ವದ ನಾನಾ ದೇಶಗಳು ಆ ಧರ್ಮಕ್ಕೆ ಮತಾಂತರ ಆಗುತ್ತಿರುವಾಗ ಅದನ್ನು ತಡೆದು ಭಾರತೀಯ ಧರ್ಮವನ್ನು ಉಳಿಸಿದ ಕೀರ್ತಿ ಬ್ರಾಹ್ಮಣ ಸಮುದಾಯದ ಆದಿಶಂಕರಾಚಾರ್ಯರಿಗೆ ಸಲ್ಲುತ್ತದೆ” ಎಂದು ಸುಧಾಕರ್‌ ಹೇಳಿದ್ದಾರೆ.

“ವಿಜ್ಞಾನಕ್ಕೂ ಮೊದಲು ಮಾನವ ಸಮಾಜಕ್ಕೆ ದಿಕ್ಕುದೆಸೆ ತೋರಿ ಆಚಾರ್ಯ ಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯ ಎಲ್ಲಾ ಸಮಾಜದ ಕಾರ್ಯಕ್ರಮಗಳಿಗೂ ನೈತಿಕ ಬಲ ತುಂಬಿ ಆಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಇಂದು ಭಾರತೀಯ ಸಂಸ್ಕೃತಿ, ಆಚಾರ ವಿಚಾರ ವಿಶ್ವಮಾನ್ಯವಾಗಿದ್ದರೆ ಅದರ ಶ್ರೇಯ ಈ ಸಮುದಾಯಕ್ಕೆ ಸಲ್ಲಬೇಕು. ಈ ನಿಟ್ಟಿನಲ್ಲಿ ಸಾವಿರಾರು ವರ್ಷದಿಂದ ನಾಗರಿಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವ ಬ್ರಾಹ್ಮಣ ಸಮುದಾಯವು ವಿಶೇಷ ಗೌರವ ಸ್ಥಾನವನ್ನು ಹೊಂದಿದೆ” ಎಂದು ಸುಧಾಕರ್‌ ತಿಳಿಸಿದ್ದಾರೆ.

“ಇಡೀ ದೇಶವೇ ಬೌದ್ಧಧರ್ಮವನ್ನು ಅಪ್ಪಿಕೊಳ್ಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಧರ್ಮ, ಸಂಸ್ಕೃತಿಗೆ ಎದುರಾಗಿದ್ದ ಅಪಾಯವನ್ನು ತಪ್ಪಿಸಿ ಭಾರತವನ್ನು ಭಾರತೀಯತೆಯನ್ನು ಉಳಿಸಿದ ಆದಿಶಂಕರಚಾರ್ಯರನ್ನು ನಾವು ಸ್ಮರಿಸಲೇಬೇಕು. ಈ ಸಾಲಿನಲ್ಲಿ ಮಧ್ವರು, ಶ್ರೀರಾಮಾನುಜಾಚಾರ್ಯರು ಸೇರಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದೆಡೆ, “ಬ್ರಾಹ್ಮಣರಿಗೆ ಪಾಳೇಗಾರರು, ರಾಜ ಮಹಾರಾಜರು ಬಹಳಷ್ಟು ಜಮೀನನ್ನು ಕೊಟ್ಟಿದ್ದರು. ಬ್ರಾಹ್ಮಣರ ಬಳಿ ಬಹಳಷ್ಟು ಜಮೀನು ಇತ್ತು. ಅದೆಲ್ಲವನ್ನೂ ಇಂದಿರಾ ಗಾಂಧಿಯವರು ವಾಪಸ್ ಕಿತ್ತುಕೊಂಡರು” ಎನ್ನುತ್ತಾ, ಉಳುವವನೇ ಭೂಮಿಯ ಒಡೆಯ ಕಾನೂನನ್ನು ಪ್ರಸ್ತಾಪಿಸುತ್ತಾರೆ. ಜೊತೆಗೆ ದೇವರಾಜ ಅರಸು ಅವರ ಹೆಸರನ್ನೂ ಸುಧಾಕರ್‌ ಹೇಳುತ್ತಾರೆ. “ನಿಮ್ಮ ಮಕ್ಕಳಿಗೆ ಉಳಿದಿರುವುದು ಜ್ಞಾನದ ಶಕ್ತಿಯಷ್ಟೇ” ಎನ್ನುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ಆರ್.ಧ್ರುವನಾರಾಯಣ್, “ಬುದ್ಧಿ ಇಲ್ಲದವರಿಗೆ ಬೌದ್ಧಧರ್ಮ ಅರ್ಥವಾಗುವುದಿಲ್ಲ, ಆದ್ದರಿಂದಲೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಂತಹ ಅನಾರೋಗ್ಯ ಮನಸ್ಸಿನವರು ಬೌದ್ಧ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತಾಡುತ್ತಾರೆ. ಅರ್ಟಿಕಲ್ 15 ಪ್ರಕಾರ ಯಾವುದೇ ಧರ್ಮ, ಜಾತಿ, ವ್ಯಕ್ತಿಯನ್ನು ನಿಂದಿಸುವುದು ಅಪರಾಧ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಇನ್ನೊಬ್ಬರನ್ನು ಮೆಚ್ಚಿಸಲು ಅವಹೇಳನ ಮಾಡಿದ್ದಾರೆ” ಎಂದು ಕಿಡಿಕಾರಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆ ಪ್ರವಾಸದ ವೇಳೆ ‘ನಾನು ಬುದ್ಧನ ನಾಡಿನಿಂದ ಬಂದವರೆಂದು’ ಹೇಳುತ್ತಾರೆ. ಆದರೆ ಕರ್ನಾಟಕದ ಅನಾರೋಗ್ಯ ಮಂತ್ರಿ ಬುದ್ಧಿ ಇಲ್ಲದಂತೆ ಮಾತಾಡುತ್ತಾರೆ.

