ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಷರೀಫ್ ಅವರು ಭಾರತವನ್ನು ಹೊಗಳಿದ್ದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಗೆ ಭಾರತ ಎಂದರೆ ತುಂಬಾ ಇಷ್ಟವಿದ್ದರೆ ಅವರು ಭಾರತಕ್ಕೆ ತೊಲಗಲಿ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಭಾರತವನ್ನು ‘ಗೌರವ ಪ್ರಜ್ಞೆ ಹೊಂದಿರುವ ರಾಷ್ಟ್ರ’ ಎಂದು ಕರೆದ ನಂತರ ಮರ್ಯಮ್ ಅವರು ಪ್ರಧಾನಿಯನ್ನು ಟೀಕಿಸಿದ್ದಾರೆ. ಮರ್ಯಮ್ ಅವರು ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿಯಾಗಿದ್ದು, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಉಪಾಧ್ಯಕ್ಷೆಯೂ ಆಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅವಿಶ್ವಾಸ ನಿರ್ಣಯದ ಮುನ್ನ ಶುಕ್ರವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಇಮ್ರಾನ್, ತಾನು ಭಾರತದ ವಿರುದ್ಧ ಇಲ್ಲ ಮತ್ತು ಭಾರತದಲ್ಲಿ ತನಗೆ ಸಾಕಷ್ಟು ಅನುಯಾಯಿಗಳು ಇದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ: ಪತನದ ಹಾದಿಯಲ್ಲಿರುವ ಇಮ್ರಾನ್ ಖಾನ್ ಸರ್ಕಾರ
“ಯಾವುದೇ ಮಹಾಶಕ್ತಿ ಭಾರತವನ್ನು ತನ್ನ ಹಿತಾಸಕ್ತಿಗೆ ವಿರುದ್ಧವಾಗಿ ಏನು ಮಾಡಲು ಒತ್ತಾಯಿಸುವುದಿಲ್ಲ. ಭಾರತ ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಯಾರೂ ಭಾರತವನ್ನು ನಿರ್ದೇಶಿಸಲು ಸಾಧ್ಯವಿಲ್ಲ. ಯುರೋಪಿಯನ್ ಒಕ್ಕೂಟದ ರಾಯಭಾರಿಗಳು ಇಲ್ಲಿ ಹೇಳಿರುವುದನ್ನು, ಭಾರತದಲ್ಲಿ ಹೇಳಲು ಸಾಧ್ಯವೆ?” ಎಂದು ಅವರು ಕೇಳಿದ್ದಾರೆ. ಭಾರತವು ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಅವರಿಗೆ ಅದು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮರ್ಯಮ್, ಇಮ್ರಾನ್ ಖಾನ್ಗೆ ಹುಚ್ಚು ಹಿಡಿದಿದೆ ಎಂದು ಹೇಳಿದ್ದಾರೆ. “ನಿಮಗೆ ಭಾರತದ ಮೇಲೆ ತುಂಬಾ ಪ್ರೀತಿಯಿದ್ದರೆ, ಅಲ್ಲಿಗೆ ತೆರಳಿ. ಪಾಕಿಸ್ತಾನದ ಜೀವನವನ್ನು ಬಿಟ್ಟುಬಿಡಿ” ಎಂದು ಮರ್ಯಮ್ ಹೇಳಿದ್ದಾರೆ.
ಪ್ರಧಾನಿ ಇಮ್ರಾನ್ ಅವರು ಭಾರತವನ್ನು ಹೊಗಳಿದ್ದು ಇದೇ ಮೊದಲಲ್ಲ. ಕಳೆದ ವಾರ ಅವರು ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಗಳಿದ್ದರು. “ಭಾರತ ತನ್ನ ಸ್ವತಂತ್ರ ವಿದೇಶಾಂಗ ನೀತಿಯನ್ನು ರಕ್ಷಿಸುತ್ತದೆ ಮತ್ತು ಅದು ಅದರ ಜನರ ಮೇಲೆ ಕೇಂದ್ರೀಕೃತವಾಗಿದೆ” ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಹಾರಿ ಬಿದ್ದ ಭಾರತದ ಕ್ಷಿಪಣಿ: ವಿಷಾಧ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ
342 ಸಂಸದರಿರುವ ಪಾಕಿಸ್ತಾನ್ ಸಂಸತ್ತಿನಲ್ಲಿ ಇಮ್ರಾನ್ ಖಾನ್ ತನ್ನ ಬಹುಮತವನ್ನು ಕಳೆದುಕೊಂಡಿದ್ದಾರೆ. ಅವರು ದೇಶದ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯದಲ್ಲಿ ಮತ ಚಲಾಯಿಸಲ್ಪಡುವ ಮೊದಲ ಪ್ರಧಾನಿಯಾಗುವ ಸಾಧ್ಯತೆಯನ್ನು ಎದುರಿಸುತ್ತಿದ್ದಾರೆ.
ಪಾಕಿಸ್ತಾನದ ಯಾವೊಬ್ಬ ಪ್ರಧಾನಿಯೂ ಇದುವರೆಗೆ ಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ.
ಈ ಮಧ್ಯೆ, ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಪ್ರತಿಪಕ್ಷಗಳು ಹೊಸ ಸರ್ಕಾರ ರಚನೆಯ ಆರಂಭಿಕ ಮಾತುಕತೆಗಳನ್ನು ಪೂರ್ಣಗೊಳಿಸಿವೆ. ಅಧ್ಯಕ್ಷ ಅಲ್ವಿ ಪದಚ್ಯುತಿಗೆ ಮತ್ತು ಬ್ರಿಟನ್ನಿಂದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ವಾಪಸಾತಿಗೆ ಯೋಜನೆಗಳು ನಡೆಯುತ್ತಿವೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಶುಕ್ರವಾರ ವರದಿ ಮಾಡಿದೆ.
ನೂತನ ಪ್ರಧಾನಿಯಾಗಿ ವಿರೋಧ ಪಕ್ಷದ ಅಭ್ಯರ್ಥಿಯಾಗಿರುವ 70ರ ಹರೆಯದ ಶೆಹಬಾಜ್ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಸಂಭಾವ್ಯ ಸರ್ಕಾರದ ಆದ್ಯತೆಗಳನ್ನು ಪ್ರಕಟಿಸಲಿದ್ದಾರೆ. ಹೊಸ ಸಂಭವನೀಯ ಒಕ್ಕೂಟ ಸರ್ಕಾರದಲ್ಲಿ ಎಲ್ಲಾ ವಿರೋಧ ಪಕ್ಷಗಳಿಗೆ ಪ್ರಮಾಣಾನುಗುಣ ಪ್ರಾತಿನಿಧ್ಯವನ್ನು ನೀಡಲಾಗುತ್ತದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪಾಕಿಸ್ತಾನ ಸುಪ್ರೀಂಕೋರ್ಟ್ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯೆಷಾ ಮಲಿಕ್ ನೇಮಕ


