ಮಹಿಳಾ ವಕೀಲೆಯೊಬ್ಬರ ಮೇಲೆ ಮಹಾಂತೇಶ್ ಚೋಳದಗುಡ್ಡ ಎಂಬ ವ್ಯಕ್ತಿ ಸಾರ್ವಜನಿಕರ ಎದುರೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ಜರುಗಿದೆ. ಗಾಯಗೊಂಡ ಮಹಿಳೆ ಮತ್ತು ಆಕೆಯ ಪತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಬಿಜೆಪಿ ಮುಖಂಡ ರಾಜು ನಾಯ್ಕರ್ ಎಂಬುವವರ ಕುಮ್ಮಕ್ಕಿನಿಂದ ಬಾಗಲಕೋಟೆಯ ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೋಳದಗುಡ್ಡ ಎಂಬುವವರು ನನ್ನ ಮತ್ತು ನನ್ನ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ನನ್ನ ತಲೆ, ಎದೆ ಮತ್ತು ಕಾಲಿಗೆ ಪೆಟ್ಟು ಬಿದ್ದಿದೆ ಎಂದು ಸಂತ್ರಸ್ತ ವಕೀಲೆ ಸಂಗೀತ ಶಿಕ್ಕೇರಿ ಹೇಳಿದ್ದಾರೆ. ಹಲ್ಲೆ ನಡೆಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಕರಣದ ಹಿನ್ನೆಲೆ
ಬಾಗಲಕೋಟೆಯ ವಿನಾಯಕ ನಗರದ ಮೂರನೇ ಕ್ರಾಸ್ನಲ್ಲಿ ವಕೀಲೆ ಸಂಗೀತ ಶಿಕ್ಕೇರಿರವರ ಮನೆ ಇದ್ದು, ಅವರ ಕುಟುಂಬದವರಲ್ಲಿ ಮನೆಯ ಯಾರಿಗೆ ಸೇರಬೇಕು ಎಂಬ ವಿವಾದ ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಹೀಗಿರುವಾಗಿ ಇಂದು ಬೆಳಿಗ್ಗೆ ಕೆಲವರು ಜೆಸಿಬಿ ತಂದು ಮನೆ ಕೆಡವಲು ಯತ್ನಿಸಲಾಗಿದೆ. ಆ ಸಂದರ್ಭದಲ್ಲಿ ವಕೀಲೆ ಸಂಗೀತಾ ಶಿಕ್ಕೇರಿಯವರು ಪಕ್ಕದ ಮನೆಯವರ ಜೊತೆ ಏಕೆ ಪೊಲೀಸರಿಗೆ ನಮ್ಮ ಮನೆ ತೋರಿಸಿದಿರಿ ಎಂದು ಜಗಳ ಆಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜು ನಾಯ್ಕರ್ ಎಂಬುವವರ ಕುಮ್ಮಕ್ಕಿನಿಂದ ಮಹಾಂತೇಶ್ ಚೋಳದಗುಡ್ಡ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ವಕೀಲೆ ದೂರಿದ್ದಾರೆ.
ಪ್ರಕರಣ ಕೋರ್ಟ್ನಲ್ಲಿದ್ದು, ಜಿಲ್ಲಾ ನ್ಯಾಯಾಧೀಶರು ತಡೆಯಾಜ್ಞೆ ನೀಡಿದ್ದರೂ ಸಹ ಕೆಲವರು ಕಾಂಪೌಂಡ್ ಕೆಡವಿದ್ದಾರೆ. ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ.
ಇದನ್ನೂ ಓದಿ; ಏಳು ಬಣ್ಣಗಳ ಬಾವುಟ ಬೀಸಿ ಬಹುತ್ವ ಸಂದೇಶದೊಂದಿಗೆ ಉಡುಪಿಯ ಸಾಮರಸ್ಯ ನಡಿಗೆ ಆರಂಭ