ಬೌದ್ಧ ಧರ್ಮ ಭಾರತದಲ್ಲಿ ಹುಟ್ಟಿ ಹೊರ ದೇಶದಲ್ಲಿ ವಿಶಾಲವಾಗಿ ಬೆಳೆದಿದೆ. ಬೌದ್ಧ ಧಮ್ಮದ ಸಾರ ಪ್ರೀತಿ, ಕರುಣೆ, ದಯೆ, ಸೌಹಾರ್ದತೆ ಹಾಗೂ ವೈಜ್ಞಾನಿಕ ತಳಹದಿಯಿಂದ ಕೂಡಿದೆ. ನಿಂದಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಬುದ್ಧರು ಸ್ಥಾಪಿಸಿರುವ ಧಮ್ಮದ ಕುರಿತು ಅವಹೇಳನಕಾರಿಯಾಗಿ ಮಾತಾಡಿರುವ ಸಚಿವ ಡಾ.ಕೆ.ಸುಧಾಕರ್ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗುತ್ತದೆಂದು ಧ್ರುವ ನಾರಾಯಣ ಅವರು ಎಚ್ಚರಿಕೆ ನೀಡಿದರು.

ಸುಧಾಕರ್‌ ಅವರಿಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಮಾನವನ ಘನತೆಗಾಗಿ, ಸಮಾನತೆಗಾಗಿ ಹೋರಾಡಿದ ಬೌದ್ಧಧರ್ಮದ ಕುರಿತು ಅಪಪ್ರಚಾರ ಮಾಡುವುದು ಅಕ್ಷ್ಯಮ್ಯವಲ್ಲವೇ? ಸುಧಾಕರ್‌ ಅವರ ಪ್ರಕಾರ ಬೌದ್ಧಧರ್ಮ ಈ ದೇಶದ ಜನರಿಗೆ ಮಾಡಿರುವ ಅನ್ಯಾಯವಾದರೂ ಏನು?

ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಸುಧಾಕರ್‌ ಹೇಳಿಕೆಯನ್ನು ಖಂಡಿಸಿದ್ದು, “ನಾನು ಸಚಿವ ಸುಧಾಕರ್ ಅವರನ್ನು ಅಷ್ಟೋ ಇಷ್ಟೋ ಇತಿಹಾಸ ಬಲ್ಲಂತಹ ಪ್ರಜ್ಞಾವಂತ ಎಂದುಕೊಂಡಿದ್ದೆ. ಆದರೆ ಈತ ಚುನಾವಣಾ ಸಂದರ್ಭದಲ್ಲಿ ಒಂದು ಸಮುದಾಯವನ್ನು ಓಲೈಸಲು, ಈ ದೇಶಕ್ಕೆ ಧರ್ಮದ ಮೂಲಕ ಸಮಾನತೆಯನ್ನು ಪರಿಚಯಿಸಿದ ಮತ್ತು ಸಾಮಾಜಿಕ ಮೇಲು ಕೀಳನ್ನು ಆಚರಿಸುತ್ತಿದ್ದ ಪುರೋಹಿತಶಾಹಿಗಳನ್ನು ತಿದ್ದಲು ಪ್ರಯತ್ನಿಸಿ ಕೊನೆಗೆ ಅವರಿಂದಲೇ ಕೊನೆಗೊಂಡ ಬೌದ್ಧ ಧರ್ಮದ ಬಗ್ಗೆ ಅಜ್ಞಾನದಿಂದ ಮಾತನಾಡುತ್ತಿರುವುದು ಖಂಡನೀಯ” ಎಂದಿದ್ದಾರೆ.

“ಬೌದ್ಧ ಧರ್ಮ ಸಮಾನತೆಯನ್ನು ನೀಡುವ ಸಲುವಾಗಿ ಮಹಾನ್ ಸಂತ ಬುದ್ಧನಿಂದ ಹಬ್ಬಿದ ಈ ದೇಶದ ಮೂಲ ನಿವಾಸಿಗಳ ಧರ್ಮ. ಬೌದ್ಧ ಧರ್ಮವು ತನ್ನ ಸಮ ಸಮಾಜದ ಕಲ್ಪನೆಯಲ್ಲಿ ಅಷ್ಟೊಂದು ಸ್ಪಷ್ಟವಾಗಿದ್ದ ಕಾರಣದಿಂದಲೇ ಬಾಬಾ ಸಾಹೇಬರು ಹಿಂದೂ ಧರ್ಮದ ಅಸಮಾನತೆಗಳ ವಿರುದ್ಧ ಸಿಡಿದೆದ್ದು ಬೌದ್ಧ ಧರ್ಮ ಸ್ವೀಕರಿಸಿದರು” ಎಂಬುದನ್ನು ಮಹದೇವಪ್ಪ ನೆನಪಿಸಿದ್ದಾರೆ.

“ಅಷ್ಟಕ್ಕೂ ಹಿಂಸಾ ಪ್ರವೃತ್ತಿಯನ್ನು ಕೈಬಿಟ್ಟು ಬೌದ್ಧ ಧರ್ಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದವರು ಮೌರ್ಯರು. ಈ ಮೌರ್ಯ ವಂಶದ ಅರಸ ಬೃಹದ್ರಥನನ್ನು ಕೆಳಗಿಸಲು ಶೃಂಗರ ಅರಸ ಋಷ್ಯಶೃಂಗ ಏನು ಮಾಡಿದ ಮತ್ತು ಬೌದ್ಧರ ಚಹರೆಗಳನ್ನು ಹೇಗೆಲ್ಲಾ ಅಳಿಸಿ ಹಾಕಿದ ಎಂದು ಸುಧಾಕರ್‌ಗೆ ತಿಳಿದಿಲ್ಲ. ಅದೇ ಮಾರ್ಗವಾಗಿ ಬೌದ್ಧರಿಂದ ಆಯುರ್ವೇದವನ್ನು ಕಲಿತು ಕೊನೆಗೆ ಅವರಿಗೆ ತಿರುಗು ಬಾಣವಾದ ಪತಂಜಲಿಯ ಕುರಿತೂ ಸುಧಾಕರ್ ಓದಿಕೊಳ್ಳಲಿ” ಎಂದು ಸಲಹೆ ನೀಡಿದ್ದಾರೆ.

ಸುಮ್ಮನೇ ಇತಿಹಾಸ ತಿಳಿಯದೇ ಮಾತಾನಾಡುವುದು ಅಷ್ಟೊಂದು ಉಚಿತವಲ್ಲ, ಹಾಗೆ ನಿಮಗೆ ಬುದ್ದನ ಧರ್ಮದ ಹಿರಿತನದ ಬಗ್ಗೆ ತಿಳಿಯಬೇಕಿದ್ದರೆ, ಅಮೆರಿಕಾದಲ್ಲಿ ನಿಂತು, “ನಾನು ಬುದ್ದನ ನಾಡಿನಿಂದ ಬಂದಿದ್ದೇನೆ” ಎಂದು ಹೇಳಿದ ಪ್ರಧಾನಿ ಮೋದಿಯವರನ್ನೇ ನೀವು ಕೇಳಿ ತಿಳಿದುಕೊಳ್ಳುವುದು ಸೂಕ್ತ ಎಂಬುದು ನನ್ನ ಭಾವನೆ ಎಂದಿದ್ದಾರೆ.

ಇಷ್ಟು ಮಹದೇವಪ್ಪನವರ ಪ್ರತಿಕ್ರಿಯೆಯಾದರೆ, ಸುಧಾಕರ್‌ ಅವರಿಗೆ ಬುದ್ಧನ ಕುರಿತು ಏನೂ ಗೊತ್ತಿಲ್ಲವೆಂದಲ್ಲ. ಬುದ್ಧನನ್ನು ಬಣ್ಣಿಸಿ, ಬೌದ್ಧಧಮ್ಮ ಸ್ವೀಕರಿಸಿದ ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ವರ್ಣಿಸಿ ಅವರು ಅನೇಕ ಸಲ ಮಾತನಾಡಿದ್ದಾರೆ.

2020ರ ಮೇ 7ರಂದು ಬುದ್ಧನ ಪ್ರತಿಮೆಯೊಂದಿಗಿನ ತಮ್ಮ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಅವರು ಬುದ್ಧ ಪೂರ್ಣಿಮೆಯ ಶುಭಾಶಯ ಕೋರಿದ್ದರು. “ಈ ಜಗತ್ತಿಗೆ ಭಾರತ ನೀಡಿದ ಅತಿದೊಡ್ಡ ಗಿಫ್ಟ್‌ ಲಾರ್ಡ್ ಬುದ್ಧ. ದುಃಖವನ್ನು ನಿವಾರಿಸಲು ಮತ್ತು ಸಮಾಜದಿಂದ ಅನ್ಯಾಯವನ್ನು ತೊಡೆದುಹಾಕಲು ಬುದ್ಧನ ಜೀವನ ಮೀಸಲಾಗಿತ್ತು…” ಎಂದಿದ್ದಾರೆ.

2020ರ ಏಪ್ರಿಲ್ 14ರಂದು ಬುದ್ಧನ ಮಹಾನ್ ಅನುಯಾಯಿಯಾದ ಅಂಬೇಡ್ಕರ್‌ ಅವರ ಕುರಿತು ಸುಧಾಕರ್‌ ಹೀಗೆ ಹೇಳುತ್ತಾರೆ: “ಅಂಬೇಡ್ಕರ್‌ ಈ ಜಗತ್ತು ಕಂಡ ಪರಮೋಚ್ಛ ಮನುಷ್ಯತ್ವವಾದಿ. ವಿಭಿನ್ನ ಸಂಸ್ಕೃತಿ, ನೂರಾರು ಜಾತಿ, ಸಾವಿರಾರು ಭಾಷೆ, ನಾಲ್ಕಾರು ಧರ್ಮಗಳನ್ನೊಳಗೊಂಡ ಭವ್ಯ ಭಾರತಕ್ಕೆ ಸಮಗ್ರವಾದ ಸಕಲರೂ ಒಪ್ಪುವಂಥ ಸಂವಿಧಾನವನ್ನು ಅಂಬೇಡ್ಕರ್‌ ಕೊಡದೇ ಇದಿದ್ದರೆ ನಾವೆಲ್ಲರೂ ಪರೋಕ್ಷವಾಗಿ ಮತ್ತೆ ದಾಸ್ಯಕ್ಕೆ ಒಳಪಡುತ್ತಿದ್ದೆವೇನೋ? ಅದೊಂದು ಘಟನೆ ನನಗೆ ಇನ್ನೂ ಕಾಡುತ್ತಿದೆ. 1927 ಮಾರ್ಚ್ 19, ಮಹಡ್‌ ನಗರದ ಚೌಡರ ಕೆರೆಯ ಚಳವಳಿ. ಅಸ್ಪೃಶ್ಯರಿಗೆ ನಿರಾಕರಣೆಯಿದ್ದ ಆ ಕೆರೆಯ ನೀರನ್ನು ಸಾವಿರಾರು ಮಂದಿ ಅಸ್ಪೃಶ್ಯರನ್ನು ಕರೆದುಕೊಂಡು ಬಂದು ಮುಟ್ಟಿ ಕುಡಿ‌ದರು. ಅಂಬೇಡ್ಕರ್‌ ಮತ್ತು ಅನುಯಾಯಿಗಳನ್ನು ಜಾತಿವಾದಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು. ಆದರೆ ಶಾಂತಿ ಕಾಯ್ದುಕೊಳ್ಳುವಂತೆ ಅಂಬೇಡ್ಕರ್‌ ನೀಡಿದ್ದ ಕರೆಯಿಂದ ಅಸ್ಪೃಶ್ಯರು ತಿರುಗಿ ಬೀಳಲಿಲ್ಲ….”- ಹೀಗೆ ಸುಧಾಕರ್‌ ಬಣ್ಣಿಸುತ್ತಾರೆ.

ಕಾಂಗ್ರೆಸ್‌ನಲ್ಲಿದ್ದಾಗ ಕೆ.ಸುಧಾಕರ್‌ ಅವರು ಬುದ್ಧ, ಅಂಬೇಡ್ಕರ್‌ ಅವರನ್ನು ಹೊಗಳಿದ್ದು ಮಾತ್ರವಲ್ಲ, ಬಿಜೆಪಿ ಸೇರಿ ಸಚಿವರಾದ ಬಳಿಕವೂ ಅವರು ಬುದ್ಧನನ್ನು ಹೊಗಳಿರುವುದನ್ನು ಕಾಣಬಹುದು. ಆದರೆ ಯಾರನ್ನು ಓಲೈಕೆ ಮಾಡಲು ಈಗ ಬುದ್ಧ ಧರ್ಮದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ? ಜಾತಿ ವ್ಯವಸ್ಥೆಯಿಂದ ಹೊರ ತರಲು ಹೋರಾಡಿದ ಬೌದ್ಧಧರ್ಮವನ್ನು ಪರೋಕ್ಷವಾಗಿ ಟೀಕಿಸಿ, ಶ್ರೇಣಿಕೃತ ವ್ಯವಸ್ಥೆಯನ್ನು ಸುಧಾಕರ್‌ ಪ್ರೋತ್ಸಾಹಿಸುತ್ತಿದ್ದಾರಾ? ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಯತ್ನಿಸಿದ ಬುದ್ಧನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಅಸ್ಪಶ್ಯತೆ ಆಚರಣೆಯ ಭಾಗವಲ್ಲವೇ? ಅಸ್ಪೃಶ್ಯತೆಯನ್ನು ಆಚರಿಸುವುದು ಸಂವಿಧಾನದ 17ನೇ ವಿಧಿಯ ಉಲ್ಲಂಘನೆಯಲ್ಲವೇ?


ಇದನ್ನೂ ಓದಿರಿ: ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...